ಸರಕು ಮತ್ತು ಸೇವಾತೆರಿಗೆ: ತೆರಿಗೆ ವ್ಯವಸ್ಥೆಯಲ್ಲಿ ದಿಟ್ಟ ಹೆಜ್ಜೆ
ಕೇಂ ದ್ರ ಸರಕಾರ ಕೇಂದ್ರೀಯ ಅಬಕಾರಿ ಸುಂಕ, ಹೆಚ್ಚುವರಿ ಅಬಕಾರಿ ಸುಂಕ, ಸೇವಾ ತೆರಿಗೆ ಹೆಚ್ಚುವರಿ ಸೀಮಾ ಸುಂಕ, ಸರ್ಚಾರ್ಜ್, ಸೆಸ್ ಮತ್ತು ರಾಜ್ಯ ಸರಕಾರಗಳ ವ್ಯಾಟ್/ಸೇವಾ ತೆರಿಗೆ, ಮನರಂಜನಾ ತೆರಿಗೆ ಐಷಾರಾಮಿ ತೆರಿಗೆ, ಲಾಟರಿ/ಬೆಟ್ಟಿಂಗ್ಸ್, ಪ್ರವೇಶ ತೆರಿಗೆ, ರಾಜ್ಯ ಸೆಸ್, ಸರ್ಚಾರ್ಜ್... ಹೀಗೆ ಸುಮಾರು 17ಕ್ಕಿಂತ ಹೆಚ್ಚು ರೀತಿಯ ತೆರಿಗೆಗಳನ್ನು ವಿಧಿಸುತ್ತಿದ್ದು, ಜನಸಾಮಾನ್ಯರು ಸರಕಾರಕ್ಕೆ ತೆರಿಗೆ ನೀಡಿ ಸುಸ್ತಾಗುತ್ತಿದ್ದಾರೆ. ಈ ಜಂಜಾಟದಲ್ಲಿ ತೆರಿಗೆ ಸಂಗ್ರಹ ಕಡಿಮೆಯಾಗುತ್ತಿದ್ದು ಮತ್ತು ಕೆಲವು ವಸ್ತುಗಳು ಮತ್ತು ಸೇವೆಗಳು ತೆರಿಗೆ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳುತ್ತಿದ್ದವು. ತೆರಿಗೆ ದರ ಮತ್ತು ತೆರಿಗೆಗಳು ರಾಜ್ಯಗಳಲ್ಲಿ ಏಕರೂಪದ್ದಾಗಿರದೆ, ಉದ್ಯಮಿಗಳು ಪೂರಕ ಅವಕಾಶವನ್ನು ಅಲಕ್ಷಿಸಿ ತೆರಿಗೆ ಉಳಿಸುವ ಪ್ರದೇಶವನ್ನು ಹುಡುಕುತ್ತಿದ್ದರು. ಗಡಿ ಭಾಗದ ಜನರು ನಾಲ್ಕು ಕಾಸು ಉಳಿಸಲು ಪಕ್ಕದ ರಾಜ್ಯಕ್ಕೆ ಹೋಗುವುದು ಸಾಮಾನ್ಯ ವಾಗಿತ್ತು. ಪುದುಚೇರಿಯಲ್ಲಿ ಕಾರು ಕೊಳ್ಳುವುದು ಅಥವಾ ಹತ್ತಿರದ ವರು ಗೋವಾದಲ್ಲಿ ಪೆಟ್ರೋಲ್ ತುಂಬಿಸುವುದು ಕೆಲವು ಉದಾಹರಣೆಗಳು.
