ಭಾರತದ ಜಾನುವಾರು ರಾಜಕೀಯ
ತೀವ್ರಗಾಮಿ ಹಿಂದೂ ಸನ್ಯಾಸಿಯೊಬ್ಬರು ಭಾರತದ ಅತ್ಯಂತ ದೊಡ್ಡ ರಾಜ್ಯಗಳಲ್ಲೊಂದು ರಾಜ್ಯದ ಆಡಳಿತ ನೇತೃತ್ವ ವಹಿಸಿಕೊಂಡ ವರ್ಷದಿಂದ ಜಾನುವಾರು ವ್ಯಾಪಾರ ಮಾಡುವ ಭಾರತದ ಮುಸ್ಲಿಮರ ಬದುಕು ಅವರು ಕಲ್ಪಿಸಲು ಕೂಡ ಸಾಧ್ಯವಿಲ್ಲದ ರೀತಿಯಲ್ಲಿ ಬದಲಾವಣೆ ಕಂಡಿವೆ. ಮೊದಲು ಆ ಸನ್ಯಾಸಿಯ ಗೆಲುವಿನಿಂದ ಇನ್ನಷ್ಟು ಧೈರ್ಯ ಪಡೆದ ಗುಂಪುಗಳು ಜಾನುವಾರು ಸಾಗಿಸುತ್ತಿದ್ದ ಟ್ರಕ್ಗಳ ಮೇಲೆ ದಾಳಿ ನಡೆಸಲು ಆರಂಭಿಸಿದವು. ಹಲವು ಮುಸ್ಲಿಮರನ್ನು ಗುಂಪು ಥಳಿತದಲ್ಲಿ ಹತ್ಯೆ ಮಾಡಲಾಯಿತು ಬಳಿಕ ಹತ್ತಾರು ವಧಾಗೃಹಗಳನ್ನು ಮತ್ತು 50,000 ಮಾಂಸದ ಅಂಗಡಿಗಳನ್ನು ಬಂದ್ ಮಾಡಲಾಯಿತು. ಮಾಂಸ ವ್ಯಾಪಾರದಲ್ಲಿ ಶತಮಾನಗಳಿಂದ ತೊಡಗಿಕೊಂಡಿದ್ದ ನೂರಾರು ಮುಸ್ಲಿಮರು ತಮ್ಮ ನೌಕರಿಗಳನ್ನು ಕಳೆದುಕೊಂಡರು.
ನರೇಂದ್ರ ಮೋದಿಯವರ ಹಿಂದೂ ರಾಷ್ಟ್ರವಾದಿ ಪಕ್ಷದ ಸರಕಾರವು ಗೋ ರಕ್ಷಣೆಗಾಗಿ ತಂದ ಕಠಿಣ ಕಾನೂನು ಕ್ರಮಗಳಿಂದಾಗಿ ಭಾರತದ 4.5 ಬಿಲಿಯನ್ ಡಾಲರ್ ಗೋಮಾಂಸ ರಫ್ತು ಉದ್ಯಮದಲ್ಲಿ ಶೇ.15ರಷ್ಟು ಇಳಿಕೆಯಾಗಿದೆ. ಜಾನುವಾರು ಉದ್ಯಮದಲ್ಲಿರುವ ಬದಲಾವಣೆಗಳು ಭಾರತದ 172 ಮಿಲಿಯ ಮುಸ್ಲಿಮರಿಗೆ ರಾಷ್ಟ್ರವ್ಯಾಪಿಯಾಗಿ ಏನಾಗುತ್ತಿದೆ ಎಂಬುದನ್ನು ಪ್ರತಿಫಲಿಸುತ್ತಿದೆ. ಗುಂಪು ಥಳಿತ ದ್ವೇಷಪೂರಿತ ಭಾಷಣಗಳು ಮತ್ತು ಮುಸ್ಲಿಂ ವಿರೋಧಿ ಮಾತುಗಳು ಮೋದಿಯವರ ಪಕ್ಷದ ಕೆಲವು ಸಂಸದರ, ಶಾಸಕರ ದಿನವಹಿ ನಡೆಗಳಾಗಿವೆ. ಮುಸ್ಲಿಂ ಕುಟುಂಬಗಳ ಕುರಿತು ಇತ್ತೀಚೆಗೆ ಒಂದು ಪುಸ್ತಕ ಬರೆದಿರುವ ನಾಝಿಯಾ ಇರಾಮ್ ಹೇಳುವಂತೆ ''ಈಗ (ಮುಸ್ಲಿಮರನ್ನು) ದ್ವೇಷಿಸುವುದು ಓಕೆ. ದ್ವೇಷಕ್ಕೆ ಈಗ ಮುಖ್ಯವಾಹಿನಿಯ ಒಂದು ಕ್ರಮಬದ್ಧತೆಯನ್ನು ನೀಡಲಾಗಿದೆ''.
