ಇಂಡಿಯನ್ ಸೋಶಿಯಲ್ ಫೋರಂ ವತಿಯಿಂದ ಕನ್ನಡ ರಾಜ್ಯೋತ್ಸವ

Update: 2018-11-03 14:05 GMT

ಜಿದ್ದಾ, ನ. 3: ವಿವಿಧ ಭಾಷೆ, ಸಂಸ್ಕೃತಿ ಮತ್ತು ಆಚಾರ, ವಿಚಾರಗಳನ್ನು ಒಳಗೊಂಡ ಭಾರತ ದೇಶಕ್ಕೆ ಕರ್ನಾಟಕವು ನೀಡಿದ ಕೊಡುಗೆ ಅಮೋಘವಾದದ್ದು, ಕರ್ನಾಟಕವನ್ನು ಆಳಿದ ಅರಸರು ಸಾಹಿತ್ಯ, ಕಲೆ ಮತ್ತು ವಾಸ್ತು ಶಿಲ್ಪಕ್ಕೆ  ಪ್ರಾಮುಖ್ಯತೆ ಕಲ್ಪಿಸುವ ಮೂಲಕ ಈ ಕ್ಷೇತ್ರಗಳಲ್ಲಿ ದೇಶವು ಜಗತ್ತಿನಲ್ಲಿ ಖ್ಯಾತಿ ಪಡೆಯುವುದಕ್ಕೆ ತಮ್ಮ ಕೊಡುಗೆಯನ್ನು ಸಲ್ಲಿಸಿದರು.  ಕನ್ನಡ ನಾಡು, ನುಡಿಯ ಪ್ರಚಾರಕ್ಕೆ ಮಹತ್ವ ನೀಡುವ ನಿಟ್ಟಿನಲ್ಲಿ ಕರ್ನಾಟಕ  ಸರಕಾರವು ಕನ್ನಡರಾಜ್ಯೋತ್ಸವವನ್ನು 'ದಸರಾ' ಗೆ ನೀಡುವಂತೆಯೇ ಮನ್ನಣೆ ನೀಡಿ ಅದ್ದೂರಿಯಾಗಿ ಆಚರಿಸಬೇಕೆಂದು ಇಂಡಿಯನ್ ಸೋಷಿಯಲ್ ಫಾರಂನ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ರಫೀ ಮಠ ಹೇಳಿದರು.

ಅವರು ಇಂಡಿಯನ್ ಸೋಷಿಯಲ್ ಫೋರಂ ವತಿಯಿಂದ ನಗರದ ಲಕ್ಕಿ ದರ್ಬಾರ್ ಹೋಟೆಲ್ ಸಭಾಂಗಣದಲ್ಲಿ ನ. 2ರಂದು ಆಯೋಜಿಸಲಾಗಿದ್ದ 'ಕನ್ನಡರಾಜ್ಯೋತ್ಸವ' ಸಮಾರಂಭಕ್ಕೆ ಆಗಮಿಸಿದ ಸಭಿಕರನ್ನುದ್ದೇಶಿಸಿ ಮಾತನಾಡಿದರು. ಕರ್ನಾಟಕದ ಗತ ವೈಭವದ ಕುರಿತು ಮಾತನಾಡುತ್ತಾ  ಬೇಲೂರು, ಹಳೇಬೀಡು, ಹಂಪಿಗಳಲ್ಲಿ ಅರಸರು ಕಟ್ಟಿಸಿದ ದೇವಾಲಯಗಳು, ಗೋಲಗುಂಬಝ್ ಬೃಹತ್ ಕೋಟೆಗಳು ಜಗತ್ತಿನ ವಿವಿಧ ಭಾಗಗಳಿಂದ ಜನರು ಈ ಅದ್ಭುತ ವಾಸ್ತುಶಿಲ್ಪದ ವೀಕ್ಷಣೆಗಾಗಿ ದೇಶಕ್ಕೆ ಬರುವಂತೆ ಮಾಡಿತು. ಜ್ಞಾನ ಸಂಪಾದನೆಗೆ ಯಾವ ಭಾಷೆಯಾದರೇನು ಆದರೆ ನಮ್ಮ ನಡೆನುಡಿ ಕನ್ನಡವಾಗಿರಲಿ ಕನ್ನಡದ ಮೇಲಿನ ಪ್ರೀತಿ ನವೆಂಬರ್ ತಿಂಗಳೀಗೆ ಮಾತ್ರ ಸೀಮಿತವಾಗದಿರಲಿ ಎಂದು ಅವರು ಹೇಳಿದರು.

ರಾಜ್ಯೋತ್ಸವದ ನಿಮಿತ್ತ ಕನ್ನಡ ಹಾಡು, ಕ್ವಿಝ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಆಕರ್ಷಕ ಕ್ವಿಝ್ ಸ್ಪರ್ಧೆಯು ಪ್ರೇಕ್ಷಕರ ಮನ ಗೆದ್ದಿತು. ಕ್ವಿಝ್ ನಿರೂಪಕ ಹುಸೈನ್ ಜೋಕಟ್ಟೆ ಅವರು ಕನ್ನಡ ನಾಡಿನ ಕಲೆ, ಸಂಸ್ಕೃತಿ, ಭಾಷೆ, ವಾಸ್ತು ಶಿಲ್ಪ ಮತ್ತು ಆಡಳಿತಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸಭೆಯ ಮುಂದೆ ಇಡುತ್ತಿದ್ದರು ಮತ್ತು ಸರಿಯುತ್ತರಕ್ಕೆ ತಕ್ಷಣವೇ ಬಹುಮಾನವನ್ನು ವಿತರಿಸಲಾಗುತ್ತಿತ್ತು. 

ಐ ಎಸ್ ಎಫ್ ರಾಜ್ಯಾಧ್ಯಕ್ಷ ಮಹಮ್ಮದಾಲಿ ಮೂಳೂರ್ ಸಭಾದ್ಯಕ್ಷತೆ ವಹಿಸಿದ್ದರು. ಐಎಸ್ಎಫ್ ಸೆಂಟ್ರಲ್ ಕಮಿಟಿ ಉಪಾಧ್ಯಕ್ಷ ಹನೀಫ್ ಹಾರಿಸ್ , ಐಎಸ್ಎಫ್ ಜತೆ ಕಾರ್ಯದರ್ಶಿಗಳಾದ ರವೂಫ್ ಜೋಕಟ್ಟೆ, ಜವ್ವಾದ್ ಬೆಂಗಳೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇಂಡಿಯನ್ ಸೋಷಿಯಲ್ ಫಾರಂಗೆ ಹೊಸ ಸದಸ್ಯರನ್ನು ಶಾಲು ಹಾಕುವ ಮೂಲಕ ಬರಮಾಡಿ ಕೊಳ್ಳಲಾಯಿತು. ಮಹಮ್ಮದಾಲಿ ಮೂಳೂರು ಸ್ವಾಗತಿಸಿದರೆ, ಸಮಾರೋಪ ಮಹಮ್ಮದ್ ಇಸ್ಮಾಯಿಲ್ ನರೆವೇರಿಸಿದರು, ಜವ್ವಾದ್ ಬೆಂಗಳೂರು ವಂದಿಸಿದರು. ಇರ್ಷಾದ್ ಕಾವಲ್ ಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿದರು ಮತ್ತು ಆಸಿಫ್ ಗಂಜಿಮಠ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಆಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News