ಜಾತಿಯೆಂಬ ಕಗ್ಗತ್ತಲ ಕೂಪದೊಳಗೆ...
ಭಾರತದ ಶ್ರೇಣೀಕರಣ ವ್ಯವಸ್ಥೆಯು ಮೇಲ್ಮುಖ ಚಲನೆಯಿಂದ ಕೆಳಮುಖವಾದ ಜಾತಿ ವ್ಯವಸ್ಥೆ ಕಟ್ಟಳೆ ರೂಪಿಸಿ ಸಮಾಜದ ಅತ್ಯುನ್ನತ ಸ್ಥಾನಕ್ಕೆ ನಮ್ಮ ಆಚರಣೆಗಳೇ ಮಾದರಿಯೆಂದು ಬಿಂಬಿಸಿ ಬಹುಸಂಖ್ಯಾತ ಜನರನ್ನು ಕಾರ್ಗತ್ತಲ ಕೂಪದಲ್ಲಿ ಕೂರಿಸಿದ್ದಾರೆ. ಇಂತಹ ಚರಿತ್ರೆಯನ್ನರಿಯದ ತಳ ಸಮುದಾಯದವರು ಅಂಬೇಡ್ಕರ್ರವರ ಹೋರಾಟ ಫಲದಿಂದ ಅಲ್ಪಆರ್ಥಿಕ ಸುಸ್ಥಿತಿಯನ್ನು ಪಡೆದು ಈ ಅಲ್ಪತೃಪ್ತಿಯೇ ಅಂತಿಮವೆಂದು ಬಗೆದು ಕೆಳ ಜಾತಿಯ ಜೀವನ ಕ್ರಮ, ಆಹಾರ ಪದ್ಧ್ದತಿಯಿಂದ ವಿಮುಕ್ತರಾಗಿ ದ್ವಿಜರ ಜೀವನ ಕ್ರಮ, ಆಹಾರ ಪದ್ಧತಿಗಳನ್ನು ‘ಮಾದರಿ’ ಎಂದು ಪರಿಗಣಿಸಿ ಈ ಜೀವನ ಕ್ರಮದಿಂದ ಜಾತಿಯ ಮೇಲ್ಮುಖ ಚಲನೆಗೆ ಹಾತೊರೆಯುತ್ತಿರು ವವರ ಭ್ರಮೆಯನ್ನು ಕಂಡು ಕನಿಕರ ಪಡಬೇಕಾಗಿದೆ.
ಒಂದೊಮ್ಮೆ ಜಾತಿ ರಕ್ಕಸನ ವಿರುದ್ಧ ಬಂಡೆದ್ದವರು ಜಾತಿ ಉಪಜಾತಿಗಳಾಗಿ ಛಿದ್ರವಾಗುತ್ತಿದ್ದಾರೆ.ಈ ಜಾತಿ ಹಿಂದೆಂದಿಗಿಂತಲೂ ಇಂದು ರೂಪಾಂತರ ಪಡೆದು ಪೆಡಂಬೂತವಾಗಿ ಆವರಿಸುತ್ತಿರುವುದು ಹೇಗೆ? ನಮ್ಮ ಮಾನಸಿಕ ಸಂರಚನೆಗಳಲ್ಲಿ ತೊಡಕಿದಿಯಾ ?ನಾವು ಪಡೆದ ಶಿಕ್ಷಣ ಪದ್ಧ್ದತಿಯಲ್ಲಿ ದೋಷವಿದೆಯಾ?ಹೀಗೆ ಪ್ರಶ್ನೆಗಳ ಪಟ್ಟಿ ಬೆಳೆಯುತ್ತಾ ನಮ್ಮನ್ನು ಆತಂಕಕ್ಕೆ ತಳ್ಳುತ್ತದೆ.
ಡಾ॥
ಪರಂಪರಾಗತವಾಗಿ ಜಾತಿ ವ್ಯವಸ್ಥೆಯನ್ನು ಗಟ್ಟಿಮಾಡಿಕೊಂಡು ಬಂದಿರುವ ಬ್ರಾಹ್ಮಣ ಶಾಹಿಗಳು ಸ್ವಜಾತಿ ಪದ್ಧ್ದತಿ ಕಟ್ಟಳೆಯನ್ನು ಶಿರಸಾವಹಿಸಿ ಪಾಲಿಸಲು ಎಂತಹ ನೀಚ ಕೃತ್ಯಕ್ಕಾದರೂ ಹೇಸದಿರುವುದು ಅವರ ತಂತ್ರಗಳಿಂದ ತಿಳಿಯಬಹುದಾಗಿದೆ.