ಒಂದು ಅಪಾಯಕಾರಿ ಚಾಲನೆ
40ರ ಹರೆಯದ ಭುರಾ ಖುರೇಶಿ ತನ್ನ ಟ್ರಕ್ಗೆ ಎಮ್ಮೆಗಳನ್ನು ತುಂಬಿ ಅಲಿಗಡದಲ್ಲಿರುವ ಮಾಂಸದ ಕಾರ್ಖಾನೆಗೆ ಕೊಂಡೊಯ್ಯುತ್ತಿದ್ದರು. ಹದಿನಾಲ್ಕು ಎಮ್ಮೆಗಳನ್ನು ಸಾಗಿಸಲು ಅವರಿಗೆ ಎಂಬತ್ತು ಡಾಲರ್ ನೀಡಿದ್ದ ಬಗ್ಗೆ ಅವರು ಖುಷಿಯಾಗಿದ್ದರು. ಉತ್ತರಪ್ರದೇಶದ ಬಾಗನ್ನಲ್ಲಿ ಎಮ್ಮೆಗಳನ್ನು ಕಾನೂನು ರೀತ್ಯಾ ವಧಿಸಬಹುದು. ಆದರೆ ಹಸುಗಳನ್ನು ವಧಿಸುವಂತಿಲ್ಲ. ಹಾಗಾಗಿ ಎಮ್ಮೆ ಮಾಂಸವೇ ದೇಶದ ರಫ್ತು ಉದ್ಯಮದ ಬೆನ್ನೆಲುಬು. ಆದರೆ ಬಿದಿರಿನ ಕೋಲುಗಳನ್ನು ಹಿಡಿದು ತಡೆಯುವ ಮತ್ತು ಪೊಲೀಸರ ದೊಡ್ಡ ಮೊತ್ತದ ಲಂಚ ಪಡೆಯುವ ರಾಜ್ಯ ಹೆದ್ದಾರಿ 80 ಈಗ ಹಿಂದೂವಾದಿಗಳ ಸ್ಫೋಟಕ ಹಾದಿಯಾಗಿದೆ.
ಗೋವುಗಳ ಹಾಗೆ ಎಮ್ಮೆಗಳು ಭಾರತದಲ್ಲಿ ಪೂಜನೀಯವಲ್ಲ. ಆದರೂ ಎಮ್ಮೆಗಳನ್ನು ಕಾನೂನು ರೀತ್ಯಾ ಸಾಗಿಸುವವರ ವಾಹನಗಳ ಮೇಲೆ ಕೂಡ ದಾಳಿಗಳು ನಡೆಯುತ್ತವೆ. ಸಾಗಣೆದಾರರನ್ನು ಹಿಡಿದು ಥಳಿಸಲಾಗುತ್ತದೆ, ಜೈಲಿಗೆ ತಳ್ಳಲಾಗುತ್ತದೆ. ಅವರ ಪ್ರಾಣಿಗಳನ್ನು ಮತ್ತು ಟ್ರಕ್ಗಳನ್ನು ಒಂದೋ ಹಿಂದೂ ಕಾರ್ಯಕರ್ತರು ಅಥವಾ ಪೊಲೀಸರು ವಶಪಡಿಸಿಕೊಳ್ಳುತ್ತಾರೆ. ಪರಿಣಾಮವಾಗಿ ಕಳೆದ ವರ್ಷ ಸಾಗಣೆ ವೆಚ್ಚದಲ್ಲಿ ಶೇ.30 ಏರಿಕೆಯಾಗಿದೆ ಎನ್ನುತ್ತಾರೆ ಅಖಿಲ ಭಾರತ ಮಾಂಸ ಹಾಗೂ ಹೈನು ರಫ್ತುದಾರರ ಸಂಘದ ಉಪಾಧ್ಯಕ್ಷ ಫೌಝನ್ ಅಲಿ.
