ಕಾಂಗ್ರೆಸ್ನ ದ್ವಂದ್ವ
ಮಾನ್ಯರೆ,
ಮುಸ್ಲಿಮರು ಇತ್ತೀಚಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಹತ್ತು ಹಲವು ಆತಂಕಗಳು, ಅಡ್ಡಿಗಳು ಎದುರಾಗುತ್ತಿವೆ. ಕಾಂಗ್ರೆಸ್ನಂತಹ ಜಾತ್ಯತೀತ ಪಕ್ಷಗಳಲ್ಲೇ ಮುಸ್ಲಿಮರು ಸ್ಪರ್ಧಿಸುವುದು ಕಷ್ಟ ಎನ್ನುವಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಕಾಂಗ್ರೆಸ್ನಿಂದ ಯಾವುದೇ ಧರ್ಮೀಯರು ಸ್ಪರ್ಧಿಸಿದರೆ ಮುಸ್ಲಿಮರು ತಮ್ಮ ಮತವನ್ನು ಹಾಕುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ಮುಸ್ಲಿಮ್ ಧರ್ಮೀಯನೊಬ್ಬ ಅಭ್ಯರ್ಥಿಯಾಗಿ ನಿಂತರೆ ಆತ ಗೆಲ್ಲುವುದು ಕಷ್ಟವಾಗುತ್ತದೆ. ಕಾಂಗ್ರೆಸ್ನೊಳಗಿರುವವರೇ ಈ ಸಂದರ್ಭದಲ್ಲಿ, ಧರ್ಮ, ಕೋಮು ಇತ್ಯಾದಿಯಾಗಿ ಮಾತನಾಡುತ್ತಾರೆ. ಇತ್ತೀಚಿನ ಸ್ಥಳೀಯ ಪಂಚಾಯತ್ನಲ್ಲಿ ಕಾಂಗ್ರೆಸ್ ನಾಯಕರೊಬ್ಬರು, ಮುಸ್ಲಿಮರಿಗೆ ಟಿಕೆಟ್ ನೀಡಿದರೆ ಗೆಲ್ಲುವುದಿಲ್ಲ ಎಂದು ಹೇಳಿಕೆ ನೀಡಿರುವುದನ್ನು ಇಲ್ಲಿ ನೆನೆದು ಕೊಳ್ಳಬಹುದು.
ಆದರೆ ಈ ಕಾರಣದಿಂದ ಸದನಗಳಲ್ಲಿ ಮುಸ್ಲಿಮರ ಪ್ರಾತಿನಿಧ್ಯ ಕಡಿಮೆಯಾಗಬಾರದು. ಲೋಕಸಭೆ ಅಥವಾ ವಿಧಾನಸಭೆಗೆ ಕಳುಹಿಸುವುದಕ್ಕೆ ಸಾಧ್ಯವಾಗದೇ ಇದ್ದರೆ, ಕಾಂಗ್ರೆಸ್ನಂತಹ ಪಕ್ಷಗಳು ರಾಜ್ಯಸಭೆ ಮತ್ತು ವಿಧಾನಸಭೆಗೆ ಮುಸ್ಲಿಮ್ ನಾಯಕರನ್ನು ಆದ್ಯತೆಯ ಮೇಲೆ ಕಳುಹಿಸಬೇಕು. ಈ ಬಾರಿ ರಾಜ್ಯಸಭೆಗೆ ಕಾಂಗ್ರೆಸ್ ಪಕ್ಷ ಎಷ್ಟು ಮುಸ್ಲಿಮರನ್ನು ಆಯ್ಕೆ ಮಾಡಿ ಕಳುಹಿಸುತ್ತಿದೆ ಎಂದು ನಿರೀಕ್ಷಿಸಿದರೆ ನಿರಾಶೆ ಕಟ್ಟಿಟ್ಟ ಬುತ್ತಿ. ಕಾಂಗ್ರೆಸ್ನೊಳಗಿನ ದ್ವಂದ್ವ, ಇಬ್ಬಂದಿತನವನ್ನು ಇದು ಎತ್ತಿ ತೋರಿಸುತ್ತಿದೆ.