ಇಸ್ರೇಲ್ ಪೊಲೀಸರ ಗುಂಡೇಟಿನಿಂದ ಪೆಲೆಸ್ತೀನ್ ಯುವಕ ಮೃತ್ಯು: ವಿಶ್ವಸಂಸ್ಥೆ ಮಾನವ ಹಕ್ಕು ಘಟಕ ಖಂಡನೆ

Update: 2021-12-05 18:34 GMT

ಜೆರುಸಲೇಂ, ಡಿ.5: ಆಕ್ರಮಿತ ಪೂರ್ವ ಜೆರುಸಲೇಂನಲ್ಲಿ ಯಹೂದಿ ವ್ಯಕ್ತಿಗೆ ಚೂರಿಯಿಂದ ಇರಿದ ಆರೋಪದಲ್ಲಿ ಪೆಲೆಸ್ತೀನ್‌ನ ಯುವಕನೊಬ್ಬನನ್ನು ಇಸ್ರೇಲ್ ಪಡೆ ಗುಂಡಿಕ್ಕಿ ಹತ್ಯೆ ಮಾಡಿರುವುದನ್ನು ಪೆಲೆಸ್ತೀನ್ ಅಧಿಕಾರಿಗಳು ಹಾಗೂ ಮಾನವಹಕ್ಕು ಸಂಘಟನೆ ಖಂಡಿಸಿದೆ. 

ಜೆರುಸಲೇಂನ ಹಳೆಯ ನಗರದ ಬಳಿ ಶನಿವಾರ ನಡೆದ ಕೃತ್ಯದ ವೀಡಿಯೊ ದೃಶ್ಯಾವಳಿಯನ್ನು ಇಸ್ರೇಲ್ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. 25 ವರ್ಷದ ಮುಹಮ್ಮದ್ ಸಲೀಮಾ ಎಂಬಾತ ಯೆಹೂದಿ ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಇರಿದ ಬಳಿಕ ಇಸ್ರೇಲ್ ಪೊಲೀಸರತ್ತ ನುಗ್ಗಿದಾಗ ಆತನಿಗೆ ಪೊಲೀಸರು ಗುಂಡು ಹಾರಿಸುವ ಮತ್ತು ಆತ ನೆಲಕ್ಕೆ ಕುಸಿದು ಬೀಳುವ ದೃಶ್ಯ ಇದಾಗಿದೆ. ಆದರೆ, ಸ್ಥಳೀಯರು ಬಿಡುಗಡೆಗೊಳಿಸಿದ ವೀಡಿಯೊ ತುಣುಕಿನಲ್ಲಿ, ನೆಲದ ಮೇಲೆ ಬಿದ್ದಿರುವ ಸಲೀಮಾನ ಮೇಲೆ ಪೊಲೀಸರು ಅತ್ಯಂತ ಸನಿಹದಿಂದ ಹಲವು ಬಾರಿ ಗುಂಡು ಹಾರಿಸುವ ದೃಶ್ಯವಿದೆ. 

ಚೂರಿಯಿಂದ ಇರಿದ 20 ವರ್ಷದ ವ್ಯಕ್ತಿ ಗಂಭೀರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಸ್ರೇಲ್ನ ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ. ಮೇಲ್ನೋಟಕ್ಕೆ ನ್ಯಾಯಾತಿರಿಕ್ತ ಹತ್ಯೆಯಂತೆ ಭಾಸವಾಗುವ ಈ ಕೃತ್ಯ ತೀವ್ರ ಆಘಾತಕಾರಿ ಎಂದು ವಿಶ್ವಸಂಸ್ಥೆಯ ಮಾನವಹಕ್ಕು ಘಟಕ ಖಂಡಿಸಿದೆ. ಚೂರಿಯಿಂದ ಇರಿದ ಸಲೀಮಾ ಪೊಲೀಸರ ಗುಂಡೇಟಿನಿಂದ ಗಾಯಗೊಂಡು ನೆಲದ ಮೇಲೆ ಬಿದ್ದ ಬಳಿಕವೂ ಅತೀ ಸನಿಹದಲ್ಲಿ ಗುಂಡು ಹಾರಿಸಿರುವುದನ್ನು ವೀಡಿಯೊ ದೃಶ್ಯದಲ್ಲಿ ಕಾಣಬಹುದು. ಇದರಿಂದ ಸಲೀಮಾ ಮೃತಪಟ್ಟಿದ್ದಾರೆ . 

ಈ ರೀತಿಯ ನ್ಯಾಯಾತಿರಿಕ್ತ ಹತ್ಯೆಯು ಶಸ್ತ್ರಸಜ್ಜಿತ ಮತ್ತು ಸೂಕ್ತ ರಕ್ಷಣೆ ಇರುವ ಇಸ್ರೇಲ್‌ನ ಭದ್ರತಾ ಸಿಬ್ಬಂದಿ ಪೆಲೆಸ್ತೀನಿಯರ ವಿರುದ್ಧ ನಿರಂತರ ನಡೆಸುತ್ತಿರುವ, ಉತ್ತರದಾಯಿತ್ವವೇ ಇಲ್ಲದ ದಾಳಿ, ಹತ್ಯೆ ಪ್ರಕರಣಗಳಿಗೆ ಉದಾಹರಣೆಯಾಗಿದೆ. ಈ ಪ್ರಕರಣದಲ್ಲಿ ಯಾರನ್ನಾದರೂ ಹೊಣೆಗಾರರಾಗಿಸಲಾಗುವುದೇ ಎಂಬ ಬಗ್ಗೆ ವಿಶ್ವಸಂಸ್ಥೆಯ ಮಾನವ ಹಕ್ಕು ಘಟಕ ನಿಗಾ ವಹಿಸಲಿದೆ ಎಂದು ಹೇಳಿಕೆ ತಿಳಿಸಿದೆ. 

ಹತ್ಯೆಗೆ ಸಂಬಂಧಿಸಿ ಇಬ್ಬರು ಪೊಲೀಸರನ್ನು ವಿಚಾರಣೆಗೆ ಕರೆಸಲಾಗಿದೆ ಎಂದು ಇಸ್ರೇಲ್ ನ ನ್ಯಾಯ ಇಲಾಖೆ ಹೇಳಿದೆ. ಇಸ್ರೇಲ್ ಪೊಲೀಸರ ಕೃತ್ಯವನ್ನು ಸಮರ್ಥಿಸುವುದಾಗಿ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್ ಹೇಳಿದ್ದಾರೆ. ಪೆಲೆಸ್ತೀನ್ ಅಥಾರಿಟಿ(ಪಿಎ) ಅಧ್ಯಕ್ಷ ಮಹ್ಮೂದ್ ಅಬ್ಬಾಸ್, ಪ್ರಧಾನಿ ಮುಹಮ್ಮದ್ ಶ್ಯತಯೆಹ್ ಸೇರಿದಂತೆ ಹಲವು ಮುಖಂಡರು ಈ ಹತ್ಯೆಯನ್ನು ಖಂಡಿಸಿದ್ದಾರೆ. ದಾಳಿಕೋರನನ್ನು ತಟಸ್ಥಗೊಳಿಸಲಾಗಿದೆ ಎಂಬ ಇಸ್ರೇಲ್ ಅಧಿಕಾರಿಗಳ ಮತ್ತು ಮಾಧ್ಯಮಗಳ ಹೇಳಿಕೆ ಸರಿಯಲ್ಲ, ಆತನನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ನ ಮಾನವಹಕ್ಕು ಸಂಘಟನೆ ‘ಬಿತ್ಸೆಲೆಮ್ ಪ್ರತಿಕ್ರಿಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News