ಶಾರ್ಜಾ: ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಶಾಂತಿ ಪ್ರಕಾಶನದ ಮಳಿಗೆ ಉದ್ಘಾಟನೆ

Update: 2017-11-05 08:17 GMT

ಶಾರ್ಜಾ, ನ.5: ಇಲ್ಲಿನ ಶಾರ್ಜಾ ಎಕ್ಸ್ ಪೊ ಸೆಂಟರ್ ನಲ್ಲಿ ನಡೆಯುತ್ತಿರುವ ಶಾರ್ಜಾ ‘ಅಂತಾರಾಷ್ಟ್ರೀಯ ಪುಸ್ತಕ ಮೇಳ’ದಲ್ಲಿ ಮಂಗಳೂರಿನ ಶಾಂತಿ ಪ್ರಕಾಶನ ಸಂಸ್ಥೆ ದ್ವಿತೀಯ ಬಾರಿ ಮಳಿಗೆಯೊಂದನ್ನು ತೆರೆದಿದೆ.

ಪುಸ್ತಕ ಮೇಳ ಉದ್ಘಾಟನೆಗೊಂಡ ನ.1ರಂದೇ ಶಾಂತಿ ಪ್ರಕಾಶನದ ಮಳಿಗೆಯನ್ನು ಗಲ್ಪ್ಮೆಡಿಕಲ್ ಕಾಲೇಜು ಮತ್ತು ಅಜ್ಮಾನ್ ನ ತುಂಬೆ ಗ್ರೂಪ್ ಸ್ಥಾಪಕಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿರು ತುಂಬೆ ಮೊಯ್ದಿನ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ಕರ್ನಾಟಕದಲ್ಲಿ ಪುಸ್ತಕಗಳ ಪ್ರಕಾಶನ ಮುಖಾಂತರ ಸಮಾಜದ ಎಲ್ಲ ಧರ್ಮಗಳ ನಡುವೆ ಸೌಹಾರ್ದಕ್ಕೆ ಶ್ರಮಿಸುತ್ತಿರುವ ಕರ್ನಾಟಕದ ಶಾಂತಿ ಪ್ರಕಾಶನ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲೂ ತನ್ನ ಮಳಿಗೆಯನ್ನು ತೆರೆದಿರುವುದು ಎಲ್ಲ ಕನ್ನಡಿಗರಿಗೆ ಹೆಮ್ಮೆಯ ವಿಷಯ. ಈ ಪ್ರಕಾಶನ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಅಬುಧಾಬಿ ಕನ್ನಡ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಬ್ಯಾರೀಸ್ ಕಲ್ಚರಲ್ ಫೋರಂ ದುಬೈ ಇದರ ಉಪಾಧ್ಯಕ್ಷರಾದ ಎಂ.ಇ. ಮೂಳೂರು ಮತ್ತು ಅಬ್ದುಲ್ ಲತೀಫ್‌ಮುಲ್ಕಿ, ಶಾರ್ಜಾ ಕನ್ನಡ ಸಂಘದ ಅಧ್ಯಕ್ಷ ಸುಂದರ್ ರಾಜ್ ಬೇಕಲ್, ಕೊಂಕಣಿ ಸಾಹಿತ್ಯ ಪರಿಷತ್ ನ ನೋಯಲ್ ಡಿ. ಅಲ್ಮೇಡಾ, ಅಲ್ ತಾಯಿಫ್ ಕಿಚನ್ ಇಕ್ಯೂಪ್ ಮೆಂಟ್ಸ್ ಮಾಲಕ ತೋನ್ಸೆ ಕುದೂರ್, ಮುಹಮ್ಮದ್ ರಫೀಕ್, ಮಳ್ಟಿ ಬಿಝ್ ಟ್ರೇಡಿಂಗ್ ಇಸ್ಮಾಯೀಲ್ ಬಾಳೆಹೊನ್ನೂರು, ಎಚ್.ಎಂ.ಸಿ. ನಿರ್ದೇಶಕ ಶಕೀಲ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಯುಎಇ ಇದರ ಮುಖ್ಯಸ್ಥ ಆರೀಫ್ ಶರೀಫ್ ಅಬುಧಾಬಿ, ಅದರ ಪದಾಧಿಕಾರಿಗಳಾದ ಬಾಶಾ ಸಾಹೇಬ್, ಅಬ್ದುಲ್‌ಖಾದಿರ್ ಸಾಹೇಬ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭ ಓದು ಪ್ರಕಾಶನದ ಕೃತಿ ಎ.ಕೆ.ಕುಕ್ಕಿಲ ಅವರ ‘ಎಣ್ಣೆ ಬತ್ತಿದ ಲಾಟೀನು’ ಕೃತಿಯನ್ನು ಬ್ಯಾರಿ ವೆಲ್ಫೇರ್ ಫೋರಂ ಅಬುಧಾಬಿ ಇದರ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ರವರು ಸಾಹಿತಿ ಇರ್ಶಾದ್ ಮೂಡುಬಿದಿರೆ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಶಾಂತಿ ಪ್ರಕಾಶನದಿಂದ ಪ್ರಕಟಿತ ಶೈಖ್ ಮುಹಮ್ಮದ್ ಕಾರಕ್ಕುನ್ನು ಅವರ ಮೂಲಕೃತಿಯ ಕನ್ನಡಾನುವಾದ ಸಮೀನ ಉಪ್ಪಿನಂಗಡಿಯವರ ‘ಸ್ನೇಹ-ಸಂವಾದ’ ಪುಸ್ತಕವನ್ನು ಸರ್ವೋತ್ತಮ ಶೆಟ್ಟಿ ಬಿಡುಗಡೆಗೊಳಿಸಿ ಆರೀಫ್ ಅಲಿಗೆ ಹಸ್ತಾಂತರಿಸಿದರು. ‘ಮಕ್ಕಳ ತರಬೇತಿ ಹೇಗೆ’ ಎಂಬ ಕೃತಿಯನ್ನು ಬಿಸಿಎಫ್ ಉಪಾಧ್ಯಕ್ಷ ಎಂ.ಇ.ಮೂಳೂರು ಬಿಡುಗಡೆಗೊಳಿಸಿ ಲತೀಫ್ ಮುಲ್ಕಿಯವರಿಗೆ ಹಸ್ತಾಂತರಿಸಿದರು.

ಅಬ್ದುಲ್ ಸಲಾಮ್ ಯು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಅಬ್ದುಸ್ಸಲಾಮ್ ದೇರಳಕಟ್ಟೆ ಕಿರಾಅತ್ ಪಠಿಸಿ, ಅದನ್ನು ಕನ್ನಡಕ್ಕೆ ಅನುವಾದಿಸಿದರು. ಕಾರ್ಯಕ್ರಮ ನಿರೂಪಿಸಿದ ಅಬ್ದುಲ್  ಖಾದರ್ ಕುಕ್ಕಾಜೆ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News