BMTC ಮೃತ ನೌಕರನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ, ಸರಕಾರಿ ಹುದ್ದೆ: ಸಚಿವ ಶ್ರೀರಾಮುಲು ಘೋಷಣೆ
ಬಸ್ನಲ್ಲಿ ಆಕಸ್ಮಿಕ ಬೆಂಕಿ ಪ್ರಕರಣ

ರಾಯಚೂರು, ಮಾ.10 : ಬಸ್ ನಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ ಮೃತಪಟ್ಟ ಬಿಎಂಟಿಸಿ ನೌಕರನ ಕುಟಂಬಕ್ಕೆ ಐದು ಲಕ್ಷ ರೂಪಾಯಿ ಪರಿಹಾರ ಹಾಗೂ ಕುಟುಂಬದ ಒಬ್ಬರಿಗೆ ಸರಕಾರಿ ನೌಕರಿ ಕೊಡಿಸುವಂತೆ ಆದೇಶ ಮಾಡಲಾಗಿದೆ ಎಂದು ಸಾರಿಗೆ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿದ್ರೆಯ ಮಂಪರಿನಲ್ಲಿದ್ದಾಗ ಅನಾಹುತ ಸಂಭವಿಸಿದ್ದು, ಘಟನೆ ತಿಳಿಯುತ್ತಿದ್ದಂತೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಶೀಘ್ರವೇ ಸಾರಿಗೆ ನೌಕರರಿಗೆ ವೇತನ ಹೆಚ್ಚಳದ ವಿಚಾರವನ್ನು ಕೈಗೆತ್ತಿಕೊಳ್ಳಲಾಗುವುದು. ನಾವು ಶೇ.10ರಷ್ಟು ವೇತನ ಹೆಚ್ಚಳ ಮಾಡುವುದಾಗಿ ತಿಳಿಸಿದ್ದು, ಸರಕಾರಿ ನೌಕರರ ಮಾದರಿಯಲ್ಲಿ ಶೇ.17ರಷ್ಟು ವೇತನ ಹೆಚ್ಚಿಸುವಂತೆ ಸಾರಿಗೆ ಸಿಬ್ಬಂದಿ ಒತ್ತಾಯಿಸುತ್ತಿದ್ದಾರೆ. ಆದರೆ, ಇದರಿಂದ ಸರಕಾರಕ್ಕೆ 6500 ಕೋಟಿ ಹೊರೆಯಾಗಲಿದೆ. ಅನೇಕ ವರ್ಷಗಳಿಂದ ಸಾರಿಗೆ ಪ್ರಯಾಣ ದರ ಕೂಡ ಹೆಚ್ಚಿಸಿಲ್ಲ. ಈ ವಿಚಾರಗಳ ಬಗ್ಗೆ ಆರ್ಥಿಕ ಇಲಾಖೆಯೊಂದಿಗೆ ಹಾಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಇದನ್ನೂ ಓದಿ: ಬಿಎಂಟಿಸಿ ಬಸ್ನಲ್ಲಿ ಆಕಸ್ಮಿಕ ಬೆಂಕಿ: ನಿರ್ವಾಹಕ ಸಜೀವ ದಹನ





