ಕಾವೇರಿ ನದಿ ನೀರಿನ ನೆಪದಲ್ಲಿ ಪರಿಸರ ರಾಜಕಾರಣ ಕುರಿತ ಒಂದು ಆಲೋಚನೆ
ಭಾಗ 1
ಮಂತ್ರಕ್ಕೆ ಮಾವಿನ ಕಾಯಿ ಉದುರುವುದುಂಟೆ?
ಕಾವೇರಿ ನದಿ ನೀರಿನ ವಿಷಯದಲ್ಲಿ ಇಡೀ ದಕ್ಷಿಣ ಕರ್ನಾಟಕ ಪ್ರಕ್ಷುಬ್ಧಗೊಂಡಿದೆ. ದೂರದೃಷ್ಟಿಯಿಲ್ಲದ ಸ್ವಯಂಘೋಷಿತ ಕುರುಡರ ಕಾರಣಕ್ಕಾಗಿ ಮತ್ತು ಸ್ವಾರ್ಥ ಪಕ್ಷ ರಾಜಕಾರಣಕ್ಕಾಗಿ ಇದು ಸಮಸ್ಯಾತ್ಮಕವಾಗುತ್ತಲೇ ಬಂದಿದೆ. ಇದೇ ಸಂದರ್ಭದಲ್ಲಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟದಲ್ಲಿ ನಡೆದ ವಿದ್ಯಮಾನವೊಂದು ಜನರ ಗಮನ ಸೆಳೆದಂತೆ ಕಾಣುತ್ತಿಲ್ಲ. ರಾಜ್ಯದ ಪತ್ರಿಕೆಗಳಲ್ಲಿ ಸಣ್ಣ ಸುದ್ದಿಯಾದ ಈ ಸಂಗತಿ ಮೊದಲಿಗೆ ತಮಾಷೆಯಾಗಿ ಕಂಡಿತು. ಕಾವೇರಿ ನದಿ ನೀರಿನ ಸಮಸ್ಯೆ ಇಷ್ಟೊಂದು ತೀವ್ರವಾಗಲು ಮುಂಗಾರು ಮಾರುತಗಳು ಕೈಕೊಟ್ಟಿದ್ದೆ ಕಾರಣ ಎಂಬುದು ಗೊತ್ತಿರುವ ವಿಚಾರವೇ. ಕಬಿನಿಗೆ ನೀರು ಒದಗಿಸುವ ವಯನಾಡಿನಲ್ಲಿ ಶೇ.. 50ಕ್ಕಿಂತ ಹೆಚ್ಚು ಮಳೆ ಕೊರತೆಯಾಗಿದೆ. ಹವಾಮಾನ ಇಲಾಖೆಯ ಕಣಿ ಶಾಸ್ತ್ರಕ್ಕೆ ಸಡ್ಡು ಹೊಡೆದಂತೆ ಮುನಿಸಿಕೊಂಡ ಮುಂಗಾರು ಪಶ್ಚಿಮ ಘಟ್ಟಗಳಿಗಿಂತ ಹೈದರಾಬಾದ್ ಕರ್ನಾಟಕದಲ್ಲೇ ಹೆಚ್ಚು ಸುರಿಯುತ್ತಿದೆ. ಇದು ಬೆಂಗಳೂರಿನ ಬಿಲ್ಡರ್ಗಳು, ಮಹಾರಾಷ್ಟ್ರದ ಇಟ್ಟಿಗೆ ಭಟ್ಟಿಗಳವರಿಗೆ ತಲೆಬಿಸಿ ಮಾಡಿದೆ. ಅಗ್ಗದ ಕೂಲಿಯಾಳುಗಳನ್ನು ಈ ಭಾಗದಿಂದ ತಂದು ಅವರ ಶ್ರಮವನ್ನು ದೋಚಿ ಕುಬೇರರಾಗುವ ಇವರ ಕನಸಿಗೆ ಉತ್ತರ ಭಾಗದ ಮಳೆ ತಣ್ಣೀರೆರಚುತ್ತಿದೆ.
