ಚಿಲ್ಕೋಟ್ ವರದಿಯಿಂದ ಭಾರತ ಕಲಿಯಬೇಕಾದ ಪಾಠ ಏನು?
ಬ್ರಿಟಿಷ್ ಸರಕಾರ, ಅಮೆರಿಕವನ್ನು ಅಂಧವಾಗಿ ಅನುಸರಿಸಿ ಇರಾಕ್ ಮೇಲೆ 2003ನೆ ಇಸ್ವಿಯಲ್ಲಿ ದಾಳಿ ನಡೆಸಿದ್ದಕ್ಕೆ ದಾಖಲೆಯನ್ನು ಚಿಲ್ಕೋಟ್ ತನಿಖಾ ಆಯೋಗ ಬಹಿರಂಗಗೊಳಿಸಿದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದವರು ಹೇಗೆ ವಿಫಲರಾದರು ಎನ್ನುವುದನ್ನು ವರದಿ ವಿಸ್ತೃತವಾಗಿ ವಿವರಿಸಿದೆ. ಅಂದಿನ ಪ್ರಧಾನಿಯಾಗಿದ್ದ ಟೋನಿ ಬ್ಲೇರ್ ಅವರಿಂದ ಹಿಡಿದು, ಅವರ ಸಚಿವ ಸಂಪುಟ, ಸಂಸತ್ತು, ಆಡಳಿತ ವ್ಯವಸ್ಥೆ, ಗುಪ್ತಚರ ವಿಭಾಗದ ಅಧಿಕಾರಿಗಳು, ಸೇನಾ ಕಮಾಂಡರ್ಗಳ ವರೆಗೆ ಎಲ್ಲರೂ ಯುದ್ಧಸಿದ್ಧತೆಯಲ್ಲಿ ತೊಡಗಿದ್ದರು ಎನ್ನುವುದನ್ನು ವರದಿ ಸ್ಪಷ್ಟವಾಗಿ ಹೇಳಿದೆ.
ಇದರ ಪರಿಣಾಮವೆಂದರೆ, 150ಕ್ಕೂ ಹೆಚ್ಚು ಮಂದಿ ಬ್ರಿಟಿಷ್ ಸೈನಿಕರು ಇರಾಕ್ನಲ್ಲಿ ಹತರಾದರು. ಆದರೆ ಸಾವು ಹಾಗೂ ವಿನಾಶದ ಸರಣಿಯನ್ನೇ ಕಂಡ ಇರಾಕ್ ದೇಶಕ್ಕೆ ಮಾತ್ರ ಇದು ಘೋರ ದುರಂತವಾಗಿ ಪರಿಣಮಿಸಿತು. ಸಾವು ಹಾಗೂ ವಿನಾಶದ ಸರಣಿ ಇಂದಿಗೂ ಇರಾಕ್ ದೇಶವನ್ನು ಕಾಡುತ್ತಿದೆ. ಆದರೆ, ಇದಕ್ಕಿಂತಲೂ ಕೆಟ್ಟ ಸ್ಥಿತಿ ಎಂದರೆ, ಈ ಯುದ್ಧದ ಬಳಿಕ ಅಲ್ ಖಾಯಿದಾ, ವಿನಾಶಕಾರಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯಾಗಿ ರೂಪಾಂತರವಾದದ್ದು.
