ಅನಿವಾಸಿ ಭಾರತೀಯರಿಗೆ ಇಂಡಿಯನ್ ಸೋಶಿಯಲ್ ಫೋರಂನಿಂದ ನೆರವು

Update: 2016-10-06 14:01 GMT

ದಮ್ಮಾಮ್, ಅ.6: ಅನಿವಾಸಿ ಭಾರತೀಯರ ಸಂಕಷ್ಟಗಳಿಗೆ ನಿರಂತರವಾಗಿ ಸ್ಪಂದಿಸುತ್ತಾ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ ಸಮಿತಿಯು ಕಳೆದ ನಾಲ್ಕೈದು ತಿಂಗಳಲ್ಲಿ ಒಟ್ಟು 94 ಪ್ರಕರಣಗಳ ಪೈಕಿ 60 ಪ್ರಕರಣಗಳನ್ನು ಇತ್ಯರ್ಥಗೊಳಿಸಿದೆ. ಕಳೆದ ಒಂದೇ ವಾರದಲ್ಲಿ ಮೂರು ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಪ್ರಾಯೋಜಕನ ಕಿರುಕುಳ ತಾಳಲಾರದೆ ನೌಕರಿಯ ಸ್ಥಳದಿಂದ ತಪ್ಪಿಸಿಕೊಂಡು ನೆರವಿಗಾಗಿ ಅಲೆದಾಡುತ್ತಿದ್ದ ಉತ್ತರಪ್ರದೇಶ ಮೂಲದ ಯುವಕನನ್ನು ಮರಳಿ ಊರಿಗೆ ತಲುಪಿಸುವಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯ-ದಮ್ಮಾಮ್ ತಂಡವು ಯಶಸ್ವಿಯಾಗಿದೆ.

ಸಂತ್ರಸ್ತ ಯುವಕ ಗುಲ್ಜಾರ್ ಕೆಲವು ತಿಂಗಳ ಹಿಂದೆ ರೂ.90,000 ಮೊತ್ತವನ್ನು ಏಜೆಂಟಿಗೆ ಪಾವತಿಸಿ ದಮ್ಮಾಮ್ನ ಹೋಟೆಲ್‌ಗೆ ವೇಟರ್ ಕೆಲಸಕ್ಕೆಂದು ಬಂದಿದ್ದ. ಆದರೆ ಇಲ್ಲಿ ಆತನಿಗೆ ಈ ಮೊದಲು ಭರವಸೆ ನೀಡಿದ್ದ ಕೆಲಸವಾಗಲೀ, ವೇತನವನ್ನು ನೀಡದೆ ಕಿರುಕುಳ ನೀಡಲಾಗಿತ್ತು. ಶೌಚಾಲಯ ಮತ್ತು ಇತರ ಶುಚಿಗೊಳಿಸುವ ಕೆಲಸವನ್ನು ನೀಡಿದ್ದಲ್ಲದೆ ದೈಹಿಕ ಹಿಂಸೆಯನ್ನೂ ಪ್ರಾಯೋಜಕನಿಂದ ಅನುಭವಿಸಬೇಕಾಯಿತು. ಹೀಗಾಗಿ ಪ್ರಾಯೋಕನಿಂದ ತಪ್ಪಿಸಿಕೊಂಡು ಬಂದಿದ್ದ ಗುಲ್ಜಾರ್‌ನನ್ನು ಪ್ರಾಯೋಜಕ ಪತ್ತೆಹಚ್ಚಿದ್ದು, ಇನ್ನಷ್ಟು ಕಿರುಕುಳ ನೀಡಿ ಬೆದರಿಸುತ್ತಿದ್ದ ಎನ್ನಲಾಗಿದೆ. ಮತ್ತೆ ಆತನಿಂದ ತಪ್ಪಿಸಿಕೊಂಡು ಪರದಾಡುತ್ತಿದ್ದಾಗ ಸೋಶಿಯಲ್ ಫೋರಂ ಕಾರ್ಯಕರ್ತರಾದ ಸಂಸುದ್ದೀನ್ ಕರ್ನಿರೆ, ಅಬ್ದುಲ್ ಖಾದರ್‌ರ ಕೈಗೆ ಸಿಕ್ಕಿದ್ದು, ಭಾರತೀಯ ರಾಯಭಾರಿ ಕಚೇರಿಯ ಮೂಲಕ ಪ್ರಾಯೋಜಕನನ್ನು ಸಂಪರ್ಕಿಸಿದ್ದರು. ಹೀಗಾಗಿ ಆತ ಯುವಕನನ್ನು ಊರಿಗೆ ಕಳುಹಿಸಿಕೊಡಲು ಬೇಕಾಗಿರುವ ದಾಖಲೆ ಪತ್ರ, ಪಾಸ್‌ಪೋರ್ಟ್ ಹಾಗೂ ಟಿಕೆಟನ್ನೂ ಒದಗಿಸಿದ್ದಾನೆ.

