ಸಕಾರಾತ್ಮಕ ರಾಜಕೀಯದಿಂದ ದೇಶದ ಅಭಿವೃದ್ಧಿ ಸಾಧ್ಯ: ಮುಜಾಹಿದ್ ಪಾಷ
ಮಕ್ಕಾ , ಜ.18 : ದ್ವೇಷ ಹಾಗೂ ಸ್ವಾರ್ಥ ರಾಜಕಾರಣಕ್ಕೆ ತಿಲಾಂಜಲಿ ಕೊಟ್ಟು ಸಕಾರಾತ್ಮಕ ರಾಜಕೀಯದ ಬಗ್ಗೆ ಚಿಂತಿಸಿ ಕಾರ್ಯ ಪ್ರವೃತ್ತರಾದರೆ ದೇಶದ ಅಭಿವೃದ್ಧಿ ಸಾಧ್ಯ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಜನಾಬ್ ಮುಜಾಹಿದ್ ಪಾಷ ಹೇಳಿದ್ದಾರೆ.
ಅವರು ಇಂಡಿಯನ್ ಸೋಷಿಯಲ್ ಫಾರಂ ಮಕ್ಕಾ ವಲಯದ ವತಿಯಿಂದ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಾ, ಎಸ್ ಡಿಪಿಐ ಕೂಡ ಸಕಾರಾತ್ಮಕ ರಾಜಕೀಯದ ಮೇಲೆ ವಿಶ್ವಾಸವಿಟ್ಟು ತನ್ನ ಕಾರ್ಯ ಚಟುವಟಿಕೆಗಳನ್ನು ಮಾಡುತ್ತಿದೆ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಎಸ್ ಡಿಪಿಐ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಹನೀಫ್ ಖಾನ್ ಕೊಡಾಜೆ ಮಾತನಾಡಿ, ದೇಶದ ಪ್ರಸಕ್ತ ಪರಿಸ್ಥಿತಿ ಹಾಗೂ ಸಂಘಪರಿವಾರ ಪ್ರೇರಿತ ಸಂವಿಧಾನ ವಿರೋಧಿ ಆಶಯಗಳನ್ನೊಳಗೊಂಡ ಬಿಜೆಪಿಯ ಜನವಿರೋಧಿ ನೀತಿಯನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಡಿಯನ್ ಸೋಷಿಯಲ್ ಫಾರಂ ಮಕ್ಕಾ ವಲಯ ಅಧ್ಯಕ್ಷ ಉಬೈದುಲ್ಲಾ ಬಂಟ್ವಾಳ ವಹಿಸಿದ್ದು, ಐಎಫ್ ಎಫ್ ಮಕ್ಕಾ ವಲಯಾಧ್ಯಕ್ಷ ಶಮೀರ್ ಪಾಂಡೇಶ್ವರ ಹಾಗೂ ಉದ್ಯಮಿ ಅಬ್ವುಲ್ ಜಲೀಲ್ ವಿರಾಜಪೇಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಾಕೀರ್ ಹಕ್ ನೆಲ್ಯಾಡಿ ನಿರೂಪಿಸಿದರು, ಉಬೈದುಲ್ಲಾ ಧನ್ಯವಾದ ಸಮರ್ಪಿಸಿದರು.