ಟಿಪ್ಪು ಸುಲ್ತಾನ್ ದಂಡೆತ್ತಿ ಬಂದಾಗಲೇ ಕೊಡವರು ಹೆದರಲಿಲ್ಲ, ಸಿದ್ದು ಸುಲ್ತಾನ್ ಬಂದ್ರೆ ಹೆದರ್ತೀವಾ?: ಪ್ರತಾಪ್ ಸಿಂಹ
''ನಮಗೆ ಮೈಸೂರು, ಕೇರಳದಿಂದ ಕಲ್ಲು ಹೊಡೆಯುವವರನ್ನು ಕರೆದುಕೊಂಡು ಬರುವ ಅಗತ್ಯ ಇಲ್ಲ''
ಮೈಸೂರು: 'ಟಿಪ್ಪು ಸುಲ್ತಾನ್ ದಂಡೆತ್ತಿ ಬಂದಾಗಲೇ ಕೊಡವರು ತಲೆಕೆಡಿಸಿಕೊಳ್ಳಲಿಲ್ಲ, ಇನ್ನು ಈ ಸಿದ್ದು ಸುಲ್ತಾನ್ ಕೊಡಗಿಗೆ ಬಂದರೆ ನಾವು ಹೆದರ್ತೀವಾ?' ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah)ಅವರ ಕುರಿತು ಸಂಸದ ಪ್ರತಾಪ್ ಸಿಂಹ (Pratap Simha) ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಮೋಸದಿಂದ ಕೊಡಗಿಗೆ ಆಕ್ರಮಣ ಮಾಡಿ ದಂಡೆತ್ತಿ ಬಂದಾಗಲೇ ಕೊಡವರು ತಲೆಕೆಡಿಸಿಕೊಳ್ಳಲಿಲ್ಲ, ಇನ್ನು ಈ ಸಿದ್ದು ಸುಲ್ತಾನ್ ಕೊಡಗಿಗೆ ಬಂದರೆ ಹೆದರ್ತೀವಾ, ಇವರನ್ನು ಅಲ್ಲಿನ ಜನ ಕ್ಯಾರೆ ಎನ್ನುವುದಿಲ್ಲ' ಎಂದು ವ್ಯಂಗ್ಯವಾಡಿದರು.
'ನಮಗೆ ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ ಮತ್ತು ಕೇರಳದಿಂದ ಕಲ್ಲು ಹೊಡೆಯುವವರನ್ನು ಕರೆದುಕೊಂಡು ಬರುವ ಅಗತ್ಯವಿಲ್ಲ, ಕೊಡಗಿನ ಜನ ವೀರರು, ದೇಶಕ್ಕೆ ಇಬ್ಬರು ಜನರಲ್ ಮತ್ತು 28 ಜನ ಲೆಫ್ಟಿನೆಂಟ್ ಜನರಲ್ ಅನ್ನು ಕೊಟ್ಟಿದೆ. ಇವತ್ತು ಇಬ್ಬರು ಲೆಫ್ಟಿನೆಂಟ್ ಜನರಲ್ ಗಳು ಕೆಲಸ ಮಾಡುತ್ತಿದ್ದಾರೆ. ಅಸಂಖ್ಯಾತ ಸೈನಿಕರನ್ನು ದೇಶಕ್ಕೆ ನೀಡಿದೆ. ಹಾಗಾಗಿ ನಾವು ಹೊರಗಿನಿಂದ ಯಾರನ್ನೂ ಕರೆದುಕೊಂಡು ಬರುವುದಿಲ್ಲ, ನೀವು ಕೊಡಗಿಗೆ ಬಂದಾಗ ಅಲ್ಲಿನ ಜನರೇ ನಿಮಗೆ ಉತ್ತರ ಕೊಡಲಿದ್ದಾರೆ ಎಂದು ಕುಟುಕಿದರು.
ಇದ್ನನ್ನೂ ಓದಿ: ಕಲ್ಲು, ಮೊಟ್ಟೆ ಹೊಡೆಯೋದು ಸಹಜ, ಮಡಿಕೇರಿ ಚಲೋ ಕೈ ಬಿಡಿ: ಸಿದ್ದರಾಮಯ್ಯಗೆ ಎಚ್. ವಿಶ್ವನಾಥ್ ಮನವಿ