ವಿದ್ಯಾರ್ಥಿನಿ ಮುಸ್ಕಾನ್ ವಿರುದ್ಧ ತನಿಖೆ ನಡೆಸುವಂತೆ ಸಿಎಂಗೆ ಪತ್ರ ಬರೆದ ಸಂಸದ ಅನಂತ ಕುಮಾರ್ ಹೆಗಡೆ
ಸಂಸದ ಅನಂತ ಕುಮಾರ್ ಹೆಗಡೆ
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿಚಾರ ತಾರಕಕ್ಕೇರಿದ್ದ ಸಂದರ್ಭದಲ್ಲಿ ಮಂಡ್ಯದ ಕಾಲೇಜೊಂದರಲ್ಲಿ ಕೇಸರಿಧಾರಿ ಯುವಕರ ಗುಂಪಿನಿಂದ ಸುತ್ತುವರಿದಿದ್ದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್ ಳನ್ನು ಇತ್ತೇಚೆಗೆ ಅಲ್ ಖೈದಾ ಮುಖಂಡ ಹೊಗಳಿದ್ದಾರೆನ್ನಲಾದ ವಿಚಾರದ ಕುರಿತು ವಿದ್ಯಾರ್ಥಿನಿ ವಿರುದ್ಧ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಸಂಸದ ಅನಂತ ಕುಮಾರ್ ಹೆಗಡೆ ಪತ್ರ ಬರೆದಿದ್ದಾರೆ.
'ಅಲ್ ಖೈದಾ ಮುಖಂಡ ಯಾರೆಂದೇ ತಿಳಿದಿಲ್ಲ ನನಗೆ, ನನ್ನ ಮಗಳನ್ನು ಹೊಗಳಿದ್ದಾರೆ ಎಂದು ಮಾಧ್ಯಮಗಳ ಮೂಲಕವೇ ತಿಳಿದಿದೆ. ಬೇರೆ ದೇಶದವರ ಹೊಗಳಿಕೆ ನಮಗೆ ಬೇಕಿಲ್ಲ' ಎಂದು ವಿದ್ಯಾರ್ಥಿನಿ ಮುಸ್ಕಾನ್ ತಂದೆ ಹುಸೇನ್ ಈ ಕುರಿತು ಮಾಧ್ಯಮಗಳಿಗೆ ತಿಳಿಸಿದ್ದರು.
ಇದೀಗ 'ವಿದ್ಯಾರ್ಥಿನಿಗೆ ಹಿಜಾಬ್ ವಿಚಾರದಲ್ಲಿ ಕಾಣದ ಕೈಗಳು ಮತ್ತು ನಿಷೇಧಿತ ಸಂಘಟನೆಗಳೊಂದಿಗೆ ಇರುವ ಸಂಬಂಧದ ಕುರಿತಂತೆ ಕೂಲಂಕುಷವಾದ ತನಿಖೆ ನಡೆಸಬೇಕು' ಎಂದು ಪತ್ರದಲ್ಲಿ ಮುಖ್ಯಮಂತ್ರಿಗೆ ಸಂಸದ ಅನಂತಕುಮಾರ ಹೆಗಡೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ... ಮಂಡ್ಯದ ವಿದ್ಯಾರ್ಥಿನಿಯನ್ನು ಪ್ರಶಂಸಿಸಿ ಅಲ್-ಖೈದಾ ವೀಡಿಯೊ ಪ್ರಕರಣ: ಮುಸ್ಕಾನ್ ತಂದೆ ಹೇಳಿದ್ದೇನು?