ಬ್ರಿಟಿಷ್ ಶೈಲಿಯಲ್ಲಿ ಅರ್ಥಮಾಡಿಕೊಳ್ಳುವುದಾದರೆ, 2003ರಲ್ಲಿ ಇರಾಕ್ನ ಮೇಲೆ ದಾಳಿ ಮಾಡುವುದು ಅನಿವಾರ್ಯ ಕ್ರಮವಾಗಿರಲಿಲ್ಲ ಮತ್ತು ಯುದ್ಧಕ್ಕೆ ಪರ್ಯಾಯ ಮಾರ್ಗಗಳು ಸಂಪೂರ್ಣ ಮುಚ್ಚಿರಲಿಲ್ಲ ಎಂದು ಸ್ಪಷ್ಟಪಡಿಸಿದೆ. ಬ್ಲೇರ್ ಹಾಗೂ ಅವರ ಸರಕಾರವನ್ನು ಅವರದ್ದೇ ಗುಪ್ತಚರ ವಿಭಾಗ ದಿಕ್ಕುತಪ್ಪಿಸಿದೆ ಎನ್ನುವ ಅಂಶ ಸ್ಪಷ್ಟವಾಗುತ್ತದೆ. ಅವರು ಪ್ರಜ್ಞಾಪೂರ್ವಕವಾಗಿಯೇ ಇದನ್ನು ಗುಪ್ತಚರ ವಿಭಾಗದ ಮಾಹಿತಿ ಹಾಗೂ ಅಂಕಿ ಅಂಶಗಳು ಬೆಂಬಲವಾಗಿರಲಿಲ್ಲ ಎಂದು ಬಿಂಬಿಸಲಾಗಿದೆ. ಬ್ಲೇರ್ ಹಾಗೂ ಅವರ ಸಂಪುಟವನ್ನು ಖಂಡಿಸುವುದರಿಂದ ಯಾವ ತಿರುವು ಕೂಡಾ ಸಿಗದು. ಆದರೆ ಖಂಡಿತವಾಗಿಯೂ ಅವರ ಘನತೆಗೆ ಇದರಿಂದ ಖಾಯಂ ಕುಂದು ಉಂಟಾಗಿರುವುದು ನಿಚ್ಚಳ
ದುರದೃಷ್ಟಕರವೆಂದರೆ, ಈ ಎಲ್ಲ ನಡೆಗಳ ಮೂಲವಾಗಿರುವ ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಶ್, ಉಪಾಧ್ಯಕ್ಷ ಡಿಕ್ ಚೆನೆ, ರಕ್ಷಣಾ ಕಾರ್ಯದರ್ಶಿ ಕೊಲಿನ್ ಪಾವೆಲ್, ಸಿಐಎ ಮುಖ್ಯಸ್ಥ ಜಾರ್ಜ್ ಟೆನೆಟ್ ಹಾಗೂ ಇತರ ಸಹವರ್ತಿಗಳು ಯಾವುದೇ ವಿಚಾರಣೆಯ ವ್ಯಾಪ್ತಿಯಿಂದ ಹೊರಗೆ ಉಳಿದಿರುವುದು. ಜತೆಗೆ ಚಿಲ್ಕೋಟ್ ಪ್ರಕ್ರಿಯೆ ಮುಂದಿಟ್ಟ ಐತಿಹಾಸಿಕ ಹೊಣೆಗಾರಿಕೆಯನ್ನೂ ಪ್ರದರ್ಶಿಸದಿರುವುದು.ವರದಿ ಮೂಲಭೂತವಾಗಿ ಇನ್ನೊಂದು ಮಹತ್ವದ ಪ್ರಶ್ನೆಯನ್ನು ಹುಟ್ಟುಹಾಕಿದೆ. ಅಮೆರಿಕದ ಮಿತ್ರರಾಷ್ಟ್ರ ಎಂದರೇನು? ಎನ್ನುವುದು. ನಿಸ್ಸಂದೇಹವಾಗಿ ಬ್ರಿಟನ್, ಅಮೆರಿಕದ ಸಾಮಾನ್ಯ ಮಿತ್ರರಾಷ್ಟ್ರವಲ್ಲ. ಅದು ತೀರಾ ಆಪ್ತ ವಲಯದಲ್ಲಿರುವ ದೇಶ. ಬ್ರಿಟನ್ ಹಾಗೂ ಅಮೆರಿಕ ನಡುವೆ ಆಗಿರುವ ಒಪ್ಪಂದದ ಅನ್ವಯ ಉಭಯ ದೇಶಗಳ ಗುಪ್ತಚರ ವಿಭಾಗ ಅಧಿಕಾರಿಗಳು ಪರಸ್ಪರರ ದೇಶದಲ್ಲಿ ಕಾರ್ಯ ನಿರ್ವಹಿಸಲೂ ಅವಕಾಶವಿದೆ.
