ಸಂವಿಧಾನ ರಚನಾ ಕಾರ್ಯದತ್ತ ಅಸ್ಪಶ್ಯ ಆಚರಣೆಯ ನೋಟ?
ಸಂವಿಧಾನ, ಇದು ಬರೇ ಅಂಬೇಡ್ಕರರೊಬ್ಬರ ಸಾಧನೆಯಲ್ಲ ತನ್ನನ್ನು ತಾನು ಒಂದು ಸಮರ್ಪಕ ಹಳಿಗೆ ತಂದುಕೊಂಡ ಈ ದೇಶದ ಒಟ್ಟಾರೆ ಸಾಧನೆ ಇದು, ಭಾರತ ಸರಕಾರದ ಪ್ರಕಾರವೇ ಅಂಬೇಡ್ಕರರು ಅಂತಹ ಸಾಧನೆಯ ಪ್ರಧಾನ ಶಿಲ್ಪಿಯಾಗಿದ್ದಾರೆ ಅಷ್ಟೆ. ಈ ದಿಸೆಯಲ್ಲಿ ಇಂತಹ ಸಾಧನೆಗೆ ಅಪಮಾನ ಮಾಡುವುದು, ಅಂಬೇಡ್ಕರರಂತಹ ಅಪರೂಪದ ಪ್ರತಿಭೆಯನ್ನು ಅಗೌರವಿಸುವುದು, ಅಕ್ಷರಶಃ ತಕ್ಕುದಲ್ಲ. ಇಂತಹ ಹೀನ ಚಾಳಿ ನಿಲ್ಲಲಿ. ಅಂಬೇಡ್ಕರರನ್ನು ಅವರ ಸಾಧನೆಯನ್ನು ಅಸ್ಪಶ್ಯತಾಚರಣೆಯ ಹಿನ್ನೆಲೆಯಲ್ಲಿ ನೋಡುವ ಹಿಂದುತ್ವದ ಚಾಳಿ ತೊಲಗಲಿ ಎಂಬುದಷ್ಟೆ ಸದ್ಯದ ಕಳಕಳಿ.
ಅಂಬೇಡ್ಕರ್ ಅವರು ಸಂವಿಧಾನ ಬರೆದಿಲ್ಲ. ಐಎಎಸ್ ಅಧಿಕಾರಿಗಳು ಗುಪ್ತಚರ ಮಾಹಿತಿಗಳನ್ನು ಕ್ರೋಡೀಕರಿಸಿ ವರದಿ ಸಿದ್ಧಪಡಿಸಿ ಪ್ರಧಾನಿಗೆ ಸಲ್ಲಿಸುವಂತೆ ಸಂವಿಧಾನದ ಕರಡು ತಿದ್ದಿ ಸಂವಿಧಾನದ ಪ್ರತಿಯನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಅಂಬೇಡ್ಕರ್ ಪಾತ್ರ ಬರೀ ಕಲ್ಪನೆ ಎಬಿವಿಪಿ ಮಾಜಿ ಪ್ರಧಾನ ಕಾರ್ಯದರ್ಶಿ ಹಾಲಿ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದ ಅಧ್ಯಕ್ಷ ಹಿಂದುತ್ವವಾದಿ ರಾವ್ ಬಹದ್ದೂರ್ ರಾಯ್ ಹೇಳಿರುವ ದ್ವೇಷಪೂರಿತ ಮಾತುಗಳಿವು. ದ್ವೇಷಪೂರಿತ; ಯಾಕೆಂದರೆ ರಾಯ್ರ ಈ ಹೇಳಿಕೆ ಅಧ್ಯಯನ ರಹಿತದ, ಸಂವಿಧಾನದ ಇತಿಹಾಸವನ್ನು ಕಿಂಚಿತ್ತೂ ಅವಲೋಕಿಸದ, ಅವಲೋಕಿಸಿದರೆ ಎಲ್ಲಿ ಸತ್ಯ ಒಪ್ಪಿಕೊಳ್ಳಬೇಕಾಗುತ್ತದೆಯೋ ಎಂದು ವಾಸ್ತವವನ್ನು ನೋಡದ, ಅಂಬೇಡ್ಕರ್ ಸಂವಿಧಾನ ಶಿಲ್ಪಿ ಎಂಬ ಅಂತಹ ವಾಸ್ತವವನ್ನು ಅರಗಿಸಿಕೊಳ್ಳಲಾರದೆ ಹೇಳಿರುವ ಮಾತುಗಳಿವು. ಒಂದು ಸಮುದಾಯದ ವಿರುದ್ಧ ಅಂದರೆ ಶೋಷಿತ ಸಮುದಾಯದ ವಿರುದ್ಧ ಹೀಗೆ ನಿರಂತರ ದ್ವೇಷವಿರದಿದ್ದರೆ ಈ ಪರಿಯ ಅದರ ಸಾಧನೆಗಳನ್ನು, ಅದರ ನೇತಾರನ ಸಾಧನೆಗಳನ್ನು ಅವಮಾನಿಸುವ ಕಾರ್ಯವನ್ನು ಯಾರೂ ಕೂಡ ಮಾಡಲಾರರು. ಆಶ್ಚರ್ಯವೆಂದರೆ ಹಿಂದುತ್ವದ ನೇತಾರರು ಅದು ಅರುಣ್ ಶೌರಿ ಇರಬಹುದು, ರಾವ್ ಬಹದ್ದೂರ್ ರಾಯ್ ಇರಬಹುದು ಇಂತಹದ್ದನ್ನು ಮಾಡುತ್ತಲೇ ಬಂದಿದ್ದಾರೆ. ಈ ನಿಟ್ಟಿನಲ್ಲಿ ದ್ವೇಷಭರಿತ ಇಂತಹ ಹೇಳಿಕೆಗೆ ಉತ್ತರಿಸದಿರಲು ಸಾಧ್ಯವೇ? ಉತ್ತರಿಸಲೇಬೇಕು. ಆ ಮೂಲಕ ಸತ್ಯವನ್ನು ಮತ್ತೆ ಮತ್ತೆ ಎತ್ತಿಹಿಡಿಯಲೇಬೇಕಿದೆ. ಇಲ್ಲದಿದ್ದರೆ ಅವರು ಸತ್ಯದ ಬಾಬ್ರಿ ಮಸೀದಿಯ ಮೇಲೆ ಸುಳ್ಳಿನ ರಾಮಮಂದಿರವನ್ನು ಕಟ್ಟುವ ತಮ್ಮ ಚಾಳಿಯನ್ನು ಸಂವಿಧಾನದ ಮೇಲೂ ಹೇರುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಸಂವಿಧಾನ ಬರೆದ ಆ ಸಂದರ್ಭದಲ್ಲಿ ಅದನ್ನು ಅರ್ಪಿಸುತ್ತಿದ್ದ ದಿನ (1949 ನವೆಂಬರ್ 26) ಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ.ಬಾಬುರಾಜೇಂದ್ರ ಪ್ರಸಾದ್ರವರ ಹೇಳಿಕೆ ಮೂಲಕ ನಾವು ಇಂತಹ ಹಿಂದುತ್ವವಾದಿಗಳಿಗೆ ಪ್ರತ್ಯುತ್ತರವನ್ನು ಪ್ರಾರಂಭಿಸುವುದಾದರೆ... ಡಾ.ಬಾಬು ರಾಜೇಂದ್ರ ಪ್ರಸಾದ್ರವರು ಹೇಳುತ್ತಾರೆ. ಅಧ್ಯಕ್ಷೀಯ ಸ್ಥಾನದಲ್ಲಿ ಕುಳಿತು ಇತರರಿಗಿಂತ ಅನುದಿನದ ಸಭೆಯ ನಡಾವಳಿಯನ್ನು ಗಮನಿಸುತ್ತಾ ಬಂದಿರುವ ನನಗೆ ಅರಿವಾದದ್ದೆಂದರೆ, ಕರಡು ಸಮಿತಿಯ ಸದಸ್ಯರು ವಿಶೇಷವಾಗಿ ಅದರ ಅಧ್ಯಕ್ಷರಾದ ಡಾ.ಅಂಬೇಡ್ಕರ್ರವರು ತಮ್ಮ ವೈರುಧ್ಯದ ಆರೋಗ್ಯದ ಹೊರತಾಗಿಯೂ ಅದೆಂತಹ ಅತ್ಯಪರೂಪದ ಶ್ರದ್ಧೆ ಮತ್ತು ಉತ್ಸಾಹದಿಂದ ಕೆಲಸಮಾಡಿದ್ದಾರೆಂದರೆ...(ಚಪ್ಪಾಳೆ). ನಿಜಹೇಳಬೇಕೆಂದರೆ ಅಂಬೇಡ್ಕರರನ್ನು ನಾವು ಕರಡು ಸಮಿತಿಯ ಮುಂಚೂಣಿಗೆ ತಂದದ್ದು ಮತ್ತು ಅವರನ್ನು ಅದರ ಅಧ್ಯಕ್ಷರನ್ನಾಗಿ ಮಾಡಿದ್ದು ಅದೆಷ್ಟು ಸಮರ್ಪಕವಾಗಿತ್ತೆಂದರೆ, ಖಂಡಿತ ಅದಕ್ಕಿಂತ ಸೂಕ್ತ ನಿರ್ಧಾರ ನಮ್ಮಿಂದ ಸಾಧ್ಯವೇ ಇರಲಿಲ್ಲ.
