ಹೆಪ್ಪುಗಟ್ಟಿದ ಲಡಾಖ್ ಆಕ್ರೋಶ

Update: 2024-03-29 04:16 GMT

ಸೋನಂ ವಾಂಗ್ ಚುಕ್ | Photo: X \ @Wangchuk66

ಲಡಾಖ್‌ನಲ್ಲಿ ಸೋನಂ ವಾಂಗ್ ಚುಕ್ ತನ್ನ 21 ದಿನಗಳ ಉಪವಾಸ ಸತ್ಯಾಗ್ರಹವನ್ನು ಎರಡು ದಿನಗಳ ಹಿಂದೆ ಅಂತ್ಯಗೊಳಿಸಿದ್ದಾರೆ. ಮೈನಸ್ 10 ಡಿಗ್ರಿ ವಾತಾವರಣದಲ್ಲಿ ನೀರು ಹೆಪ್ಪು ಗಟ್ಟುವ ಚಳಿಯಲ್ಲಿ ವಾಂಗ್‌ಚುಕ್ ಜೊತೆಗೆ 300ಕ್ಕೂ ಅಧಿಕ ಲಡಾಖ್ ನಿವಾಸಿಗಳು ಉಪವಾಸ ಸತ್ಯಾಗ್ರಹ ಹೂಡಿದ್ದರು. ಅಷ್ಟೇ ಅಲ್ಲ, ಅವರಿಗೆ ಬೆಂಬಲವಾಗಿ ಸಾವಿರಾರು ನಿವಾಸಿಗಳು ನೆರೆದಿದ್ದರು. 21 ದಿನಗಳ ಈ ಕಠೋರ ಉಪವಾಸ ಸತ್ಯಾಗ್ರಹ ನಡೆಯುತ್ತಿರುವ ಸಂದರ್ಭದಲ್ಲಿ ಜಮ್ಮು ಕಾಶ್ಮೀರಕ್ಕಾಗಿ ಕಣ್ಣೀರು ಸುರಿಸಿದ್ದ ಒಬ್ಬನೇ ಒಬ್ಬ ದಿಲ್ಲಿಯ ಬಿಜೆಪಿ ನಾಯಕ ಸ್ಥಳಕ್ಕೆ ಭೇಟಿ ನೀಡಿರಲಿಲ್ಲ. ಪ್ರಧಾನಿ ಮೋದಿಯವರು ಕಾಟಾಚಾರಕ್ಕೆ ಒಂದು ಟ್ವೀಟ್ ಮೂಲಕವೂ ಈ ಲಡಾಖ್ ನಿವಾಸಿಗಳ ಆತಂಕಗಳಿಗೆ ಸ್ಪಂದಿಸಿರಲಿಲ್ಲ. ಸೋನಂ ವಾಂಗ್‌ಚುಕ್ ಅವರ ಉಪವಾಸ ಸತ್ಯಾಗ್ರಹ ತಾತ್ಕಾಲಿಕವಾಗಿ ಅಂತ್ಯವಾಗಿದೆಯಾದರೂ, ಒಂದು ಮಹಾ ಹೋರಾಟಕ್ಕೆ ನಿಜ ಅರ್ಥದಲ್ಲಿ ಈ ಮೂಲಕ ಚಾಲನೆಯನ್ನು ನೀಡಿದ್ದಾರೆ. ಈ ಹೋರಾಟ ಮುಂದುವರಿಯುತ್ತದೆ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಮಾಡಲಿದ್ದೇನೆ ಎಂದು ಅವರು ಎಚ್ಚರಿಸಿದ್ದಾರೆ.

ಮೂಲತಃ ಇಂಜಿನಿಯರ್ ಆಗಿರುವ ಸೋನಂ ವಾಂಗ್‌ಚುಕ್ ತಮ್ಮ ಉದ್ಯಮ, ಸಂಶೋಧನೆ, ಲಡಾಖ್‌ನ ಪರಿಸರ ಮತ್ತು ಬುಡಕಟ್ಟು ಜನರ ಕುರಿತಂತೆ ವಹಿಸಿರುವ ಕಾಳಜಿಗಾಗಿ ಮ್ಯಾಗ್ಸೆಸೆ ಪ್ರಶಸ್ತಿಯನ್ನು ಪಡೆದವರು. ತಮ್ಮ ಬೇರೆ ಬೇರೆ ಸಾಧನೆಗಳಿಗಾಗಿ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದವರು. ತಂತ್ರಜ್ಞಾನ, ಉದ್ಯಮ, ಶಿಕ್ಷಣ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ವಿಸ್ತರಿಸಿದವರು. ಲಡಾಖ್‌ನೊಳಗೆ ಅವರೋ, ಅವರೊಳಗೆ ಲಡಾಖೋ ಎನ್ನುವಂತೆ ಬದುಕಿದವರು. ಸೋನಂ ವಾಂಗ್‌ಚುಕ್ ಬದುಕನ್ನು ಆಧರಿಸಿ ಆಮೀರ್ ಖಾನ್ ‘ತ್ರೀ ಈಡಿಯಟ್ಸ್’ ಸಿನೆಮಾ ಮಾಡಿದ್ದರು. ವಾಂಗ್‌ಚುಕ್ ಬದುಕನ್ನು ಆಮೀರ್ ಖಾನ್ ಅಭಿನಯಿಸಿ ದೇಶದಲ್ಲಿ ಅಪಾರ ಜನಮನ್ನಣೆಗಳಿಸಿದರು. ಇಂತಹ ವಾಂಗ್‌ಚುಕ್ ಕಳೆದ 21 ದಿನಗಳ ಕಾಲ ಅನ್ನಾಹಾರ ಬಿಟ್ಟು ಲಡಾಖ್‌ಗಾಗಿ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೆ, ಯಾವುದೇ ಮಾಧ್ಯಮಗಳು ಅದಕ್ಕೆ ಪ್ರಚಾರವನ್ನು ನೀಡಲಿಲ್ಲ. ರಾಜಕಾರಣಿಗಳು ಅವರನ್ನು ಭೇಟಿ ಅವರ ಸಂಕಟಗಳನ್ನು ವಿಚಾರಿಸುವ ಕೃಪೆಯನ್ನೂ ತೋರಲಿಲ್ಲ. ವಿಪರ್ಯಾಸವೆಂದರೆ, ಜಮ್ಮು-ಕಾಶ್ಮೀರದ ಮೇಲಿನ 370ನೇ ವಿಧಿಯನ್ನು ರದ್ದುಗೊಳಿಸಿ ಅದರ ವಿಶೇಷ ಸ್ಥಾನಮಾನವನ್ನು ಹಿಂದೆಗೆದಾಗ ಇದೇ ಸೋನಂ ವಾಂಗ್‌ಚುಕ್ ನಿರ್ಧಾರವನ್ನು ಬೆಂಬಲಿಸಿದ್ದರು. ಮೋದಿ ಸರಕಾರ ಚೀನಾದ ವಸ್ತುಗಳಿಗೆ ಬಹಿಷ್ಕಾರದ ಕರೆಯನ್ನು ನೀಡಿದಾಗ ವಾಂಗ್‌ಚುಕ್ ಆ ಚಳವಳಿಯ ಜೊತೆಗೆ ನಿಂತರು ಮಾತ್ರವಲ್ಲ, ಚೀನಾದ ವಸ್ತುವನ್ನು ಬಹಿಷ್ಕರಿಸುವ ಆಂದೋಲನದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು. ಜಮ್ಮು-ಕಾಶ್ಮೀರದಿಂದ ಲಡಾಖ್‌ನ್ನು ಬೇರ್ಪಡಿಸಿ, ಕೇಂದ್ರಾಡಳಿತ ಪ್ರದೇಶವನ್ನಾಗಿಸಿದಾಗ ಮುಂದೆ ಲಡಾಖ್‌ಗೆ ಒಳಿತಿನ ದಿನಗಳು ಬರಲಿವೆ ಎಂದು ನಂಬಿದವರಲ್ಲಿ ಈ ಸೋನಂ ವಾಂಗ್‌ಚುಕ್ ಕೂಡ ಒಬ್ಬರು. ಯಾಕೆಂದರೆ ಜಮ್ಮು-ಕಾಶ್ಮೀರದ ಭಾಗವಾಗಿದ್ದಾಗ ಲಡಾಖ್‌ನ ಜನರಿಗೆ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ ಎನ್ನುವ ಭಾವನೆಯಿತ್ತು. ಕಾಶ್ಮೀರದಿಂದ ಬೇರ್ಪಟ್ಟಾಗ ಸಹಜವಾಗಿಯೇ ಇನ್ನು ನಮ್ಮ ಅಭಿವೃದ್ಧಿಯನ್ನು ನಾವೇ ನಿರ್ಧರಿಸಬಹುದು ಎಂದು ಭಾವಿಸಿದ್ದರು. ಆದರೆ, ಇಂದು ಲಡಾಖ್‌ನ ಜನರ ಅಗತ್ಯವನ್ನು ದಿಲ್ಲಿಯ ಅಧಿಕಾರಿಗಳು ತೀರ್ಮಾನಿಸುತ್ತಿದ್ದಾರೆ. ಪ್ರತ್ಯೇಕ ರಾಜ್ಯದ ಸ್ಥಾನಮಾನವಿಲ್ಲದೆ ಶಾಸಕಾಂಗ ವ್ಯವಸ್ಥೆಯ ಕೊರತೆಯಿಂದ, ಅದು ದಿಲ್ಲಿಯ ಮೂಗಿನ ನೇರಕ್ಕೆ ತನ್ನ ಬದುಕನ್ನು ಕಟ್ಟಿಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.

370ನೇ ವಿಧಿ ಲಡಾಖ್‌ಗೆ ಒಂದಿಷ್ಟು ನೆಮ್ಮದಿಯನ್ನಾದರೂ ನೀಡಿತ್ತು. ಇದು ಲಡಾಖ್‌ಗೆ ಹೊರಗಿನವರು ಪ್ರವೇಶಿಸಿ ಭೂಮಿಯ ಮೇಲೆ ಹಸ್ತಕ್ಷೇಪ ನಡೆಸುವುದನ್ನು ತಡೆದಿತ್ತು. ಆದರೆ ಲಡಾಖ್ ಕೇಂದ್ರಾಡಳಿತ ಪ್ರದೇಶವಾದ ದಿನದಿಂದ ಗಣಿ ಉದ್ಯಮಿಗಳು ಈ ಪ್ರದೇಶಕ್ಕೆ ದಾಂಗುಡಿಯಿಡುತ್ತಿದ್ದಾರೆ. ಪ್ರಾಕೃತಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿ ಲಡಾಖ್ ಗುರುತಿಸಿಕೊಂಡಿದೆ. ಕೈಗಾರಿಕೋದ್ಯಮಿಗಳ ಸಣ್ಣ ಹಸ್ತಕ್ಷೇಪವೂ ಇಲ್ಲಿ ಭಾರೀ ದುಷ್ಪರಿಣಾಮಗಳನ್ನು ಬೀರಬಹುದು. ಇದನ್ನು ಲಡಾಖ್ ಜನರು ಈಗಾಗಲೇ ಅನುಭವಿಸುತ್ತಿದ್ದಾರೆ. ತುಸು ಏರುಪೇರಾದರೆ ಹಿಮಾಲಯ ಕರಗತೊಡಗುತ್ತದೆ. ನೆರೆ ಅವರ ಬದುಕನ್ನು ಕೊಚ್ಚಿಕೊಂಡು ಹೋಗುತ್ತದೆ. ಇರುವ ಸೀಮಿತ ಕುಡಿಯುವ ನೀರನ್ನು ಪ್ರವಾಸೋದ್ಯಮ, ಕೈಗಾರಿಕೆ ಎಂದು ಉದ್ಯಮಿಗಳು ಕಸಿದುಕೊಳ್ಳತೊಡಗಿದ್ದಾರೆ. ಪ್ರವಾಸೋದ್ಯಮದ ಹೆಸರಿನಲ್ಲಿ ಲಡಾಖ್‌ನ ಪರಿಸರದ ಮೇಲೆ ಅತ್ಯಾಚಾರಗಳು ನಡೆಯುತ್ತಿವೆ. ವಿಪರ್ಯಾಸವೆಂದರೆ ಕೇಂದ್ರಾಡಳಿತ ಪ್ರದೇಶವಾದ ದಿನದಿಂದ ಇಲ್ಲಿ ನಿರುದ್ಯೋಗಿಗಳ ಸಂಖ್ಯೆ ಹೆಚ್ಚಿದೆ. ಶೇ. 25ಕ್ಕಿಂತಲೂ ಅಧಿಕ ನಿರುದ್ಯೋಗಿಗಳು ಇಲ್ಲಿದ್ದಾರೆ. ಗಣಿ ಕಂಪೆನಿಗಳು ಗಣಿಗಾರಿಕೆಗಳಿಗೆ ಭೂಮಿಯನ್ನು ಖರೀದಿಸುತ್ತಿರುವುದು ಕೂಡ ಇಲ್ಲಿಯ ಜನರನ್ನು ಆತಂಕಕ್ಕೆ ತಳ್ಳಿದೆ. ಈ ಕಾರಣದಿಂದ ಅಸ್ಸಾಂ, ಮೇಘಾಲಯ, ತ್ರಿಪುರ, ಮಿಜೋರಾಂನಂತಹ ಈಶಾನ್ಯ ರಾಜ್ಯಗಳಲ್ಲಿ ಜಾರಿಯಲ್ಲಿರುವ ಆರ್ಟಿಕಲ್ 244(2)ನ್ನು ಲಡಾಖ್‌ಗೂ ಅನ್ವಯಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ. ಈಶಾನ್ಯ ಭಾರತದಲ್ಲಿರುವಂತೆಯೇ ಲಡಾಖ್‌ನಲ್ಲೂ ಬುಡಕಟ್ಟು ಜನರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲ್ಪಟ್ಟಿದೆ. ಆರನೇ ಶೆಡ್ಯೂಲ್‌ನ್ನು ಜಾರಿಗೊಳಿಸಿದರೆ, ಇಲ್ಲಿನ ಭೂಪ್ರದೇಶಗಳನ್ನು ಹೊರಗಿನ ಜನರು ಕೊಂಡುಕೊಳ್ಳುವುದು ಕಷ್ಟವಾಗುವುದರಿಂದ, ಗಣಿಗಾರಿಕೆಗಳಂತಹ ಪರಿಸರ ವಿರೋಧಿ ಉದ್ಯಮಗಳು ಕಾಲಿಡುವುದನ್ನು ತಡೆಯಬಹುದು.

