×
Ad

ಸಿಹಿ ಕೊಡಬೇಕಾದ ಕಬ್ಬು ರೈತರ ಪಾಲಿಗೆ ಕಹಿಯಾದರೆ?

Update: 2025-11-08 09:15 IST

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಬೆಂಗಳೂರಿನ ಜನರಿಗೆ ಬೆಳಗಾವಿ ನೆನಪಾಗಬೇಕಾದರೆ, ಗಡಿಭಾಗದಲ್ಲಿ ಮರಾಠಿಗರು ಭಾಷೆಯ ಹೆಸರಿನಲ್ಲಿ ದಾಂಧಲೆಗಳನ್ನು ಮಾಡಬೇಕು. ಮರಾಠಿಗರು ತಂಟೆ ಮಾಡಿದಾಗಲೆಲ್ಲ ‘ಬೆಳಗಾವಿ ನಮ್ಮದು’ ಎನ್ನುವುದು ಕರ್ನಾಟಕಕ್ಕೆ ನೆನಪಾಗುತ್ತದೆ. ಕನ್ನಡ ಸಂಘಗಳು, ಹೋರಾಟಗಾರರು ಕನ್ನಡ ಧ್ವಜಗಳ ಜೊತೆಗೆ ಬೆಳಗಾವಿಯ ಕಡೆಗೆ ಧಾವಿಸುತ್ತಾರೆ. ಕೆಲವು ದಿನಗಳಿಂದ ಬೆಳಗಾವಿಯ ರೈತರು ವಿವಿಧ ಬೇಡಿಕೆಗಳನ್ನು ಇಟ್ಟುಕೊಂಡು ಅಹೋರಾತ್ರಿ ಧರಣಿ ನಡೆಸಿದ್ದಾರೆ. ಭಾಷೆಯ ವಿಷಯದಲ್ಲಿ ತೋರಿಸುವ ಆಸಕ್ತಿ ಬೆಳಗಾವಿ ರೈತರ ಮೂಲಭೂತ ಬೇಡಿಕೆಗಳಿಗೆ ಸ್ಪಂದಿಸುವ ವಿಷಯದಲ್ಲಿ ರಾಜಧಾನಿಯಿಂದ ವ್ಯಕ್ತವಾಗಿಲ್ಲ. ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ ನಿಜವೇ ಆಗಿದ್ದರೆ, ಅಲ್ಲಿನ ರೈತರ ಸಮಸ್ಯೆಯೂ ಈ ನಾಡಿನ ಸಮಸ್ಯೆಯೆಂದು ಪರಿಗಣಿಸಿ ಅದಕ್ಕೆ ಸ್ಪಂದಿಸಬೇಕು. ಆದರೆ ಈ ವಿಷಯದಲ್ಲಿ ಕರ್ನಾಟಕ ಕೇಂದ್ರದ ಕಡೆಗೆ ಕೈ ತೋರಿಸಿದರೆ, ಕೇಂದ್ರ ಬಾಯಿಗೆ ಹೊಲಿಗೆ ಹಾಕಿ ಕೂತಿದೆ. ಆರಂಭದಲ್ಲಿ ರಾಜ್ಯ ಸರಕಾರ ಸಮಸ್ಯೆಯನ್ನು ಸಂಪೂರ್ಣ ಕೇಂದ್ರದ ತಲೆಗೆ ಕಟ್ಟಿ ಪಾರಾಗಲು ಹವಣಿಸಿತು. ಇದಾದ ಬಳಿಕ, ಕಾರ್ಖಾನೆಗಳು ನಷ್ಟದಲ್ಲಿರುವುದರ ಕಡೆಗೆ ಬೆರಳು ತೋರಿಸಿತು. ಆದರೆ ಪ್ರತಿಭಟನೆ ಕಾವೇರುತ್ತಿದ್ದಂತೆಯೇ ಮುಖ್ಯಮಂತ್ರಿ ಮಾತುಕತೆೆ ನಡೆಸಿದ್ದಾರೆ. ರೈತರ ಜೊತೆಗಿನ ಮಾತುಕತೆ ಭಾಗಶಃ ಯಶಸ್ವಿಯಾಗಿದ್ದು, ಬಹುತೇಕ ಬೇಡಿಕೆಗಳಿಗೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ. ರೈತರು ಪ್ರತಿಭಟನೆಯನ್ನು ಹಿಂದಕ್ಕೆ ತೆಗೆದುಕೊಳ್ಳುವ ಬಗ್ಗೆ ಯೋಚಿಸುತ್ತಿದ್ದಾರೆ.