'ಹೆದ್ದಾರಿಯಲ್ಲಿ ಶಾಂತಿ'ಯನ್ನು ಕಂಡುಕೊಳ್ಳಲು ಲಂಚ ನೀಡುವ ಮಧ್ಯವರ್ತಿಗಳು ಜಾನುವಾರು ಮಾರುಕಟ್ಟೆಗಳಲ್ಲಿ ರೈತರಿಗೆ ಕಡಿಮೆ ಪಾವತಿಸುತ್ತಾರೆ ಮತ್ತು ಮಾಂಸ ರಫ್ತುದಾರರಿಂದ ಹೆಚ್ಚು ವಸೂಲಿ ಮಾಡುತ್ತಾರೆ.
ಖುರೇಶಿಯ ಟ್ರಕ್ ರೈಲ್ವೆ ಜಂಕ್ಷನ್ಗೆ ಬಂತು. ಪೊಲೀಸರು ಅವರನ್ನು ತಡೆದು ''ಎಲ್ಲಿಗೆ ಹೋಗುತ್ತಿದ್ದೆ?'' ಎಂದಾಗ ಅಲಿಗಡ ಎಂದರು. ಪೊಲೀಸರು ಅವರಿಗೆ ಮುಂದೆ ಹೋಗಲು ಅನುಮತಿ ನೀಡಿದರು. ಆದರೆ ಬೈಕ್ನಲ್ಲಿ ಒಬ್ಬ ಹಿಂಬಾಲಿಸಿ ಟಕ್ನ ಹಿಂದೆ ಬಂದು ಚಿಕ್ಕ ಮೊತ್ತದ ಲಂಚ ಪಡೆದು ಹೋದ. ಪೊಲೀಸರು ತಮ್ಮ ಪರವಾಗಿ ಲಂಚ ಪಡೆಯಲು ಸ್ಥಳೀಯರನ್ನು ಬಳಸಿಕೊಳ್ಳುತ್ತಾರೆ. ಹಲವರು ಮಾಂಸ ತಿನ್ನುವ ಒಂದು ದೇಶದ ಮೇಲೆ ಮೇಲ್ಜಾತಿಯ ಹಿಂದೂಗಳು ತಮ್ಮ ಸಸ್ಯಾಹಾರಿ ಸಂಸ್ಕೃತಿಯನ್ನು ಹೇರುತ್ತಿದ್ದಾರೆ. ಯೋಗಿ ಆದಿತ್ಯನಾಥ್ ಕಳೆದ ವರ್ಷ ಅಧಿಕಾರಕ್ಕೆ ಬಂದಾಗ ವಧಾಗೃಹಗಳನ್ನು ಮುಚ್ಚಿಸಿದರು. 50,000 ಮಾಂಸದ ಅಂಗಡಿಗಳನ್ನು ಮುಚ್ಚಿಸಿದರು. ಪರಿಣಾಮವಾಗಿ ಮಹಾಬನ್ನ 2,200 ಮಂದಿ ಮುಸ್ಲಿಮರಲ್ಲಿ ಮೂರನೇ ಒಂದು ಭಾಗದಷ್ಟು ಮಂದಿ ತಮ್ಮ ನೌಕರಿ ಕಳೆದುಕೊಂಡರು. ಒಂದು ನಾಗರಿಕ ಸಮಾಜ ತಂಡವಾಗಿರುವ ಅಖಿಲ ಭಾರತ ಜಂಇಯ್ಯತುಲ್ ಖುರೇಶ್ ಕ್ರಿಯಾ ಸಮಿತಿ ಅಧ್ಯಕ್ಷ ಯೂನುಸ್ ಖುರೇಶಿ ಹೇಳುತ್ತಾರೆ: ''ಆದಿತ್ಯನಾಥ್ ಸರಕಾರ ಒಂದು ಸಂದೇಶ ಕಳುಹಿಸಿದೆ; ನಾವು ಮುಸ್ಲಿಮರಿಗೆ ಏನೇನು ಸವಲತ್ತುಗಳನ್ನು ನೀಡುತ್ತಿದ್ದೇವೋ ಇನ್ನು ಮುಂದೆ ಅವುಗಳನ್ನು ನೀಡುವುದಿಲ್ಲ.''
ಆದರೆ ಆದಿತ್ಯನಾಥ್ರ ಮುಖ್ಯ ವಕ್ತಾರ ಮೃತ್ಯುಂಜಯ ಕುಮಾರ್, ''ಮೊದಲ ಹಂತದ ಕೆಲವು ಸಮಸ್ಯೆಗಳ ನಂತರ ಈಗ ಮಾಂಸ ವ್ಯಾಪಾರ ಹಿಂದಿನಂತೆಯೇ ನಡೆಯುತ್ತಿದೆ'' ಎಂದಿದ್ದಾರೆ.
ಆದರೆ ಹಳ್ಳಿಯ ಜನ ಇದನ್ನು ಒಪ್ಪುವುದಿಲ್ಲ; ರಮಝಾನ್ ವೇಳೆ ತಮಗೆ ಗೋಮಾಂಸ ಸಿಗಲಿಲ್ಲ ಎಂದಿದ್ದಾರೆ. ಕಳೆದ ವರ್ಷ ಸರಕಾರದ ಕಾರ್ಯಾಚರಣೆ ವೇಳೆ ತನ್ನ ಮಾಂಸದ ಅಂಗಡಿಯನ್ನು ಮುಚ್ಚಿದ್ದ ಯೂನುಸ್ ಖುರೇಷಿ ಈಗ ರಸ್ತೆ ಬದಿಯಲ್ಲಿ ಫ್ರೈಡ್ಸ್ನಾಕ್ಸ್ಗಳನ್ನು ಮಾರುತ್ತಿದ್ದಾರೆ.
''ಸಸ್ಯಾಹಾರಿಗಳಾಗುವಂತೆ ನಮ್ಮನ್ನು ಬಲವಂತ ಮಾಡಲಾಗಿದೆ'' ಎನ್ನುತ್ತಾರೆ ಅವರು. ಇದಕ್ಕಿಂತಲೂ ಕೆಟ್ಟ ಪರಿಣಾಮ ಅಂದರೆ ಸರಕಾರದ ಈ ಕ್ರಮಗಳಿಂದಾಗಿ ಹಳ್ಳಿಯಲ್ಲಿ ಹಿಂದೂಗಳು ಹಾಗೂ ಮುಸ್ಲಿಮರು ನಡುವಣ ಕಂದಕ ಇನ್ನಷ್ಟು ಹೆಚ್ಚಾಗಿದೆ.
ನಾವು ಮುಗ್ಧರನ್ನು ಶಿಕ್ಷಿಸುವುದಿಲ್ಲ
ಆದರೆ 'ಯೋಗಿಯ ಸೇನೆ'ಯ ಸದಸ್ಯರು ''ನಾವು ಮುಗ್ಧರನ್ನು ಹಿಡಿಯುವುದಿಲ್ಲ ನಾವು ದೊಡ್ಡ ಗುಂಪಾಗಿ ಹೋಗಿ ಅಪರಾಧಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತೇವೆ'' ಎನ್ನುತ್ತಾರೆ.
