ಜಾತಿ ಗಣತಿ ಮಾಹಿತಿಯನ್ನು ಏಕೆ ಮರೆಮಾಚಲಾಗುತ್ತಿದೆ?
ಕಳೆದ ಫೆಬ್ರವರಿಯಲ್ಲಿ ಹರ್ಯಾಣದಲ್ಲಿ ಜಾಟ್ ಪ್ರತಿಭಟನೆ ಹೇಗೆ ಆರಂಭವಾಯಿತು ಎನ್ನುವುದು ವಿನೋದದ ಸಂಗತಿ. ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ರಾಷ್ಟ್ರೀಯತೆ ಮಾಯವಾಗಿದೆ ಎಂದು ಆಪಾದಿಸಿ ವಕೀಲರು ನಡೆಸುತ್ತಿದ್ದ ಪ್ರತಿಭಟನೆಯ ಅವಧಿಯಲ್ಲೇ, ಜಾಟ್ ಸಮುದಾಯ ಮೀಸಲಾತಿಗೆ ಆಗ್ರಹಿಸಿರುವುದನ್ನು ವಿರೋಧಿಸಿ ಇತರ ವರ್ಗದವರು ರೋಹ್ಟಕ್ನಲ್ಲಿ ಪ್ರತಿಭಟನೆ ನಡೆಸಿದರು.
ಈ ಗೊಂದಲದಲ್ಲಿ, ವಕೀಲರನ್ನು ಜಾಟ್ ಸಮುದಾಯದವರು ಎಂದು ತಪ್ಪಾಗಿ ಭಾವಿಸಿದ ಇತರ ವರ್ಗಗಳ ಮಂದಿ ಅವರ ಮೇಲೆ ಹಲ್ಲೆ ನಡೆಸಿದರು. ಆ ಬಳಿಕ ನಡೆದ ಎಲ್ಲವೂ ಕುಚೋದ್ಯದ ಸಂಗತಿ. ಇದು ಕಾಳ್ಗಿಚ್ಚಿನಂತೆ ಹರಡಿ, ಜಾಟ್ ಸಮುದಾಯ ಹಾಗೂ ಇತರರ ನಡುವೆ 15 ದಿನಗಳ ಭೀಕರ ಕದನಕ್ಕೆ ಕಾರಣವಾಯಿತು. 12 ಮಂದಿ ಮೃತಪಟ್ಟರೆ, ಒಬ್ಬ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. 20 ಸಾವಿರ ಕೋಟಿ ರೂ. ವೌಲ್ಯದ ಆಸ್ತಿಪಾಸ್ತಿಗೆ ಹಾನಿ ಉಂಟಾಯಿತು.
ಕಳೆದ ಜುಲೈನಲ್ಲಿ ಗುಜರಾತ್ನಲ್ಲಿ ಪಟೇಲ್ ಸಮುದಾಯದವರು ಕೂಡಾ ಇಂಥದ್ದೇ ಪ್ರತಿಭಟನೆ ನಡೆಸಿದರು. ಹಲವು ಮಂದಿ ಪೊಲೀಸರ ಜತೆ ಸಂಘರ್ಷಕ್ಕೆ ಇಳಿದರು.
ಎರಡೂ ಪ್ರಕರಣಗಳಲ್ಲಿ, ರಾಜ್ಯ ಸರಕಾರಗಳು ಹಿಂಸಾಚಾರಕ್ಕೆ ಮಣಿದವು. ಹರ್ಯಾಣದಲ್ಲಿ ಜಾಟ್ ಸಮುದಾಯಕ್ಕೆ ಶೇ. 10 ಮೀಸಲಾತಿ ಘೋಷಿಸಿದರೆ, ಗುಜರಾತ್ನಲ್ಲಿ ಎಲ್ಲ ಮೇಲ್ವರ್ಗಗಳ ಆರ್ಥಿಕವಾಗಿ ದುರ್ಬಲವಾಗಿರುವ ಮಂದಿಗೆ ಶೇಕಡ 10ರಷ್ಟು ಮೀಸಲಾತಿ ಅನುಷ್ಠಾನಗೊಳಿಸಲು ನಿರ್ಧರಿಸಲಾಯಿತು
ಜಾಟ್ ಹಾಗೂ ಪಟೇಲ್ ಎರಡೂ ಸಮುದಾಯಗಳೂ ಪ್ರಬಲ, ಭೂಮಾಲಕರ ಸಮುದಾಯದವರು. ಇಷ್ಟಾಗಿಯೂ ಹಿಂದುಳಿದ ವರ್ಗಗಳಿಗೆ ಸಿಗುವ ಸ್ಥಾನಮಾನಕ್ಕೆ ಒತ್ತಾಯಿಸಿದ್ದರು. ಈ ಬಗೆಯ ಸಮರ್ಥನೆಗಳು ಹಿಂಸಾತ್ಮಕವಾಗಿ ವ್ಯಕ್ತವಾಗುತ್ತಿದ್ದರೂ, ಕೇಂದ್ರ ಸರಕಾರ 2013ರಿಂದಲೇ ಸಾಮಾಜಿಕ- ಆರ್ಥಿಕ ಹಾಗೂ ಜಾತಿ ಗಣತಿಯ ಮೂಲಕ ಪಡೆದ ಜಾತಿಗಳ ಸಮೃದ್ಧತೆಯ ಮಾಹಿತಿಗಳನ್ನು ಬಹಿರಂಗಗೊಳಿಸಲಿಲ್ಲ. ಈ ಮಾಹಿತಿ ಖಂಡಿತವಾಗಿಯೂ, ಮೀಸಲಾತಿ ಹಂಚಿಕೆಗೆ ವಸ್ತುನಿಷ್ಠ, ಗಲಭೆ ರಹಿತ ಪರಿಹಾರವನ್ನು ಸೂಚಿಸುತ್ತಿತ್ತು. ಇಷ್ಟಾಗಿಯೂ ಮೇಲ್ವರ್ಗದ ಹಿತಾಸಕ್ತಿಗೆ ಅನುಗುಣವಾಗಿ ಮನಮೋಹನ ಸಿಂಗ್ ಸರಕಾರ ಹಾಗೂ ಆ ಬಳಿಕ ನರೇಂದ್ರ ಮೋದಿ ಸರಕಾರ, ಈ ಮಾಹಿತಿಗಳನ್ನು ಬಹಿರಂಗಪಡಿಸಲೇ ಇಲ್ಲ.
ಗಣತಿ ರಾಜಕೀಯ
ದೇಶದಲ್ಲಿ ಗಣತಿಯ ರಾಜಕೀಯಕ್ಕೆ ಸುದೀರ್ಘ ಇತಿಹಾಸವಿದೆ. ಲೆಕ್ಕಹಾಕುವ ವಿಧಾನವೇ ಕೆಲ ರಾಜಕೀಯ ಸಮುದಾಯಗಳ ಸೃಷ್ಟಿಗೆ ಸಹಕಾರಿಯಾಗುವಂಥದ್ದು. ಉದಾಹರಣೆಗೆ 1872ರ ಬಂಗಾಳ ಜನಗಣತಿಯಲ್ಲಿ, ಬೆಂಗಾಲಿ ಮುಸ್ಲಿಮರು ಈ ಪ್ರದೇಶದಲ್ಲಿ ಅತ್ಯಧಿಕ ಜನಸಂಖ್ಯೆ ಹೊಂದಿದ್ದಾರೆ ಎನ್ನುವ ಅಂಶ ಅಚ್ಚರಿಗೆ ಕಾರಣವಾಗಿತ್ತು. ಬ್ರಿಟನ್ನ ಅನುಭವಿ ಆಡಳಿತಗಾರ ಜೇಮ್ಸ್ ವೈಸ್ ಈ ಬಗ್ಗೆ ಹೀಗೆ ಬರೆದಿದ್ದಾರೆ: ‘‘1872ರ ಜನಗಣತಿಯಿಂದ ಬಹಿರಂಗವಾದ ಕುತೂಹಲಕರ ಅಂಶವೆಂದರೆ, ಬಂಗಾಳದ ದಕ್ಷಿಣ ಭಾಗದಲ್ಲಿ ಬಹುತೇಕ ಮಹ್ಮದೀಯರು ಇದ್ದಾರೆ ಎನ್ನುವುದು. ಇವರು ರಾಜಧಾನಿಯ ಸುತ್ತ ಇಲ್ಲ. ಬದಲಾಗಿ ಅಲುವೈಲ್ ಮಣ್ಣಿನ ಸಮತಟ್ಟಾದ ಪ್ರದೇಶ ಹಾಗೂ ಮುಖಜಭೂಮಿಗಳಲ್ಲಿ ಇದ್ದಾರೆ’’