ಕಬ್ಬು ಬೆಳೆಗಾಗಿ ಬೆಳಗಾವಿ ರಾಜ್ಯದಲ್ಲೇ ಮುಂಚೂಣಿಯಲ್ಲಿದೆ. ರಾಜ್ಯದ ಸಕ್ಕರೆಯ ಕಣಜ ಎಂದು ಗುರುತಿಸಲ್ಪಟ್ಟ ಜಿಲ್ಲೆ ಇದಾಗಿದೆ. ಇಲ್ಲಿನ ಕಬ್ಬು ಬೆಳೆಗಾರರ ಸಮಸ್ಯೆ ನೂರು ತರಹದ್ದು. ಮೂಲಭೂತವಾಗಿ ಕಬ್ಬು ಬೆಳೆಯೇ ಕೆಲವು ಸಂಕೀರ್ಣ ಸಮಸ್ಯೆಗಳೊಂದಿಗೆ ತಳಕು ಹಾಕಿಕೊಂಡಿದೆ. ಅದು ಅತಿ ಹೆಚ್ಚು ನೀರನ್ನು ಬೇಡುವ ಬೆಳೆಯಾಗಿದೆ. ಆ ಕಾರಣಕ್ಕಾಗಿ ಕಬ್ಬು ಬೆಳೆಗೆ ಪರ್ಯಾಯ ಬೆಳೆಯನ್ನು ಕಂಡು ಕೊಳ್ಳುವುದರ ಬಗ್ಗೆ ಈ ಹಿಂದೆಯೇ ಹಲವರು ಸಲಹೆ ಸೂಚನೆಗಳನ್ನು ನೀಡುತ್ತಾ ಬಂದಿದ್ದಾರೆ. ಇವುಗಳ ನಡುವೆಯೇ ಸಕ್ಕರೆ ಕಾರ್ಖಾನೆಗಳು ನಷ್ಟವನ್ನು ಎದುರಿಸುತ್ತಾ ಬರುತ್ತಿರುವುದರ ಹೊರೆಯನ್ನು ಮತ್ತೆ ರೈತರೇ ಹೊತ್ತುಕೊಳ್ಳಬೇಕಾಗಿದೆ. ರಾಜ್ಯದಲ್ಲಿ ಒಟ್ಟು 81 ಕಾರ್ಖಾನೆಗಳಿವೆ. ಇವುಗಳಲ್ಲಿ 11 ಸಹಕಾರಿ ಕಾರ್ಖಾನೆಗಳಾಗಿದ್ದರೆ ಒಂದು ಸರಕಾರಿ ಸ್ವಾಮ್ಯದ್ದಾಗಿದೆ. ಉಳಿದುದು ಖಾಸಗಿ ಸಕ್ಕರೆ ಕಾರ್ಖಾನೆಗಳಾಗಿವೆ. ಬೆಳಗಾವಿಯಲ್ಲಿ 30ಕ್ಕೂ ಅಧಿಕ ಕಾರ್ಖಾನೆಗಳಿವೆ. ಬೆಳಗಾವಿಯ ರೈತ ಹೋರಾಟಗಳನ್ನು ರೂಪಿಸಿರುವುದೇ ಕಬ್ಬು ಬೆಳೆಗಾರರು. 2000 ಇಸವಿಯಲ್ಲಾದ ಸಕ್ಕರೆ ಬೆಲೆಯ ಏರುಪೇರು ಕಬ್ಬು ಬೆಳೆಗಾರರ ಮೇಲೆ ತೀವ್ರ ಪರಿಣಾಮವನ್ನು ಬೀರಿತ್ತು. ಇಂದು ರಾಜ್ಯ ಸಹಕಾರಿ ಸ್ವಾಮ್ಯದಲ್ಲಿರುವ ಸಕ್ಕರೆ ಕಾರ್ಖಾನೆಗಳು 2024ರ ಹೊತ್ತಿಗೆ 2,500 ಕೋಟಿ ರೂ. ನಷ್ಟದಲ್ಲಿದೆ ಎಂದು ಸರಕಾರಿ ಅಂಕಿಅಂಶಗಳು ಹೇಳುತ್ತವೆ. ರೈತರ ದೊಡ್ಡ ಸಮಸ್ಯೆಯೆಂದರೆ, ಕಾರ್ಖಾನೆಗಳು ಕೋಟ್ಯಂತರ ರೂಪಾಯಿಯನ್ನು ರೈತರಿಗೆ ಬಾಕಿಯುಳಿಸಿರುವುದು. ಕಬ್ಬುಗಳನ್ನು ತೂಕ ಮಾಡುವಾಗ ವೈಜ್ಞಾನಿಕ ಮಾನದಂಡಗಳ ಕೊರತೆ, ಕನಿಷ್ಠ ಬೆಂಬಲ ಬೆಲೆ ನಿಗದಿ ಈ ಎಲ್ಲ ಗೊಂದಲಗಳು ಕಬ್ಬಿನ ರಸವನು ರೈತರ ಪಾಲಿಗೆ ಕಹಿಯಾಗಿಸಿವೆ. ಈ ಹಿಂದೆಯೂ ಅವರು ಬೇಡಿಕೆಗಳನ್ನು ಮುಂದಿಟ್ಟು ಹಲವು ಬಾರಿ ಪ್ರತಿಭಟನೆಗಳನ್ನು ಮಾಡಿದ್ದಾರೆ. 2014ರಲ್ಲಿ ಸುವರ್ಣ ಸೌಧದ ಮುಂದೆ ರೈತರ ಆತ್ಮಹತ್ಯೆ ಬೆದರಿಕೆಯ ಪರಿಣಾಮವಾಗಿ ಅಂದಿನ ಸರಕಾರ ಟನ್ಗೆ 165 ರೂಪಾಯಿ ಪ್ರೋತ್ಸಾಹ ಧನವನ್ನು ನೀಡಿತ್ತು.

