ದುಬೈ: ಕೆಸಿಎಫ್ ನ್ಯಾಷನಲ್ ಪ್ರತಿಭೋತ್ಸವ-2021ಕ್ಕೆ ಸಂಭ್ರಮದ ತೆರೆ

Update: 2021-02-22 09:55 GMT

ದುಬೈ: ಕೆಸಿಎಫ್ ಯುಎಇ ಆಯೋಜಿಸಿದ ನ್ಯಾಷನಲ್ ಪ್ರತಿಭೋತ್ಸವ-2021 ಎಡಿಷನ್-3 ಕಾರ್ಯಕ್ರಮವು ಫೆ. 19 ಶುಕ್ರವಾರದಂದು ಝೂಮ್ ಅಂತರಜಾಲ ನೇರಪ್ರಸಾರ ತಾಣದಲ್ಲಿ ಯುಎಇ ಕಾಲಮಾನ ಬೆಳಿಗ್ಗೆ 8.00 ರಿಂದ ರಾತ್ರಿ 9.00 ರವರೆಗೆ ನಡೆಯಿತು. ಕಾರ್ಯಕ್ರಮದಲ್ಲಿ ಕನ್ನಡ, ಇಂಗ್ಲಿಷ್, ಮಲಯಾಳಂ, ಉರ್ದು, ಅರಬಿಕ್ ಭಾಷೆಗಳಲ್ಲಿ ಹಾಡು, ಪ್ರಬಂಧ, ಭಾಷಣ, ಕ್ವಿಝ್, ಮೆಮರಿ ಟೆಸ್ಟ್, ಖಿರಾಅತ್, ಪೋಸ್ಟರ್ ಡಿಸೈನಿಂಗ್, ಅರೆಬಿಕ್ ಕಾಲಿಗ್ರಫಿ, ಸ್ಟೋರಿ ರೈಟಿಂಗ್ ಸೇರಿದಂತೆ ಜನರಲ್, ಸೀನಿಯರ್, ಜೂನಿಯರ್, ಸಬ್ ಜೂನಿಯರ್ ವಿಭಾಗಗಳಲ್ಲಿ ಸುಮಾರು 75 ವೈವಿದ್ಯಮಯ ಪ್ರತಿಭಾ ಪ್ರದರ್ಶಗಳನ್ನು ನಡೆಸಲಾಯಿತು.

ಕೆಸಿಎಫ್ ಇಂಟರ್ ನ್ಯಾಷನಲ್ ಕೌನ್ಸಿಲ್ ಹಣಕಾಸು ವಿಭಾಗದ ನಿಯಂತ್ರಕರಾದ ಅಬ್ದುಲ್ ಹಮೀದ್ ಸಅದಿ ಈಶ್ವರಮಂಗಲ ಇವರ ದುಆದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರತಿಭೋತ್ಸವ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷರಾದ ಬರ್ಶ ಇಲ್ಯಾಸ್ ಮದನಿ ಯವರು ಅಧ್ಯಕ್ಷತೆಯನ್ನು ವಹಿಸಿದರೆ  ಅಕ್ರಂ ಬಿಸಿ ರೋಡ್ ಸ್ವಾಗತ ಭಾಷಣ ಮಾಡಿದರು.

ಶಾರ್ಜಾ, ಅಬುಧಾಬಿ, ದುಬೈ ನಾರ್ತ್ & ಸೌತ್, ಅಜ್ಮಾನ್, ರಾಸ್ ಅಲ್ ಕೈಮ ಝೋನ್ ಗಳ ಪ್ರತಿಭೆಗಳ ಮಧ್ಯೆ ನಡೆದ ಸ್ಪರ್ಧೆಯಲ್ಲಿ ಶಾರ್ಜಾ ಝೋನ್ ಸತತ ಮೂರನೇ ಬಾರಿ ಚಾಂಪಿಯನ್ನಾಗಿ ಹೊರಹೊಮ್ಮಿತು, ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ಝೋನ್ ಗಳಿಗೂ ಕೆಸಿಎಫ್ ನಾಯಕರು ಅಭಿನಂದನೆ ಸಲ್ಲಿಸಿದರು. 

