ಸುರತ್ಕಲ್ ಟೋಲ್ ಗೇಟ್ ತೆರವಿನ ದಿನಾಂಕ ಘೋಷಣೆಗೆ ಆಗ್ರಹ: ಸಮಾನ ಮನಸ್ಕ ಸಂಘಟನೆಗಳಿಂದ ಧರಣಿ
ಇನ್ನು ಯಾವುದೇ ಪೊಳ್ಳು ಭರವಸೆಗಳನ್ನು ನಾವು ನಂಬುವುದಿಲ್ಲ: ಮುನೀರ್ ಕಾಟಿಪಳ್ಳ
ಸುರತ್ಕಲ್: ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿನ ದಿನಾಂಕ ಘೋಷಣೆಗೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳ ಸಹಭಾಗಿತ್ವದಲ್ಲಿ ಟೋಲ್ ಗೇಟ್ ಹೋರಾಟ ಸಮಿತಿ ನೇತೃತ್ವದಲ್ಲಿ ಒಂದು ದಿನದ ಧರಣಿ ಸುರತ್ಕಲ್ ಟೋಲ್ ಗೇಟ್ ಬಳಿ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ, ಈವರೆಗೂ ಜನಪ್ರತಿನಿಧಿಗಳು ಸುಳ್ಳು ಪಿಳ್ಳು ಭರವಸೆಗಳನ್ನು ನೀಡಿಕೊಂಡು ಬರುತ್ತಿದ್ದಾರೆ. ಆದರೆ, ಇನ್ನು ಯಾವುದೇ ಪೊಳ್ಳು ಭರವಸೆಗಳನ್ನು ನಾವು ನಂಬುವುದೂ ಇಲ್ಲ ಇದನ್ನು ಕೇಳುವುದೂ ಇಲ್ಲ ಎಂದರು.
ಸರಕಾರ ಅಥವಾ ಜಿಲ್ಲಾಡಳಿತ ಇಂದು ಸಂಜೆಯ ಒಳಗೆ ಧರಣಿಯ ಸ್ಥಳಕ್ಕೆ ಭೇಟಿ ನೀಡಿ ಟೋಲ್ ಗೇಟ್ ತೆರವಿನ ದಿನಾಂಕವನ್ನು ಪ್ರಕಟಿಸಬೇಕು. ಇಲ್ಲವಾದರೆ, ಇಂದು ಸಂಜೆ ಹೋರಾಟ ಸಮಿತಿ ಸಭೆನಡೆಸಿ ನಾಗರಿಕರೇ ಟೋಲ್ ತೆರವು ಮಾಡುವ ದಿನಾಂಕವನ್ನು ಪ್ರಕಟಿಸಲಿದೆ ಎಂದರು.
ಧರಣಿಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ, ಟೋಲ್ ಗೇಟ್ ನಿಂದ ಶಾಸಕರಾದ ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶೇ.40 ಕಮಿಷನ್ ಪಡೆಯುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.
ಅವರು ಕಮಿಷನ್ ಪಡೆಯದಿದ್ದರೆ, ಅವರ ಕ್ಷೇತ್ರದ ಜನರು ನಡೆಸುತ್ತಿರುವ ಈ ಹೋರಾಟದಲ್ಲಿ ಭಾಗವಹಿಸುತ್ತಿದ್ದರು. ಟೋಲ್ ತೆರವಿಗೆ ಬೆಂಬಲವಿದೆ ಎಂದು ಎಲ್ಲೋ ಕುಳಿತು ಶಾಸಕರು, ಸಂಸದರು ಹೇಳುತ್ತಾ ನಮ್ಮನ್ನು ಮೊಸ ಮಾಡುತ್ತಿದ್ದಾರೆ. ಅವರ ಬೆಂಬಲ ವಿರುವುದೆ ಅಗಿದ್ದರೆ ಇಂದು ಧರಣಿಯಲ್ಲಿ ಭಾಗವಹಿಸುತ್ತಿದ್ದರು ಎಂದು ನುಡಿದರು.