ಈ ಗೊಂದಲ, ಮನಬಂದಂತೆ ತೆರಿಗೆ ವಿಧಿಸುವುದು ಮತ್ತು ಸರಕಾರದ ಆದಾಯದ ಸೋರಿಕೆಯನ್ನು ನೋಡಿದ ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು 2000ರಲ್ಲಿ ಪಶ್ಚಿಮ ಬಂಗಾಲದ ಹಣಕಾಸು ಮಂತ್ರಿ ಅಸೀಮ ದಾಸ್ ಗುಪ್ತಾ ನೇತೃತ್ವದಲ್ಲಿ ಸರಕು ಮತ್ತು ಸಾರಿಗೆ ತೆರಿಗೆ ಕಾನೂನಿನ ಸಂವಿಧಾನ ತಿದ್ದುಪಡಿ ಮಸೂದೆಯ ಕರಡು ತಯಾರಿಸಲು ಸಮಿತಿಯೊಂದನ್ನು ನೇಮಿಸಿದ್ದರು. 1954ರಲ್ಲಿ ಫ್ರಾನ್ಸ್ ದೇಶದಲ್ಲಿ ಆರಂಭವಾಗಿ, ಸದ್ಯ 150 ದೇಶಗಳಲ್ಲಿ ಪ್ರಚಲಿತ ಇರುವ ಈ ಪರೋಕ್ಷ ಮತ್ತು ಸರಳ ತೆರಿಗೆ ಪದ್ಧತಿಯನ್ನು ನಮ್ಮ ದೇಶದಲ್ಲೂ ಜಾರಿಗೊಳಿಸುವುದು ಅವರ ಕನಸಾಗಿತ್ತು. 2006ರಲ್ಲಿ ಆಗಿನ ಹಣಕಾಸು ಮಂತ್ರಿ ಚಿದಂಬರಂ ಇದನ್ನು ಸಂಸತ್ತಿನಲ್ಲಿ ಪ್ರಸ್ತಾಪ ಮಾಡಿದ್ದರು ಮತ್ತು 2009ರಲ್ಲಿ ಉನ್ನತಾಧಿಕಾರ ಸಮಿತಿಯೊಂದು ಸಮಸ್ತ ನೀತಿ ನಿರೂಪಣೆಯನ್ನು ಸಲ್ಲಿಸಿತ್ತು. 2011ರಲ್ಲಿ ಸಂವಿಧಾನದ 115ನೆ ತಿದ್ದುಪಡಿಯಾಗಿ ಸಂಸತ್ತಿನಲ್ಲಿ ಮಂಡಿಸಲಾಗಿತ್ತು. ಆದರೆ, ರಾಜಕೀಯ ಇಚ್ಛ್ಚಾ ಶಕ್ತಿಯ ಕೊರತೆ, ರಾಜಕೀಯ ಅಹಂ ಮತ್ತು ಹೊಂದಾಣಿಕೆಯ ವಿಫಲತೆಯಿಂದಾಗಿ ಇದು ಕಾರ್ಯಗತವಾಗಿಲ್ಲ.
ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ 2014ರಲ್ಲಿ ಈ ಮಸೂದೆಯನ್ನು ಸಂವಿಧಾನದ 122ನೆ ತಿದ್ದುಪಡಿಯಾಗಿ ಪುನಃ ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಸಾಕಷ್ಟು ಹಗ್ಗ-ಜಗ್ಗಾಟ, ಪರದೆಯ ಹಿಂದಿನ ಚರ್ಚೆಯ ನಂತರ ಮಸೂದೆಗೆ ರಾಜ್ಯಸಭೆಯ ಅಂಗೀಕಾರ ದೊರಕಿದೆ. ಇದು ಸಂವಿಧಾನ ತಿದ್ದುಪಡಿ ಮಸೂದೆ. ಆದುದರಿಂದ ಮೂರನೆ ಎರಡರಷ್ಟು ಬಹುಮತ ಬೇಕಾಗುತ್ತದೆ. ಮಸೂದೆ ಪುನಃ ಲೋಕಸಭೆಯಲ್ಲಿ ಅಂಗೀಕಾರವಾಗಿ, 29 ರಾಜ್ಯಗಳ ಪೈಕಿ ಕನಿಷ್ಠ 15 ರಾಜ್ಯಗಳು ಇದಕ್ಕೆ ಅನುಮೋದನೆ ನೀಡಿದ ನಂತರ, ಇದು ಕಾಯ್ದೆಯಾಗುತ್ತದೆ. ಈಗಿನ ನಿರೀಕ್ಷೆಯ ಪ್ರಕಾರ ಕಾಯ್ದೆ ಎಪ್ರಿಲ್ 1, 2017ರಿಂದ ಜಾರಿ ಆಗುವ ಸಾಧ್ಯತೆಗಳಿವೆ. ಈ ಕಾಯ್ದೆ ಜಾರಿಯಾಗದಿರುವುದರ ಬಗೆಗೆ, ವಾಣಿಜ್ಯೋದ್ಯಮ ಸಂಘಗಳು, ಆರ್ಥಿಕ ತಜ್ಞರು ಮತ್ತು ಜನಸಾಮಾನ್ಯರು ಸಾಕಷ್ಟು ಆಕ್ರೋಶ ವ್ಯಕ್ತ ಮಾಡಿರುವುದರಿಂದ, ಇದು ಯುದ್ಧೋಪಾದಿಯಲ್ಲಿ ಜಾರಿಯಾಗುವ ಲಕ್ಷಣವಿದೆ.
