ದಲಿತರ ಮೇಲಿನ ದೌರ್ಜನ್ಯಗಳ ರುದ್ರನರ್ತನ
ದಲಿತರ ಮೇಲೆ ಸತತವಾಗಿ ನಡೆಯುತ್ತಿರುವ ದೌರ್ಜನ್ಯಗಳಲ್ಲಿ ಒಂದು ಸ್ಪಷ್ಟ ಮಾದರಿ ಎದ್ದುಕಾಣುತ್ತಿದೆ.

ಇಂತಹ ಅರಾಜಕತೆ ತಾಂಡವವಾಡುತ್ತಿರುವ ಸನ್ನಿವೇಶದಲ್ಲಿ ಅತ್ಯಾಚಾರ ಹಾಗೂ ದೌರ್ಜನ್ಯಗಳಿಗೆ ಗುರಿಯಾದವರ ಘನತೆಯನ್ನು ಕೇವಲ ಕಾನೂನು ಜಾರಿಯನ್ನು ಸಾಂಸ್ಥೀಕರಣಗೊಳಿಸುವುದರಿಂದ ಮಾತ್ರ ಕಾಪಾಡಲು ಸಾಧ್ಯವಾಗುವುದಿಲ್ಲ. ಬದಲಿಗೆ ಅಂತಹ ಕಾನೂನುಗಳನ್ನು ಬಲವಾಗಿ ನಿಯಂತ್ರಿಸಬಲ್ಲ ಪ್ರಭುತ್ವ ಮತ್ತು ಸಾಮಾಜಿಕವಾಗಿ ಎಚ್ಚೆತ್ತ ಹಾಗೂ ನೈತಿಕವಾಗಿ ಪ್ರೇರಿತವಾದ ಸಮುದಾಯಗಳ ಅಗತ್ಯ ಇಲ್ಲಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತವೆ.
ಮಹಾರಾಷ್ಟ್ರದ ಪ್ರಭಾವಿ ಜಿಲ್ಲೆಗಳಲ್ಲಿ ಒಂದಾದ ಜಲಗಾಂವ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಇಬ್ಬರು ಹದಿಹರೆಯದ ದಲಿತ ಹುಡುಗರನ್ನು ಹೊಡೆದು, ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ ವೀಡಿಯೋ ಒಂದು ಜೂನ್ 10ರಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಸಂಚಲನ ಸೃಷ್ಟಿಸಿತು. ಈ ದಲಿತ ಹುಡುಗರು ಥಳಿತಕ್ಕೆ ಮತ್ತು ಅಪಮಾನಕ್ಕೆ ಗುರಿಯಾದದ್ದಕ್ಕೆ ಕಾರಣವಿಷ್ಟೆ. ಮಹಾರಾಷ್ಟ್ರದಲ್ಲಿ ಡಿನೋಟಿಫೈಡ್ ಗಿರಿಜನ ಸಮುದಾಯವೆಂದು ವರ್ಗೀಕರಿಸಲ್ಪಟ್ಟಿರುವ ಸಮುದಾಯದವರೊಬ್ಬರಿಗೆ ಸೇರಿದ ಬಾವಿಯಲ್ಲಿ ಈ ಇಬ್ಬರು ದಲಿತ ಹುಡುಗರು ಈಜಾಡಿದ್ದರು. ದೌರ್ಜನ್ಯ ನಡೆಸಿದವರ ಸಾಮಾಜಿಕ ಹಿನ್ನೆಲೆಯಲ್ಲಿರುವ ವ್ಯತ್ಯಾಸವನ್ನು ಹೊರತುಪಡಿಸಿದರೆ ಇದು 2016ರಲ್ಲಿ ಮೇಲ್ಜಾತಿ ದೌರ್ಜನ್ಯಕೋರರು ಗುಜರಾತಿನ ಉನಾದಲ್ಲಿ ದಲಿತ ಯುವಕರ ಮೇಲೆ ನಡೆಸಿದ ದೌರ್ಜನ್ಯದಂತೆಯೇ ಇದೆ. ಮೇಲಿನ ಎರಡೂ ಪ್ರಕರಣಗಳಲ್ಲಿ ದಲಿತ ದೇಹಗಳನ್ನು ಅಪಮಾನದ ವಸ್ತುವನ್ನಾಗಿಸಿ ಹೀನಾಯವಾಗಿ ಅಪಮಾನಿಸಲಾಯಿತಲ್ಲದೆ ಅದನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರ ಗಮನಕ್ಕೆಂದೇ ಬಿಡುಗಡೆ ಮಾಡಲಾಯಿತು. ಆ ಮೂಲಕ ಇಂಥಾ ಬರ್ಬರ ಕೃತ್ಯಗಳನ್ನು ನಡೆಸಿದ್ದರಿಂದ ಉಂಟಾಗಬಹುದಾದ ಕಾನೂನಾತ್ಮಕ ಪರಿಣಾಮಗಳ ಬಗ್ಗೆ ತಮಗೆ ಕಿಂಚಿತ್ತೂ ಹೆದರಿಕೆಯಿಲ್ಲವೆಂಬುದನ್ನು ಇನ್ನೊಮ್ಮೆ ಅವರು ಸ್ಪಷ್ಟಪಡಿಸಿದ್ದಾರೆ. ಆದರೆ ಜಲಗಾಂವ್ನಲ್ಲಿ ನಡೆದ ಘಟನೆ ಗುಜರಾತಿನಲ್ಲಿ ನಡೆದ ಘಟನೆಗಿಂತ ನಿಚ್ಚಳವಾದ ಒಂದು ಭಿನ್ನತೆಯನ್ನು ಹೊಂದಿದೆ. ಒಂದು ಸಮಾಜಶಾಸ್ತ್ರೀಯ ಹಿನ್ನೆಲೆಯಲ್ಲಿ ನೋಡುವುದಾದರೆ ಜಲಗಾಂವ್ ಪ್ರಕರಣದಲ್ಲಿ ದೌರ್ಜನ್ಯ ಎಸಗಿದವರು ಹಿಂದೂ ಜಾತಿ ಪದ್ಧತಿಗೆ ಸೇರಿದವರಲ್ಲ.
ನಿರೀಕ್ಷಿಸಿದಂತೆ ಮಹಾರಾಷ್ಟ್ರ್ಟ್ರ ಸರಕಾರ ಮತ್ತು ಅದರ ಬೆಂಬಲಿಗರು ಜಲಗಾಂವ್ ಪ್ರಕರಣದಲ್ಲಿ ಯಾವುದೇ ಜಾತಿ ಸಂಬಂಧಿ ಅಂಶವನ್ನು ಪರಿಗಣಿಸಲು ನಿರಾಕರಿಸುತ್ತಿದ್ದಾರೆ. ಆದರೆ ಪೊಲೀಸರು ಮಾತ್ರ ದೌರ್ಜನ್ಯ ಎಸಗಿದವರ ಮೇಲೆ 1989ರ ದೌರ್ಜನ್ಯ ನಿಷೇಧ ಕಾಯ್ದೆ (ಪಿಒಎ) ಅನ್ವಯ ಮೊಕದ್ದಮೆಯನ್ನು ದಾಖಲು ಮಾಡಿಕೊಂಡಿದ್ದಾರೆ. ವಾಸ್ತವದಲ್ಲಿ, ಸರಕಾರದ ಪ್ರತಿಷ್ಠೆಗೆ ಆಗಿರುವ ಹಾನಿಯನ್ನು ಕಡಿಮೆ ಮಾಡುವ ಸಲುವಾಗಿ ಮಹಾರಾಷ್ಟ್ರ ಸರಕಾರವು ಈ ಪ್ರಕರಣದಲ್ಲಿ ಜಾತಿಯ ಅಂಶವನ್ನು ಮರೆಮಾಚಲು ಎರಡು ಬಗೆಯ ತಂತ್ರಗಳನ್ನು ಅನುಸರಿಸುತ್ತಿದೆ. ಮೊದಲನೆಯದಾಗಿ ಈ ಪ್ರಕರಣದಲ್ಲಿ ದೌರ್ಜನ್ಯ ಎಸಗಿದವರಲ್ಲಿ ಜಾತಿ ಪ್ರಜ್ಞೆಗಿಂತ ಮುಖ್ಯವಾಗಿ ವಿಕೃತ ಮನೋಭಾವವೇ ದೌರ್ಜನ್ಯವನ್ನು ನಡೆಸಲು ಪ್ರೇರೇಪಿಸಿದೆ ಎಂದು ಸರಕಾರದ ಪ್ರಮುಖರು ಮತ್ತು ಕೆಲವು ಸ್ಥಳೀಯ ಪತ್ರಕರ್ತರು ವಾದಿಸಲು ಪ್ರಾರಂಭಿಸಿದ್ದಾರೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಜಾತಿಯೆಂಬ ಸಾಮಾಜಿಕ ವ್ಯವಸ್ಥೆಯ ಕಾರಣಕ್ಕಾಗಿ ನಡೆಯುತ್ತಿರುವ ಜಾತಿ ದೌರ್ಜನ್ಯಗಳನ್ನು ಕೇವಲ ವ್ಯಕ್ತಿಗಳ ವಿಕೃತಿಯಿಂದ ಸಂಭವಿಸುತ್ತಿರುವ ವಿದ್ಯಮಾನವೆಂಬಂತೆ ಅವರು ಚಿತ್ರಿಸಲು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ಇಂತಹ ವಾದಗಳು ಸಾಮಾಜಿಕ ಅಪರಾಧಗಳ ಬೆನ್ನ ಹಿಂದೆ ಇರುವ ಉದ್ದೇಶ ಮತ್ತು ಕಾರಣಗಳ ಸಾಧ್ಯತೆಯನ್ನೇ ನಿರಾಕರಿಸುತ್ತವೆ. ಈ ಪ್ರಕರಣದಲ್ಲಿ ದೌರ್ಜನ್ಯ ಎಸಗಿದ ಪ್ರಮುಖ ವ್ಯಕ್ತಿ ಶ್ರೇಣೀಕೃತ ಜಾತಿ ವ್ಯವಸ್ಥೆಯ ಭಾಗವಲ್ಲವಾದರೂ ಆತ ಜಾತಿ ಪ್ರಜ್ಞೆಯನ್ನು ಹೊರಗಿನಿಂದಲೇ ಪಡೆದುಕೊಳ್ಳುತ್ತಾನೆ. ಏಕೆಂದರೆ ಅದು ತಮ್ಮ ದಲಿತ ವಿರೋಧಿ ಅಸಹನೆಯನ್ನು ಶಿಕ್ಷೆ ವಿಧಿಸುವ ಮೂಲಕ ಜಾರಿ ಮಾಡಲು ಬೇಕಾದ ತೀವ್ರತರವಾದ ದಲಿತ ವಿರೋಧಿ ಪ್ರಜ್ಞೆಯನ್ನು ಒದಗಿಸುತ್ತದೆ. ಇದು ಆ ಹುಡುಗರಿಗೆ ಈ ದೌರ್ಜನ್ಯಕೋರರು ಅಮಾನುಷವಾಗಿ ಥಳಿಸಿರುವ ರೀತಿಯಲ್ಲೇ ವ್ಯಕ್ತಗೊಂಡಿದೆ.