ಇದುವರೆಗೂ, ಬಂಗಾಳದ ಸಾಮಾಜಿಕ ಹಾಗೂ ರಾಜಕೀಯ ಜೀವನದಲ್ಲಿ ಅಲ್ಪ ಸಂಖ್ಯಾತ ಮೇಲ್ವರ್ಗದ ಹಿಂದೂಗಳ ಪ್ರಾಬಲ್ಯವಿತ್ತು. ತಲೆ ಲೆಕ್ಕಹಾಕುವುದು ವಿಚಿತ್ರ ಪರಿಕಲ್ಪನೆ. ಆದಾಗ್ಯೂ ಈ ಸರಳ ಕಾರ್ಯದಿಂದ ಬೆಂಗಾಲಿ ಹಿಂದೂ ಹಾಗೂ ಮುಸ್ಲಿಮರ ರಾಜಕೀಯ ಸಮುದಾಯಗಳು ಸೃಷ್ಟಿಯಾದವು. ಜಾತಿ ಆಧರಿತ ಗಣತಿ ಆಗ್ರಹ 1872ರ ಬಂಗಾಳದ ಸ್ಥಿತಿಗತಿಗೆ ಕನ್ನಡಿ ಎನ್ನಬಹುದು. ಬಹುತೇಕ ದಲಿತರು ಹಾಗೂ ಇತರ ಹಿಂದುಳಿದ ವರ್ಗಗಳ ಮುಖಂಡರು ಇದಕ್ಕಾಗಿ ಲಾಬಿ ಮಾಡಿದರು. ಏಕೆಂದರೆ ತಮ್ಮ ಜನಾಂಗದ ದೊಡ್ಡ ಪ್ರಮಾಣದ ಸಂಖ್ಯಾಬಲ ತಮ್ಮ ರಾಜಕೀಯ ಬಲವನ್ನು ವೃದ್ಧಿಸುತ್ತದೆ ಎನ್ನುವುದು ಅವರ ನಂಬಿಕೆಯಾಗಿತ್ತು. ಇದೇ ಕಾರಣಕ್ಕೆ ಮೇಲ್ವರ್ಗದವರು ಇದನ್ನು ವಿರೋಧಿಸುತ್ತಾ ಬಂದರು.
ಹಗ್ಗಜಗ್ಗಾಟ
2011ರಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಮೇಲ್ವರ್ಗದವರ ವಿರೋಧದ ನಡುವೆಯೂ, ಸಾಮಾಜಿಕ, ಆರ್ಥಿಕ ಹಾಗೂ ಜಾತಿ ಗಣತಿ ನಡೆಸಲಾಯಿತು. ಈಗ ಧರ್ಮವನ್ನು ಗಣತಿ ಮಾಡುವ ಆಧಾರದಲ್ಲೇ ಜಾತಿಗಣತಿಯೂ ನಡೆಯಬೇಕು ಎಂಬ ಒತ್ತಡ ಹೆಚ್ಚಿದ ಹಿನ್ನೆಲೆಯಲ್ಲಿ ಈ ಗಣತಿ ನಡೆಸಲಾಯಿತು.
‘‘ಕಾಂಗ್ರೆಸ್ ನಾಯಕತ್ವ ಅನಿವಾರ್ಯವಾಗಿ ಜಾತಿಗಣತಿ ಘೋಷಣೆ ಮಾಡುವಷ್ಟರ ಮಟ್ಟಿಗೆ ಇಕ್ಕಟ್ಟಿಗೆ ಸಿಲುಕಿತು’’ ಎನ್ನುತ್ತಾರೆ ರಾಜಕೀಯ ವಿಜ್ಞಾನಿ ಹಾಗೂ ಸ್ವರಾಜ್ ಅಭಿಯಾನ ಎಂಬ ರಾಜಕೀಯ ಸಂಘಟನೆಯ ಸದಸ್ಯ ಯೋಗೀಂದ್ರ ಯಾದವ್. ‘‘ಜನರ ಆಗ್ರಹ ಬಲವಾದಾಗ, ಅದನ್ನು ಹೇಗೆ ವಿರೋಧಿಸುವುದು ಎನ್ನುವುದು ಸರಕಾರಕ್ಕೆ ತೋಚಲಿಲ್ಲ. ಏನು ಆಗುತ್ತಿದೆ ಎಂಬ ಅರಿವು ನಾಯಕತ್ವಕ್ಕೆ ಆಗುವ ಮುನ್ನವೇ, ಆ ಪಕ್ಷದ ಸಂಸದರೇ ಅದನ್ನು ಬೆಂಬಲಿಸಿದರು.’’