ನಕಲಿ ದಾಖಲೆ ಪ್ರಕರಣ

ನಾಸಿರ್ ಕೃಷ್ಣಾಪುರ ಎಂಬವರು ಸೌದಿ ಅರೆಬಿಯಾದ ಹೈಲ್ ಎಂಬಲ್ಲಿ ದುಡಿಯುತ್ತಿದ್ದು, ಅವರು ಹೊಂದಿರುವ ಗುರುತು ಪತ್ರವು ನಕಲಿ ಎಂಬುದಾಗಿ ಅವರ ಮೇಲೆ ಪ್ರಕರಣ ದಾಖಲಾಗಿತ್ತು. ಇದೊಂದು ಗಂಭೀರ ಪ್ರಕರಣವಾಗಿದ್ದು, ನೌಶಾದ್ ಕಾಟಿಪಳ್ಳ ನೇತೃತ್ವದಲ್ಲಿ ಹೈಲ್ ಮತ್ತು ದಮಾಮ್ ನ್ಯಾಯಾಲಯಗಳನ್ನು ಸಂಪರ್ಕಿಸಲಾಯಿತು.

ಬಳಿಕ ನಡೆದ ತನಿಖೆಯಲ್ಲಿ ನಾಸಿರ್ ಹೊಂದಿರುವ ಗುರುತುಪತ್ರವು ಅಸಲಿ ಎಂಬುದು ಸಾಬೀತಾಗಿದ್ದು, ಪ್ರಕರಣವು ಸುಖಾಂತ್ಯಗೊಂಡಂತಾಗಿದೆ. ಇದೀಗ ನಾಸಿರ್ ಬೇರೊಂದು ಕಂಪೆನಿಯಲ್ಲಿ ಒಳ್ಳೆಯ ಉದ್ಯೋಗ ಪಡೆಯುವಲ್ಲಿ ದಾರಿಯು ಸುಗಮಗೊಂಡಿದೆ. ಸಮಸ್ಯೆಗೆ ತಕ್ಷಣವೇ ಸ್ಪಂದಿಸಿದ ಸೋಶಿಯಲ್ ಫೋರಮ್ ಗೆ ನಾಸಿರ್ ಕೃತಜ್ಞತೆ ಸಲ್ಲಿಸಿದ್ದಾರೆ.

 ಭೂಮಾನಂದನ್ ಸಾವು ಪ್ರಕರಣ

ಪೈಂಟ್‌ನ ಕೆಲಸ ಮಾಡುತ್ತಿದ್ದಾಗ ಕಟ್ಟಡದಿಂದ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ತೆಲಂಗಾಣ ನಿವಾಸಿ ಭೂಮಾನಂದನ್ ಎಂಬವರ ಮೃತದೇಹವನ್ನು ವಿಲೇವಾರಿ ಮಾಡುವ ಕಾರ್ಯವನ್ನು ಸೋಶಿಯಲ್ ಫೋರಂ ಕೈಗೆತ್ತಿಕೊಂಡಿದ್ದು, ಶೀಘ್ರದಲ್ಲೇ ಪ್ರಕರಣವು ಇತ್ಯರ್ಥವಾಗಲಿದೆ ಎಂದು ಫೋರಂನ ಕಮ್ಯುನಿಟಿ ವೆಲ್ಫೇರ್ ವಿಭಾಗದ ಮುಖ್ಯಸ್ಥ ನೌಶಾದ್ ಕಾಟಿಪಳ್ಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಘಟನೆಯ ವಿವರ:

ತೆಲಂಗಾಣ ಮೂಲದ ನಂದನ್ ತನ್ನ ಪ್ರಾಯೋಜಕನ ಕೈಕೆಳಗೆ ದುಡಿಯದೆ ವೈಯಕ್ತಿಕವಾಗಿ ಹೊರಗಡೆ ದುಡಿಯುತ್ತಿದ್ದರು. ಈ ಸಂದರ್ಭದಲ್ಲಿ ದುರಂತ ಸಂಭವಿಸಿ ಸಾವನ್ನಪ್ಪಿರುವುದರಿಂದ ಅಪರಾಧ ಪ್ರಕರಣವಾಗಿ ದಾಖಲಾಗಿ ಪ್ರಾಯೋಜಕನು ಕೂಡ ದಂಡ ಹಾಗೂ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ದುರಂತದ ಸುದ್ದಿ ತಿಳಿದಾಕ್ಷಣ ಪ್ರಾಯೋಜಕ ನಂದನ್ ಮೇಲೆ ’’ನಾಪತ್ತೆ’’ ಕೇಸು ದಾಖಲಿಸಿದ್ದು, ಇದರಿಂದ ಭೂಮಾನಂದನ್ ಜೀವಂತವಿದ್ದರೂ ಸ್ವದೇಶಕ್ಕೆ ಮರಳಲು ಸಾಧ್ಯವಾಗುತ್ತಿರಲಿಲ್ಲ.

ಆದರೆ ಇದೀಗ ಭೂಮಾನಂದನ್ ಸಾವನ್ನಪ್ಪಿರುವುದರಿಂದ ಅವರ ಮೃತದೇಹವನ್ನು ಸ್ವದೇಶಕ್ಕೆ ಮರಳಿಸುವುದು ಅಥವಾ ಇಲ್ಲೇ ದಫನ ಮಾಡುವುದಾದರೂ ಹಲವು ಕಾನೂನು ನಿಯಮಗಳನ್ನು ಎದುರಿಸಬೇಕಾಗಿದೆ. ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸೋಶಿಯಲ್ ಫೋರಮ್ ಇಲ್ಲಿನ ಕಾನೂನು ಸಲಹೆಗಾರರ ನೆರವು ಪಡೆದು ಆ ಮೂಲಕ ಪ್ರಕರಣವನ್ನು ಶೀಘ್ರವೇ ಇತ್ಯರ್ಥಗೊಳಿಸಲು ಹಗಲಿರುಳು ಶ್ರಮಿಸುತ್ತಿದೆ.ಮಾತ್ರವಲ್ಲದೆ, ಈಗಾಗಲೇ ಆಸ್ಪತ್ರೆಯಲ್ಲಿ ಸಾಕಷ್ಟು ಚಿಕಿತ್ಸೆಯ ಖರ್ಚು ಕೂಡಾ ಆಗಿದ್ದು, ಅದನ್ನು ಕೂಡ ಭರಿಸಬೇಕಾಗಿದೆ.

ತುರ್ತು ಚಿಕಿತ್ಸೆಗೆ ನೆರವು

ದಮ್ಮಾಮ್ ಸಮೀಪದ ಕುದ್ರಿಯಾ ಎಂಬಲ್ಲಿ ಡೆಂಟಿಂಗ್ ಕೆಲಸ ಮಾಡುತ್ತಿದ್ದ ಕಂದಾವರ ನಿವಾಸಿ ಅಝೀಝ್ ಎಂಬವರ ತುರ್ತು ಚಿಕಿತ್ಸೆಗೆ ಬೇಕಾದ ಎಲ್ಲ ಸೌಕರ್ಯ, ವ್ಯವಸ್ಥೆಗಳನ್ನು ಒದಗಿಸುವುದರೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಸ್ವದೇಶಕ್ಕೆ ತಲುಪಿಸಿ, ಆಸ್ಪತ್ರೆಗೆ ದಾಖಲಿಸುವವರೆಗಿನ ನೆರವನ್ನು ಇಂಡಿಯನ್ ಸೋಶಿಯಲ್ ಫೋರಮ್ ಒದಗಿಸಿ ಸಾರ್ವತ್ರಿಕ ಶ್ಲಾಘನೆಗೆ ಪಾತ್ರವಾಗಿದೆ. ಉಮ್ರಾ ನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಅಝೀಝ್ ಅವರಿಗೆ ಬ್ರೈನ್ ಹೆಮರೆಜ್ ಕಾಣಿಸಿಕೊಂಡಿದ್ದು, ತಕ್ಷಣವೇ ಅವರನ್ನು ಮಕ್ಕಾ-ಮದೀನಾ ಆಸುಪಾಸಿನ ಆಸ್ಪತ್ರೆಗಳಿಗೆ ದಾಖಲಿಸುವ ಪ್ರಯತ್ನ ನಡೆಸಲಾಯಿತಾದರೂ ಅದು ಫಲಕಾರಿಯಾಗಿರಲಿಲ್ಲ.