ಪ್ರಕರಣದಿಂದ ತಮ್ಮ ಸರಕಾರದ ಮೇಲೆ ಮತ್ತಷ್ಟು ಟೀಕೆಗಳು ಬರದಂತೆ ತಡೆಗಟ್ಟಲು ಮಹರಾಷ್ಟ್ರ ಸರಕಾರ ಅನುಸರಿಸುತ್ತಿರುವ ಮತ್ತೊಂದು ತಂತ್ರ ಎಲ್ಲರಿಗೂ ಗೊತ್ತಿರುವುದೇ. ಮಹಾರಾಷ್ಟ್ರ ಸರಕಾರವೇ ಆಗಲಿ ಅಥವಾ ಇನ್ಯಾವುದೇ ಸರಕಾರವೇ ಆಗಲಿ, ಉನಾ ಅಥವಾ ಜಲಗಾಂವ್ನಂಥ ಘಟನೆಗಳು ನಡೆದಾಗ ಸಾಂಪ್ರದಾಯಿಕವಾದ ಕೆಲವು ಶಿಷ್ಟಾಚಾರಗಳನ್ನು ಅನುಸರಿಸುತ್ತವೆ. ಅವುಗಳಲ್ಲಿ ತಮ್ಮ ಸರಕಾರವು ದಲಿತರನ್ನೂ ಒಳಗೊಂಡಂತೆ ಸಮಾಜದ ಅಲಕ್ಷಿತ ಸಮುದಾಯಗಳ ಏಳಿಗೆಯನ್ನು ಸಾಧಿಸಲು ಮತ್ತು ಸಾಮಾಜಿಕ ನ್ಯಾಯವನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡುತ್ತಿದೆಯೆಂದೂ ಹೇಳುವುದು ಒಂದು. ಮಹಾರಾಷ್ಟ್ರದ ಬಿಜೆಪಿ-ಶಿವಸೇನಾ ಸರಕಾರವೂ ಈ ಶಿಷ್ಟಾಚಾರದ ಹೇಳಿಕೆಯನ್ನು ನೀಡಿತು. ಒಂದು ನಿರ್ದಿಷ್ಟ ಟಿವಿ ವಾಹಿನಿಯಲ್ಲಂತೂ ಮಹಾರಾಷ್ಟ್ರದ ಸಮಾಜ ಕಲ್ಯಾಣ ಮಂತ್ರಿಯು ತಮ್ಮ ಸರಕಾರವು ದಲಿತರ ಏಳಿಗೆಗೆ ತೆಗೆದುಕೊಂಡಿರುವ ಅತ್ಯದ್ಭುತ ಕಾರ್ಯಕ್ರಮಗಳ ಪಟ್ಟಿಯನ್ನು ನೀಡುತ್ತಲೇ ಹೋದರು. ಕುತೂಹಲಕಾರಿ ಅಂಶವೆಂದರೆ ಸರಕಾರದ ಪ್ರತಿಷ್ಠೆಗಾದ ಹಾನಿಯನ್ನು ಸರಿಪಡಿಸುವ ಕ್ರಮಗಳಲ್ಲಿ ದಲಿತ ಸಮುದಾಯದ ಸದಸ್ಯರೂ ಕೈಜೋಡಿಸಿದ್ದಾರೆ.