ಆಶ್ಚರ್ಯವೆಂಬಂತೆ ಅಂಬೇಡ್ಕರರು ತಮ್ಮ ಈ ಆಯ್ಕೆಗೆ ಬರೇ ನ್ಯಾಯ ಒದಗಿಸಿದ್ದಷ್ಟೇ ಅಲ್ಲ, ಅವರು ಮಾಡಿರುವಂತಹ ಒಟ್ಟಾರೆ (ಸಂವಿಧಾನ ರಚನೆಯ) ಈ ಕಾರ್ಯಕ್ಕೆ ಅವರು ಒಂದು ರೀತಿಯ ಹೊಳಪನ್ನು ತುಂಬಿದ್ದಾರೆ ಸಂವಿಧಾನವನ್ನು ಅಂಗೀಕರಿಸಿದ ಸಂದರ್ಭದ ಬಾಬು ರಾಜೇಂದ್ರಪ್ರಸಾದರ ಸಹಜ ಮಾತುಗಳಿವು. ಡಾ.ಬಾಬು ರಾಜೇಂದ್ರಪ್ರಸಾದರ ಈ ಮಾತುಗಳು ಸಂವಿಧಾನ ಸಭಾ ಚರ್ಚಾ ನಡಾವಳಿ ಕಚೇರಿ ದಾಖಲಾತಿ, ದಿನಾಂಕ: 26-11-1949, ಸಂಪುಟ.11, ಪುಟ.994ರಲ್ಲಿ ಅಕ್ಷರಶಃ ದಾಖಲಾಗಿದೆ. ಪ್ರಶ್ನೆ ಎಂದರೆ ಯಾಕೆ ಡಾ.ಬಾಬು ರಾಜೇಂದ್ರಪ್ರಸಾದರೇಕೆ ಹೀಗೆ ಹೇಳಿದರು? ವಿಶೇಷವಾಗಿ ಇಂತಹ ಮಹತ್ವದ ಕಾರ್ಯಕ್ಕೆ ಅಂಬೇಡ್ಕರನ್ನೇಕೆ ಅವರು ಆ ಪರಿ ಕೊಂಡಾಡಿದರು? ಅಂಬೇಡ್ಕರರ ಸಂವಿಧಾನ ರಚನೆಯ ಕಾರ್ಯವನ್ನು ಖುದ್ದು ಬಾಬು ರಾಜೇಂದ್ರಪ್ರಸಾದರು ಗಮನಿಸಿದ್ದರಿಂದಲೇ ತಾನೇ ಅವರು ಹೀಗೆ ಹೇಳಿರುವುದು? ಆಶ್ಚರ್ಯವೆಂದರೆ ರಾವ್ಬಹದ್ದೂರ್ ರಾಯ್ರಂತಹ ಈಗಿನ ಹಿಂದುತ್ವವಾದಿಗಳು ಸಂವಿಧಾನ ರಚನೆಯ ಇಂತಹ ಪ್ರತ್ಯಕ್ಷ ಐತಿಹಾಸಿಕ ಸಾಕ್ಷಿಗಳ ಹೇಳಿಕೆಗಳತ್ತ, ನಡಾವಳಿಗಳತ್ತ ಕಣ್ಣೆತ್ತಿ ನೋಡುವ ವ್ಯವಧಾನವನ್ನೇ ತೆಗೆದುಕೊಳ್ಳುವುದಿಲ್ಲ!
ಇನ್ನು ಸಭೆಯಲ್ಲಿ ಉಪಸ್ಥಿತರಿದ್ದ ಶ್ರೀ.ಎಂ.ಅನಂತಶಯನಂ ಅಯ್ಯಂಗಾರ್ರವರ ಹೇಳಿಕೆಯನ್ನು ದಾಖಲಿಸುವುದಾದರೆ ಅಯ್ಯಂಗಾರ್ರವರು ಹೇಳುತ್ತಾರೆ, ಡಾ.ಅಂಬೇಡ್ಕರ್ರವರು ಸಂವಿಧಾನ ರಚನೆಯ ಕಾರ್ಯವನ್ನು ಕೇವಲ ಅವಲೋಕಿಸಲಷ್ಟೆ ಬಂದರು. ಆದರೆ ಅದರ ರಚನೆಯಲ್ಲಿ ಅವರೇ ಮುಖ್ಯ ಭೂಮಿಕೆ ನಿಭಾಯಿಸಿದರು ಮತ್ತು ಇಂದು ನಾವು ಅಂಗೀಕರಿಸುತ್ತಿರುವ ಸಂವಿಧಾನದ ಶಿಲ್ಪಿಗಳಲ್ಲಿ ಅವರೂ ಕೂಡ ಒಬ್ಬರಾದರು. ಈ ನಿಟ್ಟಿನಲ್ಲಿ ಯಾವ ವ್ಯಕ್ತಿ ಟೀಕೆಯ ಸುರಿಮಳೆ ಸುರಿಸಲು ಮತ್ತು ನಮ್ಮನ್ನು ಅನುಮಾನದಿಂದ ನೋಡಲು ಬಂದರೋ ಅಂತಿಮವಾಗಿ ಅದೇ ವ್ಯಕ್ತಿ ಈ ಸಂವಿಧಾನದ ಹೊಣೆ ಹೊತ್ತುಕೊಂಡರು ಮತ್ತು ಅದನ್ನು ರಚಿಸಿದರು. ಆ ಕಾರಣದಿಂದಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದಲ್ಲದೆ ಈ ದಿಸೆಯಲ್ಲಿ ನಾವು ಅವರಿಗೆ ತೋರಿಸಿದ ಪ್ರೀತಿ, ಅದನ್ನು ಅವರು ಒಟ್ಟುಗೂಡಿಸಿಕೊಂಡ ಬಗೆ ಈ ಕಾರಣಕ್ಕಾಗಿ ನಮ್ಮನ್ನೂ ಕೂಡ ನಾವು ಅಭಿನಂದಿಸಿಕೊಳ್ಳಬೇಕಿದೆ. ಹಿಂದುತ್ವವಾದಿ ರಾವ್ ಬಹದ್ದೂರ್ರಾಯ್, ಅನಂತಶಯನಂ ಅಯ್ಯಂಗಾರ್ರವರ ಈ ಹೇಳಿಕೆಯನ್ನು ಮತ್ತೆ ಮತ್ತೆ ಓದಬೇಕು. ಅಂದಹಾಗೆ ಅನಂತಶಯನಂ ಅಯ್ಯಂಗಾರ್ರರು ಅಂಬೇಡ್ಕರ್ರವರ ಬಗ್ಗೆ ಹೀಗೆ ಹೊಗಳಿಕೆ ರೀತಿಯ ಹೇಳಿಕೆ ನೀಡಿದ್ದಾರೆ ಎಂದೆನಿಸುತ್ತದೆಯಾ? ಖಂಡಿತ ಇಲ್ಲ. ಯಾಕೆಂದರೆ ಅನಂತಶಯನಂ ಅಯ್ಯಂಗಾರ್ರವರು ದೂರದ ಮದ್ರಾಸಿನವರಾದರೆ ಅಂಬೇಡ್ಕರ್ರವರು ಮುಂಬೈನವರು. ಪರಸ್ಪರ ಪರಿಚಿತರಲ್ಲದ ಅವರಿಬ್ಬರು ಮತ್ತು ಸಭೆಯ ಇತರ ಸದಸ್ಯರು ಹೀಗೆ ಒಟ್ಟಿಗೆ ದೆಹಲಿಯಲ್ಲಿ ಸೇರಿದ್ದು ದೇಶದ ಹಿತದೃಷ್ಟಿಯಿಂದ. ಈ ಹಿನ್ನೆಲೆಯಲ್ಲಿ ಹೀಗೆ ಮೆಚ್ಚುಗೆಯ ಮಾತುಗಳನ್ನು ಅಯ್ಯಂಗಾರ್ರವರು ಅಂಬೇಡ್ಕರ್ರವರ ಬಗ್ಗೆ ಹೇಳಿದ್ದು ಅವರ ಸಂವಿಧಾನ ರಚನೆಯ ಕಾರ್ಯವನ್ನು ನೋಡಿಯೇ ಹೊರತು, ಮತ್ತೇನನ್ನು ಅಲ್ಲ ಎಂಬುದು ಎಂಥವರಿಗಾದರೂ ಅರ್ಥವಾಗುತ್ತದೆ.
ಇನ್ನು ಪಂಜಾಬ್ನ ಪಂಡಿತ್ ಠಾಕೂರ್ ದಾಸ್ ಭಾರ್ಗವ ಅವರ ಹೇಳಿಕೆಯನ್ನು ಉಲ್ಲೇಖಿಸುವುದಾದರೆ, ಕರಡು ಸಮಿತಿಗೆ ವಂದನೆಗಳನ್ನು ಸಲ್ಲಿಸಲು ಯಾವ ರೀತಿಯ ಪದಗಳನ್ನು ಬಳಸಬೇಕು ಎಂಬುದು ನನಗೆ ಹೊಳೆಯುತ್ತಿಲ್ಲ. ಅದರಲ್ಲೂ ನಿರ್ದಿಷ್ಟವಾಗಿ ಕರಡು ಸಮಿತಿಯ ಅಧ್ಯಕ್ಷರು(ಡಾ.ಅಂಬೇಡ್ಕರ್) ಈ ಸಂವಿಧಾನವನ್ನು ಮುನ್ನಡೆಸಿರುವ ಬಗೆ, ಕಾನೂನು ಬಗೆಗಿನ ಅವರ ಕುಶಾಗ್ರ ಬುದ್ಧಿ, ದಣಿವರಿಯದ ಶ್ರಮ, ಹದಭರಿತ ಸಾಮರ್ಥ್ಯದ ಜೊತೆ ರಚನಾ ಕ್ರಿಯೆಯನ್ನು ಪೂರ್ಣಗೊಳಿಸುವಲ್ಲಿನ ಅವರ ದೃಢತೆ ಮತ್ತು ಕೌಶಲ, ಖಂಡಿತ ಅವರಿಗೆ ಕೃತಜ್ಞತೆ ಸಲ್ಲಿಸಲು ಪದಗಳೇ ವಿಫಲಗೊಳ್ಳುತ್ತಿವೆ! ಆ ಕಾರಣದಿಂದ ಅತ್ಯಂತ ಶ್ರೇಷ್ಠ ಮಟ್ಟದ ತಮ್ಮ ಈ ಸಾರ್ವಜನಿಕ ಸ್ಫೂರ್ತಿಯನ್ನು ಇಡೀ ದೇಶಕ್ಕೆ ತೋರಿಸಿಕೊಟ್ಟಿರುವುದರಿಂದ ಡಾ.