ರಾಜ್ಯದ ಹಲವು ಪ್ರಮುಖ ಕಾರ್ಖಾನೆಗಳ ಹಿಡಿತ ರಾಜಕೀಯ ವ್ಯಕ್ತಿಗಳ ಕೈಯಲ್ಲಿವೆ. ಸಕ್ಕರೆಯನ್ನೇ ನೆಚ್ಚಿಕೊಂಡ ಕಾರ್ಖಾನೆಗಳು ನಷ್ಟದಲ್ಲಿವೆಯಾದರೂ, ಇದೀಗ ಕಬ್ಬುಗಳಿಂದ ಎಥೆನಾಲ್ ಸೇರಿದಂತೆ ಪರ್ಯಾಯ ಉತ್ಪನಗಳನ್ನು ಅರಸುತ್ತಿರುವ ಖಾಸಗಿ ಕಾರ್ಖಾನೆಗಳು ರೈತರ ಜೊತೆಗೆ ಕಣಾಮುಚ್ಚಾಲೆ ಆಟ ಆಡುತ್ತಿವೆ ಎನ್ನುವ ಆರೋಪಗಳಿವೆ. ಸರಕಾರ ದೃಢ ನಿರ್ಧಾರವನ್ನು ತೆಗೆದುಕೊಳ್ಳಲು ಸರಕಾರದೊಳಗಿರುವ ಜನಪ್ರತಿನಿಧಿಗಳೇ ಅವಕಾಶ ನೀಡುತ್ತಿಲ್ಲ ಎನ್ನುವ ಆರೋಪದಲ್ಲಿ ಸತ್ಯಾಂಶವಿದೆ. ಇದೇ ಸಂದರ್ಭದಲ್ಲಿ ಬಿಜೆಪಿ ನಾಯಕರು ಕಬ್ಬು ಬೆಳೆಗಾರರಿಗೆ ಹುಸಿ ಬೆಂಬಲವನ್ನಷ್ಟೇ ಪ್ರಕಟ ಪಡಿಸುತ್ತಿದ್ದಾರೆ. ಅವರಿಗೆ ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವುದು ಬೇಕಾಗಿದೆಯೇ ಹೊರತು, ಬೆಳೆಗಾರರಿಗೆ ನ್ಯಾಯ ನೀಡುವುದಲ್ಲ. ಯಾಕೆಂದರೆ, ಬೆಳೆಗಾರರಿಗೆ ‘ನ್ಯಾಯ ಸಮ್ಮತ ಮತ್ತು ಪ್ರೋತ್ಸಾಹದಾಯಕ ದರ (ಎಫ್ಆರ್ಪಿ)ಯನ್ನು ಏರಿಸುವ ಅಧಿಕಾರ ಕೇಂದ್ರ ಸರಕಾರದ ವ್ಯಾಪ್ತಿಗೆ ಬರುತ್ತದೆ. ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಂಡರೆ ರಾಜ್ಯ ಸರಕಾರ ಪೂರಕವಾಗಿ ದರವನ್ನು ಸೇರಿ ರೈತರಿಗೆ ನೆರವಾಗಬಹುದು. ಆದರೆ ಕೇಂದ್ರ ಸರಕಾರದ ಹೊಣೆಗಾರಿಕೆಯ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮೌನವಾಗಿದ್ದಾರೆ. ಎಲ್ಲ ಹೊರೆಯನ್ನು ರಾಜ್ಯ ಸರಕಾರದ ತಲೆಗೆ ಕಟ್ಟಲು ನೋಡುತ್ತಿದ್ದಾರೆ.

