ಈ ವರ್ಷವಾದರೂ ಉತ್ತಮ ಮಳೆಗಾಲ ದೊರಕಲಿ
2015ರಲ್ಲಿ ಅಂಡಮಾನ್ ದ್ವೀಪ-ತಮಿಳುನಾಡಿನ ಮಧ್ಯೆ ಸಮುದ್ರದಲ್ಲಿ ಒಂದು ಚಂಡಮಾರುತ ಎದ್ದಿತು. ಅದು ಅಂದು ಬರುವುದರಲ್ಲಿದ್ದ ಮಾನ್ಸೂನನ್ನು ತಡೆಹಿಡಿಯಿತು. ಹಿಂದೂ ಮಹಾಸಾಗರದಲ್ಲಿ ಒಂದು ಚಂಡಮಾರುತವೆದ್ದಿತು. ಅದು ಅರಬ್ಬಿ ಸಮುದ್ರದ ಮೂಲಕ ಮುಂಬೈಯನ್ನು ಅಲ್ಲೋಲಕಲ್ಲೋಲ ಮಾಡಿತು. ಆಗ ದಕ್ಷಿಣ ಭಾರತದಲ್ಲಿ ಮಳೆ ಒಂದಿಷ್ಟು ಸುರಿಯಿತು. ಹೀಗೆ ನಾಲ್ಕೈದು ಚಂಡಮಾರುತಗಳು ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರದಲ್ಲಿ ಎದ್ದು ಭಾರತಕ್ಕೆ ಒಂದಿಷ್ಟು ಮಳೆ ಕೊಟ್ಟಿತು. ಹುಡುಕಾಡಿದರೂ ಅಲ್ಲಿ ಮಾನ್ಸೂನ್ ಸಿಗಲೇ ಇಲ್ಲ. 2016 ಮಾನ್ಸೂನ್ ಕೇರಳಕ್ಕೆ ಕಾಲಿಟ್ಟಿದೆ. ಆದರೆ ರಾಜ್ಯದಲ್ಲಿ ಇನ್ನೂ ಅದು ಸದ್ದು ಮಾಡಿಲ್ಲ.
ಆಗುಂಬೆ ಎಂಬ ಊರು ದಕ್ಷಿಣದ ಚಿರಾಪುಂಜಿ ಎಂದು ಹೆಸರು ಮಾಡಿತ್ತು. ಈಗ ಆ ಹೆಸರನ್ನು ಅದು ಕಳೆದುಕೊಂಡುಬಿಟ್ಟಿದೆ. ನನ್ನ ಊರಾದ ತೀರ್ಥಹಳ್ಳಿ ತಾಲೂಕಿನ ಒಂದು ತುದಿ ಅದು. ಇತ್ತೀಚಿನ ದಿನಗಳಲ್ಲಿ ತೀರ್ಥಹಳ್ಳಿಯಲ್ಲಿ ಮುಂಗಾರು ಮಳೆಯ ಅಬ್ಬರವನ್ನು ನಾನು ಕಾಣಲೇ ಇಲ್ಲ. ಮುಂಗಾರು ಮಳೆ ಎಂದರೆ ಗುಡುಗು ಸಿಡಿಲಿನಿಂದ ನೆಲವನ್ನು ಹದ ಮಾಡುವ ಮಳೆ.
