ಮತಾಂತರವಾದ ದಲಿತರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಬಗ್ಗೆ ಪರಿಶೀಲಿಸಲು ಯಾವುದೇ ಆಯೋಗ ರಚಿಸಿಲ್ಲ: ಕೇಂದ್ರ
![ಮತಾಂತರವಾದ ದಲಿತರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಬಗ್ಗೆ ಪರಿಶೀಲಿಸಲು ಯಾವುದೇ ಆಯೋಗ ರಚಿಸಿಲ್ಲ: ಕೇಂದ್ರ ಮತಾಂತರವಾದ ದಲಿತರನ್ನು ಪರಿಶಿಷ್ಟ ಜಾತಿಗೆ ಸೇರಿಸುವ ಬಗ್ಗೆ ಪರಿಶೀಲಿಸಲು ಯಾವುದೇ ಆಯೋಗ ರಚಿಸಿಲ್ಲ: ಕೇಂದ್ರ](https://www.varthabharati.in/sites/default/files/images/articles/2022/12/14/360125-1671028811.gif)
ಹೊಸ ದಿಲ್ಲಿ: ಮತಾಂತರಗೊಂಡಿರುವ ದಲಿತರನ್ನು (Dalits) ಪರಿಶಿಷ್ಟ ಜಾತಿಗೆ (Scheduled Caste) ಸೇರ್ಪಡೆ ಮಾಡುವ ಸಾಧ್ಯತೆಯನ್ನು ಪರಿಶೀಲಿಸಲು ಯಾವುದೇ ಆಯೋಗವನ್ನು ರಚಿಸಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ. ನಾರಾಯಣಸ್ವಾಮಿ (A Narayanaswamy) ಲೋಕಸಭೆಗೆ (Lok Sabha) ತಿಳಿಸಿದ್ದಾರೆ ಎಂದು scroll.in ವರದಿ ಮಾಡಿದೆ.
ಈ ಸಂಬಂಧ ಯಾವುದಾದರೂ ಸಮಿತಿ ರಚಿಸಲಾಗಿದ್ದರೆ ಆ ಕುರಿತು ವಿವರ ನೀಡುವಂತೆ ಕೋರಿದ ಯುವಜನ ಶ್ರಮಿಕ ರೈತು ಕಾಂಗ್ರೆಸ್ ಪಕ್ಷದ ಸಂಸದ ಮರ್ಗಾನಿ ಭರತ್ ಅವರಿಗೆ ಸಚಿವರು ಮೇಲಿನಂತೆ ಉತ್ತರಿಸಿದರು.
ಇದಕ್ಕೂ ಮುನ್ನ ಅಕ್ಟೋಬರ್ 6ರಂದು ಸಂವಿಧಾನದ ವಿಧಿ 341ರ ಅಡಿಯಲ್ಲಿ ಜಾರಿಯಾಗಿರುವ ಅಧ್ಯಕ್ಷೀಯ ಆದೇಶದನ್ವಯ ನಮೂದಾಗದ ಧರ್ಮಗಳಿಗೆ ಮತಾಂತರಗೊಂಡಿರುವ ದಲಿತರಿಗೆ ಪರಿಶಿಷ್ಟ ಜಾತಿ ಸ್ಥಾನಮಾನ ನೀಡುವ ಸಾಧ್ಯತೆಯನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿತ್ತು. ಇದರ ಬೆನ್ನಿಗೇ ಸಚಿವರು ಮೇಲಿನಂತೆ ಉತ್ತರಿಸಿದ್ದಾರೆ.
ಈ ಆದೇಶದನ್ವಯ ಹಿಂದೂ, ಸಿಖ್ ಹಾಗೂ ಬೌದ್ಧ ಧರ್ಮದ ಅನುಯಾಯಿಗಳಿಗೆ ಮಾತ್ರ ಪರಿಶಿಷ್ಟ ಜಾತಿ ಸ್ಥಾನಮಾನ ದೊರೆಯುತ್ತದೆ.
ಸರ್ಕಾರದ ಅಧಿಸೂಚನೆಯ ಪ್ರಕಾರ, ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿದ್ದು, ಆಯೋಗದ ಸದಸ್ಯರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ರವೀಂದರ್ ಕುಮಾರ್ ಜೈನ್ ಹಾಗೂ ವಿಶ್ವವಿದ್ಯಾಲಯ ಅನುದಾನ ಆಯೋಗದ ಮಾಜಿ ಸದಸ್ಯ ಪ್ರೊ. ಸುಷ್ಮಾ ಯಾದವ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ ಎಂದು ಹೇಳಲಾಗಿತ್ತು.
ಈ ವಿಷಯವು ಮೂಲಭೂತ, ಐತಿಹಾಸಿಕ ಮತ್ತು ಸಾಂವಿಧಾನಿಕ ಸಂಕೀರ್ಣ ಪ್ರಶ್ನೆಯನ್ನು ಹೊಂದಿದ್ದು, ಸಾರ್ವಜನಿಕ ಅವಗಾಹನೆಗಾಗಿ ಸೂಕ್ತವಾಗಿದೆ” ಎಂದು ತನ್ನ ಅಧಿಸೂಚನೆಯಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಪ್ರತಿಪಾದಿಸಿತ್ತು.
ಈ ಕುರಿತ ಮೊಕದ್ದಮೆಯ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಡೆಯುತ್ತಿದ್ದು, ಸಂವಿಧಾನ (ಪರಿಶಿಷ್ಟ ಜಾತಿ) ಆದೇಶ 1950 ಅನ್ನು ತಿದ್ದುಪಡಿ ಮಾಡಿ ಹಿಂದೂ, ಸಿಖ್ ಮತ್ತು ಬೌದ್ಧ ಧರ್ಮದ ಅನುಯಾಯಿಗಳನ್ನು ಮಾತ್ರ ಪರಿಶಿಷ್ಟ ಜಾತಿಯವರೆಂದು ಪರಿಗಣಿಸಲಾಗಿದೆ. ಇದರಿಂದ ಧಾರ್ಮಿಕ ನೆಲೆಯಲ್ಲಿ ತಾರತಮ್ಯವೆಸಗಿದಂತಾಗಿದೆ ಎಂಬ ದೂರಿನ ಕುರಿತು ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.
2004ರಲ್ಲಿ ಸರ್ಕಾರೇತರ ಸಂಸ್ಥೆಯಾದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಕೇಂದ್ರವು ಈ ದೂರನ್ನು ದಾಖಲಿಸಿದೆ.
ಇದನ್ನೂ ಓದಿ: ದತ್ತಾಂಶ ಸಂರಕ್ಷಣೆ ಮಸೂದೆಯು RTI ಕಾಯ್ದೆಯನ್ನು ದುರ್ಬಲಗೊಳಿಸುತ್ತದೆ: ಮಾಹಿತಿ ಆಯುಕ್ತರ ಆತಂಕ