ಸೌದಿ: ಸಂಕಷ್ಟಕ್ಕೆ ಸಿಲುಕಿರುವ ಕನ್ನಡಿಗರನ್ನು ಮಂಗಳೂರಿಗೆ ಬಾಡಿಗೆ ವಿಮಾನದಲ್ಲಿ ಕಳಿಸಲು ಸಿದ್ಧತೆ ; ಸಾಕೋ ದಮಾಮ್

Update: 2020-05-29 17:01 GMT

ದಮಾಮ್, ಮೇ 29 : ಕೊರೊನ ಲಾಕ್ ಡೌನ್  ನಿಂದ ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಕನ್ನಡಿಗರ ನೆರವಿಗೆ ಧಾವಿಸಿರುವ ದಮಾಮ್ ನಲ್ಲಿರುವ ಕನ್ನಡಿಗರ ಸಾಕೋ ಕಾಂಟ್ರಾಕ್ಟಿಂಗ್ ಕಂಪೆನಿ ಮಂಗಳೂರಿಗೆ ಬಾಡಿಗೆ ವಿಮಾನವನ್ನು ಕಳಿಸಲು ನಮ್ಮ ಕಂಪೆನಿ ಸರ್ವ ಸಿದ್ಧತೆ ಮಾಡಿಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಸಾಕೋ ಕಂಪೆನಿಯ ನಿರ್ದೇಶಕರುಗಳಾದ ಅಲ್ತಾಫ್ ಉಳ್ಳಾಲ್ ಹಾಗು ಬಶೀರ್ ಸಾಗರ್ ಅವರು ಕೇಂದ್ರ ಸರಕಾರ ಅಂತಿಮಗೊಳಿಸಿದ ವಿಮಾನಗಳ ವೇಳಾಪಟ್ಟಿಗಾಗಿ ನಾವು ಕಾಯುತ್ತಿದ್ದು ಉಳಿದೆಲ್ಲ ತಯಾರಿ ಅಂತಿಮಗೊಂಡಿದೆ. ಅನುಮತಿ ಸಿಕ್ಕಿದ ಕೂಡಲೇ ಅತ್ಯಂತ ತುರ್ತಾಗಿ ತಾಯ್ನಾಡಿಗೆ ಮರಳಲೇ ಬೇಕಾದ 169 ಮಂದಿ ಇರುವ ವಿಮಾನ ದಮಾಮ್ ನಿಂದ ಹೊರಡಲಿದೆ. ಈ ವಿಮಾನದ ಎಲ್ಲ ಪ್ರಯಾಣಿಕ ಪ್ರಯಾಣ ವೆಚ್ಚವನ್ನು ಕಂಪೆನಿಯೇ ಭರಿಸಲಿದೆ ಎಂದು ಹೇಳಿದ್ದಾರೆ.

ಈ ಬಾಡಿಗೆ ವಿಮಾನದಲ್ಲಿ ಪ್ರಯಾಣಿಸುವವರ ಪಟ್ಟಿ ಅಂತಿಮಗೊಳಿಸಲು ಸಾಕೋ ಕಂಪೆನಿ ಹೆಲ್ಪ್ ಡೆಸ್ಕ್ ಪ್ರಾರಂಭಿಸಿತ್ತು.  ಇದಕ್ಕೆ ಬಂದಿರುವ ಕರೆಗಳ ಆಧಾರದಲ್ಲಿ  ಗರ್ಭಿಣಿ ಮಹಿಳೆಯರು, ವಿಸಿಟ್ ವೀಸಾದಲ್ಲಿ ಬಂದು ಅತಂತ್ರರಾಗಿರುವ ಹಿರಿಯ ನಾಗರೀಕರು, ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯ ಇರುವವರು, ಕೆಲಸ ಕಳೆದುಕೊಂಡು ಕಂಗಾಲಾಗಿರುವವರು, ಊರಲ್ಲಿ ನಿಕಟ ಸಂಬಂಧಿಗಳು ಮೃತಪಟ್ಟವರು ಹಾಗು ತೀರಾ ಇತರ ತುರ್ತು ಅಗತ್ಯ ಇರುವವರಿಗೆ ಆದ್ಯತೆ ನೀಡಿ ಈ  ವಿಮಾನದಲ್ಲಿ ಪ್ರಯಾಣಿಸುವ 169 ಮಂದಿಯ ಪಟ್ಟಿ ಅಂತಿಮಗೊಳಿಸಲಾಗುತ್ತಿದೆ ಎಂದು ಅಲ್ತಾಫ್ ಹಾಗು ಬಶೀರ್ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News