2 ಹಂತಗಳಲ್ಲಿ ನಡೆದ ಕಾರ್ಯಕ್ರಮದ ಪ್ರಥಮ ಹಂತವನ್ನು ಕೆ ಹೆಚ್ ಮುಹಮ್ಮದ್ ಕುಞಿ ಸಖಾಫಿ ನಿರೂಪಿಸಿದರೆ, ದ್ವಿತೀಯ ಹಂತವನ್ನು ಇಬ್ರಾಹಿಂ ಸಖಾಫಿ ಕೆದುಂಬಾಡಿ ನಿರೂಪಿಸಿದರು.

ಪ್ರತಿಭೋತ್ಸವದ ತಾಂತ್ರಿಕ ನಿರ್ವಹಣೆಯನ್ನು ಕಬೀರ್ ಬಾಯಂಪಾಡಿ, ಶಹೀರ್ ಕರಾಯ ಮತ್ತು ಶೌಕತ್ ರವರು ನಡೆಸಿದರು.

ಸಂಜೆ ನಡೆದ ಸಮಾರೋಪ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ಮಾಜಿ ಶಾಸಕ ಮೊಯ್ದಿನ್ ಬಾವ ಉದ್ಘಾಟಿಸಿದರು. ಮರ್ಹೂಂ ಅಬ್ದುಲ್ ಕರೀಂ ಉಳ್ಳಾಲ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಸಿಎಫ್ ಯುಎಇ ರಾಷ್ಟ್ರೀಯ ಅಧ್ಯಕ್ಷರಾದ ಅಬ್ದುಲ್ ಜಲೀಲ್ ನಿಝಾಮಿ ಕೊಡಗು ವಹಿಸಿದರು. ಮೂಸ ಹಾಜಿ ಬಸರ ಸ್ವಾಗತಿಸಿದರು. 

ಕೆಸಿಎಫ್ ಅಂತರಾಷ್ಟ್ರೀಯ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ, ಕರ್ನಾಟಕ ಸಂಘ ಶಾರ್ಝಾ ಇದರ ನೂತನ ಅಧ್ಯಕ್ಷರಾದ ಎಂ ಇ ಮೂಳೂರು, ಮಾಜಿ ಶಾಸಕರಾದ ಮೊಯಿದೀನ್ ಬಾವ,  ಝೈನುದ್ದೀನ್ ಹಾಜಿ, ಉಸ್ಮಾನ್ ಹಾಜಿ ಮುಂತಾದ ಗಣ್ಯರು ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

ಸ್ಪರ್ಧೆಯಲ್ಲಿ ಅಬುದಾಬಿ, ಅಜ್ಮಾನ್, ಅಲ್ ಐನ್, ದುಬೈ ನಾರ್ತ್, ದುಬೈ ಸೌತ್, ರಾಸ್-ಅಲ್-ಖೈಮಃ ಮತ್ತು ಶಾರ್ಜ ಝೋನ್ಗಳ ಸ್ಪರ್ಧಾಳುಗಳು ವಿವಿಧ ಭಾಗಗಳಿಂದ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.

ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಶಾರ್ಜ ಝೋನ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದರೆ ಅಬುದಾಬಿ ಝೋನ್ ರನ್ನರ್ ಅಪ್ ಆಗಿ ಹೊರಹೊಮ್ಮಿತು. ದುಬೈ ನಾರ್ತ್ ತೃತೀಯ ಸ್ಥಾನ ಪಡೆಯಿತು.

ಖಿರಾಅತ್, ಕನ್ನಡ ಹಾಡು ಮತ್ತು ಉರ್ದು ಹಾಡಿನಲ್ಲಿಕ್ರಮವಾಗಿ ಪ್ರಥಮ ಸ್ಥಾನವನ್ನು ದುಬೈ ನಾರ್ತ್ ಝೋನ್ ಪುಟಾಣಿ ಪ್ರತಿಭೆ ಎಂ ರಂಲೀ ಮತ್ತು ಬಾಲ ಪ್ರತಿಭೆ ಸಾರ ಬುರೈದ ಪಡೆದರೆ ಅಬುಧಾಬಿ ಝೋನ್ ಪ್ರೌಢ ಪ್ರತಿಭೆ ಎಂ ಅನಸ್ ಖಿರಾಅತ್, ಕ್ವಿಝ್ ಮತ್ತು ಇಂಗ್ಲೀಷ್ ಭಾಷಣದಲ್ಲಿ ಪ್ರಥಮ ಸ್ಥಾನವನ್ನು ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News