ಸಮವಸ್ತ್ರ ಆದೇಶವನ್ನು ಎಲ್ಲಾ ಶಾಲೆ– ಕಾಲೇಜು ಪಾಲಿಸಬೇಕು: ಸಚಿವ ಬಿ.ಸಿ.ನಾಗೇಶ್

ಮೈಸೂರು,ಫೆ.6: ಸಮವಸ್ತ್ರ ಆದೇಶವನ್ನು ಎಲ್ಲಾ ಶಾಲೆಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಪ್ರವೇಶವಿಲ್ಲ. ಸ್ಪಷ್ಟವಾಗಿ ಹೇಳಿದ್ದೇವೆ ಸಮವಸ್ತ್ರವಿಲ್ಲದೆ ಶಾಲೆಗಳಿಗೆ ಪ್ರವೇಶ ಇಲ್ಲ. ಸಮವಸ್ತ್ರ ಆದೇಶವನ್ನು ಎಲ್ಲಾ ಶಾಲೆಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು. ಪಾಲನೆ ಮಾಡದಿದ್ದರೆ ಸರ್ಕಾರಿ ನಿಯಮದಂತೆ ಕ್ರಮ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಹಿಜಾಬ್ ವಿವಾದ: ಪಿಯು ಮಂಡಳಿ ನಿರ್ದೇಶಕಿ ಸ್ನೇಹಲ್ ವರ್ಗಾವಣೆ ಮಾಡಿ, ಸ್ಥಳ ನಿಯುಕ್ತಿಗೊಳಿಸದ ರಾಜ್ಯ ಸರಕಾರ
ಯಾವುದೇ ಹೆಣ್ಣುಮಕ್ಕಳಿಗೆ ಶಿಕ್ಷಣ ವಂಚಿತರನ್ನಾಗಿ ಮಾಡುವ ದುರುದ್ದೇಶ ಇಲ್ಲ. ಎಜುಕೇಶನ್ ಆ್ಯಕ್ಟ್ ರೂಲ್ 11ರ ಅನ್ವಯ ನಿಯಮ ಜಾರಿ ಮಾಡಿದ್ದೇವೆ. ಎಜುಕೇಶನ್ ಪಾಲಿಸಿ ಬಿಜೆಪಿ ಸರ್ಕಾರ ಮಾಡಿರೋದಲ್ಲ. ಕಾಂಗ್ರೆಸ್ ಸರ್ಕಾರ ಇದ್ದಾಗಿನಿಂದಲೂ ಇದೆ. ಇದರಲ್ಲಿ ಅನಾವಶ್ಯಕ ರಾಜಕಾರಣ ಮಾಡಬಾರದು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಇದ್ದ ನಿಯಮಗಳೇ ಈಗಲೂ ಜಾರಿಯಲ್ಲಿವೆ. ಆ ನಿಯಮದ ಅನ್ವಯವೇ ಆದೇಶ ಮಾಡಿದ್ದೇನೆ. ರಾಜಕೀಯ ಲಾಭಕ್ಕೆ ಮಕ್ಕಳನ್ನ ಬಳಸಿಕೊಳ್ಳಬಾರದು. ಮಕ್ಕಳನ್ನು ಅಸ್ತ್ರ ಮಾಡಿಕೊಂಡು ರಾಜಕೀಯ ಮಾಡಬೇಡಿ ಎಂದರು.
ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಪಕ್ಷದ ಹೈಕಮಾಂಡ್ ಸೂಕ್ತವಾದ ನಿರ್ಣಯ ಕೈಗೊಳ್ಳುತ್ತೆ. ಆದರೆ ಈ ಬಗ್ಗೆ ಪಕ್ಷದಲ್ಲಿ ಯಾವುದೇ ಚರ್ಚೆ ನಡೆದಿಲ್ಲ. ಕೇವಲ ಮಾಧ್ಯಮಗಳಲ್ಲಿ ಮಾತ್ರ ವರದಿಯಾಗುತ್ತಿದೆ. ರಾಜ್ಯ ಬಜೆಟ್ ಹಿನ್ನಲೆ ಕೇಂದ್ರ ನಾಯಕರ ಸಲಹೆ ಪಡೆಯಲು ಸಿಎಂ ದೆಹಲಿಗೆ ಹೋಗಿದ್ದಾರೆ. ಪ್ರತಿ ಬಜೆಟ್ ಗು ಮುನ್ನ ಹೈಕಮಾಂಡ್ ಹಾಗೂ ಕೇಂದ್ರ ಸಚಿವರು, ಸಂಸದರ ಜೊತೆ ಮಾತುಕತೆ ನಡೆಸುವುದು ಸಹಜ. ಇದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದರು.







