×
Ad

ಬಾಬರಿ ಮಸ್ಜಿದ್ ಪುನರ್ ನಿರ್ಮಾಣವೇ ಜಾತ್ಯತೀತ ಮರುಸ್ಥಾಪನೆ: ದಮಾಮ್ ನಲ್ಲಿ "ಬಾಬರಿ ಮಸ್ಜಿದ್" ಸಾರ್ವಜನಿಕ ಕಾರ್ಯಕ್ರಮ

Update: 2016-12-10 21:49 IST

ದಮಾಮ್,ಡಿ.10: ಜಾತ್ಯತೀತ ಭಾರತ ದೇಶದಲ್ಲಿ ಬಾಬರಿ ಮಸ್ಜಿದ್ ಎಂಬುದು ಕೇವಲ ಮುಸ್ಲಿಮರ ಪ್ರಾರ್ಥನಾಲಯವಾಗಿರದೆ ಪ್ರಜಾತಂತ್ರ ವ್ಯವಸ್ಥೆಯು ಒದಗಿಸಿರುವ ಧಾರ್ಮಿಕ ಸ್ವಾತಂತ್ರ್ಯದ ಸಂಕೇತವೂ ಆಗಿತ್ತು. 467 ವರ್ಷಗಳ ಇತಿಹಾಸವಿರುವ ಮುಸ್ಲಿಮರ ಶ್ರದ್ಧಾ ಕೇಂದ್ರವನ್ನು ಫ್ಯಾಷಿಸ್ಟ್ ಶಕ್ತಿಗಳು ಧ್ವಂಸಗೊಳಿಸುವ ಮೂಲಕ ಸಂವಿಧಾನದ ಮೇಲೆ ದಾಳಿ ನಡೆಸಿದ್ದರು.  ಆ ಹೊಡೆತದ ಪರಿಣಾಮವನ್ನು ಇಂದಿಗೂ ಭಾರತದ ಅಲ್ಪಸಂಖ್ಯಾತ ಸಮುದಾಯ, ದಲಿತ ಸಮುದಾಯ ಹಾಗೂ ಇತರ ಹಿಂದುಳಿದ ವರ್ಗಗಳು ಅನುಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಂವಿಧಾನವು ನೀಡಿರುವ ಅವಕಾಶ, ಹಕ್ಕುಗಳನ್ನು ಪಡೆಯಲು ಸಂವಿಧಾನದ ಮೇಲಿನ ಭರವಸೆಗಳನ್ನು ಉಳಿಸಿಕೊಳ್ಳುತ್ತಾ ಪ್ರಜಾಸತ್ತಾತ್ಮಕ ಹೋರಾಟವನ್ನು ತೀವ್ರಗೊಳಿಸಬೇಕಾಗಿದೆ. ಬಾಬರಿ ಧ್ವಂಸದಿಂದ ಆರಂಭವಾಗಿ ಕೋಮು ಗಲಭೆ, ನಕಲಿ ಎನ್ ಕೌಂಟರ್, ಕರಾಳ ಕಾನೂನು, ಗೋಹತ್ಯೆ ನೆಪದಲ್ಲಿ ಹತ್ಯೆ, ಅತ್ಯಾಚಾರ ಹಾಗೂ ಇದೀಗ ಮುಸ್ಲಿಮರ ವೈಯಕ್ತಿಕ ಕಾನೂನು- ಶರೀಅತ್ ವ್ಯವಸ್ಥೆಯನ್ನು ಧ್ವಂಸಗೊಳಿಸುವ ಮಟ್ಟಕ್ಕೆ ತಲುಪಿದೆ. ಬಾಬರಿ ಮಸ್ಜಿದ್ ಪುನರ್ ನಿರ್ಮಾಣದ ಮೂಲಕ ಜಾತ್ಯತೀತತೆಯನ್ನು ಮರುಸ್ಥಾಪನೆಗೊಳಿಸುವತ್ತ ಹೋರಾಟ ನಡೆಸಬೇಕಾಗಿದೆ ಎಂದು ಇಂಡಿಯನ್ ಸೋಶಿಯಲ್ ಫೋರಮ್ ಈಸ್ಟರ್ನ್ ಪ್ರೊವಿನ್ಸ್ ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಫಯಾಝ್ ಎನ್. ತಿಳಿಸಿದರು.

ಅವರು ಇಂಡಿಯನ್ ಸೋಶಿಯಲ್ ಫೋರಮ್ ಈಸ್ಟರ್ನ್ ಪ್ರೊವಿನ್ಸ್ ಕರ್ನಾಟಕ ರಾಜ್ಯ ಸಮಿತಿಯು ಡಿಸೆಂಬರ್ 6 ರಂದು ಮಂಗಳವಾರ ರಾತ್ರಿ 8 ಗಂಟೆಗೆ ದಮಾಮ್ ಹೋಟೆಲ್ ಪ್ಯಾರಗನ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ  ''ಡಿಸೆಂಬರ್ 6 ಮರೆಯದಿರೋಣ...ಭರವಸೆಗಳನ್ನು ಉಳಿಸಿಕೊಳ್ಳೋಣ'' ಎಂಬ ಸಾರ್ವಜನಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.

ಮುಖ್ಯ ಅತಿಥಿಗಳಾಗಿ ಇಂಡಿಯಾ ಫ್ರೆಟರ್ನಿಟಿ ಫೋರಮ್ ಕರ್ನಾಟಕ ರಾಜ್ಯಾಧ್ಯಕ್ಷ ಮುಹಮ್ಮದ್ ಇಮ್ತಿಯಾಜ಼್ ಹಾಗೂ ಸಾಮಾಜಿಕ ಕಾರ್ಯಕರ್ತ, ಭಾರತ ರಾಯಭಾರಿ ಕಚೇರಿಯ ಸ್ವಯಂಸೇವಕ ಪ್ರತಿನಿಧಿ ಮುಹಮ್ಮದ್ ಶರೀಫ್ ಕಾರ್ಕಳ ಉಪಸ್ಥಿತರಿದ್ದರು. ಸಭಾಧ್ಯಕ್ಷತೆಯನ್ನು ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ರಾಜ್ಯಾಧ್ಯಕ್ಷ ಎ. ಎಂ. ಆರಿಫ್ ವಹಿಸಿದ್ದರು. ಸೋಶಿಯಲ್ ಫೋರಮ್ ರಾಜ್ಯ ಸಮಿತಿ ಸದಸ್ಯ ಇಮ್ರಾನ್ ಶಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಸೋಶಿಯಲ್ ಫೋರಮ್ ಸದಸ್ಯ ಮುಹಮ್ಮದ್ ಅಝರುದ್ದೀನ್ ಕಿರಾಅತ್ ಪಠಿಸಿದರು. ಸೋಶಿಯಲ್ ಫೋರಮ್ ದಮಾಮ್ ಬ್ರಾಂಚ್ ಅಧ್ಯಕ್ಷ ಮುಹಮ್ಮದ್ ರಫೀಕ್ ಧನ್ಯವಾದ ಸಲ್ಲಿಸಿದರು. ಖಾಲಿದ್ ಕಾರ್ಯಕ್ರಮ ನಿರೂಪಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News