ದಲಿತರು, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ತಡೆಯುವೆ
ನಾನು ಭಾರತದ ಪ್ರಧಾನಿಯಾದರೆ...
ಜಾತಿ, ಧರ್ಮ, ಭಾಷೆ, ಪಂಗಡ, ಕುಲ, ಗೋತ್ರ, ವರ್ಣ ಭೇದವಿಲ್ಲದೆ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸರ್ವರನ್ನು ನೆನೆಯುತ್ತಾ ಸಮಸ್ತ ನಾಗರಿಕರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳು.
ದೇಶದ ಪ್ರತಿಯೋರ್ವ ಪ್ರಜೆಯು ಸೌಹಾರ್ದ ಹಾಗೂ ಸಹಬಾಳ್ವೆಯೊಂದಿಗೆ ಜೀವನ ಸಾಗಿಸುವ ಮೂಲಕ ಜಾತ್ಯತೀತ ರಾಷ್ಟ್ರದಲ್ಲಿ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಲು ಮುಂದಾಗೋಣ.
ಪ್ರಸಕ್ತ ಭಾರತದಲ್ಲಿ ರಕ್ಷಕರೆಂದು ಸ್ವಯಂ ಘೋಷಿತ ಕೆಲವೊಂದು ಗುಂಪುಗಳು ಕ್ಷುಲ್ಲಕ ಕಾರಣಕ್ಕೆ ಧರ್ಮ-ಧರ್ಮಗಳ ಮಧ್ಯೆ ವಿಷ ಬೀಜಗಳನ್ನು ಬಿತ್ತಿ ಮನಸ್ಸುಗಳನ್ನು ಹೊಡೆಯುವ ಮೂಲಕ ಅಶಾಂತಿಯನ್ನು ಸೃಷ್ಟಿಸುತ್ತಿದ್ದು, ಅಮಾಯಕ ಜೀವಗಳು ಬಲಿಯಾಗುತ್ತಿದೆ. ಇಂತಹ ಸಮಯದಲ್ಲಿ ದೇಶದಲ್ಲಿ ಶಾಂತಿ ಪುನರ್ ಸ್ಥಾಪನೆಗೆ ಮುಂದಾಗಬೇಕಾದ ರಾಜಕೀಯ ಪಕ್ಷಗಳು ಘಟನೆಗಳನ್ನು ರಾಜಕೀಯವಾಗಿ ಬಳಸಿಕೊಳ್ಳುತ್ತಿರುವುದು ಅತ್ಯಂತ ವಿಷಾದನೀಯ.
ಮನುಕುಲವನ್ನೇ ನಾಶ ಮಾಡಲು ಹೊರಟಿರುವ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಐಸಿಸ್ ವಿರುದ್ಧ ಸಮರ ಸಾರಲು ಮುಂದಾಗುವುದರೊಂದಿಗೆ ಇವರು ನಮ್ಮ ದೇಶ ಪ್ರವೇಶಿಸದಂತೆ ಎಚ್ಚರವಹಿಸೋಣ. ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ದಲಿತರ ಹಾಗೂ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದಾಳಿಗಳು ಅತ್ಯಂತ ಖಂಡನೀಯ. ಹಾಗೂ ಇಂತಹ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಆಯಾ ರಾಜ್ಯ ಸರ್ಕಾರಗಳು ಮತ್ತು ಪೊಲೀಸ್ ಇಲಾಖೆ ಯಾವುದೇ ರೀತಿಯ ಒತ್ತಡಕ್ಕೆ ಮಣಿಯದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.
ದೇಶದಲ್ಲಿರುವ ಪ್ರತಿಯೋರ್ವ ಪ್ರಜೆಯು ಉನ್ನತಮಟ್ಟದ ವಿಧ್ಯಾಭ್ಯಾಸವನ್ನು ಪಡೆದು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸಾದ ಸರ್ವರಿಗೂ ಸಮಬಾಳು ಸರ್ವರಿಗೂ ಸಮಪಾಲು ಎಂಬ ಸಾಮಾಜಿಕ ನ್ಯಾಯದ ಉತ್ತಮ ಸಮಾಜ ನಿರ್ಮಾಣ ಮಾಡಲು ಮುಂದಾಗೋಣ.
ಜೈ ಭಾರತ