ಮಕ್ಕಳ ಹೆಸರಲ್ಲೂ ಪ್ರಚಾರ..!
ಮಾನ್ಯರೆ,
ಪುಣೆಯ ಆರು ವರ್ಷದ ಹುಡುಗಿ ವೈಶಾಲಿ ಪ್ರಧಾನಿ ಮೋದಿಗೆ ಪತ್ರ ಬರೆದು ತನ್ನ ಹೃದಯ ಚಿಕಿತ್ಸೆಯ ಬಗ್ಗೆ ಹೇಳಿಕೊಂಡದ್ದು ಹಾಗೂ ಆ ಪತ್ರಕ್ಕೆ ತಕ್ಷಣ ಸ್ಪಂದಿಸಿದ ಮೋದಿ ಅವಳ ಹೃದಯದ ಚಿಕಿತ್ಸೆ ಮಾಡಿಸುವ ವ್ಯವಸ್ಥೆ ಮಾಡಿಸಿ, ಕಳೆದ ತಿಂಗಳು ಅವರು ಪುಣೆಗೆ ಹೋಗಿದ್ದಾಗ ಆ ಹುಡುಗಿಗೆ ಭೇಟಿಯಾಗಿ ಅವಳ ಆರೋಗ್ಯ ವಿಚಾರಿಸಿದ ಸುದ್ದಿ ದೇಶದ ಎಲ್ಲ ಪತ್ರಿಕೆಗಳು ಮತ್ತು ಟಿವಿಗಳು ಬಿತ್ತರಿಸಿ ಪ್ರಶಂಸೆಯ ಸುರಿಮಳೆ ಸುರಿಸಿದವು. ಅಸಲಿ ವಿಷಯವೆಂದರೆ ಹಿಂದಿನ ಒಂದು ವರ್ಷದಿಂದ ಮೋದಿಯ ಪ್ರಚಾರ ವಿಭಾಗವು ಇಂತಹ ಅನೇಕ ಮಕ್ಕಳ ಕಥೆಯನ್ನು ದೇಶದ ಪತ್ರಿಕೆಗಳಲ್ಲಿ ಪ್ಲಾಂಟ್ ಮಾಡುತ್ತಿದೆ ಹಾಗೂ ಇದಕ್ಕೆ ಪೂರಕ ಫೋಟೋಗಳನ್ನು ಮೋದಿ ಹಾಗೂ ಮಕ್ಕಳನ್ನು ಜತೆಯಾಗಿಸಿ ತೆಗೆಯಲಾಗುತ್ತದೆ. ಸಂಘ ಪರಿವಾರದವರು ತಮ್ಮವರದೇ ಮಕ್ಕಳ ಹೆಸರಿನಲ್ಲಿ ತವ್ಮೂರಿನ ರಸ್ತೆ ಸರಿಯಿಲ್ಲ ಅಥವಾ ಇಂತಿಂತಹ ಕುಂದು ಕೊರತೆಯಿದೆ ಎಂದು ಮೋದಿಗೆ ಪತ್ರ ಬರೆಸುತ್ತಾರೆ. ನಂತರ ಪ್ರಧಾನಿ ಕಚೇರಿಯಿಂದ ಅದಕ್ಕೆ ಸಂಬಂಧ ಪಟ್ಟ ಇಲಾಖೆಗೆ ಆದೇಶ ಬಂದಂತೆ ಮಾಡಲಾಗುತ್ತದೆ. ಜತೆಗೆ ಆ ಹುಡುಗನಿಗೆ ಅದರ ಪ್ರತಿ ಸಹ ಕಳುಹಿಸುವ ವ್ಯವಸ್ಥೆಯಾಗುತ್ತದೆ. ನಂತರ ಆ ಪ್ರಧಾನಿ ಕಚೇರಿಯ ಪತ್ರವನ್ನು ಸ್ಥಳೀಯ ಮಾಧ್ಯಮಗಳಿಗೆ ಸಂಘ ಪರಿವಾರದವರು ಬಿಡುಗಡೆ ಮಾಡಿ, ನೋಡಿ ನಮ್ಮ ಪ್ರಧಾನಿ ಎಷ್ಟು ಜನಪರ ಕಾಳಜಿಯುಳ್ಳವರು ಎಂದು ಪ್ರಚಾರ ಮಾಡಲಾಗುತ್ತದೆ.
ಹಿಂದಿನ ಪ್ರಧಾನಿಗಳಿಗೂ ಜನಸಾಮಾನ್ಯರು ಪತ್ರ ಬರೆದರೆ ನಿಯಮದ ಪ್ರಕಾರ ಅದಕ್ಕೆ ಪ್ರಧಾನಿ ಕಚೇರಿ ಉತ್ತರಿಸುತ್ತಲೇ ಇತ್ತು. ಆದರೆ ಆಗ ಸಣ್ಣ ಮಕ್ಕಳನ್ನು ಅದರಲ್ಲಿ ತೂರಿಸಿ ಮಾಧ್ಯಮದ ಮುಂದೆ ಯಾರೂ ನಾಟಕ ಆಡುತ್ತಿರಲಿಲ್ಲ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಇಂತಹ ನಾಟಕಗಳು ನಡೆಯುತ್ತಿರಲಿಲ್ಲ, ಕಾರಣ ಅವರು ಜಗತ್ಪ್ರಸಿದ್ಧ ಆರ್ಥಿಕ ತಜ್ಞರಾಗಿದ್ದರೇ ಹೊರತು ನಾಟಕ ತಜ್ಞರಾಗಿರಲಿಲ್ಲ.