ಕೆಲವು ಮೈಲಿಗಳ ನಂತರ ಬರುವ ಆಸ್ನಾ ಪೊಲೀಸ್ ಠಾಣೆಯ ಪೊಲೀಸರು ಲಂಚ ಕೇಳಲು ಶುರು ಮಾಡಿದ್ದಾರೆ. ಲಂಚ ಕೊಡದಿದ್ದರೆ ಥಳಿಸುತ್ತಾರೆ ಎಂದು ಎರಡು ಡಝನ್ ವ್ಯಾಪಾರಿಗಳು ಹೇಳಿದರು ಆದರೆ ''ನಾವು ಹಾಗೆಲ್ಲ ಹಣ ತೆಗೆದುಕೊಳ್ಳುವುದಿಲ್ಲ'' ಎಂದು ಪ್ರಭಾರ ಎಸ್ಸೈ ಆರ್. ಎನ್. ತಿವಾರಿ ಹೇಳುತ್ತಾರೆ.
ಲಂಚದ ಮೊತ್ತದ ಬಗ್ಗೆ ಚೌಕಾಶಿ ನಡೆಸಿದ ಪೊಲೀಸ್ ಅಧಿಕಾರಿಗಳು ಇತ್ತೀಚೆಗೆ ನನ್ನನ್ನು ಥಳಿಸಿದರು ಮತ್ತು ಒಂದು ಕೋಳಿ ಕುಳಿತುಕೊಳ್ಳುವಂತೆ ಕುಳಿತುಕೊಳ್ಳಲು ತನ್ನನ್ನು ಬಲಾತ್ಕರಿಸಿದರು ಎಂದು ಖುರೇಶಿ ಆಪಾದಿಸಿದ್ದಾರೆ.
ಇದು ಸಾಮಾನ್ಯವಾಗಿ ಶಾಲಾ ಮಕ್ಕಳಿಗೆ ಕೊಡುವ ಒಂದು ಶಿಕ್ಷೆ. ಆತ ಅವಮಾನಿತನಾಗಿ ಪೊಲೀಸ್ ಠಾಣೆಯಿಂದ ಹೊರಟ; ತಾನು ಈ ವೃತ್ತಿಗೆ ವಿದಾಯ ಹೇಳಲೇ ಎಂದು ಪುನಃ ಯೋಚಿಸತೊಡಗಿದ.
ಅಲಿಗಡದ ನಗರ ಮಿತಿಯನ್ನು ಪ್ರವೇಶಿಸುತ್ತಿದ್ದಂತೆ ಖುರೇಶಿಯ ಟ್ರಕ್ಕನ್ನು ಪುನಃ ನಿಲ್ಲಿಸಲಾಯಿತು. ಓರ್ವ ಪೊಲೀಸ್ ಅಧಿಕಾರಿ ನಗದು ಕೊಡುವಂತೆ ಹೇಳಿದ. (ಬಳಿಕ ಆತ ತಾನು ನಗದು ಪಡೆದಿಲ್ಲ ಅಂತ ಹೇಳಿದ).
ಮಾಂಸದ ಕಾರ್ಖನೆಯ ಗೇಟ್ ತಲುಪುವಷ್ಟರಲ್ಲಿ ಈ ಟ್ರಿಪ್ನಲ್ಲಿ ಆತ ಕೇವಲ 6 ಡಾಲರ್ ಲಂಚ ನೀಡಬೇಕಾಯಿತು. ಆತನ ದಿನದ ಬಾಡಿಗೆ 8 ಡಾಲರ್ನಲ್ಲಿ 72 ಡಾಲರ್ ಮಾತ್ರ ಆತನ ಪಾಲಿಗೆ ಉಳಿದಿತ್ತು.
ಕೃಪೆ: scroll.in