ಆತಂಕದಲ್ಲಿ ಕತರ್ ನಾಗರಿಕರು

Update: 2017-06-11 13:13 GMT

 ಕತರ್, ಜೂ.11: ಭಯೋತ್ಪಾದಕತೆಗೆ ಬೆಂಬಲ ನೀಡುತ್ತಿರುವ ಆರೋಪದಲ್ಲಿ ಕತರ್ ಜೊತೆಗಿನ ಸಂಬಂಧವನ್ನು ಕಡಿದುಕೊಳ್ಳುವುದಾಗಿ ಮತ್ತು ಆರ್ಥಿಕ ದಿಗ್ಬಂಧನ ವಿಧಿಸುವುದಾಗಿ ಸೌದಿ ಅರೆಬಿಯಾ, ಬಹ್ರೈನ್, ಯುಎಇ, ಈಜಿಪ್ಟ್ ಘೋಷಿಸಿ ವಾರ ಕಳೆದಿದ್ದು ಪ್ರಸ್ತುತ ಕತರ್ ದೇಶದ ನಾಗರಿಕರಲ್ಲಿ ಭಯ, ಅನಿಶ್ಚಿತತೆ ಮತ್ತು ಹಿಂಜರಿಕೆಯ ಸಮ್ಮಿಶ್ರ ಭಾವನೆ ಮನೆಮಾಡಿದೆ.

ಸೌದಿ ನೇತೃತ್ವದಲ್ಲಿ ಕತರ್ ವಿರುದ್ಧ ವಿಧಿಸಲಾಗಿರುವ ಆರ್ಥಿಕ ದಿಗ್ಬಂಧದಿಂದ ಆಹಾರ ವಸ್ತುಗಳ ಕೊರತೆ, ಕುಟುಂಬದ ಸದಸ್ಯರು ಪ್ರತ್ಯೇಕಗೊಳ್ಳುವುದು, ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗದಂತಹ ಪರಿಸ್ಥಿತಿ.. ಇತ್ಯಾದಿ ಅನುದ್ದೇಶಿತ ಪರಿಣಾಮ ಉಂಟಾಗಬಹುದು . ಆದ್ದರಿಂದ ತಕ್ಷಣ ಆರ್ಥಿಕ ದಿಗ್ಬಂಧನ ತೆರವುಗೊಳಿಸಬೇಕು ಎಂದು ಅಮೆರಿಕದ ವಿದೇಶಾಂಗ ಸಚಿವ ರೆಕ್ಸ್ ಟಿಲ್ಲರ್‌ಸನ್ ಶುಕ್ರವಾರ ಆಗ್ರಹಿಸಿದ್ದರು. ಅಲ್ಲದೆ ಇದರಿಂದ ಅಮೆರಿಕ ಸೇರಿದಂತೆ ಅಂತಾರಾಷ್ಟ್ರೀಯ ವ್ಯಾಪಾರಕ್ಕೆ ತೊಂದರೆಯಾಗಬಹುದು.

ಜೊತೆಗೆ ಈ ಪ್ರದೇಶದಲ್ಲಿ ಐಸಿಸ್ ಉಗ್ರರ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ ಮತ್ತು ಅಮೆರಿಕ ನಡೆಸುತ್ತಿರುವ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಬಹುದು ಎಂದು ಅವರು ಹೇಳಿದ್ದರು.
 ಇದಾದ ಕೆಲವೇ ಕ್ಷಣಗಳಲ್ಲಿ ವಾಷಿಂಗ್‌ಟನ್‌ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಟಿಲ್ಲರ್‌ಸನ್ ಹೇಳಿಕೆಯನ್ನು ಅಲ್ಲಗಳೆಯುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದರು. ಇತಿಹಾಸದುದ್ದಕ್ಕೂ ಕತರ್ ಅತ್ಯುನ್ನತ ಮಟ್ಟದಲ್ಲಿ ಭಯೋತ್ಪಾದಕರಿಗೆ ನೆರವು ನೀಡುತ್ತಾ ಬಂದಿದೆ ಎಂಬ ಟ್ರಂಪ್ ಹೇಳಿಕೆಯನ್ನು ಬಳಿಕ ಕತರ್ ಸರಕಾರ ಬಲವಾಗಿ ಅಲ್ಲಗಳೆದಿತ್ತು.


  ಕತರ್ ಭಯೋತ್ಪಾದಕರಿಗೆ ನೆರವು ನೀಡುವುದನ್ನು ಮತ್ತು ತನ್ನ ತೀವ್ರವಾದಿ ಸಿದ್ಧಾಂತವನ್ನು ತ್ಯಜಿಸಬೇಕು ಎಂಬ ಟ್ರಂಪ್ ಒತ್ತಾಯವನ್ನು ಸೌದಿ ನೇತೃತ್ವದಲ್ಲಿ ದಿಗ್ಬಂಧ ವಿಧಿಸಿದ ಕೂಟದ ರಾಷ್ಟ್ರಗಳು ಸ್ವಾಗತಿಸಿದ್ದವು. ಆದರೆ ಗಲ್ಫ್ ರಾಷ್ಟ್ರದಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟದ ಸ್ಥಿತಿಯನ್ನು ಸುಧಾರಿಸಲು ಕ್ರಮ ಕೈಗೊಳ್ಳುವಂತೆ ಟಿಲ್ಲರ್‌ಸನ್ ಮಾಡಿರುವ ಒತ್ತಾಯದ ಕುರಿತು ಈ ರಾಷ್ಟ್ರಗಳು ವೌನಧೋರಣೆ ತಳೆದಿವೆ.

ಕತರ್ ಭಯೋತ್ಪಾದಕತೆಗೆ ನೀಡುತ್ತಿರುವ ಬೆಂಬಲವನ್ನು ಪ್ರಶ್ನಿಸುವ ಪ್ರಕ್ರಿಯೆಯಲ್ಲಿ ನಾಯಕತ್ವ ವಹಿಸಿಕೊಂಡಿರುವುದಕ್ಕಾಗಿ ಈ ರಾಷ್ಟ್ರಗಳು ಟ್ರಂಪ್‌ರನ್ನು ಶ್ಲಾಘಿಸಿವೆ.
 ಕತರ್ ಆಹಾರ ಮತ್ತಿತರ ಅಗತ್ಯ ವಸ್ತುಗಳನ್ನು ಇತರ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ. ದಿಗ್ಬಂಧನ ವಿಧಿಸಿದ ರಾಷ್ಟ್ರಗಳು ತಮ್ಮಲ್ಲಿರುವ ಕತರ್ ನಾಗರಿಕರು ದೇಶಬಿಟ್ಟು ತೆರಳಲು, ಮತ್ತು ಕತರ್‌ನಲ್ಲಿರುವ ತಮ್ಮ ನಾಗರಿಕರು ಅಲ್ಲಿಂದ ವಾಪಸಾಗಲು ಎರಡು ವಾರಗಳ ಕಾಲಾವಕಾಶ ನೀಡಿದೆ.
   ಈ ಮಧ್ಯೆ ಶನಿವಾರ ಹೇಳಿಕೆ ನೀಡಿರುವ ಮಾನವ ಹಕ್ಕುಗಳ ಸಂಘಟನೆ ಆಮ್ನೆಸ್ಟಿ ಇಂಟರ್‌ನ್ಯಾಷನಲ್, ಕತರ್‌ನೊಂದಿಗಿನ ವಿವಾದದ ಕಾರಣ ಸೌದಿ ಅರೆಬಿಯ, ಬಹ್ರೈನ್ ಮತ್ತು ಯುಎಇ ದೇಶಗಳು ಸಾವಿರಾರು ಗಲ್ಫ್ ನಿವಾಸಿಗಳ ಬದುಕಿನೊಂದಿಗೆ ಆಟವಾಡುತ್ತಿವೆ ಎಂದು ಹೇಳಿದೆ.

