ಹೋರಾಟ ನಿಲ್ಲಿಸಲು ಉಕ್ಕು ಸ್ಥಾವರದಲ್ಲಿನ ಯೋಧರಿಗೆ ಉಕ್ರೇನ್ ಆದೇಶ

Update: 2022-05-20 17:59 GMT

ಕೀವ್, ಮೇ 20: ಉಕ್ರೇನ್ನ ಪ್ರಮುಖ ಬಂದರು ನಗರ ಮರಿಯುಪೋಲ್ನಲ್ಲಿನ ಅಝೋವ್ಸ್ತಲ್ ಉಕ್ಕುಸ್ಥಾವರದೊಳಗೆ ಸೇರಿಕೊಂಡು ರಶ್ಯ ಸೇನೆಯ ವಿರುದ್ಧ ಹೋರಾಡುತ್ತಿರುವ ಯೋಧರು ಹೋರಾಟ ನಿಲ್ಲಿಸುವಂತೆ ಉಕ್ರೇನ್ ಸರಕಾರ ಆದೇಶಿಸಿದೆ ಎಂದು ವರದಿಯಾಗಿದೆ.
 ಉಕ್ಕು ಸ್ಥಾವರದಲ್ಲಿ ಇರುವ ಯೋಧರ ಪ್ರಾಣ ರಕ್ಷಿಸುವ ಉದ್ದೇಶದಿಂದ ಸೇನೆ ಈ ಆದೇಶ ನೀಡಿದೆ. ಸ್ಥಾವರದೊಳಗೆ ಗಾಯಗೊಂಡಿರುವ ಮತ್ತು ಮೃತಪಟ್ಟಿರುವ ಯೋಧರನ್ನು ತಕ್ಷಣ ಅಲ್ಲಿಂದ ಸ್ಥಳಾಂತರಿಸುವ ಪ್ರಕ್ರಿಯೆಗೆ ಅವಕಾಶ ನೀಡುವ ಉದ್ದೇಶವಿದೆ ಎಂದು ಸ್ಥಾವರದೊಳಗಿಂದ ಯುದ್ಧ ಮುಂದುವರಿಸಿದ್ದ ಉಕ್ರೇನ್ ಸೇನಾ ತುಕಡಿಯ ಕಮಾಂಡರ್ ಡೆನಿಸ್ ಪ್ರೊಕೊಪೆಂಕೊ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

 ಮೂರು ವಿಷಯಗಳಿಗೆ ಆದ್ಯತೆ ನೀಡುವಂತೆ ನಮಗೆ ಸೂಚಿಸಲಾಗಿತ್ತು. ನಾಗರಿಕರು, ಗಾಯಗೊಂಡವರು ಮತ್ತು ಮೃತಪಟ್ಟವರು. ನಾಗರಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಈಗ ಗಾಯಾಳುಗಳು ಮತ್ತು ಮೃತರ ಬಗ್ಗೆ ಗಮನ ಹರಿಸಬೇಕಾಗಿದೆ. ಮಾತೃಭೂಮಿಗಾಗಿ ಪ್ರಾಣತ್ಯಾಗ ಮಾಡಿದ ಹೀರೋಗಳ ಅಂತ್ಯಸಂಸ್ಕಾರವನ್ನು ಅವರ ಕುಟುಂಬದವರು ಗೌರವಪೂರ್ವಕವಾಗಿ ನಡೆಸುವರೆಂಬ ವಿಶ್ವಾಸವಿದೆ ಎಂದವರು ಹೇಳಿದ್ದಾರೆ.
ತಾನು ಸೆರೆಹಿಡಿದ ರಶ್ಯದ ಯೋಧರನ್ನು ರಶ್ಯ ಸೆರೆಹಿಡಿದ ತನ್ನ ಯೋಧರ ಜತೆ ವಿನಿಮಯ ಮಾಡಿಕೊಳ್ಳುವ ಬಗ್ಗೆ ಮಾತುಕತೆ ಮುಂದುವರಿದಿದೆ ಎಂದು ಉಕ್ರೇನ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News