ಸೇವಾ ಮನೋಧರ್ಮ ಬೆಳೆಸುವ ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ: ಅಶ್ರಫ್ ತಂಙಳ್
ಅಬುಧಾಬಿ, ನ.6: ವೈದ್ಯಕೀಯ ಮತ್ತು ಇನ್ನಿತರ ವೃತ್ತಿಪರ ಶಿಕ್ಷಣ ಪಡೆಯುವವರಿಗೆ ಧಾರ್ಮಿಕ ಮತ್ತು ನೈತಿಕ ಶಿಕ್ಷಣದ ಅರಿವು ಮೂಡಿಸಿದರೆ ಅವರು ತಮ್ಮ ವೃತ್ತಿಯಲ್ಲಿ ಸೇವಾ ಮನೋಧರ್ಮವನ್ನು ರೂಡಿಸಿಕೊಂಡು ಕಾರ್ಯನಿರ್ವಹಿಸಲು ಪ್ರೇರಕವಾಗುತ್ತದೆ, ಸೇವಾ ಮನೋಧರ್ಮ ಬೆಳೆಸುವ ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ ಎಂದು ಮಜ್ಲಿಸ್ ಶಿಕ್ಷಣ ಸಮುಚ್ಚಯದ ಮುಖ್ಯಸ್ಥ ಅಸಯ್ಯದ್ ಅಶ್ರಫ್ ತಂಙಳ್ ಅಭಿಪ್ರಾಯಪಟ್ಟಿದ್ದಾರೆ.
ಅವರು ಇತ್ತೀಚೆಗೆ ಅಬುಧಾಬಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಸೆಂಟರ್ನಲ್ಲಿ ಜರಗಿದ ಮಜ್ಲಿಸ್ ಸ್ಫಟಿಕ ಸಮಾವೇಶದ ಪ್ರಚಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾಸರಗೋಡು ಮತ್ತು ದಕ್ಷಿಣ ಕನ್ನಡದಲ್ಲಿ ವಿದ್ಯಾಕೇಂದ್ರಗಳು ಉನ್ನತಿ ಹೊಂದುತ್ತಿರುವುದರಲ್ಲಿ ಅನಿವಾಸಿಗಳ ಕೊಡುಗೆಯನ್ನು ಸ್ಮರಿಸಿದ ತಂಙಳ್ ಮಜ್ಲಿಸ್ ಕ್ರಿಸ್ಟಲ್ ಜುಬಿಲಿ ಮಹಾ ಸಮ್ಮೇಳನವು 2017ರ ಜನವರಿ 30,31 ಮತ್ತು ಫೆಬ್ರವರಿ 1,2 ರಂದು ಜರುಗಲಿದ್ದು, ಈ ಸಮ್ಮೇಳನ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.
ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಹಮೀದ್ ಸಅದಿ ಮಾತನಾಡಿ, ಶೈಕ್ಷಣಿಕ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಮಜ್ಲಿಸ್ ಸಂಸ್ಥೆ ತನ್ನದೇ ಆದ ಕೊಡುಗೆಯನ್ನು ನೀಡಿದ್ದು, ಮುಡಿಪು ಪ್ರದೇಶದಲ್ಲಿ ಪ್ರಾರಂಭಿಸಲ್ಪಟ್ಟಿರುವ ಮಜ್ಲಿಸ್ ಎಜು ಪಾರ್ಕ್ ಪರಿಸರ ಪ್ರದೇಶದ ಶೈಕ್ಷಣಿಕ ಸಾಮಾಜಿಕ ರಂಗದಲ್ಲಿ ಹೊಸ ಸಂಚಲನ ಮೂಡಿಸಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಐಸಿಎಫ್ ಯುಎಇ ನಾಯಕ ಹಮೀದ್ ಪರಪ್ಪ ಮಾತನಾಡಿ, 2002ರಲ್ಲಿ ಹದಿನಾಲ್ಕು ವಿದ್ಯಾಥಿಗಳಿಂದ ಆರಂಭಗೊಂಡ ಸಂಸ್ಥೆ ಇದೀಗ 5 ಸಾವಿರಕ್ಕೂ ಮಿಕ್ಕಿವಿದ್ಯಾರ್ಥಿಗಳಿಗೆ ಧಾರ್ಮಿಕ -ಲೌಕಿಕ ಸಮನ್ವಯ ಶಿಕ್ಷಣ ನೀಡುತ್ತಿದೆ. ಸಿಬಿಎಸ್ಇ ಸಿಲೆಬಸ್ ಹೊಂದಿರುವ ಮಜ್ಲಿಸ್ ಇಂಗ್ಲಿಷ್ ಮೀಡಿಯಂ ಎಸೆಸೆಲ್ಸಿ ಪರೀಕ್ಷೆಯಲ್ಲಿ 100 ಶೇ. ಫಲಿತಾಂಶ ದಾಖಲಿಸಿಕೊಂಡು ಬರುತ್ತಿರುವುದು ಮಜ್ಲಿಸ್ನ ಶೈಕ್ಷಣಿಕ ಗುಣಮಟ್ಟಕ್ಕೆ ಹಿಡಿದ ಕೈಗನ್ನಡಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಮಜ್ಲಿಸ್ ಸ್ಫಟಿಕ ಮಹೋತ್ಸವದ ಪ್ರಚಾರಾರ್ಥವಾಗಿ ಸ್ವಾಗತ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಹಮೀದ್ ಪರಪ್ಪ, ಉಪಾಧ್ಯಕ್ಷರಾಗಿ ಸಿದ್ದಿಕ್ ಹಾಜಿ, ಅಶ್ರಫ್ ಮುಡಿಪು, ಲತೀಫ್ ಕಕ್ಕಿಂಜೆ ಮತ್ತು ಕೆ.ಎಚ್. ಸಖಾಫಿಯವರನ್ನು ಆರಿಸಲಾಯಿತು. ಸಂಚಾಲಕರಾಗಿ ಯಹ್ಯ ಅಬ್ಬಾಸ್ ಉಜಿರೆ, ಸಹ ಸಂಚಾಲಕರಾಗಿ ಉಮರ್ ಸಖಾಫಿ, ಹಸೈನಾರ್ ಅಮಾನಿ ಅಜ್ಜಾವರ, ಹಕೀಮ್ ತುರ್ಕಳಿಕೆ, ಅಯೂಬ್ ಮಲಪ್ಪುರಂ, ಅಶ್ರಫ್ ಸರಳೀಕಟ್ಟೆ, ಅಶ್ರಫ್ ಮುಸ್ಲಿಯಾರ್ ಕನ್ಯಾಡಿ ಮತ್ತು ಕೋಶಾಧಿಕಾರಿಯಾಗಿ ಅಝೀಝ್ ಕಾಞಂಗಾಡ್ ನೇಮಕಗೊಂಡರು.
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಮೀದ್ ಸಅದಿ, ಹಮೀದ್ ಈಶ್ವರಮಂಗಲ, ಕಬೀರ್ ಬಾಯಂಬಾಡಿ, ಹಸ್ಸನ್ ಹಾಜಿ ಚಿಕ್ಕಮಂಗಳೂರು ಎಂ. ಎ. ಮುಹಮ್ಮದ್ ಈಶ್ವರಮಂಗಲ, ಅಝ್ಹುರಿ, ಹಾರಿಸ್ ಕರ್ನೂರು, ಲತೀಫ್ ಈಶ್ವರಮಂಗಲ, ಸಮೀರ್ ಚಿತ್ತಾರಿ, ಖಾದರ್ ಉಜ್ಜಾವರ, ಸಿರಾಜ್ ಪೂಚಕ್ಕಾಡ್ ಆಯ್ಕೆಯಾದರು.
ಕೆಸಿಎಫ್ ಐಎನ್ಸಿ ಸಂಘಟನಾ ವಿಭಾಗದ ಕಾರ್ಯದರ್ಶಿ ಪಿ.ಎಂ.ಎಚ್. ಅಬ್ದುಲ್ ಹಮೀದ್ ಈಶ್ವರಮಂಗಲ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ತುಂಬೆ ಗ್ರೂಪ್ ವತಿಯಿಂದ ವಹೀದ್ ಅಲಿ ತಂಙಳ್ರನ್ನು ಸನ್ಮಾನಿಸಲಾಯಿತು. ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಅಮಾನಿ ಅಜ್ಜಾವರ ಸ್ವಾಗತಿಸಿದರು. ಮುಸಫ್ಹ ಸೆಕ್ಟರ್ ಅಧ್ಯಕ್ಷ ಹಕೀಮ್ ತುರ್ಕಳಿಕೆ ವಂದಿಸಿದರು.