ವ್ಯವಸ್ಥೆ ವೈಫಲ್ಯ
ವಿಸ್ತೃತವಾಗಿ ಇರಾಕ್ ಮೇಲೆ ದಾಳಿ ಮಾಡಬೇಕು ಎಂಬ ಅಮೆರಿಕದ ಪ್ರಸ್ತಾವಕ್ಕೆ ಬ್ಲೇರ್ ಬದ್ಧತೆಯನ್ನು ಪ್ರದರ್ಶಿಸಿದ್ದರು. ಬಹುಶಃ ಇದು ನಿಸ್ಸಂದೇಹವಾಗಿ ಅಮೆರಿಕಕ್ಕೆ ಬ್ರಿಟನ್ ತೋರಿಸುವ ನಿಷ್ಠೆಯ ಅಂಶ. ಬ್ರಿಟನ್ ತನ್ನದೇ ನಿಲುವು ಹೊಂದಿರುವ ದೇಶವಾಗಿದ್ದೂ, ಆರ್ಥಿಕವಾಗಿ ಪ್ರಬಲ ಶಕ್ತಿಯಾಗಿದ್ದೂ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ದೇಶವಾದರೂ, ಬೇಷರತ್ತಾಗಿ ಅಮೆರಿಕವನ್ನು ಬೆಂಬಲಿಸುವ ಅಪೇಕ್ಷೆ ನಿಜಕ್ಕೂ ಅಚ್ಚರಿದಾಯಕ. ಇದರ ಪರಿಣಾಮವಾಗಿಯೇ ಚಿಲ್ಕೋಟ್ ವರದಿಯಲ್ಲಿ ಶುಷ್ಕವಾಗಿ, ‘‘ಶಾಂತಿಯುತ ಮಾರ್ಗ ಬತ್ತಿಹೋಗುವ ಮುನ್ನವೇ ಇಂಗ್ಲೆಂಡ್, ಇರಾಕ್ ಮೇಲೆ ದಾಳಿ ನಡೆಸುವ ಅಮೆರಿಕ ನಿರ್ಧಾರವನ್ನು ಬೆಂಬಲಿಸಿತು’’ ಎಂದಷ್ಟೇ ಹೇಳಿದೆ.
ಹೀಗೆ ಬ್ಲೇರ್, ಸಮೂಹ ವಿನಾಶದ ಶಸ್ತ್ರಾಸ್ತ್ರಗಳ ಬಳಕೆ ಬಗ್ಗೆ ಸಂಪುಟ ಹಾಗೂ ಸಂಸತ್ತಿನ ಅಧಿಕಾರವನ್ನು ತಾವೇ ಚಲಾಯಿಸಿ, ತಾವೇ ಕೈಗೊಂಡ ಏಕಪಕ್ಷೀಯ ನಿರ್ಧಾರವನ್ನು ಸಮರ್ಥಿಸಿಕೊಂಡರು. ಇರಾಕ್ ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳನ್ನು ಬಳಕೆ ಮಾಡುತ್ತಿದೆ ಎಂಬ ಕಾಲ್ಪನಿಕ ಕಥೆ ಸೃಷ್ಟಿಸಿ, ಈ ಕಾರಣದಿಂದ ಇರಾಕ್ನ ಮೇಲೆ ನಡೆಯುತ್ತಿರುವ ದಾಳಿ ಸಮರ್ಥನೀಯ ಎಂದು ಮುಖಂಡರು ಮನವರಿಕೆಯಾಗುವಂತೆ ಮಾಡಲಾಯಿತು.
