ನೆನಪಿನಂಗಳದಿಂದ
ಓದ್ಲಿಲ್ಲಾಂದ್ರೆ ಫೇಲ್ ಆಗಿಬಿಡ್ತೀಯಾ ಎನ್ನುವಂತಹ ಭಯ ಆವರಿಸಿದ್ದೇ ಆದಲ್ಲಿ ಅಥವಾ ಚೆನ್ನಾಗಿ ಓದಿದರೆ ಎಂತದ್ದೋ ದೊಡ್ಡ ಬಹುಮಾನ ಸಿಗುತ್ತದೆ ಎಂಬಂತಹ ಆಸೆಯಲ್ಲಿ ಮಾಡುವಂತಹ ಅಧ್ಯಯನಗಳು ಅಥವಾ ಕಲಿಕೆಗಳು ಸ್ಮರಣಿಕೆಯಲ್ಲಿ ಉಳಿಯುವುದಿಲ್ಲ. ಆ ಭಯವನ್ನು ದಾಟಿದ ಮೇಲೆ ಅಥವಾ ಆ ಬಹುಮಾನವನ್ನು ಪಡೆದ ಮೇಲೆ ಸ್ಮರಣಿಕೆಯಿಂದ ಅದನ್ನು ತೆಗೆದು ಹಾಕುವಂತಹ ಸುಪ್ತಮನಸ್ಥಿತಿ ನಮ್ಮಲ್ಲಿರುತ್ತದೆ.
ಅಧ್ಯಯನ ಮತ್ತು ನೆನಪು
ನೆನಪಿನಂಗಳ ಫಲವತ್ತಾಗಿದ್ದು ಅದರಲ್ಲಿ ಚೆನ್ನಾಗಿ ಉತ್ತಿ ಬಿತ್ತಿ ಬೆಳೆಯಬೇಕಾದರೆ ಖಂಡಿತವಾಗಿ ಮಾಡಲೇ ಬೇಕಾದಂತಹ ಕೆಲವು ಕೆಲಸಗಳಿವೆ. ಅದು ಮಕ್ಕಳ ವಿಷಯದಲ್ಲಾಗಲಿ, ದೊಡ್ಡವರ ವಿಷಯದಲ್ಲಾಗಲಿ ಅಧ್ಯಯನ ಅಥವಾ ಕಲಿಕೆ ಎಂದರೆ ಕೆಲವು ಬಗೆಯ ನಿಲುವು ಮತ್ತು ಒಲವುಗಳು ಮುಖ್ಯವಾಗುತ್ತವೆ. ಹಾಗೆಯೇ ಅಧ್ಯಯನ ಅಥವಾ ಕಲಿಕೆಗೆ ಪೂರಕವಾಗಿರುವಂತಹ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ.
ನಿರ್ದಿಷ್ಟವಾದಂತಹ ಕೆಲವು ಕಲಿಕೆಯ ವಿಧಾನಗಳನ್ನು ಆಯ್ದುಕೊಳ್ಳುವುದು.
ಮಗುವಿನ ಅಥವಾ ಕಲಿಸುವವರ ಆಸಕ್ತಿ ಮತ್ತು ಅಭಿರುಚಿಗಳಿಗೆ ತಕ್ಕಂತೆ ಕಂಡುಕೊಂಡಂತಹ ಬೋಧನಾ ವಿಧಾನ ಅಥವಾ ತಾನೇ ಕಲಿಯುವ ವಿಧಾನಗಳನ್ನು ರೂಢಿಸಿಕೊಳ್ಳುವುದು. ಯಾವುದೇ ವಿಧಾನವು ಫಲ ನೀಡಲು ಅದರಲ್ಲೇ ಒಂದಷ್ಟು ಅಭ್ಯಾಸವಾಗಬೇಕು. ಪದೇ ಪದೇ ಕಲಿಕೆಯ ವಿಧಾನಗಳನ್ನು, ಕಲಿಯುವ ವಸ್ತುಗಳನ್ನು, ಕಲಿಸುವ ವ್ಯಕ್ತಿಗಳನ್ನು ಬದಲಿಸಬಾರದು. ಬಹಳಷ್ಟು ಪೋಷಕರು ಯಾರಾದರೂ ಶಿಕ್ಷಕರ ಬಳಿಯೋ ಅಥವಾ ತರಬೇತಿದಾರರ ಬಳಿಗೆ ತಮ್ಮ ಮಕ್ಕಳನ್ನು ಸೇರಿಸಿದ ಕೂಡಲೇ ತಕ್ಷಣದ ಪ್ರತಿಫಲ ನಿರೀಕ್ಷಿಸುತ್ತಾರೆ. ಆದರೆ ಅದು ಹಾಗಾಗದು. ಕಲಿಸುವ ಮತ್ತು ಕಲಿಯುವವರ ನಡುವೆ ಒಂದು ಸೇತುಬಂಧ ಉಂಟಾಗಲು ಒಂದಷ್ಟು ಸಮಯ ಬೇಕಾಗುತ್ತದೆ. ಅದೇ ರೀತಿ ಕಲಿಕೆಯ ಪದ್ಧತಿ ಮತ್ತು ಅದರಿಂದ ಕಲಿಯುವುದು ಇದೂ ಕೂಡ ಕೊಂಚ ಸಮಯ ತೆಗೆದುಕೊಳ್ಳುತ್ತದೆ. ಪದೇ ಪದೇ ಬದಲಿಸಲು ಹೋಗಬಾರದು. ಅದು ರೂಢಿಯಾಗಬೇಕು. ನೆನಪಿಗೆ ಅಗತ್ಯವಿರುವ ಪುನರಾವರ್ತಿತ ಪ್ರಕ್ರಿಯೆಗೆ ಇದು ತೊಡಕಾಗುತ್ತದೆ.
