ಅತಿಕ್ರಮಣ ತೆರವು: ಅಮಾಯಕರು ಬೀದಿಗೆ?
ಬೆಂಗಳೂರಿನಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಾಚರಣೆ, ಅಮಾಯಕರನ್ನು ಹೇಗೆ ದುರುಪಯೋಗ ಮಾಡಿಕೊಳ್ಳಬಹುದು ಎನ್ನು ವುದಕ್ಕೆ ಇನ್ನೊಂದು ಜೀವಂತ ಉದಾಹರಣೆ. ಕಳೆದ ವರ್ಷ ಬೆಂಗಳೂರಿನ ಸಾರಕ್ಕಿ ಕೆರೆ ಆಸುಪಾಸಿನಲ್ಲಿ ನಡೆದ ಮನೆ ತೆರವುಗೊಳಿಸುವ ಜೆಸಿಬಿ ಕಾರ್ಯಾಚರಣೆಯ ಹೃದಯ ವಿದ್ರಾವಕ ದೃಶ್ಯಗಳು ಇನ್ನೂ ಜನರ ಮನಸ್ಸಿನಲ್ಲಿ ಹಸಿರಾಗಿರುವಾಗಲೇ, ಕಳೆದ ಒಂದು ವಾರದಿಂದ ಪುನಃ ಜೆಸಿಬಿ ಸದ್ದು ಬೆಂಗಳೂರಿನಲ್ಲಿ ಜೋರಾಗಿ ಕೇಳುತ್ತಿದೆ. ಈ ಬಾರಿ ಸದ್ದು ತೀವ್ರವಾಗಿದ್ದು, ಹಲವು ದಿನಗಳ ಕಾಲ ಕಾರ್ಯಾಚರಣೆ ನಡೆಯುವ ಸಾಧ್ಯತೆ ಕಂಡುಬರುತ್ತಿದೆ. ಇದು ದೇಶಾದ್ಯಂತ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿವೆ. ಒಂದೆರಡು ದಿನಗಳ ಮಳೆ ಕಳೆದ ವರ್ಷದ ಚೆನ್ನೈಯಂಥ ಪ್ರವಾಹ ಸೃಷ್ಟಿಸಿದ್ದು, ಜನರು ಮನೆಯಿಂದ ಹೊರಬರಲು ಮತ್ತು ರಸ್ತೆಯಲ್ಲಿ ಓಡಾಡಲು ದೋಣಿಯನ್ನು ಬಳಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನರ ಮತ್ತು ಮಾಧ್ಯಮಗಳ ಆಕ್ರೋಶವನ್ನು ತಡೆಯಲಾಗದೆ ಸರಕಾರ ಮುನ್ನೆಚ್ಚರಿಕೆ ಕ್ರಮವಾಗಿ ಯುದ್ಧೋಪಾದಿಯಲ್ಲಿ ಈ ಕಾರ್ಯವನ್ನು ಕೈಕೊಂಡಿದೆ ಎಂದು ಹೇಳಲಾಗುತ್ತಿದೆ. ಸರಕಾರ ವಿಳಂಬವಾದರೂ ನೆರೆ ಮತ್ತು ಪ್ರವಾಹದ ನಿಟ್ಟಿನಲ್ಲಿ ಗಮನಹರಿಸಿದ್ದು ಮತ್ತು ಕ್ರಮ ತೆಗೆದುಕೊಳ್ಳುತ್ತಿರುವುದು ಸ್ವಾಗತಾರ್ಹ.
ಆದರೆ, ಸಮಸ್ಯೆ ದಿನಬೆಳಗಾಗುವುದರೊಳಗಾಗಿ ಸೃಷ್ಟಿಯಾದುದಲ್ಲ ಮತ್ತು ಯಾವುದೇ ಒಂದು ನಿರ್ದಿಷ್ಟ ರಾಜಕೀಯ ಪಕ್ಷ ಅಧಿಕಾರದಲ್ಲಿ ಇದ್ದಾಗ ನಡೆದುದಲ್ಲ. ಇದಕ್ಕೆ ದಶಕಗಳ ಇತಿಹಾಸ ಇದ್ದು, ಈ ರಾಜ್ಯವನ್ನು ಆಳಿದ ಪ್ರತಿಯೊಂದು ರಾಜಕೀಯ ಪಕ್ಷಗಳ ಮೂಗಿನ ಕೆಳಗೆ ನಡೆದಿದೆ. ಯಾರಾದರೂ ಒಂದು ಮನೆ ಕಟ್ಟಿಸಿದರೆ, ಅದು ಕ್ರಯಪತ್ರ, ನೋಂದಣಿ, ಖಾತಾ ಎಂಟ್ರಿ, ನಕ್ಷೆ ತಯಾರಿಕೆ, ನಕ್ಷೆ ಮಂಜೂರಿ, ವಾಸ್ತವ್ಯ ಪ್ರಮಾಣ ಪತ್ರ, ನೀರು, ಒಳಚರಂಡಿ, ವಿದ್ಯುತ್, ಟೆಲಿಫೋನ್ ಸಂಪರ್ಕ ಹೀಗೆ ಹಲವು ಹಂತಗಳಲ್ಲಿ ಸಂಬಂಧ ಪಟ್ಟ ಕಾಗದಪತ್ರಗಳು ಪರಿಶೀಲನೆಗೊಳಪಡುತ್ತವೆ. ಹಾಗೆಯೇ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಪ್ರತಿಯೊಬ್ಬರೂ ಬ್ಯಾಂಕ್ಗಳಲ್ಲಿ ಸಾಲ ಮಾಡಿ ಮನೆ ಕಟ್ಟಿಸುತ್ತಿದ್ದು, ಎಲ್ಲಾ ಕಾಗದಪತ್ರಗಳು ಬ್ಯಾಂಕ್ನ ಕಾನೂನು ಸಲಹೆಗಾರರ ಆಮೂಲಾಗ್ರ ಪರಿಷ್ಕರಣೆಗೆ ಒಳಪಡುತ್ತವೆ. ಬ್ಯಾಂಕ್ಗಳು ಗೃಹ ನಿರ್ಮಾಣಕ್ಕಾಗಿ ದೊಡ್ಡ ಮೊತ್ತದ ಸಾಲಕೊಡುತ್ತಿದ್ದು, ಕಾಗದ ಪತ್ರಗಳ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ನಿವೇಶನ ಅಥವಾ ಮನೆ ಖರೀದಿಸಿದವರು ರಿಯಲ್ ಎಸ್ಟೇಟ್ ವಿಚಾರದಲ್ಲಿ ಅನುಭವಿಗಳು ಮತ್ತು ಕಾನೂನು ಪಂಡಿತರಿರುವುದಿಲ್ಲ. ಅವರು ಸಾಮಾನ್ಯವಾಗಿ ಬ್ರೋಕರುಗಳು, ಮಾರಾಟಗಾರರು ಮತ್ತು ಸಂಬಂಧಿತ ಇಲಾಖೆಗಳವರ ಹೇಳಿಕೆ ಮೇಲೆ ವ್ಯವಹರಿಸುವುದೇ ಹೆಚ್ಚು. ಬ್ಯಾಂಕ್ನವರು ನಿವೇಶನ ಖರೀದಿಸಲು, ಮನೆಕಟ್ಟಲು ಅಥವಾ ಫ್ಲಾಟ್ ಕೊಳ್ಳಲು ಸಾಲ ನೀಡಿದ್ದಾರೆ ಎಂದರೆ, ಈ ವ್ಯವಹಾರ ಕಾನೂನಾತ್ಮಕವಾಗಿ ಪರಿಪೂರ್ಣ ಮತ್ತು ದೋಷರಹಿತ ಎಂದೇ ಜನರು ಭಾವಿಸುತ್ತಾರೆ. ಇದಕ್ಕೆ ಕಾರಣ, ಬ್ಯಾಂಕ್ನವರು ಕೇಳುವ ದಾಖಲೆಗಳು, ಕಾಗದಪತ್ರಗಳು ಮತ್ತು ಅವರು ಅವುಗಳನ್ನು ಜಾಲಾಡುವ ವೈಖರಿ. ಆದರೂ ಈ ಗೊಂದಲವೇಕೆ? ಇದರ ಅರ್ಥ ಯಾವುದೋ ಒಂದು ಹಂತದಲ್ಲಿ, ಕಾನೂನಾತ್ಮಕ ಲೋಪವನ್ನು ಬಚ್ಚಿಟ್ಟು, ಬದಿಗೊತ್ತಿ ಡೀಲ್ ಕುದುರಿಸಲಾಗಿತ್ತೇ? ಅಥವಾ ಈ ನಿಟ್ಟಿನಲ್ಲಿ ಸಂಬಂಧಪಟ್ಟವರು ಸರಿಯಾದ ಮಾರ್ಗದರ್ಶನ ನೀಡಲಿಲ್ಲವೇ? ‘‘ನಮ್ಮಲ್ಲಿ ‘ಎ’ ಖಾತಾ ಪ್ರಮಾಣ ಪತ್ರವಿದೆ, ವಾಸ್ತವ್ಯ ಪ್ರಮಾಣ ಪತ್ರವಿದೆ, ಸರಕಾರಿ ಸಂಸ್ಥೆಗಳು ನೀಡಿದ ನಿರಕ್ಷೇಪಣಾ ಪತ್ರವಿದೆ, ಕಂದಾಯ ಕೊಟ್ಟ ರಶೀದಿ ಇದೆ, ನಕ್ಷೆ ಮಂಜೂರಾತಿ ಇದೆ ಮತ್ತು ಬ್ಯಾಂಕ್ಗಳು ಸಾಲವನ್ನೂ ನೀಡಿವೆ. ಈ ಎಲ್ಲವು ಇದ್ದೂ ನಮ್ಮ ಮನೆಗಳಿಗೆ ಜೆಸಿಬಿ ನುಗ್ಗಿಸಿದ್ದೇಕೆ’’ ಎನ್ನುವ ಅವರ ಪ್ರಶ್ನೆಯಲ್ಲಿ ಅರ್ಥವಿದೆ. ಮನೆ ಕಟ್ಟಲು ಅನುಮತಿ ಕೊಡುವಾಗ ಕಾಣದ ಲೋಪ ಈಗ ಧುತ್ತೆಂದು ಕಂಡಿದ್ದು ಹೇಗೆ ಎನ್ನುವುದಕ್ಕೆ ಸಮಾಜಾಯಿಸಿ ಬೇಕಾಗಿದೆ. ‘‘ಮನೆ ಕಟ್ಟಲು ಅನುಮತಿ ಕೊಟ್ಟವರನ್ನು ಎದುರಿಗೆ ನಿಲ್ಲಿಸಿಕೊಂಡು ಮನೆ ಒಡೆಯಿರಿ’’ ಎಂದು ಆಕ್ರಂದನ ಮಾಡುವವರ ಆಕ್ರೋಶದಲ್ಲಿ ಅರ್ಥವಿಲ್ಲದಿಲ್ಲ.
ಒತ್ತುವರಿ ನಿಟ್ಟಿನಲ್ಲಿ ಸರಕಾರ ಕ್ರಮ ತೆಗೆದುಕೊಳ್ಳುತ್ತಿದ್ದು, ಹಲವು ತಪ್ಪಿತಸ್ಥರ ತಲೆದಂಡವಾಗಬಹುದು. ಆದರೆ, ಜೀವನದ ಮಹದುದ್ದೇಶವಾದ, ತಲೆ ಮೇಲೊಂದು ಸೂರಿಗಾಗಿ, ಹೊಟ್ಟೆ-ಬಟ್ಟೆ ಕಟ್ಟಿ, ಸಾಲ-ಸೋಲ ಮಾಡಿ, ಜೀವಮಾನದ ಉಳಿತಾಯವನ್ನು ಇದಕ್ಕಾಗಿ ಸುರಿದು ಕೈಖಾಲಿ ಮಾಡಿಕೊಂಡವರ ಪಾಡೇನು? ಇವರ ಆಕ್ರಂದನ, ಆಕ್ರೋಶವನ್ನು ಸಂತೈಸುವವರು ಯಾರು? ಈಗಾಗಲೇ ಆಧಿಕಾರಯುತ ವಾಣಿಯೊಂದು ಈ ಎಲ್ಲ ಅವಾಂತರಗಳಿಗೆ ಮನೆ ಮಾಲಕರನ್ನೇ ದೂರಿದ್ದು, ತನಿಖೆ ಹಿಡಿಯುವ ಮಾರ್ಗ ಕಾಣುತ್ತಿದೆ. ಬಹುತೇಕ ಮನೆ ಮಾಲಕರು ಮನೆಗಾಗಿ ಬ್ಯಾಂಕ್ ಸಾಲ ಮಾಡಿದ್ದು, ಈ ಸಾಲದ ತೀರುವಳಿ ಹೇಗೆ? ಸರ್ವಸವನ್ನೂ ಕಳೆದುಕೊಂಡವರ ಬಳಿ ಬ್ಯಾಂಕ್ನವರು ಯಾವ ಮುಖದಲ್ಲಿ ಸಾಲ ವಸೂಲಿಗೆ ಹೋಗಬಹುದು? ಬ್ಯಾಂಕಿನವರು ಈ ನಿಟ್ಟಿನಲ್ಲಿ ಹೇಗೆ ಮುಂದುವರಿಯಬಹುದು ಎನ್ನುವುದನ್ನು ಗೃಹಸಾಲಿಗರು ಕಾತುರದಿಂದ ಕಾಯುತ್ತಿದ್ದಾರೆ. ಇದು ಸುದೀರ್ಘ ಕಾನೂನು ಸಮರಕ್ಕೂ ಒಳಪಡಬಹುದು. ಮುಂದಿನ ದಿನಗಳಲ್ಲಿ ಬ್ಯಾಂಕ್ ಗೃಹಸಾಲ ಇನ್ನೂ ಕ್ಲಿಷ್ಟಕರವಾಗಬಹುದು. ಇನ್ನೂ ಹಲವು ಹತ್ತು ದಾಖಲೆಗಳನ್ನು ಕೇಳಬಹುದು. ದಾಖಲೆಗಳ ಸತ್ಯತೆ ಬಗೆಗೆ ಮತ್ತು ದಾಖಲೆಗಳನ್ನು ನೀಡಿದವರ ಅಧಿಕಾರ ವ್ಯಾಪ್ತಿ ಬಗೆಗೆ ಇನ್ನೊಂದು ಅಫಿದಾವಿತ್ ಅನ್ನ್ನೂ ಕೇಳಬಹುದು. ಮನೆಯನ್ನು ವಿಮೆ ಮಾಡುವ ಕಂಪೆನಿಗಳೂ ಹತ್ತು ಬಾರಿ ವಿಚಾರಿಸಬಹುದು.
ಬೆಂಗಳೂರಿನಲ್ಲಿ ಐಟಿ ಕ್ರಾಂತಿಯ ನಂತರ ಹೌಸಿಂಗ್ ಕ್ರಾಂತಿ ವೇಗ ಪಡೆದಿದ್ದು, ಆ ಧಾವಂತದಲ್ಲಿ ಸ್ವಂತ ಮನೆ ಮಾಡಿಕೊಳ್ಳುವ ಆತುರದಲ್ಲಿ ಇರುವವರನ್ನು, ಕೆಲವು ಹಿತಾಸಕ್ತಿಗಳು ದುರುಪಯೋಗ ಮಾಡಿಕೊಂಡಿರ ಬಹುದು ಎನ್ನುವ ಮಾತೂ ಕೇಳಿಬರುತ್ತಿದೆ. ಇದರ ಸತ್ಯಾಸತ್ಯತೆ ಏನೇ ಇರಲಿ, ಇದು ವ್ಯವಸ್ಥೆಯ ವಿಫಲತೆಯ, ಕಾನೂನನ್ನು ದೃಢವಾಗಿ ಪಾಲಿಸದಿ ರುವ ಜೀವಂತ ಉದಾಹರಣೆ.
ತಪ್ಪುಯಾರದ್ದೇ ಇರಲಿ, ಕಾರಣ ಏನೇ ಇರಲಿ...ತಮ್ಮ ಕಣ್ಣೆದುರೇ ತಾವು ಬೆವರು ಸುರಿಸಿ ಕಟ್ಟಿಸಿದ ಸೂರು ಜೆಸಿಬಿಗೆ ಬಲಿಯಾಗುವುದು ಜೀವನದ ಮಹಾದುರಂತ ಮತ್ತು ವಿಷಾದನೀಯ ಬೆಳವಣಿಗೆ. ಸೂರು ಮಾಡುವವರಿಗೆ ಎಚ್ಚರಿಕೆಯ ಗಂಟೆ ಕೂಡಾ.