ಈ ಪ್ರಕರಣದಲ್ಲಿ ಇಡೀ ವ್ಯವಸ್ಥೆಯೇ ಗೋಜಲುಮಯ. ಪ್ರಮುಖ ಸಭೆಗಳ ಟಿಪ್ಪಣಿಗಳನ್ನು ದಾಖಲಿಸಿಕೊಳ್ಳಲು ನಾಗರಿಕ ಸೇವಕರು ವಿಫಲರಾದರೆ, ಸಂಪುಟ ಸಮಿತಿಗಳ ಅಧಿಕಾರವನ್ನು ಮೀರಲಾಯಿತು. ಏನು ನಡೆಯುತ್ತಿದೆ ಎಂಬ ಬಗ್ಗೆ ಸಂಪುಟವನ್ನು ಕೂಡಾ ಕತ್ತಲಲ್ಲಿಡಲಾಯಿತು. ಆದರೆ ಇರಾಕ್ನ ಸಾಮೂಹಿಕ ವಿನಾಶದ ಅಸ್ತ್ರಗಳ ಗುಮ್ಮ ಹುಟ್ಟಿಸುವ ವಿಚಾರ ಮಾತ್ರ ಬ್ಲೇರ್ಗೆ ಎಲ್ಲರಿಗಿಂತ ಚೆನ್ನಾಗಿ ತಿಳಿದಿತ್ತು. ಯುದ್ಧದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಹುರಿದುಂಬಿಸಿದ ಸೇನಾ ಮುಖ್ಯಸ್ಥರಿಗೆ ಕೂಡಾ ಇದು ಅರಿವಿಗೆ ಬಂದಿತ್ತು. ಆದರೆ ಬಳಿಕ ಸರಕಾರದ ವಿರುದ್ಧವೇ ಸೇನಾ ಮುಖ್ಯಸ್ಥರು ತಿರುಗಿಬಿದ್ದು, ಬ್ರಿಟಿಷ್ ಸೇನೆಗೆ ಸೂಕ್ತ ಶಸ್ತ್ರಾಸ್ತ್ರಗಳನ್ನು ನೀಡಲಿಲ್ಲ, ಹೆಚ್ಚೆಂದರೆ ಬ್ರಿಟಿಷ್ ಸೇನೆ ಪೂರಕ ಪಾತ್ರ ನಿರ್ವಹಿಸಿತು ಎಂದು ಹೇಳಿತ್ತು. ಬಾಸ್ರಾ ಹಾಗೂ ಅಫ್ಘಾನಿಸ್ತಾನದ ಹೆಲ್ಮಂಡ್ನಲ್ಲಿ ಬ್ರಿಟಿಷ್ ಸೇನೆಯ ಈ ದೌರ್ಬಲ್ಯ ಜಗಜ್ಜಾಹೀರಾಯಿತು.
ಹೀಗೆ ಕಟುವಾಸ್ತವವನ್ನು ಕಡೆಗಣಿಸಿ, ದುಡುಕಿನ ನಿರ್ಧಾರ ಕೈಗೊಳ್ಳುವ ಮನೋಪ್ರವೃತ್ತಿಯಿಂದ ಪಾಶ್ಚಾತ್ಯ ದೇಶಗಳು ಸಿರಿಯಾ ಹಾಗೂ ಲಿಬಿಯಾ ವಿಚಾರದಲ್ಲೂ ಹಸ್ತಕ್ಷೇಪ ಮಾಡಿದ್ದನ್ನು ಮರೆಯುವಂತಿಲ್ಲ. ಇದರಿಂದಾಗಿ ಉಭಯ ದೇಶಗಳ ವ್ಯವಸ್ಥೆಯ ನಾಶ ಅಥವಾ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಯಿತು. ಇದರ ಪರಿಣಾಮಗಳು ಇನ್ನಷ್ಟೇ ಬೆಳಕಿಗೆ ಬರಬೇಕಿವೆ.
ಕಾರ್ಗಿಲ್ನಿಂದ ಪಾಠ
ಇರಾಕ್ ವಿರುದ್ಧದ ದಾಳಿಯಲ್ಲಿ ಭಾರತ ಕೂಡಾ ಅಮೆರಿಕದ ಬೆಂಬಲಕ್ಕೆ ನಿಲ್ಲಬೇಕಿತ್ತು ಎಂಬ ಒತ್ತಾಯ ಸರಕಾರ ಹಾಗೂ ಸಾರ್ವಜನಿಕ ವಲಯದಿಂದ ಕೇಳಿಬಂದದ್ದು ಹೊರತುಪಡಿಸಿದರೆ ಚಿಲ್ಕೋಟ್ ವರದಿ ನೇರವಾಗಿ ಭಾರತಕ್ಕೆ ಪ್ರಸ್ತುತ ಅಲ್ಲದಿರಬಹುದು. ಭಾರತಕ್ಕೆ ಹೀಗೆ ಮಾಡುವಂತೆ ಅಮೆರಿಕದ ಒತ್ತಡ ವ್ಯಾಪಕವಾಗಿ ಇತ್ತು. ಆದರೆ ಅದೃಷ್ಟವಶಾತ್, ನಮಗೆ ಆಗ ಸಮಚಿತ್ತದ ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದ ಕಾರಣ, ಈ ಪ್ರಸ್ತಾವವನ್ನು ತಳ್ಳಿಹಾಕಿದರು.