ಹಿಂದೂ ಸಮಾಜದಲ್ಲಿನ ನೀಚ ಪದ್ಧತಿಗಳಾದ ಸತಿ ಪದ್ದತಿ, ವಿಧವಾ ಪದ್ದತಿ, ಬಾಲ್ಯ ವಿವಾಹಗಳಂತಹ ಸಾಮಾಜಿಕ ಪಿಡುಗುಗಳನ್ನು ಹೇರುವ ದುಸ್ಸಾಹಸ ಕ್ರಮದ ಬಗ್ಗೆ ಅಂಬೇಡ್ಕರ್ ತಮ್ಮ ಪ್ರಬಂಧದಲ್ಲಿ ವಿಶ್ಲೇಷಣಾತ್ಮಕವಾಗಿ ವಿವರಿಸುತ್ತಾರೆ.
ಹೆಂಡತಿ ಸತ್ತವನು ತನ್ನ ಲೈಂಗಿಕ ತೃಷೆಯನ್ನು ತೀರಿಸಿಕೊಳ್ಳಲು ಬೇರೆ ಜಾತಿಯ ಹೆಣ್ಣನ್ನು ಕೂಡುವು ದನ್ನು ತಪ್ಪಿಸಲು ಬ್ರಹ್ಮಚರ್ಯ ಸ್ವೀಕರಿಸುವುದು. ಸಾಧ್ಯವಿಲ್ಲವೆಂದರೆ ಅವನು ಕುಟುಂಬದ ಮುಖ್ಯಸ್ಥ ನಾಗಿ ಸ್ವಜಾತಿ ಪದ್ಧ್ದತಿ ಪಾಲಿಸುವ ಹೊಣೆಗಾರಿಕೆ ಇರುವುದರಿಂದ (ಬಹುಶಃ ಪುರುಷ ಪ್ರಧಾನ ಸಮಾಜ ಪೋಷಿಸುವುದರಿಂದ) ಅಪ್ರಾಪ್ತ ವಯಸ್ಕಳೊಂದಿಗೆ ವಿವಾಹ ಮಾಡುವುದರ ಮೂಲಕ ಬಾಲ್ಯ ವಿವಾಹ ಆಚರಣೆ ತಂದಿರಬಹುದೆಂಬ ಶಂಕೆಯನ್ನು ಅಂಬೇಡ್ಕರ್ ವ್ಯಕ್ತಪಡಿಸುತ್ತಾರೆ.ಆದರೆ ಗಂಡನನ್ನು ಕಳಕಂಡ ಹೆಣ್ಣಿಗೆ ಕಡ್ಡಾಯ ವೈಧವ್ಯ ಪದ್ಧ್ದತಿ ಹೇರುವುದು, ಕಾಲಾನುಕ್ರಮದಲ್ಲಿ ಗಂಡನ ಚಿತೆಗೆ ಒತ್ತಾಯ ಪೂರಕವಾಗಿ ದೂಡುವ ನೀಚ ಕೆಲಸವನ್ನು ಎಗ್ಗಿಲ್ಲದಂತೆ ಮಾಡಿ ಇದನ್ನು ಹೆಣ್ಣು ಸ್ವಯಂಪ್ರೇರಿತಳಾಗಿ ಬೀಳುವುದೆಂದು ಹುಸಿ ಪತಿವ್ರತೆ ಕಟ್ಟುಕತೆಯನ್ನು ಬಿಂಬಿಸಿರುವ ಸಂಗತಿಗಳು ಚರಿತ್ರೆಯಿಂದ ತಿಳಿದಿದೆ.
ಇಂತಹ ಜಾತೀಯ ಅಂಟುಜಾತಿಗಳನ್ನು ಕಾಲಾನುಕ್ರಮದಲ್ಲಿ ಆಯಾ ಕಾಲಘಟ್ಟದಲ್ಲಿ ವೈದಿಕರು ಸಂರಕ್ಷಿಸುತ್ತಾ ಬಂದಿರುವುದು ‘ಬ್ರಾಹ್ಮಣ್ಯ’ಕ್ಕೆ ಒಳಪಟ್ಟಿರುವವರಿಗೆ ತಿಳಿಯದೇ ಇರುವುದು ಸೋಜಿಗವಾಗಿದೆ. ಬಲಪಂಥೀಯ ಸಂಘಟನೆಗಳು ವಿಸ್ತಾರವಾಗಿ ಬೆಳೆಯುತ್ತಿರುವ ಇಂತಹ ಸಂದರ್ಭದಲ್ಲಿ ದಲಿತರು ಜಾತಿ ಉಪಜಾತಿಗಳಾಗಿ ವಿಘಟನೆಗೊಳ್ಳುತ್ತಿರುವುದು ನಮ್ಮೆಲ್ಲರ ದುರಂತ.