ಇವೆಲ್ಲದರ ನಡುವೆಯೂ ಕಾಂಗ್ರೆಸ್ ಸರಕಾರ ಅದನ್ನು ಸುಲಭವಾಗಿ ಬಿಟ್ಟುಕೊಡಲು ಸಿದ್ಧವಿರಲಿಲ್ಲ. ಹತ್ತು ವರ್ಷಗಳಿಗೊಮ್ಮೆ ನಡೆಸುವ ಜನಗಣತಿಯಲ್ಲಿ ಜಾತಿಗಣತಿಯನ್ನೂ ಸೇರಿಸುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡಿದರೂ, ತಕ್ಷಣವೇ ಇದರಿಂದ ಹೊರಬಂತು. ಅಂತಿಮವಾಗಿ ಬಡತನ ಹಾಗೂ ಜಾತಿ ಸಮೀಕ್ಷೆಗೆ ಮುಂದಾಯಿತು. ಜನಗಣತಿಯಲ್ಲಿ ಅನುಭವ ಇರುವ ಸಿಬ್ಬಂದಿಯ ಬದಲಾಗಿ, ರಾಜ್ಯ ಸರಕಾರಿ ನೌಕರರು ಹಾಗೂ ಕೇಂದ್ರದ ವಿವಿಧ ಸಚಿವಾಲಯಗಳ ಸಿಬ್ಬಂದಿಯಿಂದ ಈ ಗಣತಿ ಮಾಡಿಸಲಾಯಿತು. ಸಹಜವಾಗಿಯೇ ಇದರಿಂದ ಗುಣಮಟ್ಟ ರಹಿತ ಮಾಹಿತಿ ಹಾಗೂ ಗೊಂದಲಗಳು ಹುಟ್ಟಿಕೊಂಡವು. ‘‘ಕಾಂಗ್ರೆಸ್ ನಾಯಕತ್ವ ಜಾತಿ ಗಣತಿಯ ತತ್ವವನ್ನು ಲೋಕಸಭೆಯಲ್ಲಿ ಒಪ್ಪಿಕೊಳ್ಳುವುದು ಅನಿವಾರ್ಯವಾದರೂ, ಪಿ.ಚಿದಂಬರಂ ಅವರಂಥ ಸಚಿವರು ಇದು ಅಧಿಕಾರಶಾಹಿಯಿಂದ ವಿಫಲವಾಗುವಂತೆ ನೋಡಿಕೊಂಡರು’’ ಎಂದು ಯಾದವ್ ಆಪಾದಿಸುತ್ತಾರೆ.
ಇಂದು ಜಾತಿ ಗಣತಿಯ ಮಾಹಿತಿ ಬಹಿರಂಗಪಡಿಸದಿರಲು ನೀಡುತ್ತಿರುವ ಕಾರಣ ಎಂದರೆ, ಈ ಅಂಕಿ ಅಂಶಗಳು ಗುಣಮಟ್ಟದಿಂದ ಕೂಡಿಲ್ಲ ಹಾಗೂ ನಿಷ್ಪ್ರಯೋಜಕ ಎನ್ನುವುದು. ಇದು ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳಿಗೆ ಸಮಾನ ನೆಪವಾಯಿತು.
ಮೇಲ್ವರ್ಗ ಪಿತೂರಿ
‘‘ಈ ಜಾತಿಗಣತಿಯ ಮಾಹಿತಿಗಳನ್ನು ಅಳಿಸಿಹಾಕಲೇಬೇಕು ಎಂಬ ಬಗ್ಗೆ ಪಕ್ಷರಹಿತವಾಗಿ ಎಲ್ಲ ಮೇಲ್ವರ್ಗದ ರಾಜಕಾರಣಿಗಳ ಮಧ್ಯೆ ಒಪ್ಪಂದವಾಗಿದೆ. ಈ ಬಗ್ಗೆ ಕಾಂಗ್ರೆಸ್, ಬಿಜೆಪಿ ಹಾಗೂ ಎಡಪಕ್ಷಗಳ ನಡುವೆ ಸಹಮತ ವ್ಯಕ್ತವಾಗಿದೆ. ಕಾಂಗ್ರೆಸ್ಗೆ ಮನಸ್ಸಿದ್ದರೆ, ಸುಲಭವಾಗಿ ತನ್ನ ಅಧಿಕಾರಾವಧಿ ಮುಗಿಯುವ ಮುನ್ನ ಇದನ್ನು ಬಹಿರಂಗಪಡಿಸಬಹುದಿತ್ತು’’ ಎಂದು ದಲಿತ ಬಹುಜನ ಲೇಖಕ ಹಾಗೂ ಹೋರಾಟಗಾರ ಕುಫೀರ್ ನಲಗುಂದವಾರ್ ಹೇಳುತ್ತಾರೆ.
