ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಜುಬೈಲ್ ಘಟಕ ಉದ್ಘಾಟನೆ

Update: 2019-11-23 14:14 GMT

ಜುಬೈಲ್ : ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಜುಬೈಲ್ ಘಟಕದ‌ ಉದ್ಘಾಟನಾ ಸಮಾರಂಭವು ಇಲ್ಲಿನ‌‌ ಇಂಟರ್ ಕನ್ಟಿನೆನ್ಟಲ್  ಹೊಟೇಲ್‌ ಸಭಾಂಗಣದಲ್ಲಿ ಗುರುವಾರ ನಡೆಯಿತು.‌

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಬಿಸಿಸಿಐ ಅಧ್ಯಕ್ಷ  ಹಾಗೂ ಎಸ್ಎಮ್ಆರ್ ಗ್ರೂಪ್ ಸಿಇಒ ರಶೀದ್ ಹಾಜಿ ಡಿಜಿಟಲ್ ವೀಡಿಯೊ ಪ್ರದರ್ಶನದೊಂದಿಗೆ ಬಿಸಿಸಿಐ ಜುಬೈಲ್ ಘಟಕವನ್ನು ಉದ್ಘಾಟಿಸಿದರು.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ಕರಾವಳಿ ಕರ್ನಾಟಕದಲ್ಲಿ ಬ್ಯಾರಿಗಳಿಗಾಗಿ ಹಲವು ಸಂಘಟನೆಗಳಿದ್ದರೂ ವ್ಯಾಪಾರೋದ್ಯಮಿಗಳನ್ನು ಒಂದು ವೇದಿಕೆಯಡಿ ತರುವ ಯಾವುದೇ ಪ್ರಯತ್ನ ನಡೆದಿರಲಿಲ್ಲ. ಬಿಸಿಸಿಐ ಈ ಕೊರತೆಯನ್ನು ನೀಗಿಸಿದೆ ಎಂದರು.

ಈಗಾಗಲೇ ಕರಾವಳಿ ಕರ್ನಾಟಕ, ದುಬೈಯಲ್ಲಿ ಕಾರ್ಯಾಚರಿಸುತ್ತಿರುವ  ಬಿಸಿಸಿಐ ಜುಬೈಲ್ ನಲ್ಲಿ ತನ್ನ ಘಟಕವನ್ನು ತೆರೆದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ   ಅದರ ಬೆಳವಣಿಗೆಗೆ ಸೂಚಕವಾಗಿದೆ. ಬ್ಯಾರಿ ವ್ಯಾಪಾರೋದ್ಯಮಿಗಳ ಅತ್ಯುತ್ತಮ ನೆಟ್ ವರ್ಕ್ ಸ್ಥಾಪಿಸಿ ಉದ್ಯಮರಂಗದ ಎಲ್ಲಾ ಅವಕಾಶಗಳನ್ನು ಬಳಸಿಕೊಂಡು ಮುಂದೊಂದು ದಿನ ಬಿಸಿಸಿಐ ಐವತ್ತು ಲಕ್ಷ ಉದ್ಯೋಗವಕಾಶವನ್ನು ಸೃಷ್ಟಿಸಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.

ಸಮಾರಂಭದಲ್ಲಿ ಸುಮಾರು ಇನ್ನೂರರಷ್ಟು  ವ್ಯಾಪಾರೋದ್ಯಮಿಗಳು ಜುಬೈಲ್, ದಮಾಮ್, ಅಲ್ ಖೋಬರ್ ಮತ್ತು ಸುತ್ತಮುತ್ತಲಿನಿಂದ ಭಾಗವಹಿಸಿದ್ದರು. ಸಮಾರಂಭದಲ್ಲಿ ದುಬೈ ಮತ್ತು ಭಾರತದಿಂದ ಸುಮಾರು 17 ಮಂದಿ ಪ್ರತಿನಿಧಿಗಳು  ಆಗಮಿಸಿದ್ದರು. 

ಸಮಾರಂಭದಲ್ಲಿ ವ್ಯವಹಾರ ನೀತಿಶಾಸ್ತ್ರ  ವಿಷಯದ ಕುರಿತು ಮಾತನಾಡಿದ ಬಿಸಿಸಿಐ ಕಾರ್ಯಕಾರಿ ಸಮಿತಿ ಸದಸ್ಯ ಮುಹಮ್ಮದ್ ಖಾಸಿಮ್, ಆಸ್ತಿ ಗಳಿಕೆಯೇ  ಮನುಷ್ಯನ ಗುರಿಯಾಗಬಾರದು.  ಆಸ್ತಿಯನ್ನು ಅತ್ಯುತ್ತಮ ಉದ್ದೇಶಕಾಗಿ ಬಳಸುವುದು ನಮ್ಮ ಗುರಿಯಾಗಿರಬೇಕು. ವ್ಯಾಪಾರದಲ್ಲಿ ನೀತಿಯನ್ನು ಪಾಲಿಸುವುದು ದೀರ್ಘವಧಿ ಲಾಭವನ್ನು ತರುತ್ತದೆ. ಮೋಸ ಮತ್ತು ವಂಚನೆ ಕ್ಷಣಿಕ ಲಾಭವನ್ನಷ್ಟೆ ತಂದು ದೀರ್ಘವಧಿಯಲ್ಲಿ ಹೆಚ್ಚು ನಷ್ಟ ಉಂಟು ಮಾಡುತ್ತದೆ ಎಂದರು.

ನೆಟ್ ವರ್ಕಿಂಗ್ ಮತ್ತು ಸಂಶೋಧನೆ ಎಂಬ ವಿಷಯದ ಕುರಿತು ಮಾತನಾಡಿದ ಕಾರ್ಯಕಾರಿ ಸಮಿತಿ ಸದಸ್ಯ ಆಸಿಫ್ ಅಮ್ಯಾಕೊ ಬಿಸಿಸಿಐ ವಿಸ್ತಾರವಾದ ಅಧ್ಯಯನದ ಮೂಲಕ ಹೊಸ ಉದ್ಯಮ ರಂಗಗಳಲ್ಲಿ ಹೊಡಿಕೆ ಮಾಡಲು ಉತ್ತೇಜಿಸಲಿದೆ. ಬ್ಯಾರಿಗಳ ಬ್ಯುಸಿನೆಸ್ ನೆಟ್ ವರ್ಕ್ ಅಭಿವೃದ್ಧಿ ಪಡಿಸಿ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ ಎಂದರು.

ಬಿಸಿಸಿಐ ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್  ಬಿಸಿಸಿಐ ಪರಿಚಯವನ್ನು ನೀಡಿ ಅದರ ಕಾರ್ಯಚಟುವಟಿಕೆಗಳ ಕುರಿತು ವಿವರಿಸಿದರು. ಅಖಿಲ್ ಫಾರೂಕ್  ಕಿರಾಅತ್ ಪಠಣ ಮತ್ತು ದಾನಿಶ್ ಅಹ್ಮದ್ ಅವರ ಅನುವಾದದೊಂದಿಗೆ ಕಾರ್ಯಕ್ರಮ ಚಾಲನೆಗೊಂಡಿತು.

ಬಿಸಿಸಿಐ ದುಬೈ ಘಟಕದ ಅಧ್ಯಕ್ಷ ಎಸ್ಎಮ್ ಬಶೀರ್, ಬಿಸಿಸಿಐ ಉಪಾಧ್ಯಕ್ಷ ಝಕರಿಯಾ ಅಲ್ ಮುಝೈನ್, ಕಾರ್ಯಕಾರಿ ಸಮಿತಿ ಸದಸ್ಯ ಅಶ್ರಫ್ ಎಕ್ಸ್ ಪರ್ಟೈಸ್ ಮಾತನಾಡಿದರು. ಬಿಸಿಸಿಐ ಉಪಾಧ್ಯಕ್ಷ ರವೂಫ್ ಪುತ್ತಿಗೆ,  ಶೇಖ್ ಎಕ್ಸ್ ಪರ್ಟೈಸ್, ಬಿಸಿಸಿಐ ಕೋಶಾಧಿಕಾರಿ  ಮನ್ಸೂರ್, ಮುಮ್ತಾಝ್ ಅಲಿ, ಇಫ್ತಿಕಾರ್ ಯು.ಟಿ, ಬಹ್ರೈನ್ ಪ್ರತಿನಿಧಿ  ರಝಾಕ್, ಕುವೈತ್ ಪ್ರತಿನಿಧಿ ಅಬ್ದುಲ್ ಹಮೀದ್, ಕತರ್ ಪ್ರತಿನಿಧಿ ಅಬ್ದುಲ್ಲಾ ಮೋನು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಬಶೀರ್ ಎನ್ ಸಿ ಎಮ್ ಎಸ್ ಸ್ವಾಗತಿಸಿ, ಹಿದಾಯ ಫೌಂಡೇಶನ್ ಜುಬೈಲ್ ಘಟಕದ ಅಧ್ಯಕ್ಷ ಫಾರೂಕ್ ಅಸಿಸ್ಕೊ ವಂದಿಸಿದರು. ಮುಹಮ್ಮದ್ ಫೈರೋಝ್,  ದಾನಿಶ್ ಮತ್ತು ನಯಾಝ್ ಕೈಸರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News