ಮೇಲ್ಜಾತಿಗಳಲ್ಲಿ ದಲಿತರ ಬಗ್ಗೆ ಅಸಹನೆ ಮತ್ತು ತಿರಸ್ಕಾರಗಳು ಮಡುಗಟ್ಟುತ್ತಿದೆಯೆಂಬುದನ್ನು ಸರಕಾರ ಮತ್ತದರ ವಿವಿಧ ಇಲಾಖೆಗಳು ಅರ್ಥಮಾಡಿಕೊಳ್ಳಲು ವಿಫಲವಾಗುತ್ತಿವೆ. ಸರಕಾರವು ದಲಿತರ ಕಲ್ಯಾಣಕ್ಕಾಗಿ ಜಾರಿ ಮಾಡುತ್ತಿರುವ ಯೋಜನೆಗಳ ಬಗ್ಗೆ ಕೊಚ್ಚಿಕೊಳ್ಳುವುದರಿಂದ ಮೇಲ್ಜಾತಿಗಳಲ್ಲಿ ಮಡುಗಟ್ಟಿ ನಿಂತಿರುವ ದಲಿತರ ಬಗೆಗಿನ ಅಸಹನೆ ಕಡಿಮೆಯಾಗುವುದಿಲ್ಲ. ಅದಕ್ಕೆ ತದ್ವಿರುದ್ಧವಾಗಿ ದಲಿತ ಕಲ್ಯಾಣ ಯೋಜನೆಗಳ ಬಗ್ಗೆ ಸರಕಾರ ನಡೆಸುವ ಅತಿರಂಜಿತ ಪ್ರಚಾರಗಳು ದಲಿತರ ಬಗೆಗಿನ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಬಹುದು. ಮೇಲ್ಜಾತಿಗಳು ದಲಿತರ ವಿರುದ್ಧ ತಾವೇ ಒಂದು ಪರ್ಯಾಯ ಪ್ರಭುತ್ವವಾಗಿ ವರ್ತಿಸುತ್ತಾರೆ ಮತ್ತು ಸಾಂವಿಧಾನಿಕ ಕಾನೂನುಗಳಿಗೆ ತದ್ವಿರುದ್ಧವಾದ ಕಾನೂನುಗಳನ್ನು ಹೇರುತ್ತಾರೆ. ಸರಕಾರಗಳು ತೆಗೆದುಕೊಳ್ಳುವ ಕ್ರಮಗಳು ಇವುಗನ್ನು ಸ್ವಲ್ಪವೂ ನಿಯಂತ್ರಿಸುವುದಿಲ್ಲ.
ಇಂತಹ ಅರಾಜಕತೆ ತಾಂಡವವಾಡುತ್ತಿರುವ ಸನ್ನಿವೇಶದಲ್ಲಿ ಅತ್ಯಾಚಾರ ಹಾಗೂ ದೌರ್ಜನ್ಯಗಳಿಗೆ ಗುರಿಯಾದವರ ಘನತೆಯನ್ನು ಕೇವಲ ಕಾನೂನು ಜಾರಿಯನ್ನು ಸಾಂಸ್ಥೀಕರಣಗೊಳಿಸುವುದರಿಂದ ಮಾತ್ರ ಕಾಪಾಡಲು ಸಾಧ್ಯವಾಗುವುದಿಲ್ಲ. ಬದಲಿಗೆ ಅಂತಹ ಕಾನೂನುಗಳನ್ನು ಬಲವಾಗಿ ನಿಯಂತ್ರಿಸಬಲ್ಲ ಪ್ರಭುತ್ವ ಮತ್ತು ಸಾಮಾಜಿಕವಾಗಿ ಎಚ್ಚೆತ್ತ ಹಾಗೂ ನೈತಿಕವಾಗಿ ಪ್ರೇರಿತವಾದ ಸಮುದಾಯಗಳ ಅಗತ್ಯ ಇಲ್ಲಿ ಇನ್ನೂ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುತ್ತವೆ. ಎರಡನೆಯದು ಅಸ್ತಿತ್ವದಲ್ಲಿದ್ದಾಗ ಮಾತ್ರ ದೌರ್ಜನ್ಯಕ್ಕೊಳಗಾದ ಆ ಹುಡುಗರ ಪೋಷಕರಂಥವರು ತಮಗಾದ ಅನ್ಯಾಯದ ವಿರುದ್ಧ ನ್ಯಾಯಾಂಗದ ಮೊರೆ ಹೋಗಲು ಸಾಧ್ಯವಾಗುತ್ತದೆ.
ಸಾಮಾಜಿಕ ಜಾಗೃತಿಯ ಕೊರತೆ ಮತ್ತು ಮೇಲ್ಜಾತಿಗಳ ಸಾಮಾಜಿಕ ಭಯೋತ್ಪಾದನೆಗಳಿಂದಾಗಿ ಆ ಇಬ್ಬರು ಬಾಲಕರ ಮೇಲೆ ನಡೆಸಲಾದ ದೌರ್ಜನ್ಯವನ್ನು ಜಾತಿ ದೌರ್ಜನ್ಯವೆಂತಲ್ಲದೆ ಒಂದು ಹಿಂಸಾಚಾರದ ಘಟನೆ ಮಾತ್ರವೆಂದು ಅವರ ಪೋಷಕರು ಪರಿಭಾವಿಸಲು ಕಾರಣವಾಗಿರಬೇಕು. ಆ ಹಳ್ಳಿಯಲ್ಲೂ ಮತ್ತು ಇತರ ಹಳ್ಳಿಗಳಲ್ಲೂ ದಲಿತರ ವಿರುದ್ಧ ಅಸ್ತಿತ್ವದಲ್ಲಿರುವ ಈ ಶೀತಲ ಅಸಹನೆ ಮತ್ತು ತಿರಸ್ಕಾರಗಳಿಂದಾಗಿಯೇ ದಲಿತರು ಜಾತಿಯ ಕಾನೂನು ಬಾಹಿರ ಅರಾಜಕತೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವ ಹಕ್ಕನ್ನು ಸಂವಿಧಾನವು ನೀಡಿದ್ದರೂ ಅದನ್ನು ಬಳಸಲಾಗದ ಪರಿಸ್ಥಿತಿಯಲ್ಲಿದ್ದಾರೆ. ಸಾಂವಿಧಾನಿಕ ಹಕ್ಕುಗಳು ತಮ್ಮಷ್ಟಕ್ಕೆ ತಾವೇ ಜೀವ ಪಡೆಯುವುದಿಲ್ಲ. ಅವು ಸಂತ್ರಸ್ತರಿಗೆ ತಮ್ಮಂತೆ ತಾವೇ ಸ್ವಯಂ ಚಾಲಿತವಾಗಿ ಪರಿಹಾರವನ್ನು ಒದಗಿಸುವುದಿಲ್ಲ. ಈ ಹಕ್ಕುಗಳ ಜಾರಿಗಾಗಿ ನೈತಿಕ ಚಾಲನೆ ಸಿಗುವ ಸಂದರ್ಭಗಳಲ್ಲಿ ಮಾತ್ರ ಅವು ಅರ್ಥವನ್ನು ಪಡೆದುಕೊಳ್ಳುತ್ತವೆ. ಈ ನಿರ್ದಿಷ್ಟ ಪ್ರಕರಣದಲ್ಲಿ ಪ್ರಚಲಿತವಾದ ವೀಡಿಯೊ ಚಿತ್ರವು ದೌರ್ಜನ್ಯ ಎಸಗಿದವರ ಪತ್ತೆಗೆ ಪೊಲೀಸರಿಗೆ ಸಹಾಯ ಮಾಡಿದ್ದರಿಂದ ಅಪರಾಧಿಗಳ ಬಂಧನವಾಯಿತಷ್ಟೆ. ಜಾತಿಯ ಅರಾಜಕತೆಯು ಕಾನೂನಿನ ಆಡಳಿತವನ್ನು ಹೊಡೆದುರುಳಿಸುವ ಮುನ್ನ ನಾವು ಕಾನೂನಿನ ಆಡಳಿತವನ್ನು ರಕ್ಷಿಸಿಕೊಳ್ಳಬೇಕಿದೆ. ಪ್ರಭುತ್ವವು ಇಂತಹ ಅರಾಜಕತೆಗೆ ಪ್ರೇರಣೆ ನೀಡುತ್ತಿದೆಯೋ ಇಲ್ಲವೋ, ಆದರೆ ಅದು ಮೂಕ ಪ್ರೇಕ್ಷಕನಾಗಿ ಮಾತ್ರ ಉಳಿಯದಂತೆಯೂ ನೋಡಿಕೊಳ್ಳಬೇಕಿದೆ.
ಕೃಪೆ: Economic and Political Weekly