ತಮಿಳುನಾಡು ರಾಜಕೀಯದಲ್ಲಿ ಮುಂದುವರಿದ ಚದುರಂಗದಾಟ..!
ಭಾಜಪ ಮತ್ತು ಡಿಎಂಕೆ ನೇತೃತ್ವದ ಮೈತ್ರಿಕೂಟಕ್ಕೆ ನಾಮಪತ್ರ ಸಲ್ಲಿಸುವ ದಿನಾಂಕ ಸಮೀಪಿಸುವ ಮುಂಚೆಯೇ ದೊಡ್ಡದೊಂದು ಆಘಾತ ಏರ್ಪಟ್ಟಿದೆ. ಕಳೆದ ವಾರವಷ್ಟೇ ಡಿಎಂಕೆ ಜೊತೆಗಿನ ಮೈತ್ರಿ ಮಾತುಕತೆಗಳಿಂದ ಹೊರನಡೆದು ಡಿಎಂಕೆವಲಯದಲ್ಲಿ ಭಾರೀ ನಿರಾಸೆಯನ್ನೂ, ಭಾಜಪದಲ್ಲೊಂದಿಷ್ಟು ಆಶಾಕಿರಣವನ್ನು ಮೂಡಿಸಿದ್ದ ನಟ ವಿಜಯಕಾಂತ್ ಅವರ ಡಿಎಂಡಿಕೆ ಇದೀಗ ಪೀಪಲ್ಸ್ ವೆಲ್ಫೇರ್ ಫ್ರಂಟ್ ಜೊತೆಗೆ ಮೈತ್ರಿ ಮಾಡಿಕೊಂಡು ಎರಡೂ ಪಕ್ಷಗಳಿಗೂ ಬಾರಿ ನಿರಾಸೆಯನ್ನುಂಟು ಮಾಡಿದೆ. ಇದೀಗ ಡಿಎಂಡಿಕೆಜೊತೆ ಮೈತ್ರಿಮಾಡಿಕೊಂಡಿರುವ ಪಿಡಬ್ಲ್ಯೂಎಫ್ ತೀರಾ ಹಳೆಯ ಮೈತ್ರಿಕೂಟವೇನಲ್ಲ, ಬದಲಿಗೆ ಕಳೆದ ನವೆಂಬರ್ನಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಅದರೊಳಗೆ ವೈಕೊರವರ ಎಂಡಿಎಂಕೆ, ವಿಸಿಕೆ, ಮತ್ತು ಎರಡು ಎಡಪಕ್ಷಗಳಾದ ಸಿಪಿಎಂ ಹಾಗೂ ಸಿಪಿಐಗಳು ಸೇರಿವೆ. ಈ ಹೊಸ ಮೈತ್ರಿಯ ಪ್ರಕಾರ ಇರುವ ಒಟ್ಟು 134 ಸ್ಥಾನಗಳ ಪೈಕಿ ವಿಜಯಕಾಂತ್ ಅವರ ಡಿಎಂಡಿಕೆ 124 ಸ್ಥಾನಗಳಿಗೂ, ಪಿ.ಡಬ್ಕ್ಯೂ.ಎಫ್. ಉಳಿದ 110 ಸ್ಥಾನಗಳಿಗೂ ಸ್ಪರ್ಸುವ ನಿರ್ಧಾರಕ್ಕೆ ಬಂದಿವೆ.
ಡಿಎಂಕೆ ಈ ಬಾರಿ ವಿಜಯಕಾಂತರ ಜೊತೆ ಮೈತ್ರಿಗೆ ಶತಾಯಗತಾಯ ಪ್ರಯತ್ನ ನಡೆಸಿ ವಿಫಲವಾಯಿತು. ವಿಜಯಕಾಂತರ ಜನಪ್ರಿಯತೆ ಮತ್ತು ಜಾತಿ ಪರಿಗಣನೆಯನ್ನಿಟ್ಟುಕೊಂಡು ಲೆಕ್ಕಹಾಕಿದ್ದ ಡಿಎಂಕೆ ಅವರ ಸಹಯೋಗದೊಂದಿಗೆ ಸುಮಾರು 70 ರಿಂದ 80 ಸ್ಥಾನಗಳನ್ನು ಗೆಲ್ಲುವ ಲೆಕ್ಕಾಚಾರ ಹಾಕಿತ್ತು. ಆದರೆ ಮೈತ್ರಿ ಮಾತುಕತೆಯಿಂದ ಹಿಂದೆ ಸರಿದ ವಿಜಯ್ ಕಾಂತ್ ನಡೆ ಇದೀಗ ಡಿಎಂಕೆ ಪಾಳಯದಲ್ಲಿ ಆತಂಕ ಮೂಡಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಕರುಣಾನಿಯವರು ಡಿಎಂಡಿಕೆ ಮೈತ್ರಿಯಿಂದ ಹೊರಹೋಗಿರುವುದರಿಂದ ತಮ್ಮ ಪಕ್ಷದ ಗೆಲುವಿಗೆ ಯಾವ ತೊಂದರೆಯಿಲ್ಲವೆಂದು ಮುಖ ಉಳಿಸಿಕೊಳ್ಳುವ ಹೇಳಿಕೆ ನೀಡಿದ್ದರೂ ವಾಸ್ತವ ಬೇರೆಯೇ ಇದೆ. ಹೀಗೆ ಚುನಾವಣೆಗೂ ಮೊದಲೇ ಡಿಎಂಕೆಯ ಮಹತ್ವಾಕಾಂಕ್ಷೆಗೆ ತಣ್ಣೀರೆರಚಿದಂತಾಗಿದೆ.