‘‘ಗಣತಿ ಮಾಹಿತಿ ಬಹಿರಂಗವಾಗದಿರಲು ಮೇಲ್ವರ್ಗದ ಪಿತೂರಿ ಕಾರಣ’’ ಎಂದು ಯಾದವ್ ಕೂಡಾ ಅಭಿಪ್ರಾಯಪಡುತ್ತಾರೆ. ಇಲ್ಲಿ ದೊಡ್ಡ ಬ್ರಾಹ್ಮಣ್ಯ ನೀತಿ ಆಟವಾಡುತ್ತಿದೆ ಎಂದು ಅವರು ಹೇಳುತ್ತಾರೆ.
ಸಾರ್ವಜನಿಕವಾಗಿ ಈ ಮಾಹಿತಿಗಳು ಇನ್ನೂ ಬಹಿರಂಗವಾಗದಿದ್ದರೂ, ಜಾತಿ ಕೋಟಾದ ಪುನರ್ ಸಂಘಟನೆಗೆ ಗಂಭೀರ ಪ್ರಯತ್ನಗಳು ನಡೆದಿವೆ. ಎಷ್ಟು ಅಧಿಕಾರ ಮೇಲ್ವರ್ಗದ ಹಿಡಿತದಲ್ಲೇ ಇದೆ ಎನ್ನುವುದು ವಾಸ್ತವವಾಗಿ ಈ ಗಣತಿ ಅಂಕಿ ಅಂಶಗಳಿಂದ ಬಹಿರಂಗವಾಗಬೇಕಿತ್ತು.
ಹಾಲಿ ಇರುವ ಎಲ್ಲ ಮೀಸಲಾತಿ ಕೂಡ 1931ರ ಜಾತಿಗಣತಿ ಆಧಾರದ್ದು ಎಂದು ನಲಗುಂದವಾರ್ ಹೇಳುತ್ತಾರೆ. ಆದರೆ ಆ ಬಳಿಕ ಎಷ್ಟರಮಟ್ಟಿಗೆ ಜನಸಂಖ್ಯೆ ಪ್ರಗತಿಯಾಗಿದೆ? ಬಡತನದ ಕಾರಣವಾಗಿ ಹಿಂದುಳಿದ ವರ್ಗಗಳ ಜನಸಂಖ್ಯೆ ಎಲ್ಲಕ್ಕಿಂತ ವೇಗವಾಗಿ ಬೆಳೆದಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ. ಇಷ್ಟಾಗಿಯೂ 1931ರ ಗಣತಿ ಆಧಾರದಲ್ಲಿ ನಾವು ಮೀಸಲಾತಿ ನಿಗದಿಪಡಿಸುತ್ತಿದ್ದೇವೆ.
ಮೇಲ್ವರ್ಗದವರು ಕಡಿಮೆ
ಮೇಲ್ವರ್ಗದವರ ಸಂಖ್ಯೆ ಈ ಅವಧಿಯಲ್ಲಿ ಕ್ಷೀಣಿಸಿದೆ ಎಂಬ ಸಿದ್ಧಾಂತವನ್ನು ರಾಜೇಶ್ ರಾಮಚಂದ್ರನ್ ’ಎಕನಾಮಿಕ್ ಟೈಮ್ಸ್’ ನಲ್ಲಿ ಬರೆದ ಲೇಖನದಲ್ಲಿ ಬೆಂಬಲಿಸಿದ್ದಾರೆ. ಈ ವರದಿಯ ಪ್ರಕಾರ, ಜಾತಿ ಮಾಹಿತಿಗಳನ್ನು ಕ್ರೋಡೀಕರಿಸಿದಾಗ, ಮೇಲಧಿಕಾರಿಗಳು ಎಷ್ಟು ಅಧೀರರಾದರು ಎಂದರೆ, ಅಲ್ಲಿ ವ್ಯಕ್ತವಾದ ಮೇಲ್ವರ್ಗದ ಸಂಖ್ಯೆಯನ್ನು ಗಮನಿಸಿ, ತಕ್ಷಣ ರೈಸಿನಾ ಹಿಲ್ಗೆ ತೆರಳಿ ತಮ್ಮ ಬಾಸ್ಗಳಿಗೆ ವರದಿ ಒಪ್ಪಿಸಿದರು. ಮೇಲ್ವರ್ಗದವರ ಸಂಖ್ಯೆ, ಈ ಜಗತ್ತಿಗೆ ಬಹಿರಂಗಪಡಿಸಲಾಗದಷ್ಟು ಆತಂಕಕಾರಿ ಪ್ರಮಾಣದಲ್ಲಿರುವ ಬಗ್ಗೆ ಅವರಿಗೂ ಮನವರಿಕೆಯಾಯಿತು.