ಮಳೆ ವ್ಯತ್ಯಾಸವಾಗಿ ಜನ ತಾರಾಮಾರ ವರ್ತಿಸುತ್ತಿದ್ದಾರೆ.ಟೈರು ಸುಡುತ್ತಾ, ಎದೆ ಬಾಯಿ ಬಡಿದುಕೊಂಡು, ಅರೆ ಬೆತ್ತಲಾಗಿ, ದೊಂದಿ ಹಚ್ಚಿ ಮೆರವಣಿಗೆ ಮಾಡಿ, ರಸ್ತೆಯಲ್ಲೇ ಅನ್ನ ಬೇಯಿಸಿ, ಕಡಲೇ ಕಾಯಿತಿಂದು, ಕೊನೆಗೊಮ್ಮೆ ಮಣ್ಣು ತಿಂದು, ಪ್ರತಿಕೃತಿಗಳಿಗೆ ಝಾಡಿಸಿ ಒದ್ದೂ ಒದ್ದೂ ಬೆಂಕಿಹಚ್ಚಿ ಶತ್ರು ಸಂಹಾರವಾದರೆಂದು ತಿಥಿ ಮಾಡಿ.. ಶೂದ್ರ ಮಾದರಿಯ ಎಲ್ಲ ತಂತ್ರಗಳನ್ನು ಮಾಡಿದರೂ ಜಡ್ಜು ಎನ್ನಿಸಿಕೊಂಡವರು ಏನು ಬರೆಯಬೇಕೋ ಅದನ್ನು ಬರೆದೇ ಬರೆಯುತ್ತಿದ್ದಾರೆ.ಇಂಥ ಟೈಮಿನಲ್ಲಿ ಕೆಲವು ಬ್ರಾಹ್ಮಣ ಪುರೋಹಿತರಿಗೆ ಪರ್ಜನ್ಯ ಜಪ ಮಾಡುವ ಐಡಿಯಾ ಹೊಳೆಯಿತು.
ಕೆಲವೇ ತಿಂಗಳ ಹಿಂದೆ ಮತ್ತೂರಿನ ಸಂಕೇತಿಗಳ ಊರಲ್ಲಿ ಚಂಡಿಕಾ ಹೋಮವೋ ಎಂಥದೋ ಮಾಡಿ ಅಜಬಲಿ ನೀಡಿ ಹೊಟ್ಟೆ ಬಿರಿಯೆ ತಿಂದು ಶತಮಾನಗಳ ದಾಹ ತೀರಿಸಿಕೊಂಡಿದ್ದರು. ಇದನ್ನು ಕೇಳಿ ದಲಿತ-ಶೂದ್ರರು ‘‘ಯಂಥದೂ ವ್ಯತ್ಯಾಸ ಇಲ್ಲ ಬಿಡ್ರಿ ನಮ್ಮಂಗೇ ಅವರೂ’’ ಎಂದು ನಕ್ಕು ಬೆರಗಾಗಿ ಸುಮ್ಮನಾಗಿದ್ದರು. ಊರು ಉರಿವ ಗಳಿಗೆಗಳಲ್ಲಿ ಅಸ್ತಿತ್ವ ತೋರಿಸಲೆಂಬಂತೆ ಪುಕ್ಕಟೆಯಾಗಿ ಇಂಥಾ ಕೆಲಸಗಳನ್ನು ಲೋಕ ಕಲ್ಯಾಣದ ಹೆಸರಲ್ಲಿ ಮಾಡಲು ಕೂರುತ್ತಾರೆ. ಹಾಗೆಯೇ ಕೊಡಗಿನಲ್ಲೂ ಕೂತರು. ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಗುಂಪೊಂದು ಮಂತ್ರಘೋಷಗಳನ್ನು ಮೀರಿಸುವಂತೆ ಕೈಕಾಲು ಆಡಿಸುತ್ತಾ ಅಬ್ಬರಿಸತೊಡಗಿದರಂತೆ.