ಎಂ.ಬಿ.ಪಾಟೀಲ್ ಒಬ್ಬ ಕಟ್ಟಾ ಕಾಂಗ್ರೆಸ್ಸಿಗ: ಡಿಕೆಶಿ ಹೇಳಿಕೆಗೆ ನಟಿ ರಮ್ಯಾ ಪ್ರತಿಕ್ರಿಯೆ
ಬೆಂಗಳೂರು: 'ಸಚಿವ ಅಶ್ವತ್ಥ್ ನಾರಾಯಣ ಅವರು ಅಕ್ರಮ ಪ್ರಕರಣದಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳವುದಕ್ಕಾಗಿ ಎಂ.ಬಿ ಪಾಟೀಲರ ಮನೆಗೆ ಹೋಗಿ ಬಂದಿದ್ದಾರೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಹೇಳಿಕೆ ಕುರಿತು ಇದೀಗ ನಟಿ, ಮಾಜಿ ಸಂಸದೆ ರಮ್ಯಾ ಪ್ರತಿಕ್ರಿಯಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ' ಜನರು ಪಕ್ಷಾತೀತವಾಗಿ ಪರಸ್ಪರ ಭೇಟಿಯಾಗುತ್ತಾರೆ, ಸಮಾರಂಭಗಳಿಗೆ ಹೋಗುತ್ತಾರೆ, ಇನ್ನೂ ಕೆಲವರು ಕುಟುಂಬಗಳಲ್ಲಿ ಮದುವೆಯೂ ಆಗುತ್ತಾರೆ. ಡಿ.ಕೆ ಶಿವಕುಮಾರ್ ಇದರ ಬಗ್ಗೆ ಹೇಳಿಕೆ ನೀಡಿದ್ದು ನನಗೆ ಆಶ್ಚರ್ಯ ತಂದಿದೆ. ಎಂ.ಬಿ.ಪಾಟೀಲ್ ಒಬ್ಬ ಕಟ್ಟಾ ಕಾಂಗ್ರೆಸ್ಸಿಗ. ಪಕ್ಷ ದ ಒಂದೇ ಘಟಕವಾಗಿ ಚುನಾವಣೆ ಎದುರಿಸಬೇಕಲ್ಲವೇ? ಎಂದು ಹೇಳಿದ್ದಾರೆ.
ಇದನ್ನೂ ಓದಿ... ಅಶ್ವತ್ಥ್ ನಾರಾಯಣ ಭೇಟಿಯಾಗಿಲ್ಲ, ಡಿಕೆಶಿ ಹೇಳಿಕೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ: ಎಂ.ಬಿ. ಪಾಟೀಲ್
'ಸಚಿವ ಅಶ್ವತ್ಥ್ ನಾರಾಯಣ್ ಅವರು ಅಕ್ರಮ ಪ್ರಕರಣದಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳವುದಕ್ಕಾಗಿ ಎಂ.ಬಿ ಪಾಟೀಲರ ಮನೆಗೆ ಹೋಗಿ ಬಂದಿದ್ದಾರೆ. ಕಾಂಗ್ರೆಸ್ ಪಾರ್ಟಿಯವರು ಧ್ವನಿ ಎತ್ತಬಾರದು ಅಂತ ಹೇಳಿ ಮನವೊಲಿಸುವುದಕ್ಕಾಗಿ ಭೇಟಿಯಾಗಿದ್ದಾರೆ' ಎಂದು ಮಂಗಳವಾರ ಡಿ.ಕೆ ಶಿವಕುಮಾರ್ ಹೇಳಿಕೆ ನೀಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಸಚಿವ ಎಂ.ಬಿ. ಪಾಟೀಲ್, 'ಅಶ್ವತ್ಥ್ ನಾರಾಯಣ ಭೇಟಿಯಾಗಿಲ್ಲ, ಡಿಕೆಶಿ ಹೇಳಿಕೆ ಬಗ್ಗೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇನೆ' ಎಂದು ಸ್ಪಷ್ಟಪಡಿಸಿದ್ದರು.
People across parties meet each other, go to functions, some even get married into families- I’m surprised @DKShivakumar would say this about @MBPatil who’s a staunch congressman. Shouldn’t the party be fighting elections as one unit? @INCIndia https://t.co/YOT11h35Cq
— Divya Spandana/Ramya (@divyaspandana) May 11, 2022