ಭಾರತದ ಪ್ರಧಾನಿಯ ಇಬ್ಬಗೆ ನೀತಿ ಖಂಡನೀಯ!
ಮಾನ್ಯರೆ,
ಅಮೆರಿಕದ ಕಾಂಗ್ರೆಸ್ನ ಜಂಟಿ ಅಧಿವೇಶನದಲ್ಲಿ, ಈ ಹಿಂದಿನ ಪ್ರಧಾನಿಗಳು ಭಾಷಣ ಮಾಡಿದಂತೆ ಇತ್ತೀಚೆಗೆ ಭಾರತದ ಈಗಿನ ಪ್ರಧಾನಿಗಳೂ ಭಾಷಣ ಮಾಡಿದ್ದು, ಅದಕ್ಕೆ ಅಮೆರಿಕ ಸಂಸದರು ಹಿಂದಿನಂತೆ ಈ ಸಲವೂ ಪ್ರಧಾನಿಯವರ ಭಾಷಣಕ್ಕೆ ಎದ್ದು ನಿಂತು ಚಪ್ಪಾಳೆ ತಟ್ಟಿ ಗೌರವಿಸಿದ್ದಾರೆ. ಇದು ಅವರ ಸಂಪ್ರದಾಯವೂ ಹೌದು. ಆದರೆ ಇದನ್ನು ಭಾರತದ ಕೆಲವು ಮಾಧ್ಯಮಗಳು ಪ್ರಧಾನಿ ಮೋದಿಯವರು ಮಾತ್ರ ಅಮೆರಿಕ ಸಂಸದರಿಂದ ಚಪ್ಪಾಳೆ ಗಿಟ್ಟಿಸಿದ್ದಾರೆಂಬಂತೆ ಉತ್ಪ್ರೇಕ್ಷೆಯ ವರದಿ ಬಿತ್ತರಿಸಿದ್ದು, ಮೋದಿ ಭಕ್ತರು ಸಾಮಾಜಿಕ ತಾಣಗಳಲ್ಲಿ ಭಾರತದ ಇತಿಹಾಸದಲ್ಲಿ ಈ ಹಿಂದೆ ಕಂಡು ಕೇಳರಿಯದಂತೆ ಗಿಟ್ಟಿಸಿದ ಚಪ್ಪಾಳೆಯೆಂಬಂತೆ ಸಂಭ್ರಮಿಸಿದ್ದರು. ಆದರೆ ಪ್ರಧಾನಿಯವರು ತನ್ನ ಭಾಷಣದಲ್ಲಿ ‘‘ನನ್ನ ಸರಕಾರಕ್ಕೆ ಭಾರತದ ಸಂವಿಧಾನವೇ ಪವಿತ್ರ ಗ್ರಂಥ’’ವೆಂದು ಸಾರಿದ್ದು ಈ ವರ್ಗಕ್ಕೆ ತಿಳಿದಿದೆಯೋ ಇಲ್ಲವೋ?
ಪ್ರಧಾನಿಯವರು ಭಾರತದ ಸಂವಿಧಾನದ ಬದ್ಧತೆಯನ್ನು ಅಮೆರಿಕದಲ್ಲಿ ಪುನರುಚ್ಚರಿಸಿದರೆ, ಭಾರತದಲ್ಲಿ ತನ್ನ ಸಂಪುಟ ಸಚಿವರು ಆದಿಯಾಗಿ ಸಂಸದರು, ಬಿಜೆಪಿ ನಾಯಕರು ಅದೇ ಮೋದಿಯವರ ‘ಪವಿತ್ರ ಗ್ರಂಥ’ವಾದ ಸಂವಿಧಾನದ ವಿರುದ್ಧವಾಗಿ ಮಾತನಾಡುತ್ತಿರುವುದೂ, ನಮೋ ಭಕ್ತರು ಅದೇ ಸಾಮಾಜಿಕ ತಾಣಗಳಲ್ಲಿ ಸಂಭ್ರಮಿಸುವುದೂ, ಒಂದಕ್ಕೊಂದು ವಿರೋಧಾಭಾಸದಂತೆ ಕಾಣುತ್ತ್ತಿದೆ.
ಭಾರತದಲ್ಲಿ ಎಲ್ಲಾ ಜಾತಿ ಧರ್ಮಗಳು ಬದುಕುವುದು ಸಂವಿಧಾನಾತ್ಮಕವಾದ ಹಕ್ಕಾಗಿದೆ. ಆದರೆ, ಭಾರತದ ಸಂಸದರೊಬ್ಬರು ಭಾರತವನ್ನು ಮುಸ್ಲಿಂ ಮುಕ್ತ ದೇಶವನ್ನಾಗಿ ಮಾಡುವೆನೆಂಬ ಪಣತೊಡುವಾಗ, ಅದೇ ಪಕ್ಷದ ನಾಯಕರಾದ, ‘ಸಂವಿಧಾನವೇ ಪವಿತ್ರ’ವೆನ್ನುವ ಪ್ರಧಾನಿಯವರು ರಾಷ್ಟ್ರದ್ರೋಹದ ಈ ಮಾತಿಗೆ ದಿವ್ಯ ವೌನ ವಹಿಸಿದ್ದಾರೆ! ಇದು ಇವರ ಇಬ್ಬಗೆ ನೀತಿಯ ಒಂದು ಉದಾಹರಣೆ. ಪ್ರಧಾನಿಯ ಇಂತಹ ಧೋರಣೆ ಅಮೆರಿಕದ ಸಂಸದರ ಗಮನಕ್ಕೆ ಬಂದಲ್ಲಿ, ಅವರು ನೀಡಿದ್ದ ಚಪ್ಪಾಳೆ ಹಿಂಪಡೆಯುವರೋ ಏನೋ!