ಲೋಕ ಕಲ್ಯಾಣದ ಯಾಗಗಳಿಗೆ ಅಡ್ಡಿ ಪಡಿಸುವುದುಂಟೇ ? ಮತ್ತೆ ರಾಕ್ಷಸ ಸಂತತಿ ಕಲಿಯುಗದ ಭೂಮಿಯಲ್ಲಿ ಹುಟ್ಟಿ ಬಿಟ್ಟಿತೇ ನಾರಾಯಣ ಎಂದು ಅಂಜುತ್ತಾ, ಅಳುಕುತ್ತಾ ಕಾರಣ ಕೇಳಿದರು. ಪ್ರತಿಭಟನಾಕಾರರಂದರು ‘‘ನೀವು ಜಪಾ ಮಾಡಿದ್ರಿಂದ ಮಳೆ ಹಿಡಿದು ಜಡಿದರೆ ನಮ್ಮ ಕಾಫಿ, ಅಡಿಕೆ, ಮೆಣಸು, ಯಾಲಕ್ಕಿಗೆ ಕೊಳೆರೋಗ ಬಂದು ಹಾಳಾಗ್ತದೆ. ಅದಕ್ಕೆ ಪರಿಹಾರ ನಿಮ್ಮಜ್ಜ ಕೊಡ್ತಾನೇನ್ರಿ ಭಟ್ರೆ’’ ಎಂದು ಬಿಟ್ಟರು. ನಮ್ಮ ಯಾಗದ ಬಗ್ಗೆ ಇಷ್ಟಾದರೂ ನಂಬಿಕೆ ಇಟ್ಟಿದಾರಲ್ಲ ಎಂದು ಒಳಗೊಳಗೆ ಖುಷಿಪಟ್ಟ ಭಟ್ಟರು ಮುಂದುವರಿಸಿದರೆ ಗ್ರಹಚಾರ ಸರಿಯಿಲ್ಲ ವೆಂದು ಯಾಗ ಕಾರ್ಯಕ್ರಮವನ್ನು ಬರ್ಖಾಸ್ತು ಮಾಡಿ ಎದ್ದು ಹೋದರಂತೆ. ಇದೆಲ್ಲ ಪೂರ್ವಯೋಜಿತ ನಾಟಕವೇ? ಎಂದು ಕೆಲವರು ತರ್ಕಿಸಿದ್ದೂ ಉಂಟಂತೆ.
ತಮಾಷೆಯಾಗಿ ಕಾಣಬಹುದಾದ ಮೇಲಿನ ಘಟನೆಯು ವರ್ತ ಮಾನದ ಅನೇಕ ಮನಸ್ಥಿತಿಗಳನ್ನು ತೆರೆದಿಡುವ ಅತ್ತಿ ಹಣ್ಣಿನಂತೆ ಕಾಣುತ್ತಿದೆ. ಈ ಮನಸ್ಥಿತಿಯ ತೊಳೆಗಳನ್ನು ಬಿಡಿಸುತ್ತಾ ಹೋದರೆ ಭವಿಷ್ಯದ ಕುರಿತು ದಿಗಿಲು ಹುಟ್ಟುತ್ತದೆ. ಮೊದಲನೆಯದಾಗಿ ಜಪ ಮಾಡಿದರೆ ಮಳೆ ಬರುತ್ತದೆ ಎಂಬುದಕ್ಕೆ ಮುಕ್ಕಾಲು ಶತಮಾನದ ಹಿಂದೆಯೇ ಕುವೆಂಪು, ‘‘ಪರ್ಜನ್ಯ ಜಪ ಮಾಡಿದರೆ ಮಳೆ ಬರುತ್ತದೆ ಎನ್ನುವುದಾದರೆ ಅಷ್ಟೂ ಜನ ವಟುಗಳನ್ನು ಸಹರಾ ಮರುಭೂಮಿಗೆ ಕಳಿಸಿ’’ಎಂದಿದ್ದರು. ಜನರನ್ನು ಮತ್ತೆ ಮತ್ತೆ ಮೌಢ್ಯದ ಖೆಡ್ಡಾದೊಳಗೆ ಬೀಳಿಸಿ ಹೊಟ್ಟೆ ಹೊರೆಯುವ ಶ್ರಮವಿರೋಧಿ ಸಂಸ್ಕೃತಿಗಳ ಜನರಿಗೆ ಇಂದು ಹೊಸ ವಿದ್ಯುನ್ಮಾನ ಮಾಧ್ಯಮಗಳು ಉತ್ತಮ ವೇದಿಕೆ ಒದಗಿಸುತ್ತಿವೆ. ಬುದ್ಧ, ಬಸವ, ಅಂಬೇಡ್ಕರ್, ಚಾರ್ವಾಕ ಮುಂತಾದವರು ಪುರೋಹಿತ ಶಾಹಿಯ ಜನ ವಿರೋಧಿ ಹುನ್ನಾರಗಳನ್ನು ಪ್ರತಿಭಟಿಸಿದರು. ಆದರೂ ‘ಕತ್ತಲಿಗೆ ಹತ್ತೇ ತಲೆ?’ ಎಂಬಂತೆ ಮತ್ತೆ ಮತ್ತೆ ಅಸ್ತಿತ್ವ ಪ್ರತಿಪಾದಿಸುವ ಇವರನ್ನು ಕಂಡರೆ 2,500 ವರ್ಷಗಳ ದೀರ್ಘ ಕಾಲದ ಸಾಂಸ್ಕೃತಿಕ ರಾಜಕಾರಣದ ಪರಿಭಾಷೆಯಲ್ಲೇ ಏನೋ ಊನವಿದ್ದಂತಿದೆ. ಗಾಯವಾದಾಗಲೆಲ್ಲ ಬುದ್ಧ, ಬಸವರನ್ನು ನೆನೆದು ಕೂರುವ ನಮಗೆ, ನಮ್ಮ ಹಿರೀಕರು ಮಾಡಿದ್ದು ನಿರರ್ಥಕ ಪ್ರಯತ್ನವೇ? ಜಾತಿ, ಹಣೆಬರಹ, ಕರ್ಮ, ಪುನರ್ಜನ್ಮಗಳೆಂಬ ಸಿದ್ಧಾಂತಗಳು ಅನೂಹ್ಯ ಸಂಗತಿಗಳ, ಅಮೂರ್ತಭಯಗಳ ಪ್ರತಿಫಲವೇ ಎಂದು ಕೇಳಿಕೊಳ್ಳಬೇಕಾಗಿದೆ. ಅಥವಾ ಬಿಡುಗಡೆಯೇ ಇಲ್ಲದ ಚಕ್ರಗತಿ ಸಿದ್ಧಾಂತದ ವರ್ತುಲದಲ್ಲಿ ಸಿಲುಕಿ ನಾಶವಾಗಿ ಹೋಗುತ್ತಿದ್ದೇವೆಯೇ ಎಂಬ ಪ್ರಶ್ನೆಗಳು ಎದುರಾಗುತ್ತವೆ.
ಇದೆಲ್ಲಕ್ಕಿಂತ ಭಯಾನಕವಾದದ್ದು ಪ್ರತಿಭಟನಾಕಾರರ ಮನಸ್ಥಿತಿ. ಜಪ ಮಾಡಿದರೆ ಮಳೆ ಬರುತ್ತದೆ ಎನ್ನುವ ಗುಮಾನಿಯಿಂದಲೋ, ನಂಬಿಕೆಯಿಂದಲೋ ಈ ಮನಸ್ಥಿತಿ ಹುಟ್ಟಿರಬಹುದು. ಈ ಭಯವೇ ಪುರೋಹಿತಶಾಹಿಗೆ ಬಂಡವಾಳ. ವಿಪ್ರರ ಕುರಿತ ಭಯಕ್ಕಿಂತಲೂ ಅವರ ಮಂತ್ರಶಕ್ತಿಯ ಕುರಿತು ಲೋಕ ಹೆಚ್ಚು ತಲೆಕೆಡಿಸಿಕೊಂಡಂತೆ ಕಾಣುತ್ತದೆ. ಈ ಮನಸ್ಥಿತಿಯ ಕಾರಣಕ್ಕೇ ವಿವೇಕಾನಂದರು ಮೊದಲು ನಿಮ್ಮ ತಲೆಗೆ ಗುಂಡು ಹೊಡೆದುಕೊಳ್ಳಿ ಎಂದದ್ದು. ಭಯದ ಜೊತೆಗೆ ಈ ಮನಸ್ಥಿತಿಯ ಆಳದಲ್ಲಿ ಸ್ವಾರ್ಥವಿದೆ. ಕೃಷಿಯ ಸಮಸ್ಯೆಯೂ ಇದೆ. ಯಾರಿಗೆ ಕಷ್ಟ ಬಂದರೇನು ನಾನು ಉಳಿದರೆ ಸಾಕು ಎನ್ನುವ ಸಂಕುಚಿತ ಮತ್ತು ಅಸ್ತಿತ್ವವಾದಿ ಮನೋಭಾವವಿದೆ. ನಾಡಿನ ಅನೇಕರಿಗೆ ಬಂದಿರುವ ಈ ಮನೋಭಾವದಿಂದಾಗಿಯೇ ನೆಲದ ಮೇಲಿನ ಹಸಿರು ಮಾಯವಾಗುತ್ತಿದೆ, ಬೆಟ್ಟ ಬಯಲಾಗುತ್ತಿವೆ, ಕೆರೆ, ಕೊಳ್ಳಗಳು