2010ರವರೆಗೆ ಭಾರತದ ನೈರುತ್ಯ ಮಾನ್ಸೂನಿನ ಲಕ್ಷಣಗಳೆಂದರೆ, ಹಿಂದೂ ಮಹಾಸಾಗರದ ಮೇಲಿಂದ ಬರುವ ಮಾನ್ಸೂನ್ ಮಾರುತ ನೀರಿನ ಆವಿಯನ್ನು ಹೊತ್ತುತಂದು ಮೊದಲು ಅಂಡಮಾನ್ ದ್ವೀಪದ ಮೇಲೆ ಮಳೆ ಸುರಿಸುತ್ತಿತ್ತು. ನಂತರ ಕೇರಳದ ಮೂಲಕ ಕಾಲಿಟ್ಟು ಕೇರಳ ರಾಜ್ಯಕ್ಕೆ ಮಳೆ ಸುರಿಸಿ ಒಂದು ವಾರದ ನಂತರ ಕರ್ನಾಟಕ ಪ್ರವೇಶ ಮಾಡುತ್ತಿರುವುದು ನಾವು ನಿರಂತರ ನೋಡುತ್ತಿದ್ದೆವು. ಕರ್ನಾಟಕದಲ್ಲಿ ಕರಾವಳಿ ಮತ್ತು ಮಲೆನಾಡಿನ ಪ್ರಾಂತದಲ್ಲಿ ಅಬ್ಬರದ ಮಾನ್ಸೂನ್ ಮಳೆಯ ಚಂದವನ್ನು ನಾವು ನೋಡಬಹುದಿತ್ತು. ಪಶ್ಚಿಮಘಟ್ಟದಲ್ಲಿ ಹುಟ್ಟುವ ನದಿಗಳೆಲ್ಲಾ ಕೇವಲ ಒಂದು ವಾರದೊಳಗೆ ನೆರೆ ತರಿಸುತ್ತಿದ್ದವು. ತುಂಬಿ ಹರಿಯುತ್ತಿದ್ದವು. ಮಲೆನಾಡಿನಲ್ಲಿ ಒಂದು ಮಳೆಗಾಲದಲ್ಲಿ 1,500 ಮಿ.ಮೀ. ಬೀಳುತ್ತಿತ್ತು. ಹೆಚ್ಚೂ ಕಡಿಮೆ 300 ಇಂಚು ಮಳೆ!. ಮಲೆನಾಡಿನವರು ಇದಕ್ಕೆ ‘ಜಡಿ ಮಳೆ’ ಎಂದು ಹೇಳುತ್ತಿದ್ದರು. ಆಗ ಎಂದು ಸೂರ್ಯನನ್ನು ಕಾಣುತ್ತೇವೆಂಬ ವಿಚಾರ ಇರುತ್ತಿತ್ತು. ಇದು ಕ್ರಮೇಣ 1995ರ ನಂತರ ಕಡಿಮೆಯಾಗುತ್ತಾ ಬಂದಿರುವುದು ನೋಡಬಹುದು. 2010ರವರೆಗೆ ಮಾನ್ಸೂನ್ ಮಳೆಯ ಮಾರುತದಲ್ಲಿ ವ್ಯತ್ಯಾಸಗಳು ಅಲ್ಲಲ್ಲಿ ಕಂಡುಬರುತ್ತಿದ್ದವು ವಿನಃ ಯಾವ ಕೃಷಿಗೂ ತೊಂದರೆ ಆಗುತ್ತಿರಲಿಲ್ಲ. ಪಶ್ಚಿಮಘಟ್ಟದಲ್ಲಿ ಹುಟ್ಟಿದ 12 ನದಿಗಳಲ್ಲೂ ನೀರು ಕಡಿಮೆಯಾಗಿರಲಿಲ್ಲ. 2011ರಲ್ಲಿ ಮಾನ್ಸೂನ್ ಕೈಕೊಟ್ಟಿರುವುದನ್ನು ನೋಡಬಹುದು. ಆ ವರ್ಷ ಜೂನ್ 18ರ ಆನಂತರ ಮಳೆಗಾಲ ಪ್ರಾರಂಭವಾಯಿತು. 2012 ಇದು ಜುಲೈ 15ಕ್ಕೆ ಹೋಗಿತ್ತು. 2013ರಲ್ಲಿ ಮೇ 28ಕ್ಕೆ ಪ್ರಾರಂಭವಾಗಿತ್ತು. 2014ರಲ್ಲಿ ಮತ್ತೆ ಜುಲೈ ತಿಂಗಳಲ್ಲಿ ಕಾಣಿಸಿಕೊಂಡಿತ್ತು. 2015ರಲ್ಲಿ ಚಂಡಮಾರುತಗಳಿಂದ ಮಳೆಗಾಲ ಪ್ರಾರಂಭವಾಯಿತು. ಈ ಚಂಡಮಾರುತಗಳಿಂದಲೇ ಭಾರತದಲ್ಲಿ ಮಳೆ ಬಿದ್ದು ಕೃಷಿ ಪ್ರಾರಂಭವಾಯಿತು. ಇಲ್ಲಿ ಮಾನ್ಸೂನ್ ಮಳೆಯಲ್ಲಿ ಬದಲಾವಣೆಗಳನ್ನು ಕಾಣಬಹುದು.
