ಕೋವಿಡ್ ಲಸಿಕೆ ಕುರಿತ ಆಸ್ಟ್ರಝೆನೆಕ ಹೇಳಿಕೆಯಲ್ಲಿ ಹೊಸದೇನೂ ಇಲ್ಲ: ಭಾರತದ ವೈದ್ಯರ ಹೇಳಿಕೆ
"ಈ ಎಚ್ಚರಿಕೆ ಬಗ್ಗೆ ನಮಗೆ ಮೊದಲೇ ಅರಿವು ಇದೆ"
PC : NDTV
ಹೊಸದಿಲ್ಲಿ: ಕೋವಿಡ್-19 ವಿರುದ್ಧದ ಲಸಿಕೆಯು ರಕ್ತ ಹೆಪ್ಪುಗಟ್ಟುವಿಕೆಗೆ ಸಂಬಂಧಿಸಿದ ಅಪರೂಪದ ಅಡ್ಡ ಪರಿಣಾಮದ ಸಾಧ್ಯತೆಯನ್ನು ಹೊಂದಿದೆ ಎಂದು ಲಸಿಕೆ ಉತ್ಪಾದನಾ ಸಂಸ್ಥೆಯಾದ ಆಸ್ಟ್ರಝೆನೆಕ ಬ್ರಿಟನ್ ಕೋರ್ಟ್ನಲ್ಲಿ ಹೇಳಿಕೆ ನೀಡಿರುವುದರಲ್ಲಿ ಹೊಸದೇನೂ ಇಲ್ಲ ಎಂದು ಭಾರತದ ಪ್ರಮುಖ ವೈದ್ಯರು ಹೇಳಿದ್ದಾರೆ.
ಈ ಎಚ್ಚರಿಕೆ ಬಗ್ಗೆ ನಮಗೆ ಮೊದಲೇ ಅರಿವು ಇದೆ. ಭಾರತದಲ್ಲಿ ಈ ಲಸಿಕೆಯನ್ನು ಸಾರ್ವಜನಿಕ ಬಳಕೆಗೆ ಬಿಡುಗಡೆ ಮಾಡಿದ ದಿನದಿಂದಲೂ ಈ ಬಗ್ಗೆ ಮಾಹಿತಿ ಇತ್ತು ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಲಸಿಕೆ ಕುರಿತ ಯಾವುದೇ ಅಡ್ಡ ಪರಿಣಾಮಗಳು ಮೊದಲ ಡೋಸ್ ಪಡೆದ 21 ದಿನಗಳಿಂದ ಒಂದು ತಿಂಗಳ ಒಳಗಾಗಿ ಕಾಣಿಸಿಕೊಳ್ಳುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಬ್ರಿಟನ್ನ ದ ಡೈಲಿ ಟೆಲಿಗ್ರಾಫ್ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ, ಲಂಡನ್ ಹೈಕೋರ್ಟ್ಗೆ ಸಲ್ಲಿಸಲಾದ ಕಾನೂನಾತ್ಮಕ ದಾಖಲೆಯಲ್ಲಿ, ಕೋವಿಡ್-19 ವಿರುದ್ಧದ ಈ ಲಸಿಕೆ ತೀರಾ ಅಪರೂಪದ ಪ್ರಕರಣಗಳಲ್ಲಿ ಟಿಟಿಎಸ್ (ಥ್ರಂಬೋಸಿಸ್ ವಿದ್ ಥ್ರಂಬೊಸೈಟೋಪೇನಿಯಾ ಸಿಂಡ್ರೋಮ್) ಗೆ ಕಾರಣವಾಗುವ ಸಾಧ್ಯತೆ ಇದೆ ಎಂದು ಆಸ್ಟ್ರಝೆನೆಕ ಒಪ್ಪಿಕೊಂಡಿದೆ ಎಂದು ವಿವರಿಸಲಾಗಿತ್ತು.
ಈ ಕುರಿತು ದಾವೆ ಹೂಡಿದ 51 ಮಂದಿ, ಕೋವಿಡ್ ಸೋಂಕಿಗೆ ಲಸಿಕೆ ಪಡೆದ ಬಳಿಕ ಟಿಟಿಎಸ್ ಸಮಸ್ಯೆಯಿಂದ ಬಳಲುತ್ತಿರುವುದಾಗಿ ವಿವರಿಸಿದ್ದರು. ಟಿಟಿಎಸ್ ಪರಿಣಾಮವಾಗಿ ಪಾಶ್ರ್ವವಾಯು, ಮೆದುಳು ಹಾನಿ, ಹೃದಯಾಘಾತ ಮತ್ತಿತರ ಮಾರಣಾಂತಿಕ ಅಸ್ವಸ್ಥತೆಯ ಸಾಧ್ಯತೆ ಇರುತ್ತದೆ.
ಭಾರತದಲ್ಲಿ ಈ ಲಸಿಕೆಯನ್ನು ಕೋವಿಶೀಲ್ಡ್ ಹೆಸರಿನಲ್ಲಿ ನೀಡಲಾಗಿತ್ತು. ಈ ಅಡ್ಡ ಪರಿಣಾಮದ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ಲಸಿಕೆ ಉತ್ಪಾದನೆ ಮಾಡಿದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮಂಗಳವಾರ ಪ್ರತ್ಯೇಕ ಹೇಳಿಕೆ ನೀಡಿದ್ದವು.