ನಕಾರಾತ್ಮಕ ಧೋರಣೆಗಳನ್ನು ಮತ್ತು ಅನಗತ್ಯವಾದ ಭೀತಿಗಳನ್ನು ದೂರ ಮಾಡಬೇಕು
ಎಷ್ಟೋ ಬಾರಿ ದೊಡ್ಡವರು ನೀನು ಓದುವ ರೀತಿ ನೋಡಿದರೆ ಅನುತ್ತೀರ್ಣನಾಗುತ್ತೀಯ ಎಂದು ಮಗುವಿಗೆ ಹೇಳುತ್ತಿರುತ್ತಾರೆ. ಇದರಿಂದಾಗಿ ಕಲಿಕೆಯ ಬಗ್ಗೆ ಬರಿದೇ ಭಯ ತುಂಬಿದ ಅಥವಾ ನಕಾರಾತ್ಮಕವಾದಂತಹ ಭಾವದ ಮುಸುಕಿನಲ್ಲಿಯೇ ಮಕ್ಕಳಿದ್ದು ಬಿಡುತ್ತಾರೆ. ಓದ್ಲಿಲ್ಲಾಂದ್ರೆ ಫೇಲ್ ಆಗಿಬಿಡ್ತೀಯಾ ಎನ್ನುವಂತಹ ಭಯ ಆವರಿಸಿದ್ದೇ ಆದಲ್ಲಿ ಅಥವಾ ಚೆನ್ನಾಗಿ ಓದಿದರೆ ಎಂತದ್ದೋ ದೊಡ್ಡ ಬಹುಮಾನ ಸಿಗುತ್ತದೆ ಎಂಬಂತಹ ಆಸೆಯಲ್ಲಿ ಮಾಡುವಂತಹ ಅಧ್ಯಯನಗಳು ಅಥವಾ ಕಲಿಕೆಗಳು ಸ್ಮರಣಿಕೆಯಲ್ಲಿ ಉಳಿಯುವುದಿಲ್ಲ. ಆ ಭಯವನ್ನು ದಾಟಿದ ಮೇಲೆ ಅಥವಾ ಆ ಬಹುಮಾನವನ್ನು ಪಡೆದ ಮೇಲೆ ಸ್ಮರಣಿಕೆಯಿಂದ ಅದನ್ನು ತೆಗೆದು ಹಾಕುವಂತಹ ಸುಪ್ತಮನಸ್ಥಿತಿ ನಮ್ಮಲ್ಲಿರುತ್ತದೆ. ಯಾವುದೋ ವಿಳಾಸ ಹುಡುಕುವಾಗ ಯಾವುದೋ ಲ್ಯಾಂಡ್ ಮಾರ್ಕ್ ಅಥವಾ ರಸ್ತೆಯ ಸಂಖ್ಯೆಯನ್ನು ನೆನಪಿನಲ್ಲಿಟ್ಟುಕೊಂಡು ನಂತರ ಕೆಲಸವಾದ ಮೇಲೆ ಮರೆತುಹೋಗುವಂತಹ ತತ್ಕಾಲದ ನೆನಪಾಗಿ ಬಿಡುತ್ತದೆ. ಕಲಿಕೆಯಲ್ಲಿ, ಅಧ್ಯಯನದಲ್ಲಿ ಅನುತ್ತೀರ್ಣದ ಭಯವಾಗಲಿ, ಪ್ರಶಂಸೆ ಮತ್ತು ಪ್ರಶಸ್ತಿಗಳ ಆಸೆಯಾಗಲಿ ಪ್ರಾಮಾಣಿಕ ಸ್ಮರಣೆಗೆ ಕಾಣಿಕೆಗಳನ್ನು ನೀಡದು.