ದುರದೃಷ್ಟವೆಂದರೆ ಈಗ ಹಿಮಪರ್ವತಗಳ ಹಿಮ ಕರಗಿ ಸಮುದ್ರಮಟ್ಟ ಏರುತ್ತಿದೆ. ಪ್ರತಿಯೊಂದು ದೇಶದಲ್ಲೂ ಹವಾಮಾನದಲ್ಲಿ ಬದಲಾವಣೆಯಾಗುತ್ತಿದೆ. ಈ ವಿಚಾರಗಳಿಗೆ ಯಾವುದೇ ಮಾಧ್ಯಮಗಳು ಪ್ರಾಮುಖ್ಯತೆ ಕೊಡುತ್ತಿಲ್ಲ. ಕೇಂದ್ರದ ಮತ್ತು ರಾಜ್ಯದ ಹವಾಮಾನಕ್ಕೆ ಸಂಬಂಧಪಟ್ಟ ಇಲಾಖೆ ಈ ವಿಚಾರಗಳನ್ನು ಗಮನಕ್ಕೆ ತೆಗೆದುಕೊಂಡು ಜನರಿಗೆ ತಿಳಿಸುತ್ತಿಲ್ಲ. ದೊಡ್ಡಣ್ಣ ಅಮೆರಿಕ ಈ ಬಗ್ಗೆ ಹೆಚ್ಚು ತಲೆಕೆಡಿಸಿ ಕೊಳ್ಳುತ್ತಿಲ್ಲ. ಯಾಕೆಂದರೆ ಇಂದಿಗೂ ಅದು ಇಂಗಾಲದ ಡೈಆಕ್ಸೈಡನ್ನು ವಾತಾವರಣಕ್ಕೆ ಜಗತ್ತಿನಲ್ಲೇ ಅತೀ ಹೆಚ್ಚು ಸೇರಿಸುತ್ತಿದೆ. ಅದು ಸುಖವನ್ನು ಬಿಡಲು ತಯಾರಿಲ್ಲ. ನಾವಿಂದು ಜಾಗತೀಕರಣದ ದಾರಿಯಲ್ಲಿ ವ್ಯಾಪಾರೀಕರಣದ ಮೂಲಕ ಕೈಗಾರಿಕೀಕರಣವೆಂಬ ಅಸ್ತ್ರದಿಂದ ಪ್ರಗತಿ ಎಂಬ ವಿಚಾರವನ್ನಿಟ್ಟುಕೊಂಡು ಹೋಗುತ್ತಿದ್ದೇವೆ. ಈಗ ನಾವು ಹಾಳು ಮಾಡುತ್ತಿರುವುದು ನಾವು ಮಾತ್ರ ಜೀವಂತವಾಗಿರುವುದಕ್ಕೆ. ನಮ್ಮ ಮುಂದಿನ ಪೀಳಿಗೆಯ ಬಗ್ಗೆ, ಇನ್ನಿತರ ಜೀವರಾಶಿಗಳ ಬಗ್ಗೆ ನಮಗೆ ಯೋಚನೆಯಿಲ್ಲ. ನೀರು, ಗಾಳಿ, ಅಗ್ನಿ ಮುಂತಾದವುಗಳನ್ನು ನಾವು ಏರುಪೇರು ಮಾಡುತ್ತಿದ್ದೇವೆ. ಮಾನ್ಸೂನ್ ಮಳೆಯನ್ನು ಕಳಕೊಂಡ ನಾವು ಇದೀಗ ಸಮುದ್ರಕ್ಕೆ ಶರಣು ಹೋಗುತ್ತಿದ್ದೇವೆ. ಸಮುದ್ರದ ನೀರನ್ನು ತಂತ್ರಜ್ಞಾನದಿಂದ ಕುಡಿಯುವ ನೀರನ್ನಾಗಿಸಲು ಹೊರಟಿದ್ದೇವೆ. ವಿದ್ಯುತ್ಗೋಸ್ಕರ ಸೌರಶಕ್ತಿ ಎಂಬ ಹೆಸರಿನಿಂದ ಸೂರ್ಯನಿಗೆ ಶರಣು ಹೋಗುತ್ತಿದ್ದೇವೆ, ಅಂದರೆ ಮತ್ತೆ ನಮಗೆ ಪ್ರಕೃತಿಯೇ ಮೊದಲ ಹಾಗೂ ಕೊನೆಯ ಆಯ್ಕೆ. ಪ್ರಕೃತಿ ಸರಿಯಿಲ್ಲದೆ ಅಖಂಡ ಜೀವರಾಶಿಗಳಿಗೆ ಉಳಿಗಾಲವಿಲ್ಲ. ಹಾಗಾಗಿ ಇನ್ನಾದರೂ ಪ್ರಕೃತಿಯನ್ನುಳಿಸುವತ್ತ ಹೆಜ್ಜೆಯಿಡಬೇಕಾಗಿದೆ. ಕೊನೆಯ ಮಾತು: ಈ ವರ್ಷವಾದರೂ ನಮಗೆ ಒಳ್ಳೆಯ ಮಳೆಗಾಲ ಸಿಗಲಿ.