ಈ ಕಠಿಣ ಕ್ರಮದಿಂದ ಈಗಾಗಲೇ ಮಕ್ಕಳು ತಮ್ಮ ಪೋಷಕರಿಂದ ಪತಿ- ಪತ್ನಿಯಿಂದ ಪ್ರತ್ಯೇಕಗೊಳ್ಳುವ ಪರಿಸ್ಥಿತಿ ಉಂಟಾಗಿದೆ. ಕತರ್ ಪ್ರಜೆಗಳು ಮಾತ್ರವಲ್ಲ , ದಿಗ್ಬಂಧನ ವಿಧಿಸಿದ ದೇಶಗಳ ಪ್ರಜೆಗಳೂ ತಮ್ಮ ಕೆಲಸ ಕಳೆದುಕೊಳ್ಳುವ , ಶಿಕ್ಷಣವನ್ನು ಅರ್ಧಕ್ಕೇ ತ್ಯಜಿಸುವ ಅಪಾಯ ಎದುರಾಗಿದೆ ಎಂದು ಆಮ್ನೆಸ್ಟಿ ಸಂಸ್ಥೆಯ ಸಹಾಯಕ ನಿರ್ದೇಶಕ ಜೇಮ್ಸ್ ಲಿಂಚ್ ಹೇಳಿದ್ದಾರೆ.
  
ಕತರ್‌ನ ಹಲವು ಸೂಪರ್‌ಮಾರ್ಕೆಟ್‌ಗಳಲ್ಲಿ ಈಗಾಗಲೇ ಆಹಾರ ಪದಾರ್ಥಗಳ ಕೊರತೆ ಕಂಡುಬಂದಿದೆ. ಈ ಮಧ್ಯೆ ಕತರ್‌ನ ಪ್ರಧಾನ ಮಿತ್ರರಾಷ್ಟ್ರವಾಗಿರುವ ಟರ್ಕಿ ಹಾಲು ಮತ್ತು ಜ್ಯೂಸನ್ನು ರವಾನಿಸಿದೆ. ಆದರೂ ಭವಿಷ್ಯದಲ್ಲಿ ಆಹಾರ ಖಾದ್ಯಗಳು ಸಾಕಷ್ಟು ದೊರೆಯಲಿವೆಯೇ ಎಂಬ ಬಗ್ಗೆ ಅನಿಶ್ಚಿತತೆಯ ಭಾವನೆ ನೆಲೆಸಿದೆ. ನನಗೆ 12 ಕಿ.ಗ್ರಾಂ. ಈರುಳ್ಳಿಯ ಅಗತ್ಯವಿತ್ತು. ಆದರೆ ಅಷ್ಟೊಂದು ಈರುಳ್ಳಿ ನಿಜವಾಗಿಯೂ ಅಗತ್ಯವಿದೆಯೇ ಎಂದು ಅಂಗಡಿಯವರು ಕೇಳುವ ಪರಿಸ್ಥಿತಿ ಇದೆ ಎನ್ನುತ್ತಾರೆ ಕತರ್‌ನ ನಿವಾಸಿ ಹ್ಯಾಥೆಮ್ ಎಲ್ಗಾಮಲ್.

ಕತರ್ ವಿಮಾನ ನಿಲ್ದಾಣದಿಂದ ಸಂಚಾರ ನಡೆಸುವ ಬಹುತೇಕ ವಿಮಾನ ಸಂಚಾರವನ್ನು ರದ್ದುಗೊಳಿಸಿದ ಅಥವಾ ವಿಮಾನಗಳ ಮಾರ್ಗ ಬದಲಿಸಿದ ಕಾರಣ ದೋಹದಲ್ಲಿರುವ ಹಮದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗಿರುವ ಟ್ಯಾಕ್ಸಿ ಡ್ರೈವರ್‌ಗಳ ಆದಾಯಕ್ಕೆ ಕೊರತೆಯಾಗಿದೆ. ಕತರ್ ಮತ್ತು ಇತರ ರಾಷ್ಟ್ರಗಳ ಮಧ್ಯೆ ಯುದ್ದ ಸಂಭವಿಸಬಹುದು ಎಂಬ ಭೀತಿಯೂ ಕತರ್‌ನ ಕೆಲವು ಪ್ರಜೆಗಳ ಮನದಲ್ಲಿದೆ. ಈ ಮಧ್ಯೆ ಸೌದಿ ಅರೆಬಿಯ ಮತ್ತು ಯುಎಇ ಬಗ್ಗೆ ಆಕ್ರೋಶದ ಭಾವನೆಯೂ ಕತರ್ ನಾಗರಿಕರಲ್ಲಿದೆ. ಇನ್ನು ಮುಂದೆ ಎಂದೂ ಈ ದೇಶಗಳಲ್ಲಿ ತಯಾರಾದ ವಸ್ತುಗಳನ್ನು ನಾನು ಬಳಸಲಾರೆ ಎಂದು ಕತಾರ್‌ನ ಪ್ರಜೆಯೊಬ್ಬರು ತಿಳಿಸಿದ್ದಾರೆ.