ನಮ್ಮ ಸಂವಿಧಾನ ವ್ಯವಸ್ಥೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ತೆರಿಗೆಯನ್ನು ವಿಧಿಸಬಹುದು. ಇದಕ್ಕೂ ಒಂದು ಮಿತಿ ಇದೆ. ಕೇಂದ್ರ ಸರಕಾರವು ಸೇವಾ ತೆರಿಗೆಯನ್ನು ವಿಧಿಸಬಹುದು ಮತ್ತು ಕೆಲವು ಪದಾರ್ಥ ಗಳ ಉತ್ಪಾದನಾ ಹಂತದಲ್ಲಿ ತೆರಿಗೆಯನ್ನು ವಿಧಿಸಬಹುದು. ಆದರೆ, ರಾಜ್ಯ ಸರಕಾರಗಳು ಮಾರಾಟ ಹಂತದಲ್ಲಿ ಮಾತ್ರ ತೆರಿಗೆಯನ್ನು ವಿಧಿಸಬಹುದು. ಕೇಂದ್ರ ಸರಕಾರ ಮಾರಾಟ ಹಂತದಲ್ಲಿ ತೆರಿಗೆಯನ್ನು ವಿಧಿಸಲಾಗದು. ರಾಜ್ಯ ಸರಕಾರಗಳು ಸೇವಾ ತೆರಿಗೆಯನ್ನು ವಿಧಿಸಲಾಗದು. ಸರಕು ಮತ್ತು ಸಾರಿಗೆ ತೆರಿಗೆ ಕಾಯ್ದೆಯ ನಂತರ ರಾಜ್ಯ ಮತ್ತು ಕೇಂದ್ರ ಸರಕಾರಗಳೆರಡೂ ಸರಕು ಮತ್ತು ಸೇವಾ ತೆರಿಗೆಗಳನ್ನು ವಿಧಿಸಬಹುದು. ಅಂತೆಯೇ ಈ ಮಸೂದೆಗೆ ಸಂವಿಧಾನ ತಿದ್ದುಪಡಿಯ ಅಗತ್ಯವಿದೆ. ಈ ಪರಿಕಲ್ಪನೆ ಜಗತ್ತಿನಲ್ಲಿ ಆರಂಭವಾಗಿ 54 ವರ್ಷಗಳ ನಂತರ ಮತ್ತು ಭಾರತದಲ್ಲಿ ಪ್ರಸ್ತಾವಿತವಾಗಿ 16 ವರ್ಷಗಳ ನಂತರ ಜಾರಿಗೆ ಬರುತ್ತಿದೆ.
ಈ ಕಾಯ್ದೆಯ ಜಾರಿಯಿಂದಾಗುವ ಲಾಭಗಳೇನು?
ಈಗಿರುವ ಎಲ್ಲಾ 17 ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗಳ ಬದಲಾಗಿ ಕೇಂದ್ರ ಮತ್ತು ರಾಜ್ಯ ಜಿಎಸ್ಟಿ ತೆರಿಗೆಗಳೆರಡೇ ಇರುತ್ತವೆ. ಕ್ಲಿಷ್ಟಕರವಾದ ತೆರಿಗೆ ಪದ್ಧ್ದತಿಯ ಸರಳೀಕರಣವಾಗುತ್ತದೆ. ಗ್ರಾಹಕರಿಗೆ ಸರಕುಗಳು ಮತ್ತು ಸೇವೆಗಳು ಅಗ್ಗವಾಗುತ್ತವೆ.