2019ರಲ್ಲಿ ನಡೆದ ಚುನಾವಣೆಯ ಸಂದರ್ಭದಲ್ಲಿ ಆರನೇ ಶೆಡ್ಯೂಲ್‌ನ ಭರವಸೆಯನ್ನು ಬಿಜೆಪಿ ನೀಡಿತ್ತು. ಆದರೆ ಇದೀಗ ತನ್ನ ವಾಗ್ದಾನದಿಂದ ಹಿಂದೆ ಸರಿದಿದೆ. ಯಾಕೆಂದರೆ, ಜಮ್ಮು-ಕಾಶ್ಮೀರದ ಮೇಲಿನ 370ನೇ ವಿಧಿಯನ್ನು ರದ್ದುಗೊಳಿಸಿರುವುದೇ ಅಲ್ಲಿನ ಪ್ರಾಕೃತಿಕ ಸಂಪನ್ಮೂಲಗಳನ್ನು ಬೃಹತ್ ಉದ್ಯಮಿಗಳಿಗೆ ಮಾರಾಟ ಮಾಡಲು. ಇತ್ತೀಚೆಗೆ ಮಾಧ್ಯಮಗಳು ಬಹಿರಂಗಪಡಿಸಿದಂತೆ ಸುಮಾರು 825 ಕೋಟಿ ರೂ. ಚುನಾವಣಾ ಬಾಂಡ್‌ಗಳು ಬಂದಿರುವುದು ಮೈನಿಂಗ್ ಲಾಬಿಗಳಿಂದ. ಇವರು ಸರಕಾರಕ್ಕೆ ಸುಖಾಸುಮ್ಮನೆ ಈ ದೇಣಿಗೆಯನ್ನು ನೀಡಿರುವುದಿಲ್ಲ. ಜಮ್ಮು-ಕಾಶ್ಮೀರದಲ್ಲಿರುವ ಅಪಾರ ಪ್ರಾಕೃತಿಕ ಸಂಪನ್ಮೂಲಗಳನ್ನು ಅಲ್ಲಿನ ಸ್ಥಳೀಯರಿಂದ ಕಿತ್ತುಕೊಳ್ಳಲು ಕಾರ್ಪೊರೇಟ್ ಸಂಸ್ಥೆಗಳು ಹಲವು ದಶಕಗಳಿಂದ ಹೊಂಚು ಹಾಕಿದ್ದವು. ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಿತ್ತುಕೊಳ್ಳುವ ಮೂಲಕ ಕಾಶ್ಮೀರವನ್ನು ಸಂಪೂರ್ಣ ಭಾರತದ ಭಾಗವಾಗಿಸಿದ್ದೇವೆ ಎನ್ನುವ ಘೋಷಣೆಯ ಅಸಲಿಯತ್ತು ಈಗ ಬಯಲಾಗುತ್ತಿದೆ. ಕಾಶ್ಮೀರವನ್ನು ಸ್ಥಳೀಯ ಬುಡಕಟ್ಟು ಜನರ ಕೈಯಿಂದ ಬೃಹತ್ ಗಣಿ ಉದ್ಯಮಿಗಳಿಗೆ ಒಪ್ಪಿಸಿ, ಹಿಮಾಲಯ ತಪ್ಪಲು ಪ್ರದೇಶದ ಪರಿಸರವನ್ನು ಅಸ್ತವ್ಯಸ್ತಗೊಳಿಸುವುದು ಕೇಂದ್ರ ಸರಕಾರದ ಅಂತಿಮ ಗುರಿಯಾಗಿತ್ತು. ಇದು ಮನವರಿಕೆಯಾಗುತ್ತಿದ್ದಂತೆಯೇ ಲಡಾಖ್‌ನ ಜನರು ಕೇಂದ್ರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಲಡಾಖ್‌ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ನೀಡಬೇಕು ಮಾತ್ರವಲ್ಲ ಬುಡಕಟ್ಟು ಪ್ರದೇಶದ ವಿಶೇಷ ಸ್ಥಾನಮಾನವನ್ನು ಮರಳಿಸಬೇಕು ಎಂದು ಆಗ್ರಹಿಸುತ್ತಿದ್ದಾರೆ. ಅದನ್ನು ಈಡೇರಿಸಿದ್ದೇ ಆದರೆ ಕೇಂದ್ರ ಸರಕಾರದ ಈವರೆಗಿನ ಎಲ್ಲ ಶ್ರಮ ವ್ಯರ್ಥವಾಗುತ್ತದೆ. ಆದುದರಿಂದಲೇ, ಅಮಿತ್ ಶಾ ಲಡಾಖ್‌ನ ಕೂಗಿಗೆ ಕಿವುಡಾಗಿದ್ದಾರೆ.