ಅಂಬೇಡ್ಕರ್ರವರಿಗೆ (ನನ್ನ ದುರದೃಷ್ಟ ಇವತ್ತು ಅವರು ಈ ಸದನದಲ್ಲಿ ಉಪಸ್ಥಿತರಿಲ್ಲ. ಆದರೂ ಕೂಡ) ಮನವಿ ಮಾಡಿಕೊಳ್ಳುವುದೇನೆಂದರೆ ಇದುವರೆಗೂ ಅವರು ತಮ್ಮಷ್ಟಕ್ಕೆ ತಾವು ಕೇವಲ ಪರಿಶಿಷ್ಟಜಾತಿಯ ನಾಯಕ ಎಂದುಕೊಂಡಿದ್ದರು. ಆದರೆ ಇನ್ನಾದರೂ ಅವರು ಕಾಂಗ್ರೆಸ್ ಸೇರಲಿ. ನಿಜಹೇಳಬೇಕೆಂದರೆ ತಮ್ಮ ಪರಿಶ್ರಮದಿಂದ ನಮ್ಮ ಹೃದಯಗಳಲ್ಲಿ ಅವರು ಇಂದು ಅತ್ಯುನ್ನತ ಸ್ಥಾನ ಅಲಂಕರಿಸಿದ್ದಾರೆ. ಈ ಹಿನ್ನೆಲೆಯಲ್ಲಿ (ಕಾಂಗ್ರೆಸ್ ಸೇರಿದರೆ) ಅವರು ಕಾಂಗ್ರೆಸ್ ಹೈಕಮಾಂಡ್ನಂತಹ ಇದಕ್ಕಿಂತ ಉನ್ನತ ಸ್ಥಾನವನ್ನು ಖಂಡಿತ ಅಲಂಕರಿಸುವರು. ಆ ಭರವಸೆ ನನಗೆ ಇದೆ.
ಮತ್ತೆ ಪ್ರಶ್ನೆ ಏನೆಂದರೆ ಅಂಬೇಡ್ಕರರ ಸಂವಿಧಾನ ರಚನಾ ಕಾರ್ಯದ ಶ್ರೇಷ್ಠತೆಯನ್ನು ಸಾರಲು ಠಾಕೂರ್ದಾಸ್ ಭಾರ್ಗವರ ಈ ಮೇಲಿನ ಮಾತುಗಳಿಗಿಂತ ಬೇರೆ ಉದಾಹರಣೆ ಬೇಕೆ? ಅಂಬೇಡ್ಕರರನ್ನು ಹೊಗಳಲೇಬೇಕಿತ್ತು ಆ ಕಾರಣಕ್ಕೆ ಭಾರ್ಗವರು ಈ ಮಾತುಗಳನ್ನು ಹೇಳಿದ್ದಾರೆ ಎಂದುಕೊಳ್ಳೋಣವೆಂದರೆ ಅಂಬೇಡ್ಕರ್ ಅಂದು ಸದನದಲ್ಲಿ ಉಪಸ್ಥಿತರಿರಲೇ ಇಲ್ಲ! ಈ ನಿಟ್ಟಿನಲ್ಲಿ ಇಲ್ಲಿ ಸ್ಪಷ್ಟವಾಗಿ ಭಾರ್ಗವರವರು ಗುರುತಿಸಿರುವುದು ಅಂಬೇಡ್ಕರರನ್ನೋ? ಅಥವಾ ಅವರ ಸಂವಿಧಾನ ರಚನೆಯ ಕಾರ್ಯವನ್ನೋ? ಆಶ್ಚರ್ಯವೆಂದರೆ ಕಾಂಗ್ರೆಸ್ ಪಕ್ಷದ ಭಾರ್ಗವರವರು ತಮ್ಮ ಈ ನಿಷ್ಕಲ್ಮಶ ನುಡಿಯಲ್ಲಿ ತಮ್ಮ ಪಕ್ಷದ ಹೈಕಮಾಂಡ್ ಏನಂದುಕೊಳ್ಳುತ್ತದೋ ಎಂಬ ಅಂಜಿಕೆಯ ಲವಲೇಶವೂ ಇಲ್ಲದೆ ತಮ್ಮ ಪಕ್ಷಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಅಂಬೇಡ್ಕರರನ್ನು ಆಹ್ವಾನಿಸುತ್ತಾರೆ. ಹಾಗೆಯೇ ನೀವೇ ಹೈಕಮಾಂಡ್ ಆಗಿ ಎಂದು ಕೇಳಿಕೊಳ್ಳುತ್ತಾರೆ! ಇನ್ನು ಮುನಿಸ್ವಾಮಿ ಪಿಳ್ಳೈ ಎಂಬವರು ಹೇಳುತ್ತಾರೆ, ಪರಿಶಿಷ್ಟ ಜಾತಿಯು ನಂದನಾರ್, ತಿರುಪಳನಾಳ್ವರ್, ತಿರುವಳ್ಳುವರ್ ಹೀಗೆ ಶ್ರೇಷ್ಠ ಸಂತರನ್ನು, ಜ್ಞಾನಿಗಳನ್ನು ನೀಡಿದೆ. ನಿಸ್ಸಂಶಯವಾಗಿ ಡಾ.ಅಂಬೇಡ್ಕರರು ಅಂತಹವರ ಸಾಲಿಗೆ ಸೇರ್ಪಡೆಯಾಗುತ್ತಾರೆ.