 

  ನಾಗರಿಕರ ಕಳವಳ ಜಿಸಿಸಿ(ಗಲ್ಫ್ ಕೋಆಪರೇಷನ್ ಕೌನ್ಸಿಲ್) ಸದಸ್ಯ ರಾಷ್ಟ್ರಗಳಲ್ಲಿ ಇರುವ ಸಂಬಂಧಿಕರೊಂದಿಗೆ ಸಂಪರ್ಕ ಕಳೆದುಕೊಳ್ಳುವ ಸ್ಥಿತಿ ಎದುರಾಗಿದೆ ಎಂದು ಕತರ್‌ನಲ್ಲಿ ತನ್ನ ಬಹುತೇಕ ಜೀವನ ಕಳೆದಿರುವ ವಲ್ಲಾ ಎಲ್-ಕದಿ ಎಂಬ ಲೆಬನಾನ್ ಮಹಿಳೆ ಭೀತಿ ವ್ಯಕ್ತಪಡಿಸಿದ್ದಾರೆ.

ಕತರ್, ಸೌದಿ ಅರೆಬಿಯ, ಯುಎಇ ಸೇರಿದಂತೆ ಆರು ಗಲ್ಫ್ ರಾಷ್ಟ್ರಗಳು ಜಿಸಿಸಿಯಲ್ಲಿ ಸೇರಿವೆ.
ಕತರ್‌ನಲ್ಲಿ ನಿಮಾರ್ಣ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ದುಡಿಯುತ್ತಿರುವ ಲೆಬನಾನ್‌ನ ಮತ್ತೋರ್ವ ಪ್ರಜೆ ಮುಸ್ತಫಾ ಕೂಡಾ ತನ್ನ ಭವಿಷ್ಯದ ಬಗ್ಗೆ ಚಿಂತಿತನಾಗಿದ್ದಾನೆ.

ಈತ ಕೆಲಸ ಮಾಡುತ್ತಿದ್ದ ಸಂಸ್ಥೆ ಕಚ್ಛಾ ವಸ್ತುಗಳನ್ನು ಸೌದಿ ಮತ್ತು ಯುಎಇಯಿಂದ ಆಮದು ಮಾಡಿಕೊಳ್ಳುತ್ತಿತ್ತು. ಅದರೆ ಈಗ ಸಮಸ್ಯೆ ಎದುರಾಗಿರುವ ಕಾರಣ ಜರ್ಮನಿ, ಭಾರತ ಮುಂತಾದ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ.

ಈ ಮಧ್ಯೆ, ಕತರ್ ಬಗ್ಗೆ ಅನುಕಂಪ ತೋರುವುದು ಅಥವಾ ಕತರ್‌ಗೆ ದಿಗ್ಬಂಧನ ವಿಧಿಸಿರುವುದನ್ನು ಟೀಕಿಸಿದರೆ ಅದೊಂದು ಜೈಲುಶಿಕ್ಷೆಗೆ ಕಾರಣವಾಗುವ ಅಪರಾಧವಾಗಿದೆ ಎಂದು ಬಹರೈನ್ ಮತ್ತು ಸೌದಿ ಈಗಾಗಲೇ ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News