ಮದೀನಾ: ಪೊಸೋಟು ತಂಙಳ್ ಅನುಸ್ಮರಣೆ ಹಾಗೂ ಕೆಸಿಎಫ್ ಎಚ್ವಿಸಿ ಸ್ವಯಂ ಸೇವಕರಿಗೆ ಸನ್ಮಾನ
ಮದೀನಾ, ಅ.8: ಪೊಸೋಟು ತಂಙಳ್ ಅನುಸ್ಮರಣೆ ಹಾಗೂ ಕೆಸಿಎಫ್ ಮದೀನಾ ಎಚ್ವಿಸಿ ಸ್ವಯಂ ಸೇವಕರಿಗೆ ಸನ್ಮಾನ ಕಾರ್ಯಕ್ರಮವು ಮದೀನಾ ಮುನವ್ವರದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೆಸಿಎಫ್ ಮದೀನಾ ಸೆಕ್ಟರ್ ಅಧ್ಯಕ್ಷ ಅಶ್ರಫ್ ಸಖಾಫಿ ನೂಜಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ (ಸ.ಅ) ಅವರ ಪರಂಪರೆಯನ್ನು ಅನುಸರಿಸುತ್ತಾ ಬಂದಿರುವ ಆಲಿಂಗಳನ್ನು ನಾವು ಸ್ಮರಿಸಬೇಕಾಗಿದೆ. ಪ್ರವಾದಿಯವರ ಕುಟುಂಬದವರ ಅನುಸ್ಮರಣೆಯಿಂದ ನಮ್ಮ ಪಾಪಗಳು ದೋಷಮುಕ್ತವಾಗಲಿದೆ ಎಂದರು.
ಉಮ್ಮರ್ ಸಖಾಫಿ ಪರಪ್ಪು ಮಾತನಾಡಿ, ಇಸ್ಲಾಮ್ನ 12 ತಿಂಗಳುಗಳಲ್ಲಿ ರಜಬ್, ದುಲ್ ಖೈದಾ, ದುಲ್ ಹಜ್ಜ್, ಮುಹರ್ರಂ 4 ತಿಂಗಳು ಮಹತ್ವವುಳ್ಳದ್ದಾಗಿದ್ದು, ಈ ಮಾಸದಲ್ಲಿ ಯುದ್ಧವು ಕೂಡ ಹರಾಂ ಆಗಿದೆ ಎಂದು ಮುಹರ್ರಂ ತಿಂಗಳ ಮಹತ್ವವನ್ನು ತಿಳಿಸಿದರು. ಹಜ್ ಸಂದರ್ಭದಲ್ಲಿ ಹಜ್ಜಾಜಿಗಳ ಸೇವೆ ಮಾಡಿದ ಕೆಸಿಎಫ್ ಕಾರ್ಯಕರ್ತರ ಸೇವೆಯ ಬಗ್ಗೆ ಕರ್ನಾಟಕ ಮಾತ್ರವಲ್ಲ ಸೌದಿ ಅರೆಬಿಯಾದ ಜನರು ಕೂಡ ಶ್ಲಾಘಿಸಿದ್ದಾರೆ. ಮಾತ್ರವಲ್ಲ ಮೊದಲ ಬಾರಿಗೆ ಭಾರತದ ಸಂಘಟನೆಯೊಂದಕ್ಕೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದ್ದು, ಇದೀಗ ಈ ವರ್ಷವು ಪ್ರಶಸ್ತಿ ಪತ್ರ ಪಡೆದು ಜನ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.
ಈ ವೇಳೆ ಕೆಸಿಎಫ್ ಮದೀನಾ ಝೋನಲ್ ಅಧ್ಯಕ್ಷ ಫಾರೂಕ್ ನಈಮಿ ಸೇರಿದಂತೆ ಮದೀನಾದ ಎಚ್ವಿಸಿ ಸ್ವಯಂ ಸೇವಕರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು. ಈ ವೇಳೆ ಕೆಸಿಎಫ್ ಮದೀನಾ ಝೋನಲ್ ಎಜುಕೇಶನಲ್ ಚೇರ್ಮನ್ ಉಸ್ಮಾನ್ ಮಾಸ್ಟರ್, ಕೆಸಿಎಫ್ ಮದೀನಾ ಝೋನಲ್ ಮಾಧ್ಯಮ ಸಲಹೆಗಾರ ರಝಾಕ್ ಉಳ್ಳಾಲ್, ಅಶ್ರಫ್ ಕಿನ್ಯಾ, ಉಮ್ಮರ್ ಗೇರುಕಟ್ಟೆ, ಅಶ್ರಫ್ ನ್ಯಾಷನಲ್, ಇಬ್ರಾಹೀಂ ಮದನಿ, ಇಕ್ಬಾಲ್ ಕುಪ್ಪೆಪದವು, ಮತ್ತಿತರರು ಉಪಸ್ಥಿತರಿದ್ದರು.
ವರದಿ: ಹಕೀಂ ಬೋಳಾರ್