×
Ad

ಕಠ್ಮಂಡುವಿನಲ್ಲಿ ಪ್ರತಿಭಟನೆಗಳ ತೀವ್ರತೆಯಿಂದ ಭುಗಿಲೆದ್ದ ಹಿಂಸಾಚಾರ; ನೇಪಾಳ ಅಧ್ಯಕ್ಷರ ರಾಜೀನಾಮೆ

Update: 2025-09-09 18:08 IST

PC : PTI | ರಾಮ್ ಚಂದ್ರ ಪೌಡೆಲ್

ಕಠ್ಮಂಡು: ಭ್ರಷ್ಟಾಚಾರ ವಿರೋಧಿ ಬೃಹತ್ ಪ್ರತಿಭಟನೆಗಳಿಂದ ನೇಪಾಳದಲ್ಲಿ ಮಂಗಳವಾರ ರಾಜಕೀಯ ಪ್ರಕ್ಷುಬ್ಧತೆ ಹೆಚ್ಚಾಗಿದೆ. ಪ್ರಧಾನಿ ಕೆ.ಪಿ. ಶರ್ಮಾ ಓಲಿ ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ಬಳಿಕ, ಅಧ್ಯಕ್ಷ ರಾಮ್ ಚಂದ್ರ ಪೌಡೆಲ್ ಕೂಡ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ವಿವಾದಾತ್ಮಕ ನೀತಿಗಳ ವಿರುದ್ಧ ಕಳೆದ ಕೆಲವು ದಿನಗಳಿಂದ ಸಿಡಿಲಿನಂತೆ ಪ್ರತಿಭಟನೆಗಳು ತೀವ್ರಗೊಂಡಿದ್ದು, ದೇಶಾದ್ಯಂತ ಅಶಾಂತಿಯ ವಾತಾವರಣ ನಿರ್ಮಾಣವಾಗಿದೆ. ಯುವ ಜನರ ಭ್ರಷ್ಟಾಚಾರ ವಿರೋಧಿ ಅಭಿಯಾನಕ್ಕೆ ಬೆಂಬಲ ಹೆಚ್ಚಾಗುತ್ತಿದ್ದಂತೆ, ಕರ್ಫ್ಯೂ ಆದೇಶಗಳನ್ನು ಉಲ್ಲಂಘಿಸಿ ಸಾವಿರಾರು ಪ್ರತಿಭಟನಾಕಾರರು ಬೀದಿಗಿಳಿದಿದ್ದಾರೆ. ಭದ್ರತಾ ಪಡೆಗಳೊಂದಿಗೆ ನಡೆದ ಘರ್ಷಣೆಯಲ್ಲಿ ಹಿಂಸಾಚಾರ ತೀವ್ರಗೊಂಡಿದ್ದು, ಅನೇಕ ಪ್ರದೇಶಗಳಲ್ಲಿ ಬೆಂಕಿ ಹಚ್ಚುವಿಕೆ ನಡೆದಿರುವುದಾಗಿ ವರದಿಯಾಗಿದೆ.

ಕಳೆದ ವಾರ ಸಾಮಾಜಿಕ ಮಾಧ್ಯಮಗಳ ಮೇಲಿನ ವಿವಾದಾತ್ಮಕ ನಿಷೇಧದ ಹಿನ್ನೆಲೆಯಲ್ಲಿ ಉದ್ರಿಕ್ತತೆ ಹೆಚ್ಚಾಗಿ, ಪ್ರತಿಭಟನೆಗಳು ತೀವ್ರಗೊಂಡ ನಂತರ ಮಂಗಳವಾರ ಮುಂಜಾನೆ ಸರ್ಕಾರವು ಆ ನಿರ್ಧಾರವನ್ನು ಹಿಂಪಡೆದಿತು. ಆದರೆ ಅಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು.

ಸೋಮವಾರದಿಂದ ಮಂಗಳವಾರದವರೆಗೆ ನಡೆದ ಹಿಂಸಾಚಾರದಲ್ಲಿ ಕನಿಷ್ಠ 22 ಮಂದಿ ಸಾವನ್ನಪ್ಪಿ, ನೂರಾರು ಮಂದಿ ಗಾಯಗೊಂಡಿದ್ದಾರೆ. ತನ್ನ ರಾಜೀನಾಮೆ ಪತ್ರದಲ್ಲಿ ಓಲಿ, "ದೇಶದ ಪ್ರತಿಕೂಲ ಪರಿಸ್ಥಿತಿ ಹಾಗೂ ಸಂವಿಧಾನಬದ್ಧ ರಾಜಕೀಯ ಪರಿಹಾರಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ನಾನು ಪ್ರಧಾನಿ ಸ್ಥಾನದಿಂದ ಹಿಂದೆ ಸರಿಯುತ್ತಿದ್ದೇನೆ" ಎಂದು ತಿಳಿಸಿದ್ದಾರೆ.

ಸಂಸತ್ತಿನ ಹೊರಗೆ ಸಾವಿರಾರು ಪ್ರತಿಭಟನಾಕಾರರು ಓಲಿ ಮತ್ತು ಪೌಡೆಲ್ ಅವರ ರಾಜೀನಾಮೆಯನ್ನು ಸಂಭ್ರಮಿಸುತ್ತಿದ್ದರೂ, ಕಠ್ಮಂಡುವಿನ ಹಲವೆಡೆ ಹಿಂಸಾಚಾರ ಮುಂದುವರಿದಿದೆ. ಓಲಿಯವರ ಖಾಸಗಿ ನಿವಾಸ ಸುಟ್ಟುಹೋಗಿದ್ದು, ಅನೇಕ ಪ್ರಮುಖ ರಾಜಕಾರಣಿಗಳ ಮನೆಗಳಿಗೂ ಬೆಂಕಿ ಹಚ್ಚಲಾಗಿದೆ. ಸರ್ಕಾರದ ಪ್ರಮುಖ ಕಚೇರಿಗಳನ್ನು ಹೊಂದಿರುವ ಸಿಂಘಾ ದರ್ಬಾರ್ ಸಂಕೀರ್ಣದಲ್ಲಿ ಉಂಟಾದ ಬೆಂಕಿಯಿಂದ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ಕಠ್ಮಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಬೆಂಕಿಯ ಕೆನ್ನಾಲಿಗೆ ಹಬ್ಬಿದ ಪರಿಣಾಮವಾಗಿ, ವಿಮಾನಯಾನವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ. ಭದ್ರತಾ ಪಡೆಗಳು ರಾಜಧಾನಿ ಮತ್ತು ಪ್ರಮುಖ ನಗರಗಳಲ್ಲಿ ನಿಯಂತ್ರಣ ಸಾಧಿಸಲು ಹರಸಾಹಸ ಪಡುತ್ತಿದ್ದರೂ, ಪರಿಸ್ಥಿತಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News