ಅವಕಾಶ ಸಿಕ್ಕರೆ ಪರಿಶಿಷ್ಟರು ಎಷ್ಟು ಎತ್ತರಕ್ಕೆ ಏರಬಲ್ಲರು ಎಂಬುದನ್ನು ಅಂಬೇಡ್ಕರರು (ತಮ್ಮ ಈ ಸಾಧನೆಯ ಮೂಲಕ) ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿದ್ದಾರೆ. (ರಾವ್ ಬಹದ್ದೂರ್ ರಾಯ್ ಅಥವಾ ಅಂತಹ ಮನಸ್ಥಿತಿಯವರು ಇದಕ್ಕುತ್ತರಿಸಬೇಕು!) ಮುಂದುವರಿದು ಸೇಠ್ ಗೋವಿಂದದಾಸ್ ಎನ್ನುವವರು ಡಾ.ಅಂಬೇಡ್ಕರರನ್ನು ವರ್ತಮಾನ ಕಾಲದ ಮನು ಎನ್ನಬಹುದು ಎನ್ನುತ್ತಾರೆ! ಹಾಗೆಯೇ ಮತ್ತೋರ್ವ ಸದಸ್ಯ ಟಿ.ಪ್ರಕಾಶಂ ತಮ್ಮ ಈ ಕಾರ್ಯದ ಮೂಲಕ ಡಾ.ಅಂಬೇಡ್ಕರರು ತಾವು ಗ್ರೇಟ್ ಬ್ರಿಟನ್ ನ ರಾಜನ ಸಲಹೆಗಾರನಾಗಿ ಅಲ್ಲಿಯ ಆಸ್ಥಾನ ವೂಲ್ಸ್ಯಾಕ್ನಲ್ಲಿ ಕುಳಿತುಕೊಳ್ಳುವಷ್ಟು ಸಮರ್ಥರು ಎಂದು ತೋರಿಸಿಕೊಟ್ಟಿದ್ದಾರೆ ಎನ್ನುತ್ತಾರೆ. ಕಡೆಯದಾಗಿ ಎಚ್.ಜೆ.ಖಾಂಡೇಕರ್ ಎಂಬವರ ಹೇಳಿಕೆಯನ್ನು ಇಲ್ಲಿ ದಾಖಲಿಸುವುದಾದರೆ ಮಾನ್ಯರೆ, ನಾವು ಅಂಬೇಡ್ಕರರಂತಹ ಪ್ರತಿಭಾಶಾಲಿಯಿಂದ ರೂಪಿತಗೊಂಡ ಕಾನೂನನ್ನು ಸ್ವತಂತ್ರ ಭಾರತದಲ್ಲಿ ಇಂದು ಕಾರ್ಯಾಚರಣೆಗಿಳಿಸುತ್ತಿದ್ದೇವೆ. ಹಾಗೆ ಈ ಕಾನೂನನ್ನು ನಾನು ಮಹಾನ್ ಕಾನೂನು ಎನ್ನಲಿಚ್ಛಿಸುತ್ತೇನೆ.
ಯಾಕೆಂದರೆ ಡಾ.ಅಂಬೇಡ್ಕರರು ಮಹಾರ್ ಸಮುದಾಯದವರು ಮತ್ತು ಮುಂದೆ 1950 ಜನವರಿ 26ರಂದು ಈ ಕಾನೂನು ಉದ್ಘಾಟನೆಗೊಂಡಾಗ ನಾವು ಮನುವಿನ ಕಾನೂನಿನ ಬದಲು ಮಹಾರರ ಕಾನೂನನ್ನು ಹೊಂದುತ್ತೇವೆ. ಮನುವಿನ ಕಾನೂನಿನ ಅಡಿಯಲ್ಲಿ ಈ ದೇಶದಲ್ಲಿ ಸುಖ ನೆಮ್ಮದಿಯೇ ಇರಲಿಲ್ಲ, ಆದರೆ ಮಹಾರರ ಕಾನೂನು, ಖಂಡಿತ ಈ ದೇಶವನ್ನು ಸ್ವರ್ಗವನ್ನಾಗಿ ಮಾಡುತ್ತದೆ... ನನಗೆ ಭರವಸೆ ಇದೆ. ಹೌದು, ಹಿಂದುತ್ವವಾದಿಗಳು, ಅಂಬೇಡ್ಕರರ ಸಂವಿಧಾನ ಸಾಧನೆಯನ್ನು ಅಲ್ಲಗಳೆಯುವವರು ಖಾಂಡೇಕರರ ಅಂಬೇಡ್ಕರರಂತಹ ಪ್ರತಿಭಾಶಾಲಿಯಿಂದ ರೂಪಿತಗೊಂಡ ಕಾನೂನನ್ನು ಸ್ವತಂತ್ರ ಭಾರತದಲ್ಲಿ ಇಂದು ಕಾರ್ಯಾಚರಣೆಗಿಳಿಸುತ್ತಿದ್ದೇವೆ ಎಂಬ ಹೇಳಿಕೆಯನ್ನು ಮತ್ತೆ ಮತ್ತೆ ಗಮನಿಸಬೇಕು. ಸಾಧ್ಯವಾದರೆ ಸತ್ತಿರುವ ಖಾಂಡೇಕರರನ್ನು ಗೋರಿಯಿಂದ ಎಬ್ಬಿಸಿ ಯಾಕೆ ಹೀಗೆ ಹೇಳಿದಿರಿ ಎಂದು ತರಾಟೆಗೆ ತೆಗೆದುಕೊಳ್ಳಬೇಕು. ಸಾಧ್ಯವಾದರೆ ಅವರನ್ನು ಈ ಹೇಳಿಕೆ ವಾಪಸ್ ಪಡೆದುಕೊಳ್ಳಿ ಎಂದು ಕೇಳಿಕೊಳ್ಳಬೇಕು! ಆಗಷ್ಟೆ ರಾವ್ಬಹದ್ದೂರ್ ರಾಯ್ರಂತವರ ಹೇಳಿಕೆಗಳಿಗೆ ಅರ್ಥ ಬರುತ್ತದೆ.
ಈ ಹಿನ್ನೆಲೆಯಲ್ಲಿ ಇಲ್ಲಿ ಉಲ್ಲೇಖಿಸಿರುವ ಇವಿಷ್ಟೇ ಹೇಳಿಕೆಗಳ ಪ್ರಕಾರ ಅರ್ಥವಾಗುವುದೆಂದರೆ ಅಂಬೇಡ್ಕರರ ಸಂವಿಧಾನ ರಚನೆಯ ಕಾರ್ಯ, ಶ್ರಮ, ತೆಗೆದುಕೊಂಡ ರಿಸ್ಕ್, ಪ್ರತಿಯೊಂದೂ ಅಂದಿನ ಸದಸ್ಯರಿಗೆ ಸ್ಪಷ್ಟವಾಗಿ ತಿಳಿದಿತ್ತು ಮತ್ತು ಅದನ್ನು ಅವರು ನಿಷ್ಕಲ್ಮಶವಾಗಿ ದಾಖಲಿಸಿ ಹೋಗಿದ್ದಾರೆ. ಅಂದಹಾಗೆ ಅಂಬೇಡ್ಕರರ ಈ ಅದ್ಭುತ ಕಾರ್ಯಕ್ಕೆ ಅಂದು ವಿವಿಧ ಪಕ್ಷಗಳ, ದೇಶದ ವಿವಿಧ ಭಾಗಗಳ, ವಿವಿಧ ಸಮೂಹಗಳ ಸದಸ್ಯರು ನೀಡಿರುವ ಅಭಿನಂದನಾ ನುಡಿಗಳೇ ಒಂದು ಉದ್ಗ್ರಂಥವಾಗುತ್ತದೆಂದರೆ...! ಈ ಎಲ್ಲ ಅಭಿನಂದನೆಯ ನುಡಿಗಳು, ಸಂವಿಧಾನ ರಚನೆಯ ಸಂಪೂರ್ಣ ನಡಾವಳಿ, ಸದಸ್ಯರ ವಾಗ್ವಾದ, ಸಲ್ಲಿಸಿದ ತಿದ್ದುಪಡಿ, ಅದಕ್ಕೆ ಅಂಬೇಡ್ಕರರು ನೀಡಿರುವ ಕಾನೂನು ಸ್ಫೂರ್ತಿಯ ಉತ್ತರ ಎಲ್ಲವೂ ಸ್ವತಃ ಭಾರತ ಸರಕಾರವೇ ಪ್ರಕಟಿಸಿರುವ ‘ಡಾ.ಅಂಬೇಡ್ಕರ್: ಭಾರತ ಸಂವಿಧಾನದ ಪ್ರಧಾನ ಶಿಲ್ಪಿ’ ಎಂಬ ಕೃತಿಯಲ್ಲಿ ಭದ್ರವಾಗಿದೆ.