ಭಾರತ ಕೂಡಾ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಹಲವು ವಿಚಾರಣೆಗಳನ್ನು ನಡೆಸಿದೆ. 1962ರಲ್ಲಿ ಹೆಂಡರ್ಸನ್-ಬ್ರೂಕ್ಸ್ ಸಮಿತಿ ನೀಡಿದ ವರದಿಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಅಷ್ಟಾಗಿಯೂ ಈ ವರದಿಯ ಪ್ರಮುಖ ಅಂಶಗಳು ಸೋರಿಕೆಯಾಗಿದ್ದು, ಇಲ್ಲಿ ತನಿಖೆ ನಾಮಕಾವಸ್ಥೆಯದ್ದಾಗಿತ್ತು ಹಾಗೂ ಸೇನೆಯ ಕೇಂದ್ರ ಕಚೇರಿಗೆ ಭೇಟಿ ನೀಡಲು ವಿಚಾರಣಾ ಸಮಿತಿಗೆ ಅವಕಾಶವನ್ನೂ ನೀಡಿರಲಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿದುಬಂದಿತ್ತು. ಇಷ್ಟೇ ಅಲ್ಲದೆ, ಪ್ರಧಾನಿ ಕಚೇರಿ ಹಾಗೂ ರಕ್ಷಣಾ ಸಚಿವಾಲಯಕ್ಕೂ ಇವರಿಗೆ ಪ್ರವೇಶವೇ ನೀಡಿರಲಿಲ್ಲ.
1999ರ ಕಾರ್ಗಿಲ್ ಪರಾಮರ್ಶೆ ಆಯೋಗ ಕೂಡಾ, ಕಾರ್ಗಿಲ್ ಗಡಿ ನುಸುಳಿವಿಕೆಗೆ ಏನು ಕಾರಣ ಎಂಬ ಅಂಶದ ಬಗ್ಗೆ ಹೆಚ್ಚಿನ ಬೆಳಕು ಚೆಲ್ಲದೆ, ಅತ್ಯಂತ ಜಾಗರೂಕವಾಗಿ ಈ ವಿಷಯವನ್ನು ತಪ್ಪಿಸಲಾಯಿತು. ಈ ವರದಿಯನ್ನು ತನಗೆ ಬೇಕಾದಂತೆ ಮಾರ್ಪಾಡು ಮಾಡಿಕೊಂಡು ಬಹಿರಂಗಪಡಿಸಿ, ಪ್ರಜ್ಞಾಪೂರ್ವಕವಾಗಿ ಯಾರೊಬ್ಬರ ಮೇಲೂ ವೈಯಕ್ತಿಕ ಟೀಕೆ ಮಾಡಲಿಲ್ಲ. ಆದರೆ ಇದು ದೇಶದಲ್ಲಿ ಮೊಟ್ಟಮೊದಲ ಬಾರಿಗೆ ರಾಷ್ಟ್ರೀಯ ಭದ್ರತಾ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗೆ ಕಾರಣವಾಯಿತು. 2002ರ ಸಂಪುಟ ಸದಸ್ಯರ ಸಮಿತಿ ವರದಿಯ ಮೂಲಕ ಈ ಮಹತ್ವದ ಬದಲಾವಣೆ ಮಾಡಲಾಯಿತು.
ಇರಾಕ್ ಯುದ್ಧಕ್ಕೆ ಹೋಲಿಸಿದರೆ, ಕಾರ್ಗಿಲ್ ವಿಚಾರ ತೀರಾ ಕ್ಷುಲ್ಲಕ. ಪಾಕಿಸ್ತಾನ ನುಸುಳುಕೋರರನ್ನು ಹಿಮ್ಮೆಟ್ಟಿಸುವಲ್ಲಿ ಭಾರತದ ಸೈನಿಕರು, ಇರಾಕ್ ದಾಳಿಯಲ್ಲಿ ಮೃತಪಟ್ಟ ಬ್ರಿಟಿಷ್ ಸೈನಿಕರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮೃತಪಟ್ಟಿದ್ದರೂ, ಇದು ಇರಾಕ್ನಷ್ಟು ಗಂಭೀರ ವಿಚಾರವಲ್ಲ.
