ಹೊಸದಿಲ್ಲಿ: ಮೂವರು ಆರೋಪಿಗಳನ್ನು ಜೈಲು ಕಂಬಿ ಒಡೆದು ಬಿಡಿಸಿಕೊಂಡು ಪರಾರಿಯಾದ ದಕ್ಷಿಣ ಆಫ್ರಿಕಾ ಪ್ರಜೆಗಳು
ಹೊಸದಿಲ್ಲಿ: ವೀಸಾ ಅವಧಿ ಮುಗಿದರೂ ದೇಶದಲ್ಲಿ ನೆಲೆಸಿದ್ದ ಹಾಗೂ ಮಾದಕ ದ್ರವ್ಯ ಚಟುಟಿಕೆಯಲ್ಲಿ ತೊಡಗಿಸಿಕೊಂಡಿರುವ ಆರೋಪದಲ್ಲಿ ಮಾದಕ ದ್ರವ್ಯ ನಿಗ್ರಹ ದಳದಿಂದ ಬಂಧಿತರಾಗಿದ್ದ ಮೂವರು ಆಫ್ರಿಕಾ ಮೂಲದ ಪ್ರಜೆಗಳನ್ನು ಸುಮಾರು 100 ಮಂದಿ ಆಫ್ರಿಕಾ ಮೂಲದ ಪ್ರಜೆಗಳು (Nigerian nationals) ಪೊಲೀಸರನ್ನು ಸುತ್ತುವರಿದು, ಪೊಲೀಸರ (Delhi Cops) ಮೇಲೆ ಹಲ್ಲೆ ನಡೆಸಿ, ಅವರನ್ನು ಪೊಲೀಸರ ವಶದಿಂದ ಬಿಡಿಸಿಕೊಂಡು ಹೋಗಿರುವ ಘಟನೆ ಶನಿವಾರ ದಕ್ಷಿಣ ದಿಲ್ಲಿಯ ರಾಜು ಪಾರ್ಕ್ ಪ್ರದೇಶದಿಂದ ವರದಿಯಾಗಿದೆ ಎಂದು ndtv.com ವರದಿ ಮಾಡಿದೆ.
ಇದಕ್ಕೂ ಮುನ್ನ ಮಾದಕ ದ್ರವ್ಯ ನಿಗ್ರಹ ದಳದ ತಂಡವೊಂದು ಆಫ್ರಿಕಾ ಮೂಲದ ಅಪರಾಧಿಗಳನ್ನು ಸೆರೆ ಹಿಡಿಯಲು ರಾಜು ಪಾರ್ಕ್ ಪ್ರದೇಶಕ್ಕೆ ತೆರಳಿತ್ತು. ಈ ಸಂದರ್ಭದಲ್ಲಿ ವೀಸಾ ಅವಧಿ ಮುಗಿದರೂ ದೇಶದಲ್ಲಿ ನೆಲೆಸಿರುವ ಮೂವರು ಆಫ್ರಿಕಾ ಮೂಲದ ಪ್ರಜೆಗಳನ್ನು ಬಂಧಿಸಿತ್ತು.
ಇದರ ಬೆನ್ನಿಗೇ ಪೊಲೀಸ್ ಠಾಣೆ ಎದುರು ಜಮಾಯಿಸಿದ ಆಫ್ರಿಕಾ ಮೂಲದ ಸುಮಾರು ನೂರು ಮಂದಿ ಪ್ರಜೆಗಳು ಮೂವರು ಆಫ್ರಿಕಾ ಪ್ರಜೆಗಳನ್ನು ಬಂಧಿಸಿದ್ದ ಪೊಲೀಸ್ ತಂಡದ ಮೇಲೆ ದಾಳಿ ನಡೆಸಿ, ಆರೋಪಿಗಳನ್ನು ಪೊಲೀಸರ ವಶದಿಂದ ಬಿಡಿಸಿಕೊಂಡು ಹೋಗಿದ್ದಾರೆ. ಮೂವರು ಆರೋಪಿಗಳ ಪೈಕಿ ಒಬ್ಬನಾಗಿದ್ದ ಫಿಲಿಪ್ನನ್ನು ಮತ್ತೆ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಂತರ ನೆಬ್ ಸರಾಯಿ ಪೊಲೀಸ್ ಠಾಣೆಯ ಪೊಲೀಸರ ತಂಡ ಹಾಗೂ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ, ರಾಜು ಪಾರ್ಕ್ ಪ್ರದೇಶದಿಂದ ಮತ್ತೆ ನಾಲ್ವರನ್ನು ಸೆರೆ ಹಿಡಿದಿದ್ದಾರೆ.
ಇದಕ್ಕೆ ಪ್ರತಿಯಾಗಿ ಮತ್ತೆ ಪ್ರತಿದಾಳಿ ನಡೆಸಿದ ಆಫ್ರಿಕಾ ಮೂಲದ ನೂರು ಮಂದಿ ಪ್ರಜೆಗಳು, ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದರು. ಆದರೆ, ಪೊಲೀಸರು ಪರಿಸ್ಥಿತಿ ವಿಕೋಪಕ್ಕೆ ತಲುಪದಂತೆ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದು, ಈ ಸಂಬಂಧ ಕಾನೂನು ಕ್ರಮ ಜರುಗಿಸಲು ಮುಂದಾಗಿದ್ದಾರೆ.
ಇದನ್ನೂ ಓದಿ: ಅತ್ಯಾಚಾರ ಪ್ರಕರಣದ ಆರೋಪಿಯ ತಾಯಿಗೆ ಗುಂಡಿಕ್ಕಿದ ಅಪ್ರಾಪ್ತ ವಯಸ್ಸಿನ ಸಂತ್ರಸ್ತೆ!