ಲಡಾಖ್‌ನಲ್ಲಿ ಸಾವಿರಾರು ಜನರ ಪ್ರತಿಭಟನೆ ಜಮ್ಮು-ಕಾಶ್ಮೀರದ ಸ್ಥಿತಿಯನ್ನು ಇನ್ನಷ್ಟು ಗಂಭೀರಗೊಳಿಸಿದೆ. ಜಮ್ಮು-ಕಾಶ್ಮೀರ ಭಾರತಕ್ಕೆ ಪೂರ್ಣ ಪ್ರಮಾಣದಲ್ಲಿ ಸೇರ್ಪಡೆಗೊಂಡಿದೆಯಾದರೆ, ಅಲ್ಲಿನ ಜನರ ಉಪವಾಸ ಸತ್ಯಾಗ್ರಹಕ್ಕೆ ಭಾರತ ಸರಕಾರ ತಕ್ಷಣ ಸ್ಪಂದಿಸಬೇಕಾಗಿತ್ತು. 80ರ ದಶಕದಲ್ಲಿ ಇದೇ ಸೋನಂ ವಾಂಗ್ ಚುಕ್ ಅವರ ತಂದೆಯ ನೇತೃತ್ವದಲ್ಲಿ 17 ದಿನಗಳ ಉಪವಾಸ ಸತ್ಯಾಗ್ರಹ ನಡೆದಾಗ, ಪ್ರಧಾನಿ ಇಂದಿರಾಗಾಂಧಿ ಸ್ವತಃ ಧಾವಿಸಿ ಅವರ ಬೇಡಿಕೆಗಳಿಗೆ ಸ್ಪಂದಿಸಿದ್ದರು. ಆದರೆ, ಲಡಾಖ್‌ನ ಉಳಿವಿನ ದೃಷ್ಟಿಯಿಂದ ಇಲ್ಲಿ ಸಾವಿರಾರು ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದರೂ ಸರಕಾರ ಸ್ಪಂದಿಸುತ್ತಿಲ್ಲವಾದರೆ, ಲಡಾಖ್ ಭಾರತಕ್ಕೆ ಪೂರ್ಣ ಪ್ರಮಾಣದಲ್ಲಿ ಸೇರ್ಪಡೆಯಾಗಿದೆ ಎಂಬ ಪ್ರಧಾನಿ ಮೋದಿಯ ಹೇಳಿಕೆಯನ್ನು ನಂಬುವುದು ಹೇಗೆ? ಲಡಾಖ್ ಭೂಪ್ರದೇಶವನ್ನು ಬೃಹತ್ ಗಣಿ ಉದ್ಯಮಿಗಳಿಗೆ ಒಪ್ಪಿಸಿ, ಅಲ್ಲಿನ ಜನರನ್ನು ಕಣಿವೆಯ ಪ್ರಪಾತಕ್ಕೆ ತಳ್ಳುವ ಭಾಗವಾಗಿ ಆ ರಾಜ್ಯದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲಾಯಿತೇ ಎನ್ನುವ ಪ್ರಶ್ನೆಯನ್ನು ಲಡಾಖ್ ಜನರು ಕೇಳುತ್ತಿದ್ದಾರೆ. ಜನರ ಈ ಹೆಪ್ಪುಗಟ್ಟಿದ ಆಕ್ರೋಶ ಕರಗಿ ಬೃಹತ್ ಪ್ರವಾಹವಾಗುವ ಮುನ್ನ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳಬೇಕಾಗಿದೆ. ಕಣಿವೆಯ ಕೂಗಿಗೆ ಕಿವಿಯಾಗಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News