ಆದರೆ ಇಲ್ಲಿ ಕೆಲವೊಂದು ಸಾಮ್ಯತೆಗಳಿವೆ. ಮೂಲಭೂತವಾಗಿ ಗುಪ್ತಚರ ವಿಭಾಗದ ಸೇವೆಯ ವೈಫಲ್ಯ. ಆಯೋಗದ ಅಧ್ಯಕ್ಷರಾಗಿದ್ದ ಕೆ.ಸುಬ್ರಮಣ್ಯಮ್ ಅವರು ಸಾಕಷ್ಟು ಪ್ರಯತ್ನ ನಡೆಸಿದರೂ, ವರದಿಯ ಅನುಬಂಧ ಬಿಡುಗಡೆ ಮಾಡುವಂತೆ ಸರಕಾರದ ಮನವೊಲಿಸುವಲ್ಲಿ ವಿಫಲರಾದರು. ಇದರಲ್ಲಿ ನಿರ್ದಿಷ್ಟ ವೈಫಲ್ಯಗಳನ್ನು ಪಟ್ಟಿ ಮಾಡಲಾಗಿತ್ತು. ಈ ಕಾರಣದಿಂದಾಗಿ ಗುಪ್ತಚರ ಸೇವಾ ವೈಫಲ್ಯಕ್ಕೆ ಹೊಣೆಗಾರರಾದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗದ ಮುಖ್ಯಸ್ಥರನ್ನು ಅವರ ನಿವೃತ್ತಿ ಬಳಿಕ ಅರುಣಾಚಲ ಪ್ರದೇಶದ ರಾಜ್ಯಪಾಲರಾಗಿ ನೇಮಕ ಮಾಡಲಾಯಿತು!
ಹಿರಿಯ ಅಧಿಕಾರಿಗಳ ತಲೆದಂಡ ತಪ್ಪಿಸುವ ಸಲುವಾಗಿ ಹಲವು ಕಿರಿಯ ಅಧಿಕಾರಿಗಳ ಮೇಲೆ ಗೂಬೆ ಕೂರಿಸಿ ಶಿಕ್ಷಿಸಲಾಯಿತು. ಇದರಿಂದ ಮೇಲ್ಸ್ತರದ ಅಧಿಕಾರಿಗಳು ತಮ್ಮ ಅಧೀನದ ಅಧಿಕಾರಿಗಳನ್ನು ಬಲಿಪಶುವಾಗಿ ಮಾಡಿ ತಾವು ತಪ್ಪಿಸಿಕೊಂಡರು. ಪಾಕಿಸ್ತಾನದ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ ಯಶಸ್ಸಿನ ಹಿಂದೆ ಈ ವೈಫಲ್ಯಗಳನ್ನು ಮುಚ್ಚಿಹಾಕಲಾಯಿತು. ಇಷ್ಟಾಗಿಯೂ 500ಕ್ಕೂ ಹೆಚ್ಚು ಮಂದಿ ಅಮಾಯಕ ಯುವ ಸೈನಿಕರು ಜೀವ ಕಳೆದುಕೊಳ್ಳುವಂತಾಯಿತು. ದಾಳಿಯನ್ನು ಮುಂಚಿತವಾಗಿಯೇ ಅರಿಯುತ್ತಿದ್ದರೆ, ನಮ್ಮ ಸೈನಿಕರು ಬಲಿದಾನವಾಗುವ ಸಾಧ್ಯತೆಯೇ ಇರಲಿಲ್ಲ.
ಚಿಲ್ಕೋಟ್ ವರದಿ ಭಾರತಕ್ಕೆ ಹೇಗೆ ಪ್ರಸ್ತುತ ಎಂದರೆ, ನಾವು ಕೂಡಾ ಬ್ರಿಟಿಷ್ ಶೈಲಿಯ ಆಡಳಿತ ವ್ಯವಸ್ಥೆಯನ್ನೇ ಹೊಂದಿದ್ದೇವೆ. ಇಂಗ್ಲೆಂಡ್- ಇರಾಕ್ ಯುದ್ಧದಲ್ಲಿ ವಿಫಲವಾದ ವಿಭಾಗವೇ ಇಲ್ಲೂ ವಿಫಲವಾಗಿವೆ. ಅಂತೆಯೇ ಪ್ರಧಾನಿ, ಸಂಪುಟ, ಸಂಸತ್ತು, ನಾಗರಿಕ ಸೇವೆ, ಬಾಹ್ಯ ವಿಚಕ್ಷಣಾ ಸೇವೆ, ಜೆಐಸಿ ಹಾಗೂ ಮಿಲಿಟರಿ ಸೇವೆ ಎಲ್ಲವೂ ಸಾಮ್ಯತೆ ಹೊಂದಿವೆ. ಈ ಎಲ್ಲ ಪ್ರಮುಖ ಅಂಗಗಳು ಕೂಡಾ ನಮ್ಮ ರಾಷ್ಟ್ರೀಯ ಭದ್ರತಾ ವಿಷಯಕ್ಕೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ, ಸಾಮರಸ್ಯದಿಂದ ಕೆಲಸ ಮಾಡಿವೆಯೇ?
