ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಲು ಅಮೆರಿಕ ಪ್ರಯತ್ನಿಸುತ್ತಿದೆ: ರಶ್ಯ ಆರೋಪ
ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ (PTI)
ಮಾಸ್ಕೊ: ಭಾರತದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಗಳಲ್ಲಿ ಹಸ್ತಕ್ಷೇಪ ನಡೆಸಲು ಹಾಗೂ ದೇಶದೊಳಗಿನ ಆಂತರಿಕ ರಾಜಕೀಯ ಪರಿಸ್ಥಿತಿಯನ್ನು ಏರುಪೇರು ಮಾಡಲು ಅಮೆರಿಕ ಪ್ರಯತ್ನಿಸುತ್ತಿದೆ ಎಂದು ರಶ್ಯ ಆರೋಪಿಸಿದೆ. ಖಲಿಸ್ತಾನಿ ಪ್ರತ್ಯೇಕತಾವಾದಿ ಗುರ್ಪತ್ವಂತ್ ಸಿಂಗ್ ಪನ್ನುನ್ ವಿರುದ್ಧದ ವಿಫಲ ಹತ್ಯಾ ಪ್ರಯತ್ನದಲ್ಲಿ ಭಾರತೀಯ ಪ್ರಜೆಯ ಪಾತ್ರವಿದೆ ಎಂಬುದಕ್ಕೆ ಅಮೆರಿಕವಿನ್ನೂ ವಿಶ್ವಾಸಾರ್ಹ ಸಾಕ್ಷ್ಯ ಒದಗಿಸಬೇಕಿದೆ ಎಂದೂ ರಶ್ಯದ ವಿದೇಶಾಂಗ ಸಚಿವಾಲಯದ ವಕ್ತಾರೆ ಮರಿಯ ಝಖರೋವಾ ಮಾಧ್ಯಮ ವಿವರಣೆಯ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.
ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ ಕುರಿತ ಅಮೆರಿಕ ವರದಿಯನ್ನು ಉಲ್ಲೇಖಿಸಿದ ಝಖರೋವಾ, ಭಾರತದ ರಾಷ್ಟ್ರೀಯ ಮನಸ್ಥಿತಿ ಹಾಗೂ ಇತಿಹಾಸವನ್ನು ಅರ್ಥ ಮಾಡಿಕೊಳ್ಳುವಲ್ಲಿ ಅಮೆರಿಕ ವಿಫಲವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಅಮೆರಿಕವು ಧಾರ್ಮಿಕ ಸ್ವಾತಂತ್ರ್ಯದ ಕುರಿತು ಪತ್ತೆಯಾಗದ ಆರೋಪಗಳನ್ನು ಮುಂದುವರಿಸಿದ್ದು, ಇದು ಭಾರತಕ್ಕೆ ತೋರುವ ಅಗೌರವವಾಗಿದೆ ಎಂದು ಹೇಳಿದ್ದಾರೆ ಎಂದು ಝಖರೋವಾರನ್ನು ಉಲ್ಲೇಖಿಸಿ RT News ಸುದ್ದಿ ಸಂಸ್ಥೆ ವರದಿ ಮಾಡಿದೆ.
"ಅಮೆರಿಕದ ಈ ಆರೋಪಗಳ ಹಿಂದಿನ ಉದ್ದೇಶ ಭಾರತದಲ್ಲಿನ ಆಂತರಿಕ ರಾಜಕೀಯವನ್ನು ಏರುಪೇರು ಮಾಡಿ, ಸಾರ್ವತ್ರಿಕ ಚುನಾವಣೆಯನ್ನು ಸಂಕೀರ್ಣಗೊಳಿಸುವುದಾಗಿದೆ" ಎಂದೂ ಝಕರೋವಾ ಆರೋಪಿಸಿದ್ದಾರೆ.
ಭಾರತವು ಧಾರ್ಮಿಕ ಸ್ವಾತಂತ್ರ್ಯ ಹಾಗೂ ಇನ್ನಿತರ ವಿಷಯಗಳನ್ನು ಉಲ್ಲಂಘಿಸುತ್ತಿದೆ ಎಂದು ತನ್ನ ಇತ್ತೀಚಿನ ವರದಿಯಲ್ಲಿ ಅಮೆರಿಕ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು ಟೀಕಿಸಿತ್ತು.