ಇದೀಗ ಸಿದ್ದರಾಮಯ್ಯ ಅವರು ರೈತರ ಬೇಡಿಕೆಗಳಿಗೆ ಸ್ಪಂದಿಸಿದ್ದಾರೆ. ರಾಜ್ಯ ಸರಕಾರ ಮತ್ತು ಕಾರ್ಖಾನೆ ಮಾಲಕರು ಜೊತೆಗೂಡಿ ತಲಾ 50 ರೂ. ಸೇರಿಸಿ ರೈತರಿಗೆ ಟನ್ ಕಬ್ಬಿಗೆ 3,300 ರೂಪಾಯಿಯನ್ನು ನೀಡಲು ಮುಂದಾಗಿದ್ದಾರೆ. ಸಕ್ಕರೆ ಕಾರ್ಖಾನೆಗಳಿಗೆ ಅನ್ವಯವಾಗುವಂತೆ ಕಟಾವು ಮತ್ತು ಸಾಗಾಟ ವೆಚ್ಚ ಹೊರತು ಪಡಿಸಿ ಶೇ. 11.25 ಇಳುವರಿ ಕಬ್ಬಿಗೆ 3, 250 ರೂ. ವನ್ನು ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕು. ಇದಕ್ಕೆ ಸರಕಾರ 50 ರೂ. ಹೆಚ್ಚುವರಿಯಾಗಿ ಪಾವತಿಸಲು ನಿರ್ಧರಿಸಿದೆ. ಇದೀಗ ಚೆಂಡು ಕೇಂದ್ರ ಸರಕಾರದ ಅಂಗಳದಲ್ಲಿದೆ. ರೈತರ ಬಗ್ಗೆ ಕೆಲವು ದಿನಗಳಿಂದ ಮೊಸಳೆ ಕಣ್ಣೀರು ಸುರಿಸುತ್ತಿರುವ ಬಿಜೆಪಿ ನಾಯಕರು ಮಾತನಾಡಬೇಕಾದ ಸಂದರ್ಭ ಬಂದಿದೆ. ಕರ್ನಾಟಕದ ಕಬ್ಬು ಬೆಳೆಗಾರರ ಸಂಕಷ್ಟಗಳಿಗೆ ಸ್ಪಂದಿಸುವಂತೆ ಬಿಜೆಪಿ ಸಂಸದರು ಕೇಂದ್ರ ಸರಕಾರಕ್ಕೆ ಒತ್ತಡಗಳನ್ನು ಹೇರಬೇಕು. ಕೇಂದ್ರದ ಬಳಿ ಸರ್ವ ಪಕ್ಷ ನಿಯೋಗವನ್ನು ಕೊಂಡೊಯ್ಯುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸರ್ವ ಪಕ್ಷ ನಿಯೋಗಕ್ಕೆ ಬಲ ತುಂಬಬೇಕಾದರೆ ವಿರೋಧ ಪಕ್ಷದ ನಾಯಕರು ಗಟ್ಟಿ ಧ್ವನಿಯಲ್ಲಿ ರೈತರ ಪರವಾಗಿ ಮಾತನಾಡಬೇಕು. ಮಹಾರಾಷ್ಟ್ರದ ರೈತರಿಗೆ ಕೇಂದ್ರ ಸರಕಾರ ತೋರಿಸಿದ ಉದಾರತನ ಕರ್ನಾಟಕಕ್ಕೂ ತೋರಿಸಬೇಕು ಎಂದು ಬಿಜೆಪಿ ನಾಯಕರು ಕೇಂದವನ್ನು ಆಗ್ರಹಿಸಬೇಕು. ಸದ್ಯಕ್ಕೆ ಬೆಳೆಗಾರರು ಮತ್ತು ಸರಕಾರದ ನಡುವಿನ ಸಂಘರ್ಷಕ್ಕೆ ವಿರಾಮ ಬಿದ್ದಿದೆ. ಆದರೆ, ಕಬ್ಬು ಬೆಳೆ ಎದುರಿಸುತ್ತಿರುವ ಸಮಸ್ಯೆಗಳಿಗೆ ಪೂರ್ಣಪ್ರಮಾಣದಲ್ಲಿ ಪರಿಹಾರವನ್ನು ಕಂಡುಕೊಳ್ಳಲು ಒಟ್ಟು ಕೃಷಿ ನೀತಿಯಲ್ಲೇ ಬದಲಾವಣೆಗಳಾಗಬೇಕಾಗಿದೆ. ಈ ಶಾಶ್ವತ ಪರಿಹಾರಕ್ಕೆ ದಾರಿ ಕಂಡುಕೊಳ್ಳಲು ಸರಕಾರ ಮತ್ತು ರೈತರು ಮತ್ತೊಮ್ಮೆ ಜೊತೆಯಾಗಿ ಕುಳಿತು ಕೊಳ್ಳುವ ಅಗತ್ಯ ಖಂಡಿತಾ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News