ಸಾಲಗಾರರೊಂದಿಗೆ ಠೇವಣಿದಾರರರ ಹಿತವೂ ಗಮನದಲ್ಲಿರಲಿ
ವಾಣಿಜ್ಯ ಮಂತ್ರಿ ನಿರ್ಮಲಾ ಸೀತಾರಾಮನ್ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವನ್ನು ಶೇ. 2ರಷ್ಟು ಇಳಿಸುವಂತೆ ಕರೆ ಕೊಟ್ಟಿ ದ್ದಾರೆ. ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳ ಹಿತದೃಷ್ಟಿಯಲ್ಲಿ ಮತ್ತು ಅವುಗಳನ್ನು ಪುನಶ್ಚೇತನಗೊಳಿಸಲು ಇದು ಆವಶ್ಯಕವಾಗಿದೆ ಎಂದು ವಾದಿಸಿದ್ದಾರೆ. ಡಾ. ಸುಬ್ರಮಣಿಯನ್ ಸ್ವಾಮಿ ಕೂಡಾ ಇದೇ ರಾಗದಲ್ಲಿ ವರ್ಷಗಳಿಂದ ಮಾತನಾಡುತ್ತಿದ್ದಾರೆ. ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಮನ್ ರಾಜನ್ ವಿರುದ್ಧ್ದದ ಅವರ ಸಮರದಲ್ಲಿ ಇದು ಕೂಡಾ ಪ್ರಧಾನ ವಿಷಯವಾಗಿತ್ತು. ಹಾಗೆಯೇ ಅಸ್ತ್ರವೂ ಆಗಿತ್ತು. ವಾಣಿಜ್ಯೋದ್ಯಮ ಸಂಘಗಳು, ಮಾಧ್ಯಮ ಮತ್ತು ಜನಸಾಮಾನ್ಯರು ಈನಿಟ್ಟಿನಲ್ಲಿ ಸದಾ ಒತ್ತಾಯ ಮಾಡುತ್ತಲೇ ಇರುತ್ತಾರೆ. ವಿತ್ತ ಮಂತ್ರಿಗಳು ಸಾಲದ ಮೇಲಿನ ಬಡ್ಡಿದರವನ್ನು ಇಳಿಸುವ ನಿಟ್ಟಿನಲ್ಲಿ ಪದೇ ಪದೇ ರಿಸರ್ವ್ ಬ್ಯಾಂಕ್ಗೆ ಜ್ಞಾಪಿಸುತ್ತಾರೆ. ರಿಸರ್ವ್ ಬ್ಯಾಂಕ್ನ ದ್ವೈಮಾಸಿಕ ಹಣಕಾಸು ನೀತಿ ಪರಿಶೀಲನೆ ಸಮಯದಲ್ಲಿ ಈ ಬೇಡಿಕೆ ತಾರಕಕ್ಕೇರುತ್ತದೆ.
ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಿಗಳ ಸಂಕಷ್ಟದ ಬಗೆಗೆ ನಿರ್ಮಲಾ ಸೀತಾರಾಮನ್ರ ಕಳಕಳಿ ಶ್ಲಾಘನೀಯ. ಆದರೆ, ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರವನ್ನು ಶೇ.2ರಷ್ಟು ಇಳಿಸುವ ಸ್ಥಿತಿಯಲ್ಲಿವೆಯೇ ಎನ್ನುವುದು ಮುಖ್ಯ ಪ್ರಶ್ನೆ. ಕಳೆದ ಕೆಲವು ವರ್ಷಗಳಿಂದ ಬ್ಯಾಂಕುಗಳು ಸಾಲದ ಮೇಲಿನ ಬಡ್ಡಿದರವನ್ನು ಇಳಿಸುತ್ತಲೇ ಇವೆ. ಒಂದು ಕಾಲಕ್ಕೆ ಸಾಲದ ಮೇಲಿನ ಬಡ್ಡಿದರ ಶೇ. 16-17ರ ವರೆಗೂ ಇದ್ದು, ಇತ್ತೀಚೆಗಿನ ದಿನಗಳಲ್ಲಿ 9ರ ವರೆಗೂ ಇಳಿದಿದೆ. ಕೆಲವು ಸರಕಾರಿ ಯೋಜನೆಗಳ ಸಾಲಗಳಿಗೆ ಶೇ. 4 ಬಡ್ದಿದರವೂ ಇದೆ. ಆದ್ಯತಾ ಆಧಾರದ ಸಾಲಗಳಿಗೆ ಬಡ್ಡಿದರ ಕಡಿಮೆ ಇರುತ್ತದೆ. ಇವುಗಳಿಂದ ಬ್ಯಾಂಕುಗಳ ನೆಟ್ ಇಂಟ್ರೆಸ್ಟ್ ಮಾರ್ಜಿನ್ (ಸಾಲ ಮತ್ತು ಠೇವಣಿ ಮೇಲಿನ ಬಡ್ದಿದರದ ಮೇಲಿನ ವ್ಯತ್ಯಾಸ) ಮೇಲೆ ಒತ್ತಡ ಬೀಳುತ್ತಿದ್ದು, ಬ್ಯಾಂಕುಗಳು ತಮ್ಮ ನಿರ್ವಹಣೆಗೆ ಅಗತ್ಯವಾದ ಕನಿಷ್ಠ ಶೇ. 3 ಮಾರ್ಜಿನ್ ಉಳಿಸಿಕೊಳ್ಳಲು ಹೆಣಗಾಡುತ್ತಿವೆ. ಇತ್ತೀಚೆಗಿನ ದಿನಗಳಲ್ಲಿ ಇದು ಕೆಲವು ಬ್ಯಾಂಕ್ಗಳಲ್ಲಿ ಶೇ. 2.50ಕ್ಕೆ ಇಳಿದಿದೆ. ಬ್ಯಾಂಕುಗಳಲ್ಲಿ ಸುಸ್ತಿ ಸಾಲದ ಮಟ್ಟ ಶೇ. 10ಕ್ಕೆ ಏರಿದ್ದು ಸುಮಾರು 6 ಲಕ್ಷ ಕೋಟಿ ವಸೂಲಾಗುತ್ತಿಲ್ಲ. ಇದಕ್ಕೆ ಪುನರ್ ರಚಿತ ಸಾಲ (್ಟಛಿಠ್ಟ್ಠ್ಚಿಠ್ಠ್ಟಿಛಿ ್ಝಟಚ್ಞ
) ಸೇರಿಸಿದರೆ 8 ಲಕ್ಷ ಕೋಟಿಯನ್ನೂ ಮೀರುವುದು. ಸುಸ್ತಿ ಸಾಲ ದಿನೇ ದಿನೇ ಏರುತ್ತಲೇ ಇದೆ ವಿನಹ ಇಳಿಯುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಬ್ಯಾಂಕರುಗಳ ಪ್ರಕಾರ ಹತ್ತು ಲಕ್ಷ ಸುಸ್ತಿ ಸಾಲವನ್ನು ವಸೂಲು ಮಾಡುವ ಹೊತ್ತಿಗೆ 20 ಲಕ್ಷ ಸುಸ್ತಿ ಸಾಲಕ್ಕೆ ಸೇರಿರುತ್ತದೆ. ಸುಸ್ತಿಸಾಲದ ಮೇಲಿನ ಬಡ್ಡಿಯನ್ನು ಬ್ಯಾಂಕುಗಳು ಆದಾಯವೆಂದು ಪರಿಗಣಿಸುವಂತಿಲ್ಲ. ಬ್ಯಾಂಕುಗಳು ಬಡ್ಡಿಯೇತರ ಆದಾಯದ ಮೇಲೆ ಸರಕಾರ ಕೆಲವು ನಿಯಂತ್ರಣ ಹೇರಿದ್ದು, ಅಲ್ಲಿಯೂ ಆದಾಯ ಕಡಿಮೆ ಅಗಿದೆ. ನಿರೀಕ್ಷೆಯ ಮಟ್ಟದಲ್ಲಿ ಸಾಲ ವಿಲೇವಾರಿ ಅಗುತ್ತಿಲ್ಲ. ಅಂತೆಯೇ ಪ್ರತಿಬಾರಿ ರೆಪೋ ದರ ಕಡಿತ ಮಾಡಿದಾಗಲೂ, ಬ್ಯಾಂಕ್ಗಳು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ಮೀನ ಮೇಷ ಎಣಿಸುತ್ತವೆ, ಸಮಯ ತೆಗೆದುಕೊಳ್ಳುತ್ತವೆ ಅಥವಾ ನೆಪಮಾತ್ರಕ್ಕೆ ವರ್ಗಾಯಿಸುತ್ತವೆ. ಸಾಲದ ಮೇಲಿನ ಬಡ್ಡಿದರವನ್ನು ಕಡಿತಮಾಡುವಾಗ ಬ್ಯಾಂಕುಗಳು ಸಾಮಾನ್ಯವಾಗಿ ಠೇವಣಿ ಮೇಲಿನ ಬಡ್ಡಿದರವನ್ನು ಕಡಿತಗೊಳಿಸಿ ತಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳುತ್ತವೆ. ಕೆಲವು ಬ್ಯಾಂಕಿಂಗ್ ತಜ್ಞರು, ಬ್ಯಾಂಕರುಗಳು ಮತ್ತು ಅರ್ಥಿಕ ತಜ್ಞರ ಪ್ರಕಾರ ಸಾಲದ ಮೇಲಿನ ಬಡ್ಡಿದರ ಗರಿಷ್ಠ ಮಟ್ಟಕ್ಕೆ ಇಳಿದಿದ್ದು, ಇನ್ನೂ ಕೆಳಗಿಳಿಸುವುದು ಬ್ಯಾಂಕುಗಳ ಭವಿಷ್ಯದ ದೃಷ್ಟಿಯಲ್ಲಿ ಮತ್ತು ದೇಶದ ಅರ್ಥಿಕ ಸ್ಥಿತಿಯ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆಯಲ್ಲ. ಬ್ಯಾಂಕುಗಳು ಬದುಕುಳಿಯುವುದೇ ಬಡ್ಡಿ ಆದಾಯದ ಮೇಲೆ. ಬ್ಯಾಂಕ್ಗಳಲ್ಲಿ ಬಡ್ಡಿಯೇತರ ಆದಾಯ, ಬಡ್ಡಿ ಆದಾಯಕ್ಕೆ ಹೋಲಿಸಿದರೆ ತೀರಾ ಕಡಿಮೆ. ಬ್ಯಾಂಕುಗಳು ಠೇವಣಿದಾರರ ಠೇವಣಿಯನ್ನು ಸಾಲನೀಡಲು ಉಪ ಯೋಗಿಸಿಕೊಳ್ಳುತ್ತಿದ್ದು, ಅವರ ಹಿತಾಸಕ್ತಿಯನ್ನೂ ನೋಡಿಕೊಳ್ಳಬೇಕಾಗು ತ್ತದೆ. ಪ್ರತಿಬಾರಿ ರೆಪೋ ದರವನ್ನು ಕಡಿತಮಾಡಿದಾಗ, ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಬ್ಯಾಂಕುಗಳ ಮೇಲೆ ಒತ್ತಡ ಇರುತ್ತದೆ. ಅಂತೆಯೇ ಬ್ಯಾಂಕುಗಳ ಠೇವಣಿ ಮೇಲಿನ ಬಡ್ಡಿದರ ಶೇ.11ರಿಂದ 7.30ಕ್ಕೆ ಇಳಿದಿದೆ. ಸೀತಾರಾಮನ್ ಆಶಯದಂತೆ ಸಾಲದ ಮೇಲಿನ ಬಡ್ಡಿದರವನ್ನು ಶೇ. 2 ಇಳಿಸಿದರೆ, ಠೇವಣಿ ಮೇಲಿನ ಬಡ್ಡಿದರ ವನ್ನೂ ಅದೇ ಅನುಪಾತದಲ್ಲಿ ಇಳಿಸಬೇಕಾಗುತ್ತದೆ. ಆಗ ಹಣದುಬ್ಬರದ ದಿನಗಳಲ್ಲಿ ಬಡ್ಡಿ ಮೇಲೆ ಜೀವನದ ಜಟಕಾ ಬಂಡಿ ನಡೆಸುವವರು ಮತ್ತಷ್ಟು ತಲ್ಲಣಗೊಂಡಿದ್ದಾರೆ. ಇದೇ ರೀತಿ ಠೇವಣಿ ಮೇಲಿನ ಬಡ್ಡಿದರ ಇಳಿಯುತ್ತಾ ಹೋದರೆ, ಖಾಸಗಿ ಹಣಕಾಸು ಸಂಸ್ಥೆಗಳು ಇದರ ಉಪಯೋಗ ಪಡೆಯುವ ಸಾಧ್ಯತೆಗಳಿದ್ದು, ಠೇವಣಿದಾರರು ಹೊಟ್ಟೆ ಬಟ್ಟೆ ಕಟ್ಟಿ ನಾಳೆಗಾಗಿ ಉಳಿಸಿದ ಠೇವಣಿಗಳನ್ನು ಕಳೆದುಕೊಳ್ಳುವ ಭಯ ಇದೆ ಎಂದು ಹಣಕಾಸು ಮಾಧ್ಯಮಗಳು ಎಚ್ಚರಿಸುತ್ತಿವೆ.
ಪ್ರತಿಬಾರಿ ರೆಪೋ ದರ ಇಳಿಸಿದಾಗ ಮತ್ತು ತನ್ಮೂಲಕ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವನ್ನು ಕಡಿತಮಾಡಿದಾಗ, ಉದ್ಯಮಗಳು ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸುತ್ತವೆ ಎಂದು ನಿರೀಕ್ಷಿಸಲಾಗುತ್ತದೆ ಮತ್ತು ಸರಕಾರ ಕೂಡಾ ಇದನ್ನು ಅಪೇಕ್ಷಿಸುತ್ತದೆ. ಆದರೆ, ಇದು ಆಗುತ್ತಿದೆಯೇ? ಕೇವಲ ಉದ್ಯಮಿಗಳಿಗೆ ಲಾಭ ಮಾಡಿಕೊಡಲು ಸಾಲದ ಮೇಲಿನ ಬಡ್ಡಿ ದರವನ್ನು ಕಡಿತಮಾಡಬೇಕೇ? ಈ ನಿಟ್ಟಿನಲ್ಲಿ ಸರಕಾರ ಕ್ರಮ ತೆಗೆದು ಕೊಳ್ಳುತ್ತಿದೆಯೇ? ಇಂತಹ ಕಡಿತದಿಂದ ಆಗುವ ಸಾಧಕ-ಬಾಧಕಗಳನ್ನು ಪರಿಗಣಿಸದೆ ಬಡ್ಡಿದರ ಕಡಿತದ ಮಂತ್ರ ಪಠಿಸುವುದು ಅರ್ಥ ಹೀನ. ಈ ದಿನಗಳಲ್ಲಿ ಇದೊಂದು ಫ್ಯಾಶನ್ ಆಗಿದೆ. ಇದೊಂದು ‘ಮತ ಕಬಳಿಸುವ’ ಪ್ರಕ್ರಿಯೆಯೂ ಅಗಿದೆ.