ಗ್ರೋಸ್ ಡೊಮೆಸ್ಟಿಕ್ ಪ್ರೊಡಕ್ಟ್ ಸುಮಾರು ಶೇ. 2 ಹೆಚ್ಚಳವಾಗುವ ನಿರೀಕ್ಷೆ. ಉತ್ಪಾದನೆ ಮತ್ತು ಸೇವೆ ಮೇಲೆ ಸಮನಾದ ತೆರಿಗೆ ಹೊರೆ. ಕ್ಯಾಪಿಟಲ್ ಗೂಡ್ಸ್ ಮೇಲೆ ಶೇ. 12-14 ತೆರಿಗೆ ಕಡಿಮೆಯಾಗಲಿದೆ. ಹೊಸ ತೆರಿಗೆ ವ್ಯವಸ್ಥೆಯಿಂದ ಹೂಡಿಕೆದಾರರಿಗೆ ಉದ್ಯಮಿ ಸ್ನೇಹಿ ವಾತಾವರಣದ ನಿರ್ಮಾಣ. ಪಾರದರ್ಶಕ ಮತ್ತು ಭ್ರಷ್ಟಾಚಾರ ಮುಕ್ತ ತೆರಿಗೆ ವ್ಯವಸ್ಥೆಯ ಆಶಾಭಾವನೆ. ತೆರಿಗೆ ಕಳ್ಳತನ ಕಡಿಮೆಯಾಗುತ್ತದೆ. ಒಂದು ಪದಾರ್ಥದ ಮೇಲೆ ಈಗ ತೆರಿಗೆ ಶೇ. 30ರವರೆಗೆ ಇದ್ದು, ಇದು ಶೇ. 18ಕ್ಕೆ ಸೀಮಿತವಾಗುವ ಸಂಭವವಿದೆ. ವಿಶ್ಲೇಷಕರ ಪ್ರಕಾರ 300 ರೂ. ಬೆಲೆಯ ಸಿಮೆಂಟ್ ಬ್ಯಾಗ್ಗೆ ಈಗ ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಸೇರಿದರೆ 66 ರೂಪಾಯಿಗಳು ತೆರಿಗೆ ಇದ್ದು, ಈ ಕಾಯ್ದೆಯ ನಂತರ ಇದು 44 ರೂಪಾಯಿಗೆ ಇಳಿಯುತ್ತದೆ. ಸರಕು ಸಾಗಣೆ ವೆಚ್ಚ ಕಡಿಮೆಯಾಗುತ್ತದೆ. ಟೋಲ್ ಪ್ಲಾಝಾದಲ್ಲಿ ಕಾಯುವಿಕೆ ಕಡಿಮೆಯಾಗುತ್ತದೆ ಮತ್ತು ಪ್ರವೇಶ ಶುಲ್ಕ ಇರುವುದಿಲ್ಲ. ಅಮೆರಿಕದಂತೆ ಭಾರತದಲ್ಲೂ ಟ್ರಕ್ಕುಗಳು 280 ಕಿ.ಮೀ.ಬದಲು ದಿನಕ್ಕೆ 800 ಕಿ.ಮಿ. ಕ್ರಮಿಸಬಹುದು.
ಬಹುತೇಕ ಏಕರೂಪ ತೆರಿಗೆ ಇದ್ದು, ಉದ್ಯಮಿಗಳು ತೆರಿಗೆ ಬಿಟ್ಟು ಪೂರಕ ಸೌಲಭ್ಯಗಳ ಬಗೆಗೆ ಚಿಂತಿಸಿದರೆ ಸಾಕು. ತೆರಿಗೆ ವ್ಯಾಪ್ತಿ ವಿಸ್ತಾರ ಗೊಳ್ಳುತ್ತಿದ್ದು, ಬಹುತೇಕ ಎಲ್ಲಾ ವಸ್ತುಗಳು ಮತ್ತು ಸೇವೆಗಳು ತೆರಿಗೆಗೆ ಒಳಪಡುತ್ತವೆ ಮತ್ತು ತೆರಿಗೆ ಸಂಗ್ರಹ ಹೆಚ್ಚುತ್ತದೆ. ಈ ವ್ಯವಸ್ಥೆಯಿಂದ ಒಂದು ಲಕ್ಷ ಕೋಟಿ ತೆರಿಗೆ ಸಂಗ್ರಹ ಹೆಚ್ಚಳವಾಗುವ ಸಂಭವ ಇದೆ. ವಸ್ತು ಒಂದು ಉತ್ಪಾದನೆ ಆಗುವ ಹಂತದಿಂದ, ಗ್ರಾಹಕನ ಕೈಗೆ ತಲುಪುವ ಹೊತ್ತಿಗೆ ವಿವಿಧ ಹಂತದಲ್ಲಿ ತೆರಿಗೆ ಹಾಕಲಾಗುತ್ತಿದ್ದು, ಈ ಕಾಯ್ದೆಯ ನಂತರ ವಸ್ತು ಅಥವಾ ಮೌಲ್ಯವರ್ಧಿತ ಮೊತ್ತಕ್ಕೆ ಮಾತ್ರ ತೆರಿಗೆ ವಿಧಿಸಲಾಗುವುದು. ದ್ವಿಚಕ್ರವಾಹನಗಳು, ಕಾರುಗಳು, ಕಾರು ಬ್ಯಾಟರಿಗಳು, ಪೈಂಟ್, ಸಿಮೆಂಟ್, ಹೋಟೆಲ್ ಊಟ ಮತ್ತು ವಿಮಾನ ಟಿಕೆಟ್ ದರಗಳು ಕಡಿಮೆಯಾಗುವ ಅಂದಾಜು. ಆನ್ಲೈನ್ ವಹಿವಾಟಿಗೆ ನಿರ್ಬಂದ ಕಡಿಮೆಯಾಗುತ್ತದೆ.