ಅಧಿಕಾರಿಗಳು ದಿನಾಂಕ ಪ್ರಕಟಿಸಬೇಕು ಇಲ್ಲವಾದರೆ ನಾವೇ ಟೋಲ್ ಗೇಟ್ ನ್ನು ತೆಗೆದು ಸಮುದ್ರಕ್ಕೆ ಎಸೆಯುತ್ತೇವೆ. ಜೈಲ್ ಬರೋ ಮಾಡಿದರೂ ಅಂಜಲ್ಲ ಎಂದು ಮಿಥುನ್ರೈ ನುಡಿದರು.
ದಿನಾಂಕ ಪ್ರಕಟಿಸಬೇಕು ಇಲ್ಲವಾದರೆ ಜೈಲ್ ಬರೋ ನಡೆಸಲಾಗುವುದು ಎಂದು ಮಾಜಿ ಸಚಿವ ಅಭಯಚಂದ್ರಜೈನ್ ಸರಕಾರ ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು. ಜೈಲ್ಬರೋ ಗೆ ಪ್ರಥಮವಾಗಿ ಜೈಲ್ ಹೋಗುವವರಲ್ಲಿ ನಾನು ಮೊದಲಿನಾಗಿರುತ್ತೆನೆ ಎಂದು ನುಡಿದರು.
ಇದನ್ನೂ ಓದಿ: ಉಡುಪಿ: ಇಂದ್ರಾಳಿ ಬಳಿ ಹೆದ್ದಾರಿ ದುರಸ್ತಿಗೆ ಒತ್ತಾಯಿಸಿ ಉರುಳು ಸೇವೆಯ ಮೂಲಕ ವಿನೂತನ ಪ್ರತಿಭಟನೆ
ಕಾರ್ಯಕ್ರಮದಲ್ಲಿ ಹೋರಾಟ ಸಮಿತಿಯ ಸಹ ಸಂಚಾಲಕ ರಾಘವೇಂದ್ರ, ಪುರುಷೋತ್ತಮ ಚಿತ್ರಾಪುರ, ಪ್ರತಿಭಾ ಕುಳಾಯಿ, ಮೂಸಬ್ಬ ಪಕ್ಷಿಕೆರೆ, ಮೊಯ್ದಿನ್ ಬಾವಾ, ಮಿಥುನ್ ರೈ, ದಿನೇಶ ಕುಂಪಳ, ರಮೇಶ್, ದಿನೇಶ್ ಹೆಗ್ಡೆ ಉಳೆಪಾಡಿ, ರಮೇಶ್ ಶಿಯಾನ್, ಪಿ. ಮೊಹನ್, ಮಾಜಿ ಮೇಯರ್ ಶಶಿದರ ಹೆಗಡೆ, ಗುಲ್ಝಾರ್ ಬಾನು, ಎಂ.ಜಿ. ಹೆಗ್ಡೆ, ವಸಂತ್ ಬರ್ನಾರ್ಡ್, ಶೇಖರ ಹೆಜಮಾಡಿ, ರಾಲ್ಫಿ ಡಿಕೋಸ್ತಾ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಧರಣಿಗೆ ಮಣಿದು ಜಿಲ್ಲಾಧಿಕಾರಿಯವರ ಪರವಾಗಿ ಉಪ ತಹಶೀಲ್ದಾರ್ ನವೀನ್ ಅವರಿ ಸ್ಥಳಕ್ಕೆ ಭೇಟಿ ನೀಡಿ ನಾಗರಿಕರಿಂದ ಮನವಿ ಸ್ವೀಕರಿಸಿದರು. ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಧರಣಿಯ ಸ್ಥಳಕ್ಕೆಭೇಟಿ ನೀಡುವ ಭರವಸೆ ನೀಡಿದ್ದಾರೆ ಎಂದು ಮುನೀರ್ ಕಾಟಿಪಳ್ಳ ಅವರು ತಿಳಿದಿಸಿದರು.