ಮೈದೆಗೆದು ಬೆತ್ತಲಾಗುತ್ತಿವೆ. ಇದೊಂತರಾ ಧರೆ ಹತ್ತಿ ಉರಿವ ಸ್ಥಿತಿ. ಇಡೀ ಲೋಕಕ್ಕೆ ಲೋಕವೇ ಸ್ವಾರ್ಥದ ಕೆಸರಲ್ಲಿ ಮುಳುಗಿಹೋಗಿರುವಾಗ ಘಟ್ಟಗಳ ಜನರನ್ನು ಮಾತ್ರ ಉದಾರಿಗಳಾಗಿ ಎಂದರೆ ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ‘‘ಅಲ್ಲಿನ ಕಾಡು ಕಡಿದು ವಿದ್ಯುತ್ ತಂತಿ ಎಳೆದು, ರೈಲು ಕಂಬಿ ಹಾಸಿ, ಡಾಂಬರು ಚೆಲ್ಲಿ, ಅಣೆಕಟ್ಟುಗಳನ್ನು ಕಟ್ಟಿಸಿದ್ದು ಬೆಂಗಳೂರಿನಂಥಾ ನಗರಗಳನ್ನು ಕೊಬ್ಬಿಸಲಿಕ್ಕೆ ತಾನೆ?’’ ಎಂದು ಕೇಳಿದರೆ ಉತ್ತರ ಏನು ಹೇಳುವುದು. ‘‘ರಜಾದಿನಗಳಲ್ಲಿ ಮಜಾ ಮಾಡಲಿಕ್ಕೆ ಕಾಡುಗಳಿರಲಿ ಎಂಬ ದುಷ್ಟ ಕಾಳಜಿಗೆ ನಾವೇಕೆ ತ್ಯಾಗ ಮಾಡಬೇಕು?’’ ಎಂದು ಕೇಳಿದರೆ ಏನು ಹೇಳುವುದು.ವರ್ತಮಾನದ ದುರಂತವೆಂದರೆ ಪ್ರಶ್ನೆ ಕೇಳುವವನೂ ಕೇಳುವಂತೆ ಮಾಡಿದವನೂ ಇಬ್ಬರೂ ನೈತಿಕ ಭ್ರಷ್ಟರಾಗಿರುವುದರಿಂದ ಭವಿಷ್ಯದ ಕುರಿತು ಭರವಸೆ ಹುಟ್ಟುತ್ತಿಲ್ಲ.
ಇತ್ತೀಚೆಗೆ ಅಪಾರ ಅರಣ್ಯ ಸಂಪತ್ತುಳ್ಳ ಲ್ಯಾಟಿನ್ ಅಮೆರಿಕದ ಪುಟ್ಟ ದೇಶವೊಂದು ನಮ್ಮ ಕಾಡು ಉಳಿಸಬೇಕೆಂದರೆ ಇಂತಿಷ್ಟು ಪರಿಹಾರ ಕೊಡಿ ಎಂದು ವಿಶ್ವಸಂಸ್ಥೆಯನ್ನು, ವೈಭೋಗದಲ್ಲಿರುವ ದೇಶಗಳನ್ನು ಒತ್ತಾಯಿಸಿತು. ದುಡ್ಡು ಕೊಡಲು ಯಾರೂ ಮುಂದೆ ಬರಲಿಲ್ಲ. ಹತಾಶಗೊಂಡ ಆ ರಾಷ್ಟ್ರ ಕಾಡು ಕಡಿಯದೆ ತನಗೆ ಬೇರೆ ದಾರಿ ಯಾವುದು ಇದೆ ಹೇಳಿ ಎಂದು ಕೇಳಿತು.ಕಾಳಜಿಯುಳ್ಳ ಒಂದಿಷ್ಟು ಬಿಡಿ ಬಿಡಿ ಸಂಘಟನೆಗಳು ಮಾತ್ರ ಒಂದಿಷ್ಟು ದುಡ್ಡು ಸಂಗ್ರಹಿಸಿ ಕಳುಹಿಸಿದವು. ಭೂ ಮಧ್ಯರೇಖೆಯ ಆಸುಪಾಸಿನಲ್ಲಿರುವ ಅತ್ಯಂತ ಅಮೂಲ್ಯವಾದ ಕಾಡುಗಳ ಬುಡಕ್ಕೆ ಇಟ್ಟಿರುವ ಬೆಂಕಿ, ಗರಗಸಗಳು ಮನುಷ್ಯ ಕುಲದ ವಿನಾಶಕ್ಕೆ ಬರೆದ ಭಾಷ್ಯವೆಂದು ಅರಿತುಕೊಂಡವರು ನಮ್ಮಲ್ಲಿನ್ನೂ ಕಡಿಮೆಯಿದ್ದಾರೆ. ಅಥವಾ ಬುದ್ಧಿಜೀವಿ ಎಂಬ ಪದದಂತೆ ಪರಿಸರವಾದಿ ಎಂಬ ಪದ ಕೂಡ ದಮನಕ್ಕೆ, ಸಾರ್ವಜನಿಕರ ಅಸಹನೆಗೆ ಒಳಗಾಗಿದೆ. ಕಾವೇರಿ ನೀರಿಗೆಂದು ಮಂಡ್ಯದ ಜನ ರಸ್ತೆಗಿಳಿದರೆ ಕೊಡಗಿ ನವರು ನಾವು ಬೆಂಬಲಿಸುವುದಿಲ್ಲವೆಂದರು. ‘‘ನಮ್ಮ ಕಾಡು ಕಡಿದು ಕೇರಳಕ್ಕೆ ವಿದ್ಯುತ್ ತಂತಿ ಎಳೆಯುತ್ತಾರೆಂದು ಪ್ರತಿಭಟಿಸಿ ಪೊಲೀಸರಿಂದ ಒದೆ ತಿಂದರೂ ನೀವು ತಣ್ಣ ಗಿದ್ದಿರಿ’’ ಎಂದರು. ಉಡುಪಿಯವರು ‘‘ಎಲ್ಲಿಯ ಕಾವೇರಿ, ಎಲ್ಲಿಯ ಉಡುಪಿ ಎಲ್ಲಿಯ ಉತ್ತರ ಕರ್ನಾಟಕ ಹೋಗ್ರಿ’’ ಎಂದರು. ನಿಸರ್ಗವೆಂಬ ಮಹಾ ಲೋಕ ವೃಕ್ಷಕ್ಕೆ ಎಲ್ಲಿಯೋ ಜಿಗುಟಿದರೆ ಇನ್ನೆಲ್ಲಿಯೋ ಕಣ್ಣೀರು ಸುರಿಸುತ್ತದೆ ಎಂಬ ಸಣ್ಣ ವಿವೇಕ ಹೊಸ ತಲೆಮಾರಿಗಿಲ್ಲದೇ ಹೋಗಿದೆ. ಆದ್ದರಿಂದಲೇ ಟಿಂಬರ್ ಮಾಫಿಯಾ, ರಾಜಕಾರಣಿ, ಒತ್ತುವರಿದಾರ, ಅಧಿಕಾರಶಾಹಿ, ಕಂಟ್ರಾಕ್ಟರುಗಳಿಗೆ ಕಾಡು ಲೋಕ ಕಾಯುವ ಶಕ್ತಿ ಎಂಬುದರ ಬದಲಾಗಿ ಕಣ್ಣು ಹಾಯಿಸಿದಷ್ಟೂ ದೂರಕ್ಕೆ ಹರಡಿಕೊಂಡಿರುವ ಹಸಿರು ವನರಾಶಿ ದುಡ್ಡಿನ ರಾಶಿಯಂತೆ ಕಾಣುತ್ತದೆ. ಕೋಟ್ಯಂತರ ವರ್ಷಗಳಿಂದ ರೂಪುಗೊಂಡ ಕೀಟ, ಪ್ರಾಣಿ, ಕಾಡು, ಮನುಷ್ಯರ ಜೈವಿಕ ಸರಪಳಿ ಕಣ್ಣ ಮುಂದೆಯೇ ತುಂಡಾಗಿ ಬೀಳುತ್ತಿದೆ. ಅದನ್ನು ಅಸಹಾಯಕರಾಗಿ,ದಿಗ್ಭ್ರಾಂತರಾಗಿ ನೋಡುವುದಷ್ಟೇ ನಮ್ಮ ದುರಂತವಾಗಿದೆ. ದೇಶ ದೇಶಗಳ ನಡುವೆ ಉಂಟಾಗುತ್ತಿರುವ ಯುದ್ಧೋನ್ಮಾದಕ್ಕಿಂತ ಸಾವಿರ ಪಟ್ಟು ಹೆಚ್ಚಿನದು ಮನುಷ್ಯ ನಿಸರ್ಗದ ಮೇಲೆ ನಡೆಸುತ್ತಿರುವ ಯುದ್ಧ.
