ಗಾಂಧಿ ಜಯಂತಿ ಜನಾಂದೋಲನವಾಗಲಿ: ಇಂಡಿಯನ್ ಸೋಶಿಯಲ್ ಫೋರಮ್

Update: 2016-10-02 07:52 GMT

ದಮ್ಮಾಮ್, ಅ.2: ಭಾರತ ದೇಶದ ಬಗ್ಗೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಕಂಡಿದ್ದ ಕನಸುಗಳಿಗೆ ಜೀವ ತುಂಬಲು ಭಾರತೀಯರು ಹೋರಾಟಕ್ಕಿಳಿಯಬೇಕಾದ ಅನಿವಾರ್ಯ ಪರಿಸ್ಥಿತಿ ದೇಶದಲ್ಲಿ ಇಂದು ನಿರ್ಮಾಣವಾಗಿದೆ. ಗಾಂಧೀಜಿ ಪ್ರತಿಪಾದಿಸಿದ ಜಾತ್ಯತೀತ ಮೌಲ್ಯ ಮತ್ತು ಸಾಮಾಜಿಕ ನ್ಯಾಯದ ಮರುಸ್ಥಾಪನೆಗಾಗಿ ಹೋರಾಟ, ಜನಾಂದೋಲನ ರೂಪಿಸುವುದೇ ನಿಜವಾದ ಗಾಂಧಿ ಜಯಂತಿ ಎನಿಸಿಕೊಳ್ಳುತ್ತದೆ. "ಗಾಂಧೀ ಜಯಂತಿ" ಕೇವಲ ಒಂದು ದಿನದ ಸಾಂಕೇತಿಕ ಕಾರ್ಯಕ್ರಮವಾಗಿರದೆ ಪ್ರಜಾಪ್ರಭುತ್ವ ವ್ಯವಸ್ಥೆಯ ಉಳಿವಿಗಾಗಿ ಗಾಂಧಿತತ್ವಾದರ್ಶಗಳನ್ನು ದೇಶಾದ್ಯಂತ ಬಲಪಡಿಸಬೇಕಾದ ಅನಿವಾರ್ಯತೆ ಇದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್  ಭಾರತೀಯ ಸಮುದಾಯಕ್ಕೆ ಕರೆ ನೀಡಿದೆ.

ಗಾಂಧೀಜಿ ಪ್ರತಿಪಾದಿಸಿದ್ದ ದೇಶದ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ರೈತರು, ಹಳ್ಳಿಪ್ರದೇಶ, ಅಲ್ಪಸಂಖ್ಯಾತ ಸಮುದಾಯ, ದಲಿತರು, ಬಡವರು ಸೇರಿದಂತೆ ಒಟ್ಟು ಭಾರತೀಯ ಸಮುದಾಯದ ಸಬಲೀಕರಣದ ಆಶಯವಿತ್ತು. ಇಂತಹ ಆಶಯಗಳಿಗೆ ಕೊಳ್ಳಿಯಿಟ್ಟು ಬಂಡವಾಳಶಾಹಿಗಳ, ಕಾರ್ಪೋರೇಟ್ ಕಂಪೆನಿಗಳ ಪರವಾದ ಅಭಿವೃದ್ಧಿ ಯೋಜನೆಗಳನ್ನು ದೇಶದಲ್ಲಿ ಜಾರಿಗೊಳಿಸಲಾಗುತ್ತಿದೆ. ದೇಶದ ವಿದೇಶಾಂಗ ನೀತಿಗಳು ಕೂಡ  ಗಾಂಧಿ ತತ್ವಕ್ಕೆ ವಿರುದ್ಧವಾಗಿ ಮಾರ್ಪಾಡುಗೊಂಡಿರುವುದನ್ನು ನಾವು ಮನಗಾಣಬೇಕಾಗಿದೆ. ಇಂತಹ ಸಂದರ್ಭದಲ್ಲಿ ದೇಶದ ಪ್ರಜಾತಂತ್ರ ವ್ಯವಸ್ಥೆಯನ್ನು ಉಳಿಸಿ ಬೆಳೆಸುವುದಕ್ಕಾಗಿ ಗಾಂಧೀಜಿಯ ಹೋರಾಟದ ಇತಿಹಾಸವನ್ನು ಪುನರಾವರ್ತಿಸುವ ಮೂಲಕ ಗಾಂಧೀಜಿಗೆ ಗೌರವ ಸಲ್ಲಿಸಬೇಕಾಗಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News