ದಮಾಮ್: ಇಂಡಿಯನ್ ಸೋಶಿಯಲ್ ಫೋರಂನಿಂದ ಅನಿವಾಸಿ ಭಾರತೀಯರಿಗೆ ಗಣರಾಜ್ಯೋತ್ಸವದ ಶುಭಾಶಯ
ದಮಾಮ್: ಸೌದಿ ಅರೇಬಿಯದಲ್ಲಿರುವ ಎಲ್ಲ ಅನಿವಾಸಿ ಭಾರತೀಯರಿಗೆ ಇಂಡಿಯನ್ ಸೋಶಿಯಲ್ ಫೋರಂ, ಈಸ್ಟರ್ನ್ ಪ್ರೊವಿನ್ಸ್ ಕೇಂದ್ರ ಸಮಿತಿಯು ಗಣರಾಜ್ಯೋತ್ಸವದ ಶುಭಾಶಯಗಳನ್ನು ಸಲ್ಲಿಸುತ್ತದೆ.
ನಾವು ಭಾರತೀಯರು 1950, ಜನವರಿ 26 ರಂದು ಅಸ್ತಿತ್ವಕ್ಕೆ ಬಂದಿರುವ ವಿಶ್ವದ ಶ್ರೇಷ್ಠ ಪ್ರಜಾಪ್ರಭುತ್ವ ಸಂವಿಧಾನವನ್ನು ಪಾಲಿಸುವವರಾಗಿದ್ದೇವೆ. ಡಾ. ಬಿ.ಆರ್. ಅಂಬೇಡ್ಕರ್ ಮುಂದಾಳತ್ವದಲ್ಲಿ ನಿರ್ಮಾಣಗೊಂಡ ಭಾರತದ ಸಂವಿಧಾನವು ವಿಶ್ವದಲ್ಲೇ ಅತ್ಯುತ್ತಮವಾಗಿದ್ದು ಭಾರತವನ್ನು ಸಮಾಜವಾದಿ, ಜಾತ್ಯತೀತ ಗಣರಾಜ್ಯವೆಂದು ಸಾರುತ್ತದೆ. ಇದು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕನ್ನು ಪ್ರತಿಪಾದಿಸುತ್ತದೆ. ಅದಕ್ಕಾಗಿ ಪ್ರಜೆಗಳು, ಪ್ರಜೆಗಳಿಂದ, ಪ್ರಜೆಗಳಿಗಾಗಿ ಸರಕಾರ ರಚಿಸಿಕೊಳ್ಳುವ ವ್ಯವಸ್ಥೆಯನ್ನು ಸಂವಿಧಾನ ನಾಗರಿಕರಿಗೆ ಕಲ್ಪಿಸಿಕೊಟ್ಟಿದೆ.
ಸಾಮಾಜಿಕ ನ್ಯಾಯ ಎಂಬುದು ಸಂವಿಧಾನದ ಮೂಲ ಧ್ಯೇಯವಾಗಿದ್ದು, ಇಂದು ಅದು ಎಲ್ಲ ಕ್ಷೇತ್ರಗಳಲ್ಲಿ ಜಾತಿ, ಧರ್ಮ, ವರ್ಗಗಳ ಹೆಸರಿನಲ್ಲಿ ನಿರಾಕರಿಸಲ್ಪಡುತ್ತಿರುವುದನ್ನು ದೇಶದಲ್ಲಿ ಕಾಣುತ್ತಿದ್ದೇವೆ. ಮಾನವಪರ ಕಾಳಜಿಯುಳ್ಳ ನಮ್ಮ ಸಂವಿಧಾನವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಭಾರತೀಯ ಪ್ರಜೆಯ ಕರ್ತವ್ಯವಾಗಿದೆ. ಪ್ರಸಕ್ತ ಭಾರತದಲ್ಲಿ ಜನಸಾಮಾನ್ಯರು, ದಲಿತರು, ಅಲ್ಪಸಂಖ್ಯಾತರು, ಆದಿವಾಸಿಗಳು, ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದ ಹೊರತಾಗಿ ಸಾಮಾಜಿಕ ನ್ಯಾಯವನ್ನು ಖಾತರಿಪಡಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಸಂವಿಧಾನದ ಧ್ಯೇಯೋದ್ದೇಶ, ಆಶೋತ್ತರಗಳನ್ನು ಕಾರ್ಯರೂಪಕ್ಕೆ ತರಲು ಪ್ರತಿಯೊಬ್ಬರೂ ಕಾರ್ಯೋನ್ಮುಖರಾಗಬೇಕಾಗಿದೆ.
ಇಂಡಿಯನ್ ಸೋಶಿಯಲ್ ಫೋರಂ
ಈಸ್ಟರ್ನ್ ಪ್ರೊವಿನ್ಸ್, ಸೌದಿ ಅರೇಬಿಯ