ಬಳಿಕ ದಮಾಮ್ ಸೆಂಟ್ರಲ್ ಆಸ್ಪತ್ರೆಯಲ್ಲಿ ತುರ್ತು ಶಸ್ತ್ರಚಿಕಿತ್ಸೆಯ ಸೌಲಭ್ಯ ಇಲ್ಲದೇ ಇದ್ದುದರಿಂದ ಕಿಂಗ್ ಫಹದ್ ಎಂಬ ಆಸ್ಪತ್ರೆಗೆ ದಾಖಲಿಸಬೇಕಾಯಿತು. ಇಂತಹ ಆಸ್ಪತ್ರೆಗೆ ದಾಖಲಿಸಲು ಸೌದಿ ಪ್ರಾಯೋಜಕನ ಶಿಫಾರಸ್ಸು ಅಗತ್ಯವಿದ್ದು, ಆ ಕುರಿತ ಮಾತುಕತೆಯನ್ನು ಸೋಶಿಯಲ್ ಫೋರಮ್ ನಡೆಸಿತು. ಬ್ರೈನ್ ಹೆಮರೆಜ್‌ನಿಂದಾಗಿ ದೇಹದ ಒಂದು ಭಾಗ ನಿರ್ಜೀವಗೊಂಡಿದ್ದು, ಶಸ್ತ್ರಚಿಕಿತ್ಸೆಗೊಳಗಾಗಿದ್ದ ಅಝೀಝ್‌ರಿಗೆ ಮುಂದಿನ ಚಿಕಿತ್ಸೆಗಾಗಿ ಸ್ವದೇಶದ ಆಸ್ಪತ್ರೆಗೆ ದಾಖಲಿಸುವುದು ಅನಿವಾರ್ಯವಾಗಿತ್ತು. ಅಲ್ಲದೆ ಸೌದಿ ಅರೇಬಿಯದಲ್ಲಿ ಚಿಕಿತ್ಸೆಯ ವೆಚ್ಚವೂ ದುಬಾರಿಯಾಗಿದ್ದು, ಸ್ಟ್ರೆಚರ್ ವ್ಯವಸ್ಥೆಯೊಂದಿಗೆ ನೇರವಾಗಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕಳುಹಿಸಿಕೊಡಲು ಬೇಕಾದ ಎಲ್ಲ ವ್ಯವಸ್ಥೆಯನ್ನು ಸೋಶಿಯಲ್ ಫೋರಮ್ ಸೌದಿ ಪ್ರಾಯೋಜಕನ ಮೂಲಕ ಮಾಡಿಸಿದೆ.

ಮಾತ್ರವಲ್ಲದೆ, ಬೆಂಗಳೂರು ವಿಮಾನ ನಿಲ್ದಾಣದಿಂದ ಮಂಗಳೂರಿನ ಅಡ್ಯಾರ್‌ನಲ್ಲಿರುವ ನೆರೋಲಜಿ ಸ್ಪೆಷಲ್ ಆಸ್ಪತ್ರೆಗೆ ದಾಖಲಿಸುವುದಕ್ಕಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮೂಲಕ ಆಂಬುಲೆನ್ಸ್ ವ್ಯವಸ್ಥೆಯನ್ನು ಮಾಡಿತ್ತು. ಇದೀಗ ಖ್ಯಾತ ನರರೋಗ ವೈದ್ಯ ಡಾ.ರಾಜೇಶ್ ಶೆಟ್ಟಿಯವರಿಂದ ಚಿಕಿತ್ಸೆ ಪಡೆಯುತ್ತಿರುವ ಅಝೀಝ್ ಚೇತರಿಸಿಕೊಳ್ಳುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News