ಇದು ಏಕೆ ಮಹತ್ವಕ್ಕಾಗುತ್ತದೆ ಎಂದರೆ, ಪ್ರಧಾನಿ ನರೇಂದ್ರ ಮೋದಿ ಯವರು ಅಸಾಮಾನ್ಯ ಪ್ರಬಲರು. ಬಹುಶಃ ಸಂಪುಟ ಸಮಿತಿ ವ್ಯವಸ್ಥೆ ಸಮರ್ಪಕವಾಗಿ ಅದು ಮಾಡಬೇಕಾದ ಕಾರ್ಯವನ್ನು ಮಾಡುತ್ತಿಲ್ಲ. ಭದ್ರತೆ ಕುರಿತ ಸಂಪಟ ಸಮಿತಿಯ ಯಾವೊಬ್ಬ ಸದಸ್ಯರಾದರೂ ಮೋದಿ ವಿರುದ್ಧ ನಿಲ್ಲುವ ಅಥವಾ ಅವರ ನಿರ್ಧಾರಕ್ಕೆ ಅಪಸ್ವರ ಎತ್ತುವ ಧೈರ್ಯ ತೋರಲು ಸಾಧ್ಯವೇ? ಸಂಸತ್ತಿಗೆ ಸಂಬಂಧಿಸಿದಂತೆ ಕಡಿಮೆ ಮಾತನಾಡಿದಷ್ಟೂ ಉತ್ತಮ.
ಇದು ವೃತ್ತಿಪರ ಅಧಿಕಾರಶಾಹಿ, ಗುಪ್ತಚರ ವಿಭಾಗ, ಸಶಸ್ತ್ರ ಪಡೆಗಳಿಗೂ ಅನ್ವಯಿಸುತ್ತದೆ. ಸರಕಾರದ ಬೇಕು ಬೇಡಗಳಿಗೆ ಅನುಗುಣವಾಗಿ ನಿಮ್ಮ ನಿಲುವನ್ನು ಬದಲಿಸಿಕೊಂಡರೆ ನೀವು ನಂಬಿದ ಮುಖಂಡರಿಂದ ನಿಮಗೆ ನಿವೃತ್ತಿಯ ಬಳಿಕವೂ ಹುದ್ದೆ ಸಿಗುತ್ತದೆ!
ಅಮೆರಿಕ ಮೈತ್ರಿಯ ಎಚ್ಚರಿಕೆ
ಇದಕ್ಕೆ ಸಂಬಂಧಿಸಿದಂತೆ ಉದ್ಭವಿಸುವ ಇನ್ನೊಂದು ಪ್ರಶ್ನೆ ಎಂದರೆ, ಅಮೆರಿಕದ ಮಿತ್ರಕೂಟದಲ್ಲಿ ಗುರುತಿಸಿಕೊಳ್ಳುವ ಭಾರತದ ಬಯಕೆ ಬಗೆಗಿನದ್ದು. ಇತಿಹಾಸವನ್ನು ತೆರೆದು ನೋಡಿದರೆ ಹೊಸದಿಲ್ಲಿ, ವಾಷಿಂಗ್ಟನ್ ಜತೆಗೆ ನಿಗದಿತ ಅಂತರವನ್ನು ಇಟ್ಟುಕೊಂಡೇ ಬಂದಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ ಆರ್ಥಿಕ ವಲಯದಲ್ಲಿ ಪ್ರಗತಿ ಕಾಣಲು ಮತ್ತು ರಕ್ಷಣಾ ವ್ಯವಸ್ಥೆ ಆಧುನೀಕರಣ ವಿಷಯದಲ್ಲಿ ವಿಫಲವಾದ ಹಿನ್ನೆಲೆಯಲ್ಲಿ, ಹೆಚ್ಚುತ್ತಿರುವ ಚೀನಾ ಪ್ರಾಬಲ್ಯವನ್ನು ತಡೆಯಲು ಇರುವ ಏಕೈಕ ಅವಕಾಶವೆಂದರೆ ಅಮೆರಿಕ ಜತೆ ಕೈಜೋಡಿಸುವುದು ಎನ್ನುವ ಭಾರತೀಯ ಮನೋಭಾವ. ಅಂಥ ಕ್ರಮದ ಕರಾಳ ಪರಿಣಾಮ ಏನಾಗುತ್ತದೆ ಎನ್ನುವುದನ್ನು ಚಿಲ್ಕೋಟ್ ವರದಿ ಸ್ಪಷ್ಟಪಡಿಸಿದೆ. ಅದರಲ್ಲೂ ಮುಖ್ಯವಾಗಿ ಸಮರ್ಪಕವಾಗಿ ಕಾರ್ಯನಿರ್ವಹಿಸುವ ಸಾಂಸ್ಥಿಕ ವ್ಯವಸ್ಥೆಗಳಾದ ಸಿಸಿಎಸ್ ಹಾಗೂ ಸಂಸತ್ತು, ಆಡಳಿತ ಹಾಗೂ ಮಿಲಿಟರಿ ನಾಯಕತ್ವ ಗೊಡವೆ ಇಲ್ಲದಂತಿರುವ ಸಂದರ್ಭದಲ್ಲಿ ಇದು ಹೆಚ್ಚು ಸೂಕ್ತ.
ಯುದ್ಧ ಎನ್ನುವುದು ಆಣ್ವಸ್ತ್ರ ಯುಗವಾದ ಇಂದಿನ ದಿನಗಳಲ್ಲಿ ತೀರಾ ಗಂಭೀರ ವ್ಯವಹಾರ. ವೃತ್ತಿಪರ ಸಲಹೆ ಹಾಗೂ ನಿರ್ಧಾರಗಳನ್ನು ಹೆಚ್ಚು ತುಲನಾತ್ಮಕವಾಗಿ ನೋಡಬೇಕು. ಮೋದಿ ಹಾಗೂ ಸಂಪುಟ ಸದಸ್ಯರಿಗೆ ವಿದೇಶಿ ಆಗುಹೋಗುಗಳ ಬಗ್ಗೆ, ಅಂತಾರಾಷ್ಟ್ರೀಯ ರಾಜಕೀಯ, ರಾಷ್ಟ್ರೀಯ ಬದ್ಧತೆ ಪರಿಕಲ್ಪನೆ ಸ್ಪಷ್ಟವಾಗಿ ಇರಬೇಕು. ಇಂದಿನ ತುರ್ತು ಅಗತ್ಯವೆಂದರೆ, ಇಂಥ ವಿಷಯಗಳ ಬಗ್ಗೆ ಸಮರ್ಪಕ ಸಲಹೆ ಸಿಗುವಂತೆ ನೋಡಿಕೊಳ್ಳುವುದು. ರಾಜಕಾರಣಿಗಳು ಇಂಥ ವ್ಯವಸ್ಥೆಯಲ್ಲಿ ಶಿಫಾರಸುಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿರುವಂತೆ ನೋಡಿಕೊಳ್ಳಬೇಕು.
ಅದರಲ್ಲೂ ಮುಖ್ಯವಾಗಿ ಮುಕ್ತ ಮಾಧ್ಯಮ ಸದಾ ಸರಕಾರವನ್ನು ಯುದ್ಧರಂಗಕ್ಕೆ ಪ್ರಚೋದಿಸುತ್ತಲೇ ಇರುತ್ತದೆ. ಜತೆಗೆ ಕೆಲ ಪ್ರಾಜ್ಞರು, ಮಾಡಬಹುದು ಎಂಬ ಅಭಿಪ್ರಾಯವನ್ನೇ ಹುಟ್ಟುಹಾಕುವ ಪ್ರಯತ್ನದಲ್ಲಿರು ತ್ತಾರೆ. ಇದು ಬ್ರಿಟನ್- ಅಮೆರಿಕ ಇರಾಕ್ ಯುದ್ಧದ ಸಂದರ್ಭದಲ್ಲಿ ಆದ ದುರಂತವಾಗಿಯೇ ಪರಿಣಮಿಸುತ್ತದೆ.