‘‘ಮೇಲ್ವರ್ಗದ ಸಂಖ್ಯೆ ಕಡಿಮೆ ಪ್ರಮಾಣದಲ್ಲಿರುವುದನ್ನು ಹೊರತುಪಡಿಸಿದರೂ, ಸಮೃದ್ಧಿಯ ಮಾನದಂಡದಲ್ಲಿ ವಿವಿಧ ಜಾತಿಗಳು ಎಲ್ಲಿ ನಿಂತಿವೆ ಎಂದು ಅರ್ಥಮಾಡಿಕೊಳ್ಳುವಲ್ಲಿ, ಈ ಮಾಹಿತಿಗಳು ರಾಜಕಾರಣಿಗಳಿಗೆ ಹಾಗೂ ನೀತಿ ನಿರೂಪಕರಿಗೆ ಮಹತ್ವದ್ದು. ಅದರಲ್ಲೂ ಪ್ರಬಲ ಜಾತಿಗಳು ಮೀಸಲಾತಿಗೆ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಮಾಹಿತಿಗೆ ವಿಶೇಷ ಮಹತ್ವವಿದೆ. ಈ ಮೀಸಲಾತಿ ಪ್ರಶ್ನೆಯನ್ನು ಏಕೆ ಬೀದಿಗಿಳಿದು ಬಗೆಹರಿಸಿಕೊಳ್ಳಬೇಕು?’’ ಎನ್ನುವುದು ಯೋಗೀಂದ್ರ ಯಾದವ್ ಅವರ ಪ್ರಶ್ನೆ. ಪಟೇಲರು ಹಾಗೂ ಜಾಟ್ ಸಮುದಾಯದವರು ನಿಜವಾಗಿಯೂ ದುರ್ಬಲರೇ? ಅವರ ತವರು ರಾಜ್ಯದಲ್ಲಿ ಅವರಿಗೆ ಮೀಸಲಾತಿ ಅಗತ್ಯವಿದೆಯೇ ಎಂದು ತಿಳಿದುಕೊಳ್ಳಲು ಜಾತಿ ಗಣತಿ ಮಾಹಿತಿಯನ್ನು ಏಕೆ ಬಹಿರಂಗಪಡಿಸಬಾರದು?
ಸಾಮಾಜಿಕ ನ್ಯಾಯವಾಗಿ ಜಾತಿ ಸಮಾನತೆ
ಪ್ರಸ್ತುತ ವ್ಯವಸ್ಥೆಯಲ್ಲಿ ಜಾತಿ ಹೇಗೆ ಈ ವ್ಯವಸ್ಥೆಯನ್ನು ಬಲಗೊಳಿಸಿದೆ ಎನ್ನುವುದನ್ನು ಈ ಮಾಹಿತಿ ಬಹಿರಂಗಪಡಿಸಬಲ್ಲದು ಎನ್ನುವುದು ಯಾದವ್ ಅವರ ವಾದ. ಇತರ ಹಿಂದುಳಿದ ವರ್ಗದವರು, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ದುರ್ಬಲರಾಗಿದ್ದಾರೆ ಹಾಗೂ ಮೇಲ್ವರ್ಗದವರು ಎಷ್ಟರಮಟ್ಟಿಗೆ ಹಿಡಿತ ಹೊಂದಿದ್ದ್ದಾರೆ ಎನ್ನುವುದನ್ನೂ ಬಹಿರಂಗಪಡಿಸಬಲ್ಲದು. ಜಾತಿ ಮಾಯವಾಗಿದೆ ಎಂದು ವಾದಿಸುವವರಿಗೆ ಇದು ನಿಜಕ್ಕೂ ಆಘಾತಕಾರಿ.
