ಇದು ಜಯಲಲಿತಾರ ಸೇಡಿನ ಭಾವನೆ
ಮಾನ್ಯರೆ,
ಸೆಪ್ಟಂಬರ್ 2014ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾರ ಅಕ್ರಮ ಆಸ್ತಿಯ ಪ್ರಕರಣ ಸುಪ್ರೀಂ ಕೋರ್ಟ್ನ ಆದೇಶದಂತೆ ಕರ್ನಾಟಕದ ಸ್ಪೆಷಲ್ ಕೋರ್ಟ್ನಲ್ಲಿ ವಿಚಾರಣೆ ನಡೆಯಿತು ಹಾಗೂ ಜಯಲಲಿತಾರಿಗೆ ಜೈಲು ಆಯಿತು. ಅದರಿಂದಾಗಿ ಅವರ ಮುಖ್ಯಮಂತ್ರಿ ಪದವಿಯೂ ತಾತ್ಕಾಲಿಕವಾಗಿ ಹೋಯಿತು. ಜಯಲಲಿತಾರನ್ನು ಜೈಲಿಗೆ ಕಳುಹಿಸಿದ್ದು ಒಬ್ಬ ಕನ್ನಡಿಗ ನ್ಯಾಯಾಧೀಶ. ನಂತರ ಜಯಲಲಿತಾ ಕರ್ನಾಟಕ ಹೈಕೋರ್ಟ್ನಲ್ಲಿಯೇ ಖುಲಾಸೆಗೊಂಡರೂ ತಾನು ಕರ್ನಾಟಕದ ಜೈಲಿನಲ್ಲಿದ್ದ ಕಹಿಯನ್ನು ಅವರು ಮರೆತಿಲ್ಲ. ಮೇಲಾಗಿ ಅವರು ಹೈಕೋರ್ಟ್ನಲ್ಲಿ ಖುಲಾಸೆಗೊಂಡರೂ ಕರ್ನಾಟಕ ಸರಕಾರ ಅದರ ವಿರುದ್ಧ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಿ ಮತ್ತೆ ಜಯಲಲಿತಾ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿತು. ಈಗ ಇನ್ನು ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್ನ ತೀರ್ಪು ಕೂಡಾ ಹೊರಬೀಳಲಿದ್ದು ಜಯಲಲಿತಾ ಮತ್ತೆ ಸಂಕಷ್ಟದಲ್ಲಿದ್ದಾರೆ.
ಹಾಗಾಗಿ ಕರ್ನಾಟಕದ ವಿರುದ್ಧ ಈ ಸೇಡು ತೀರಿಸಲೆಂದು ಮತ್ತು ಸುಪ್ರೀಂ ಕೋರ್ಟ್ಗೆ ಹಾಗೂ ಕೇಂದ್ರ ಸರಕಾರಕ್ಕೆ ತನ್ನ ತಾಕತ್ತು ತೋರಿಸಲೆಂದೇ ಜಯಲಲಿತಾ ಕಾವೇರಿ ವಿಷಯದಲ್ಲಿ ವಿನಾಕಾರಣ ಕ್ಯಾತೆ ತೆಗೆದು ಕರ್ನಾಟಕಕ್ಕೆ ಕಿರುಕುಳ ಕೊಡುತ್ತಿರುವುದು ಎಂದು ಎಲ್ಲರಿಗೂ ಗೊತ್ತಿದೆ. ಕನ್ನಡಿಗರ ಬಗ್ಗೆ ಇಂತಹ ಸೇಡಿನ ಭಾವನೆ ಇರುವ ತಮಿಳು ಮಹಿಳೆಯನ್ನು ಕನ್ನಡಿಗರು ಇನ್ನೂ ನಮ್ಮ ನಾಡಿನ ಮಗಳು ಎಂದು ಅಭಿಮಾನ ತೋರಿಸುತ್ತಾರಲ್ಲಾ ಇದಕ್ಕೇನೆನ್ನಬೇಕು?.