ದುಬೈ ವಿಮಾನ ನಿಲ್ದಾಣದಲ್ಲಿ ನಿದ್ದೆಗೆ ಜಾರಿದ ಭಾರತೀಯನನ್ನು ಬಿಟ್ಟು ತಾಯ್ನಾಡಿಗೆ ಹಾರಿದ ವಿಮಾನ

Update: 2020-07-04 17:33 GMT

ದುಬೈ, ಜು. 4: ಯುಎಇಯಲ್ಲಿರುವ ಭಾರತೀಯರೊಬ್ಬರು ದುಬೈ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿದ್ದೆಗೆ ಜಾರಿದ ಬಳಿಕ, ದೇಶದಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರನ್ನು ವಾಪಸ್ ಕಳುಹಿಸಿಲು ನಿಯೋಜಿಸಲಾಗಿದ್ದ ವಿಶೇಷ ವಿಮಾನವನ್ನು ಶುಕ್ರವಾರ ತಪ್ಪಿಸಿಕೊಂಡಿದ್ದಾರೆ ಎಂದು ‘ಗಲ್ಫ್ ನ್ಯೂಸ್’ ವರದಿ ಮಾಡಿದೆ.

53 ವರ್ಷದ ಪಿ. ಶಾಜಹಾನ್ ಅಬುಧಾಬಿಯಲ್ಲಿ ಸ್ಟೋರ್‌ಕೀಪರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೇರಳ ಮುಸ್ಲಿಮ್ ಕಲ್ಚರಲ್ ಸೆಂಟರ್ ದುಬೈ ಆಯೋಜಿಸಿದ್ದ ಎಮಿರೇಟ್ಸ್ ಜಂಬೊ ಜೆಟ್ ವಿಮಾನದಲ್ಲಿ ತಿರುವನಂತಪುರಂಗೆ ಪ್ರಯಾಣಿಸಬೇಕಾಗಿತ್ತು. ಇದು ತೆರವು ಕಾರ್ಯಾಚರಣೆಗಾಗಿ ನಿಯೋಜಿಸಲಾದ ಮೊದಲ ಜಂಬೋ ಜೆಟ್ ವಿಮಾನವಾಗಿತ್ತು. ಶಾಜಹಾನ್ ವಿಮಾನದ ಟಿಕೆಟ್‌ಗಾಗಿ 1,100 ದಿರ್ಹಮ್ (ಸುಮಾರು 22,400 ರೂಪಾಯಿ) ಪಾವತಿಸಿದ್ದರು.

‘‘ನಾನು ಹಿಂದಿನ ರಾತ್ರಿ ನಿದ್ದೆ ಮಾಡಿರಲಿಲ್ಲ. 427 ಮಂದಿಯನ್ನು ಹೊತ್ತು ಕೇರಳಕ್ಕೆ ಹೋಗಲಿದ್ದ ಜಂಬೋ ಜೆಟ್ ವಿಮಾನದಲ್ಲಿ ಟಿಕೆಟ್ ಖಚಿತಪಡಿಸುವುದಕ್ಕಾಗಿ ಕಾಯುತ್ತಿದ್ದೆ’’ ಎಂದು ‘ಗಲ್ಫ್ ನ್ಯೂಸ್’ನೊಂದಿಗೆ ಮಾತನಾಡಿದ ಅವರು ಹೇಳಿದರು.

ವಿಮಾನ ಹತ್ತುವುದಕ್ಕಾಗಿ ಅವರು ಶನಿವಾರ ಮುಂಜಾನೆ ವಿಮಾನ ನಿಲ್ದಾಣ ತಲುಪಿದ್ದರು. ಎಲ್ಲ ಪ್ರಕ್ರಿಯೆಗಳನ್ನು ಪೂರೈಸಿದ ಬಳಿಕ ಅವರು ಮಧ್ಯಾಹ್ನ 2 ಗಂಟೆಯ ಹೊತ್ತಿಗೆ ಟರ್ಮಿನಲ್ 3ರ ಬೋರ್ಡಿಂಗ್ ಗೇಟ್ ಸಮೀಪ ಕಾಯುತ್ತಿದ್ದರು. ‘‘ನಾನು ಇತರರಿಗಿಂತ ದೂರವೇ ಕುಳಿತಿದ್ದೆ. ಆದರೆ, ಸಂಜೆ 4:30ರ ಹೊತ್ತಿಗೆ ನಿದ್ದೆ ಹೋದೆ’’ ಎಂದರು. ಅವರ ವೀಸಾ ರದ್ದಾಗಿರುವುದರಿಂದ ಅವರು ವಾಸಪ್ ಯುಎಇಗೆ ಕಾಲಿಡುವಂತಿಲ್ಲ.

ಶನಿವಾರ ನಾವು ಇನ್ನೊಂದು ವಿಶೇಷ ವಿಮಾನವನ್ನು ನಿಯೋಜಿಸಿದ್ದು, ಅದರಲ್ಲಿ ಅವರನ್ನು ಭಾರತಕ್ಕೆ ಕಳುಹಿಸಲು ಪ್ರಯತ್ನಿಸಲಾಗುವುದು ಎಂದು ವಿಶೇಷ ವಿಮಾನವನ್ನು ಸಂಘಟಿಸಿದ ಎಸ್. ನಿಝಾಮುದ್ದೀನ್ ಕೊಲ್ಲಂ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News