ಕಾಯ್ದೆಯಲ್ಲಿ ಏನಾದರೂ ಲೋಪಗಳಿವೆಯೇ?
ಪರೋಕ್ಷ ತೆರಿಗೆ ವ್ಯವಸ್ಥೆಯ ನಿಟ್ಟಿನಲ್ಲಿ ಒಂದು ದಿಟ್ಟ ಹೆಜ್ಜೆ ಎಂದು ಬಣ್ಣಿಸಲ್ಪಟ್ಟರೂ, ಈ ವ್ಯವಸ್ಥೆಯಲ್ಲಿ ಕೆಲವು ನ್ಯೂನತೆಗಳಿವೆ. ‘ಒಂದು ದೇಶ..ಒಂದು ತೆರಿಗೆ’ ಎನ್ನುವ ಕನಸು ಪೂರ್ಣಗೊಂಡಿಲ್ಲ. ಕೇಂದ್ರ ಮತ್ತು ರಾಜ್ಯ ಜಿಎಸ್ಟಿ ಎನ್ನುವ ಎರಡು ರೀತಿಯ ತೆರಿಗೆಗಳು ಇವೆ. ಹಾಗೆಯೇ ಗರಿಷ್ಠ ಶೇ. 18 ತೆರಿಗೆ ಎನ್ನುವುದು ಸ್ಪಷ್ಟವಾಗಿಲ್ಲ. ಇದು ಕಾಲ ಕ್ರಮೇಣ ಹೆಚ್ಚಾಗುವುದನ್ನು ಅಲ್ಲಗಳೆಯಲಾಗದು. ಜಗತ್ತಿನಾದ್ಯಂತ ಇದು 14.1 ರಿಂದ ಶೇ. 16.8 ಇದೆ. ರಾಜ್ಯ ಸರಕಾರಗಳಿಗೆ ಹೆಚ್ಚಿನ ಆದಾಯವನ್ನು ನೀಡುವ ಪೆಟ್ರೋಲಿಯಂ, ತಂಬಾಕು ಮತ್ತು ಅಬಕಾರಿಯನ್ನು ಜಿಎಸ್ಟಿಯಿಂದ ಹೊರಗೆ ಇಟ್ಟದ್ದು ಚರ್ಚೆಗೆ ಗ್ರಾಸವಾಗಿದೆ. ಇವುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತಂದಿದ್ದರೆ ದರ ಸುಮಾರು ಶೇ. 40ರಷ್ಟು ಇಳಿದು ಪೆಟ್ರೋಲ್ ಮತ್ತು ಡೀಸೆಲ್ಗಳು 45 ಮತ್ತು 35 ರೂಪಾಯಿಗೆ ಸಿಗುತ್ತಿತ್ತು ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಈಗಿರುವ ಸೇವಾ ತೆರಿಗೆ ಶೇ. 14.5ನಿಂದ 18ರವರೆಗೆ ಏರುವ ಸಂಭವ ಇದ್ದು, ಇದು ಹಣದುಬ್ಬ ರದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿವೆ.