ಮಾನವೀಯತೆಯ ಅದಃಪತನ
ಮಾಧ್ಯಮಗಳ ವರದಿಗಳ ಪ್ರಕಾರ ಒಡಿಶಾ ರಾಜ್ಯದ ಕಾಳಹಂಡಿ ಜಿಲ್ಲೆ, ಬಡತನ, ಬರ, ಹಸಿವು ಮತ್ತು ಹಿಂದುಳಿದಿರುವಿಕೆಯ ನಿಟ್ಟಿನಲ್ಲಿ ಸದಾ ಸುದ್ದಿಯಲ್ಲಿರುತ್ತದೆ. ಸೃಷ್ಟಿಯ ಮುನಿಸು ಇಲ್ಲಿ ಸದಾ ಕಾಣುತ್ತಿದೆ ಎಂದೂ ಹೇಳಲಾಗುತ್ತಿದೆ. ಈ ಬಾರಿ ಈ ಜಿಲ್ಲೆ ಮನುಷ್ಯ ಕುಲ ತಲೆ ತಗ್ಗಿಸುವಂತಹ ಹೃದಯವಿದ್ರಾವಕ ಘಟನೆಗೆ ಸಾಕ್ಷಿಯಾಗಿದೆ. ಹಾಗೆಯೇ ಬಡತನ ಎಷ್ಟು ಕ್ರೂರವಾಗಿರುತ್ತದೆ ಎನ್ನುವುದನ್ನೂ ತೋರಿಸಿದೆ. ಇದು ಉತ್ತರಾಖಂಡ, ಕಾಶ್ಮೀರ ಮತ್ತು ಚೆನ್ನೈಯಂತೆ ನಿಸರ್ಗ ಮಾಡಿದ ಅನಾಹುತವಲ್ಲ. ಇದು ಪ್ರಜ್ಞಾವಂತ ಆಡಳಿತ ಶಾಹಿ ಮಾನವೀಯತೆಯನ್ನು ಮರೆತ ಮತ್ತು ಮಾನವ ಕುಲ ಕೆಟ್ಟ ಕನಸಿನಲ್ಲೂ ಕ್ಷಮಿಸಲಾಗದ ಘನಘೋರ ಕೃತ್ಯ.
ಆ್ಯಂಬುಲೆನ್ಸ್ಗೆ ಕೊಡಲು ದುಡ್ಡಿಲ್ಲದೆ ಕ್ಷಯರೋಗ ಪೀಡಿತ ಪತ್ನಿಯ ಮೃತಶರೀರವನ್ನು 10 ಕಿ.ಮೀ. ವರೆಗೆ ಹೊತ್ತುಕೊಂಡು ಸಾಗಿರುವ ಮನಕಲುಕುವ ಈ ಘಟನೆ ದೇಶಾದ್ಯಂತ ಸುದ್ದಿಮಾಡಿದೆ. ವ್ಯಾಪಕ ಚರ್ಚೆ ಆಗುತ್ತಿದೆ. ಜಗತ್ತಿನ ಆರನೆ ಶ್ರೀಮಂತ ದೇಶವೆಂದು ಕೊಚ್ಚಿಕೊಳ್ಳುತ್ತಿರುವ ದೇಶದಲ್ಲಿ, ಬಡತನದ ತಾಂಡವ ನೃತ್ಯದ ಉದಾಹರಣೆ ಇದು. ‘ಈ ದೇಶ ಬಡವರಿಂದ ತಂಬಿದ ಶ್ರೀಮಂತ ದೇಶ’ ಎನ್ನುವ ಕೆಲವು ಅರ್ಥ ಶಾಸ್ತ್ರಜ್ಞರ ಅಭಿಪ್ರಾಯದ ಹಿಂದಿನ ಆಧಾರ ಇದು. ಈ ಘಟನೆಯ ಬಗ್ಗೆ ಜನರ ಆಕ್ರೋಶ ಏರುತ್ತಿರುವಂತೆ, ಈ ಘಟನೆಯನ್ನು ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಿ, ಸಂಬಂಧಪಟ್ಟವರನ್ನು ಮತ್ತು ಸರಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಈ ಘಟನೆ ಜನರ ಮನದಲ್ಲಿ ಇನ್ನೂ ಹಸಿರಾಗಿರುವಂತೆ, ರೈಲು ಅಪಘಾತದಲ್ಲಿ ಮೃತಳಾದವಳ ಶವವನ್ನು ಮೂರು ತುಂಡುಗಳನ್ನಾಗಿ ಮಾಡಿ ಗೋಣಿಚೀಲದಲ್ಲಿ ತುಂಬಿ ಸಾಗಿಸಿದ ಸುದ್ದಿಯೂ ವರದಿಯಾಗಿದೆ. ಮಾಧ್ಯಮಗಳಲ್ಲಿ ವರದಿಯಾಗದ ಇಂತಹ ಪ್ರಕರಣಗಳು ಎಷ್ಟೋ?
ಈ ಘಟನೆಯನ್ನು ಸಮಗ್ರವಾಗಿ ವಿಚಾರಣೆ ಮಾಡುವಂತೆ ಒಡಿಶಾ ಸರಕಾರ ಉನ್ನತ ಅಧಿಕಾರಿಗಳ ಸಮಿತಿಯೊಂದನ್ನು ನೇಮಿಸಿದೆ. ಇಂತಹ ಸಮಿತಿಗಳು ಜನತೆಯ ಆಕ್ರೋಶವನ್ನು ತಡೆಯಲು, ಮಾಧ್ಯಮಗಳನ್ನು ಸುಮ್ಮನಾಗಿಸಲು ಮತ್ತು ಸರಕಾರ ಸುಮ್ಮನೆ ಕುಳಿತಿಲ್ಲ, ಘಟನೆಯನ್ನು ಗಂಭೀರವಾಗಿ ಪರಿಗಣಿಸಿದೆ ಎಂದು ಜಗತ್ತಿಗೆ ತಿಳಿಸಲು ಮತ್ತು ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಕುಟಿಲೋಪಾಯ ಎನ್ನುವ ಜನಸಾಮಾನ್ಯರ ಅಭಿಪ್ರಾಯದಲ್ಲಿ ಹುರುಳಿಲ್ಲದಿಲ್ಲ. ಈ ದೇಶದಲ್ಲಿ ಇಂತಹ ಸಾವಿರಾರು ಸಮಿತಿಗಳಾಗಿವೆ, ಅವುಗಳು ವರದಿಗಳನ್ನೂ ಕೊಟ್ಟಿವೆ. ಯಾರಿಗಾದರೂ ಈ ವರದಿಗಳ ಆಧಾರದ ಮೇಲೆ ಶಿಕ್ಷೆಯಾಗಿದೆಯೇ? ಆಗಿದ್ದರೆ, ಶಿಕ್ಷೆಯ ಪ್ರಮಾಣವೆಷ್ಟು? ಇಂತಹ ವರದಿಗಳು ಸರಕಾರದ ಪರವಾಗಿ ಇದ್ದರೆ ಮತ್ತು ವಿರೋಧ ಪಕ್ಷಗಳ ತೇಜೋವಧೆ ಮಾಡುವಂತಿದ್ದರೆ, ಅವು ಬೆಳಕು ಕಾಣುತ್ತವೆ. ಇಲ್ಲದಿದ್ದರೆ ಸಮಿತಿಯ ವರದಿಗಳನ್ನು ಅಭ್ಯಸಿಸಿ ಶಿಫಾರಸು ಮಾಡಲು ಇನ್ನೊಂದು ಸಣ್ಣ ಸಮಿತಿಯನ್ನು ನೇಮಿಸಲಾಗುತ್ತದೆ. ಸಮಿತಿಗಳು ಮತ್ತು ಅವುಗಳ ವರದಿಗಳು ಮತ್ತು ಅವುಗಳ ಅನುಷ್ಠಾನದ ಬಗೆಗಿನ ಇತಿಹಾಸದ ಮೇಲೆ ಕಣ್ಣಾಡಿಸಿದರೆ, ಇಂತಹ ವರದಿಗಳು ವ್ಯವಸ್ಥೆಯ ವಿಫಲತೆಯನ್ನು ಗುರಿಯಾಗಿಸಿ ಮತ್ತು ಅದರ ಹಿಂದಿನ ಅಧಿಕಾರಿಗಳನ್ನು ರಕ್ಷಿಸಿದ ಉದಾಹರಣೆಗಳೇ ಹೆಚ್ಚು ಕಾಣುತ್ತವೆ. ಕೆಳಗಿನ ಅಧಿಕಾರಿಗಳನ್ನು ಮತ್ತು ಎರಡನೆ ದರ್ಜೆ ಗುಮಾಸ್ತರನ್ನು ಮಾತ್ರ ಹೊಣೆಮಾಡಲಾಗುತ್ತದೆ. ನಿಜವಾದ ಹೊಣೆಗಾರರಾದವರು ನುಣುಚಿಕೊಳ್ಳುತ್ತಾರೆ. ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ಸರಿಪಡಿಸುವ, ಚುರುಕುಗೊಳಿಸುವ ಮತ್ತು ಸಂಬಂಧ ಪಟ್ಟವರಿಗೆ ಎಚ್ಚರಿಕೆ ನೀಡುವ ಭರವಸೆ ನೀಡಲಾಗುತ್ತದೆ. ಹಾಗೆಯೇ ಇನ್ನೆಂದೂ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ತೆಗೆದುಕೊಳ್ಳುವ ಆಶ್ವಾಸನೆಯನ್ನು ಕೊಡಲಾಗುತ್ತದೆ. ನ್ಯಾಯ ಒದಗಿಸುವುದಕ್ಕಿಂತ ನ್ಯಾಯ ಒದಗಿಸಿದಂತೆ ಮಾಡುವ ಪ್ರಕ್ರಿಯೆ ಅನಾವರಣಗೊಳ್ಳುತ್ತದೆ. ಈ ಘಟನೆ ಯಲ್ಲಿ, ‘‘ಆ ವ್ಯಕ್ತಿ ಸ್ವಲ್ಪ ಹೊತ್ತು ಕಾದಿದ್ದರೆ, ಆಸ್ಪತ್ರೆ ಆ್ಯಂಬುಲೆನ್ಸ್ ಒದಗಿಸುತ್ತಿತ್ತು’’ ಎಂದು ಹೇಳುವ ಮೂಲಕ, ಸಂಬಂಧಪಟ್ಟ ಉನ್ನತಾಧಿಕಾರಿಯೊಬ್ಬರು ವಿಚಾರಣೆ ನಡೆಯುವ ಹಾದಿಯ ನಕ್ಷೆಯನ್ನು ತೋರಿಸಿದ್ದಾರೆ. ಈ ಘಟನೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾದರೂ, ಆ ವ್ಯಕ್ತಿಗೆ ಆದ ಮಾನಸಿಕ ಯಾತನೆ, ಕ್ಷೋಭೆ ಮತ್ತು ಹೃದಯಕ್ಕಾದ ನೋವು ನಿವಾರಣೆಯಾಗಬಹುದೇ?
ಈ ಘಟನೆ ದೇಶದ ಆಭಿವೃದ್ಧಿ, ಪ್ರಗತಿ, ಹಣದುಬ್ಬರ, ತಲಾ ಆದಾಯ, ಜಿಡಿಪಿ, ಬಡತನ ನಿವಾರಣೆ, ಕೈಗೊಂದು ಕೆಲಸ, ತಲೆ ಮೇಲೊಂದು ಸೂರು ಮುಂತಾದವುಗಳ ಬಗೆಗೆ ಈ ವರೆಗಿನ ಸರಕಾರಗಳು, ಕೆಲವು ಮಾಧ್ಯಮ, ರಿಸರ್ವ್ ಬ್ಯಾಂಕ್, ಯೋಜನಾ ಆಯೋಗ ಮತ್ತು ಹಣಕಾಸು ಸಚಿವಾಲ ಯಗಳು ನೀಡುವ ಹೇಳಿಕೆಗಳನ್ನು ಪ್ರಶ್ನಿಸುವಂತಿದೆ. ಸ್ವಾತಂತ್ರ್ಯಾನಂತರದ 70 ವರ್ಷಗಳ ನಂತರವೂ ಕಿತ್ತು ತಿನ್ನುವ ಬಡತನ ಈ ದೇಶವನ್ನು ಕಾಡುತ್ತಿದೆ. ಬಡತನ ಸುಲಭವಾಗಿ ನಿವಾರಣೆಯಾಗದಷ್ಟು ಆಳದಲ್ಲಿದೆ. ದೇಶದ ಅಭಿವೃದ್ಧಿಯನ್ನು ಮತ್ತು ಪ್ರಗತಿಯನ್ನು ದೇಶದಲ್ಲಿರುವ ಮೊಬೈಲ್ ಸಂಪರ್ಕ, ಅಂತರ್ಜಾಲ, ಮುಂಬೈ ಸೆನ್ಸೆಕ್ಸ್ ಏರಿಕೆ, ಹೆಚ್ಚಿರುವ ವಿಮಾನಸಾರಿಗೆ, ಷಟ್ಪಥ ರಸ್ತೆ, ಬುಲೆೆಟ್ ರೈಲು ಮತ್ತು ಪಂಚತಾರಾ ಹೊಟೇಲ್ಗಳ ಸಂಖ್ಯೆಯ ಮೇಲೆ ನಿರ್ಧರಿಸಲಾಗದು.