ದೇಶದ ಕೃಷಿ ಭೀಕರ ಸಂಕಷ್ಟದಲ್ಲಿರುವಾಗ ಲಕ್ಷಾಂತರ ಎಕರೆ ಕಾಡು ಕಡಿದು ಸಕ್ರಮ ಮಾಡಲು ಹೊರಡಲಾಗಿದೆ. ಕಳೆದ ಶತಮಾನದ ನಲವತ್ತರ ದಶಕದಲ್ಲಿ 45ಶೇ. ಕ್ಕಿಂತ ಹೆಚ್ಚಿನ ಕಾಡು ಇದ್ದ ನಮ್ಮಲ್ಲಿ ಇಂದು ಶೇ. 13ಕ್ಕಿಂತ ಕಡಿಮೆಯಾಗಿದೆ. ನಾಡೊಂದು ಆರೋಗ್ಯವಾಗಿರಬೇಕಾದರೆ ಕನಿಷ್ಠ 33ಶೇ. ಕಾಡಿನ ಹೊದಿಕೆ ಇರಬೇಕೆಂದು ವಿಜ್ಞಾನಿಗಳು ಹೇಳುತ್ತಾರೆ.ಇದೇ ಹೊತ್ತಿನಲ್ಲಿ ಕೇಂದ್ರ ಸರಕಾರ ಪ್ಯಾರಿಸ್ ಒಪ್ಪಂದಕ್ಕೆ ಸಹಿ ಮಾಡಿದೆ. ಜೊತೆಗೆ ಕುಲಾಂತರಿ ಸಾಸಿವೆಯನ್ನು ರೈತರ ಹೊಲಗಳಲ್ಲಿ ಬೆಳೆಯಲು ಅತಿ ಉತ್ಸಾಹ ತೋರಿಸುತ್ತಿದೆ. ಇಲ್ಲೆಲ್ಲ ಬರೀ ದ್ವಂದ್ವವೇ ಕಾಣುತ್ತಿದೆ. ಕಸ್ತೂರಿ ರಂಗನ್ ವರದಿ ಮೂಲೆಗುಂಪಾಗಿದೆ. ವಿದೇಶಿ ಬೀಜ, ಗೊಬ್ಬರ, ರಾಸಾಯನಿಕ ಕಂಪೆನಿಗಳ ಹಸ್ತಕ್ಷೇಪ ಹೆಚ್ಚಾಗಿದೆ.
ಪ್ರಪಂಚದಲ್ಲಿ ಅಕ್ಕಿ ಮತ್ತು ಸಕ್ಕರೆಯನ್ನು ಅತಿ ಹೆಚ್ಚು ರಫ್ತು ಮಾಡುವ ದೇಶ ಭಾರತ. ಕೇಂದ್ರ ಸರಕಾರ ಪ್ರಕಟಿಸಿರುವ ಆರ್ಥಿಕ ಸಮೀಕ್ಷೆಯಂತೆ ನಾವು ಕೇವಲ ಅಕ್ಕಿ ಮತ್ತು ಸಕ್ಕರೆಗಳನ್ನು ರಫ್ತು ಮಾಡುತ್ತಿಲ್ಲ ಬದಲಾಗಿ ದೇಶದ ಅಮೂಲ್ಯ ಆಸ್ತಿಯಾದ ನೀರನ್ನು ರಫ್ತು ಮಾಡುತ್ತಿದ್ದೇವೆ.