‘‘ಇತರ ಹಿಂದುಳಿದ ವರ್ಗಗಳ ದುರ್ಬಲತೆ ಕಣ್ಣಿಗೆ ರಾಚುವಂತಿದ್ದು, ಇದರಿಂದ ಅನಿವಾರ್ಯವಾಗಿ ಮೀಸಲಾತಿ ಪರಿಷ್ಕರಣೆ ಅನಿವಾರ್ಯವಾಗುತ್ತದೆ’’ ಎನ್ನುವುದು ಕುಫೀರ್ ನಲಗುಂದವಾರ್ ಅವರ ಸ್ಪಷ್ಟ ಅಭಿಪ್ರಾಯ. ‘‘ಇಂದು ಸಾಮಾನ್ಯ ವರ್ಗದ ಎಲ್ಲ ಸೌಲಭ್ಯಗಳನ್ನು ಮೇಲ್ವರ್ಗದವರು ಪಡೆಯುತ್ತಿದ್ದರೆ. ಇದು ಬಹುತೇಕ ಕಡಿಮೆಯಾಗಬೇಕು. ಈ ಶೇ. 50ರ ಕೋಟಾದಲ್ಲಿ ಬಹುತೇಕ ಪಾಲು ಹಿಂದುಳಿದ ವರ್ಗಗಳಿಂದ ಕಿತ್ತುಕೊಂಡದ್ದು’’ ಎನ್ನುವುದು ಅವರ ವಾದ.
1950ರಲ್ಲಿ ಭಾರತದ ಸಂವಿಧಾನ ಇನ್ನೂ ಅನುಮೋದನೆಯಾಗಬೇಕಿತ್ತು. ಆಗ ಅಂಬೇಡ್ಕರ್ ಅವರು, ರಾಜಕೀಯ ಪ್ರಜಾಪ್ರಭುತ್ವ ತೃಪ್ತಿಕರವಾಗಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. ‘‘ಭಾರತ ವಾಸ್ತವವಾಗಿ ಸಾಮಾಜಿಕ ಪ್ರಜಾಪ್ರಭುತ್ವವಾಗಲು ಶ್ರಮಪಡಬೇಕು’’ ಎಂದು ವಾದಿಸಿದ್ದರು. ‘‘ಭಾರತದ ಸಮೃದ್ಧಿಯ ಫಲ ಕೇವಲ ಮೇಲ್ವರ್ಗದ ಸಣ್ಣ ಸಮುದಾಯಕ್ಕೆ ಸೀಮಿತವಾಗದೇ ಸಾರ್ವತ್ರಿಕವಾಗಿ ಎಲ್ಲರಿಗೂ ಲಭಿಸಬೇಕು. ಇದು ಸಾಮಾಜಿಕ ಪ್ರಜಾಪ್ರಭುತ್ವದ ಪ್ರಮುಖ ಅಂಶ’’ ಎಂದು ಅಂಬೇಡ್ಕರ್ ಹೇಳಿದ್ದರು.
‘ಅಂತಿಮವಾಗಿ ಜಾತಿ ಮಾಹಿತಿಯನ್ನು ತಡೆದಿರುವುದು ಅತ್ಯಂತ ಮಹತ್ವದ ಅಂಶ ಎಂದು ನಲಗುಂದವಾರ್ ಹೇಳುತ್ತಾರೆ. ಇದು ಅನ್ಯಾಯ ಹಾಗೂ ದೇಶದ ಜನಸಾಮಾನ್ಯರಿಂದ ಪ್ರಜಾಪ್ರಭುತ್ವದ ಫಲಗಳನ್ನು ಕಿತ್ತುಕೊಳ್ಳುವ ಹುನ್ನಾರ. ಇದು ಅಂಬೇಡ್ಕರ್ ಜೀವಮಾನದುದ್ದಕ್ಕೂ ಹೋರಾಡುತ್ತಾ ಬಂದ ಸಮಾನತೆ, ಭ್ರಾತೃತ್ವ ಹಾಗೂ ಸ್ವಾತಂತ್ರ್ಯದ ನಿರಾಕರಣೆ
ಕೃಪೆ: scroll.in