ರಿಯಾದ್ ನಲ್ಲಿ ಮೃತಪಟ್ಟ ವಿಟ್ಲದ ವ್ಯಕ್ತಿಯ ಅಂತ್ಯಕ್ರಿಯೆಗೆ ನೆರವಾದ ಕೆಸಿಎಫ್

Update: 2018-09-06 17:04 GMT

ರಿಯಾದ್, ಸೆ.6: ಇತ್ತೀಚೆಗೆ ರಿಯಾದ್ ನಲ್ಲಿ ಹೃದಯಾಘಾತದಿಂದ ನಿಧನರಾದ ವಿಟ್ಲ ಮೂಲದ ಮಹ್ಮೂದ್ ಎಂಬವರ ಅಂತ್ಯ ಸಂಸ್ಕಾರವನ್ನು ಇಲ್ಲಿನ ಎಕ್ಸಿಟ್ 15ರ ಅಲ್ ರಾಜ್'ಹಿ ಮಸೀದಿಯ ಸಾರ್ವಜನಿಕ ದಫನ ಭೂಮಿಯಲ್ಲಿ ನೆರವೇರಿಸಲಾಯಿತು.       

ಬಂಟ್ವಾಳ ತಾಲೂಕಿನ ಕಡಂಬು-ಅನಿಲಕಟ್ಟೆ ನಿವಾಸಿ ಮೋನು ಬ್ಯಾರಿಯ ಹಿರಿಯ ಪುತ್ರ ಮಹ್ಮೂದ್ (53) ಇಪ್ಪತ್ತು ವರ್ಷಗಳಿಂದ ಸೌದಿ ಅರೇಬಿಯಾದ ರಿಯಾದ್ ನಲ್ಲಿ ಕೆಲಸ ಮಾಡುತ್ತಿದ್ದರು. ಇತ್ತೀಚೆಗಷ್ಟೇ ಊರಿಗೆ ಹೋಗಿ ಮರಳಿದ್ದರು. ಕೆಲ ದಿನಗಳ ಹಿಂದೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಅಂದೇ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಈ ಸಂದರ್ಭ ಆಸ್ಪತ್ರೆಗೆ ತೆರಳಿದ ಕರ್ನಾಟಕ ಕಲ್ಚರಲ್ ಫೌಂಡೇಶನ್ ರಿಯಾದ್ ಝೋನ್ ಕಾರ್ಯಕರ್ತರು ಮರಣೋತ್ತರ ಕ್ರಿಯೆಗೆ ಅಗತ್ಯವಿರುವ ದಾಖಲೆ ಪತ್ರಗಳನ್ನು ಸಿದ್ಧಪಡಿಸಿದರು. ಕುಟುಂಬದ ಅನುಮತಿ ಪಡೆದು ಅಲ್ ರಾಜ್'ಹಿ ಮಸೀದಿಯ ಸಾರ್ವಜನಿಕ ದಫನ ಭೂಮಿಯಲ್ಲಿ ದಫನ ಮಾಡಲಾಯಿತು ಎಂದು ಕೆಸಿಎಫ್ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News