ಮತ್ತೂ ಒಂದು ವಾಸ್ತವವೆಂದರೆ ಅಂಬೇಡ್ಕರರ ಈ ಸಂವಿಧಾನ ರಚನೆಯ ಕಾರ್ಯಕ್ಕೆ, ಅವರ ಕಾನೂನಿನ ಜ್ಞಾನಕ್ಕೆ ಸ್ವತಃ ಕಾಂಗ್ರೆಸ್ ಪಕ್ಷವೇ ಅಂದು ನೀಡಿದ ಗೌರವ ಅವರನ್ನು ತನ್ನ ಸಂಪುಟದಲ್ಲಿ ಈ ದೇಶದ ಪ್ರಥಮ ಕಾನೂನು ಮಂತ್ರಿಯಾಗಿ ನೇಮಿಸಿಕೊಂಡಿದ್ದು! ಹೀಗಿರುವಾಗ ರಾವ್ ಬಹದ್ದೂರ್ ರಾಯ್ರಂತಹವರು ಈಗ ಹೀಗೆ ಹೇಳಿಕೆಗಳನ್ನು ನೀಡುವುದು ಸಂಪೂರ್ಣ ಅದು ದ್ವೇಷಪೂರಿತ. ಇಂತಹ ದ್ವೇಷಪೂರಿತ ಹೇಳಿಕೆಗಳಿಗೆ ಕಾರಣ. ಉತ್ತರ ಮತ್ತದೇ ಖಾಂಡೇಕರರ ಹೇಳಿಕೆಯಲ್ಲಿದೆ. ಅಂದರೆ ಮನಸ್ಮತಿಯ ಕಾನೂನು ಹೊರಟುಹೋಗಿ ಮಹಾರರ ಕಾನೂನು ಜಾರಿಯಾದದ್ದೆ ಇದಕ್ಕೆಲ್ಲ ಕಾರಣ.
ಅಂದರೆ ಕಾನೂನಿನತ್ತಲೂ ಅಸ್ಪಶ್ಯತಾಚರಣೆಯ ನೋಟ! ಈ ನಿಟ್ಟಿನಲ್ಲಿ ಇಂತಹ ನೋಟದ ಮೂಲಕ ಈ ದೇಶದ ಇಂತಹ ಮಹತ್ವದ ಸಾಧನೆಯನ್ನು ಅಳೆಯುವುದು ಎಷ್ಟು ಸರಿ? ಯಾಕೆಂದರೆ ಸಂವಿಧಾನ, ಇದು ಬರೇ ಅಂಬೇಡ್ಕರರೊಬ್ಬರ ಸಾಧನೆಯಲ್ಲ ತನ್ನನ್ನು ತಾನು ಒಂದು ಸಮರ್ಪಕ ಹಳಿಗೆ ತಂದುಕೊಂಡ ಈ ದೇಶದ ಒಟ್ಟಾರೆ ಸಾಧನೆ ಇದು, ಭಾರತ ಸರಕಾರದ ಪ್ರಕಾರವೇ ಅಂಬೇಡ್ಕರರು ಅಂತಹ ಸಾಧನೆಯ ಪ್ರಧಾನ ಶಿಲ್ಪಿಯಾಗಿದ್ದಾರೆ ಅಷ್ಟೆ. ಈ ದಿಸೆಯಲ್ಲಿ ಇಂತಹ ಸಾಧನೆಗೆ ಅಪಮಾನ ಮಾಡುವುದು, ಅಂಬೇಡ್ಕರರಂತಹ ಅಪರೂಪದ ಪ್ರತಿಭೆಯನ್ನು ಅಗೌರವಿಸುವುದು, ಅಕ್ಷರಶಃ ತಕ್ಕುದಲ್ಲ. ಇಂತಹ ಹೀನ ಚಾಳಿ ನಿಲ್ಲಲಿ. ಅಂಬೇಡ್ಕರರನ್ನು ಅವರ ಸಾಧನೆಯನ್ನು ಅಸ್ಪಶ್ಯತಾಚರಣೆಯ ಹಿನ್ನೆಲೆಯಲ್ಲಿ ನೋಡುವ ಹಿಂದುತ್ವದ ಚಾಳಿ ತೊಲಗಲಿ ಎಂಬುದಷ್ಟೆ ಸದ್ಯದ ಕಳಕಳಿ.