ಸದರಿ ಮೈತ್ರಿಯ ಮಾತುಕತೆ ಮುರಿದು ಬಿದ್ದಾಗ ಭಾಜಪ ತುಂಬಾ ಸಂತೋಷಪಟ್ಟಿತ್ತು. ಯಾಕೆಂದರೆ ಎರಡೂ ದ್ರಾವಿಡ ಪ್ಷಗಳನ್ನು ತಿರಸ್ಕರಿಸಿ ಹೊರಬಂದ ವಿಜಯಕಾಂತ್ ಖಂಡಿತಾ ಭಾಜಪದೊಂದಿಗೆ ಮೈತ್ರಿ ಮಾಡಿಕೊಳ್ಳುತ್ತಾರೆಂಬ ಭಾರೀ ನಿರೀಕ್ಷೆಯಿಟ್ಟುಕೊಂಡಿತ್ತು. ಈ ಬಗ್ಗೆ ಚರ್ಚಿಸಲು ರಾಜ್ಯ ನಾಯಕತ್ವವನ್ನು ಬಳಸಿಕೊಳ್ಳದೆ ಸ್ವತಃ ಭಾಜಪದ ಅಧ್ಯಕ್ಷರಾದ ಅಮಿತ್ ಶಾ ರವರೇ ವಿಜಯಕಾಂತ್ ಜೊತೆ ಮಾತುಕತೆ ನಡೆಸಿದ್ದರು. ಆದರೆ ಪ್ರತಿಭಾವಂತ ನಟ ವಿಜಯಕಾಂತ್ ಸಿನಿಮೀಯ ಶೈಲಿಯಲ್ಲಿಯೇ ಮಾತುಕತೆಯನ್ನು ಮುರಿದು ಎಲ್ಲರ ಅಚ್ಚರಿಗೂ ಕಾರಣವಾಗುವಂತೆ ಪಿಡಬ್ಲ್ಯೂಎಫ್ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ತಮಿಳುನಾಡಿನ ರಾಜಕೀಯದಲ್ಲಿ ದ್ರಾವಿಡ ಪಕ್ಷಗಳ ಸಾರ್ವಭೌಮತೆ ಕಡಿಮೆಯಾಗುತ್ತಿದೆ ಮತ್ತು ಅವುಗಳ ಸ್ಥಾನದಲ್ಲಿ ತನ್ನ ಹಿಂದುತ್ವದ ಅಜೆಂಡಾ ಮೂಲಕ ಕಾಲೂರಿ ನಿಲ್ಲ ಬಹುದೆಂಬ ಭಾಜಪದ ಅತಿಯಾಸೆಗೆ ತಕ್ಷಣಕ್ಕಂತು ಕೊಡಲಿಯೇಟು ಬಿದ್ದಿದೆ. ಜೊತೆಗೆ ದ್ರಾವಿಡ ಪಕ್ಷಗಳನ್ನು ತೊರೆದರೂ ಭಾಜಪದಂತಹ ಹಿಂದಿಗೆ ಮಹತ್ವ ನೀಡುವ ಹಿಂದುತ್ವದ ಪಕ್ಷಕ್ಕೆ ಬೆಂಬಲ ನೀಡಿದರೆ ಈಗಿರುವ ತನ್ನ ನೆಲೆಯನ್ನೂ ಕಳೆದುಕೊಳ್ಳಬಹುದೆಂಬ ಅರಿವಿನಿಂದಲೇ ವಿಜಯಕಾಂತ್ ಅಂತಿಮವಾಗಿ ತಮಿಳು ಹಿತಾಸಕ್ತಿ ಕಡೆಗೆ ಹೆಚ್ಚು ಒಲವು ತೋರುವ ನಿರ್ಧಾರವನ್ನು ಕೈಗೊಂಡಿದ್ದಾರೆ. ಇದರಿಂದಾಗಿ ನಾನು ಮೊದಲೇ ಹೇಳದಂತೆ ತಮಿಳು ನಾಡಿನಲ್ಲೀಗ ಬಹುಕೋನ ಸ್ಪರ್ಧೆ ಏರ್ಪಟ್ಟಿದ್ದು ಇದರ ಲಾಭ ಹಾಲಿ ಮುಖ್ಯಮಂತ್ರಿಯಾದ ಕುಮಾರಿ ಜಯಲಲಿತಾರವರ ಎಐಎಡಿಎಂಕೆ ಪಕ್ಷಕ್ಕೆ ಆಗಬಹುದಾದ ನಿರೀಕ್ಷೆಯಿದೆ.