ಪ್ರಶಂಸೆಗೆ ಎದುರು ನೋಡಬಾರದು, ಉಪೇಕ್ಷೆಗೆ ಕುಗ್ಗಬಾರದು
ಎಷ್ಟೋ ಪೋಷಕರು ಮತ್ತು ಶಿಕ್ಷಕರು ಪದೇ ಪದೇ ಪ್ರಶಂಸೆ ಮತ್ತು ಪಾರಿತೋಷಕಗಳ ಆಸೆಗಳನ್ನು ಮುಂದಿಡುತ್ತಲೇ ಕಲಿಸುತ್ತಿರುತ್ತಾರೆ. ಇದರಿಂದ ಮಕ್ಕಳ ಕಲಿಕೆಯ ದೃಷ್ಟಿ ಕಲಿಯುವ ವಸ್ತುವಿಗಿಂತ ಸಿಗುವಂತಹ ಗೌರವ ಹಾಗೂ ಅನುಕೂಲಗಳ ಕಡೆಗೇ ಮನಸಿಟ್ಟಿರುತ್ತಾರೆ. ಇದರಿಂದಾಗಿಯೇ ಮಕ್ಕಳ ಅಥವಾ ದೊಡ್ಡವರ ಕಲಿಕೆಯ ವಿಷಯಕ್ಕೂ ಅವರ ದೃಷ್ಟಿಕೋನಕ್ಕೂ ಭಯಂಕರ ವ್ಯತ್ಯಾಸವಿರುತ್ತದೆ. ಉದಾಹರಣೆಗೆ ವಿಜ್ಞಾನದಲ್ಲಿ ನಕ್ಷತ್ರ ಗ್ರಹಗಳ ಬಗ್ಗೆ ಅಧ್ಯಯನ ಮಾಡಿದ್ದರೂ ಎಷ್ಟೇ ತಿಳಿದಿದ್ದರೂ ಶನಿ ಪ್ರಭಾವಕ್ಕೆ ಹೆದರುತ್ತಾನೆ, ಕುಜ ದೋಷ ನಿವಾರಣೆ, ಅಂಗಾರಕ ಶಾಂತಿ ಮಾಡಿಸಿಕೊಳ್ಳುತ್ತಾನೆ, ಗುರು ಬಲಕ್ಕೆ ಹಾತೊರೆಯುತ್ತಾನೆ, ಶುಕ್ರ ದೆಸೆಗಾಗಿ ಕಾಯುತ್ತಾನೆ. ನವಗ್ರಹಗಳ ಪ್ರೀತ್ಯರ್ಥಕ್ಕೆ ನವರತ್ನದ ಉಂಗುರ ತೊಡುತ್ತಾನೆ. ಇದಾಗುವುದು ಏಕೆಂದರೆ ಕಲಿಕೆಯು ಕಲಿಯುವ ವಿಷಯ ಕೇಂದ್ರಿತವಾಗಿರದೇ ಅದರಿಂದ ದೊರಕುವ ಉಪಲಬ್ಧಗಳ ಕಡೆಗಿರುತ್ತದೆ. ಆದ್ದರಿಂದ ಅವರ ನೆನಪಿನಂಗಳಲ್ಲಿ ವಿಷಯಗಳನ್ನು ಬಿತ್ತಿಕೊಂಡಿರುವುದಿಲ್ಲ, ಬೆಳೆದುಕೊಂಡಿರುವುದಿಲ್ಲ. ಅದೇ ರೀತಿ ಕೆಲವು ಮಕ್ಕಳು ಅಥವಾ ದೊಡ್ಡ ವಿದ್ಯಾರ್ಥಿಗಳೂ ಕೂಡ ತಾವು ಕಲಿಕೆಯಲ್ಲಿ ತೋರುತ್ತಿರುವ ಆಸಕ್ತಿಯನ್ನು, ಇರುವಂತಹ ಕಲಿಕಾ ಸಾಮರ್ಥ್ಯವನ್ನು ಗುರುತಿಸುತ್ತಿಲ್ಲ ಎಂದೂ ಕೊರಗಿಕೊಂಡಿರುತ್ತಾರೆ. ಇದೂ ಕೂಡ ಕಲಿಕೆಯ ವಿಷಯಗಳು ಸ್ಮತಿ ಪಟಲದಲ್ಲಿ ಪ್ರಾಮಾಣಿಕವಾಗಿ ನೆಲೆಗೊಳ್ಳಲು ತೊಡಕಾಗುತ್ತದೆ. ಮಕ್ಕಳನ್ನು ಕಲಿಕೆಗೆ ತೊಡಗಿಸುವಾಗ ಪ್ರಶಂಸೆ ಮತ್ತು ಪ್ರಶಸ್ತಿಗಳ ಆಸೆಗೆ ಮಾರು ಹೋಗದಿರುವಂತೆ ನೋಡಿಕೊಳ್ಳುವುದು ಎಷ್ಟು ಮುಖ್ಯವೋ, ತಮ್ಮ ಕಲಿಕೆ ಮತ್ತು ಅಧ್ಯಯನವನ್ನು ನಿರ್ಲಕ್ಷಿಸುತ್ತಾರೆ ಎಂಬ ಕೊರಗೂ ಇಲ್ಲದಂತೆ ನೋಡಿಕೊಳ್ಳುವುದು ಅಷ್ಟೇ ಮುಖ್ಯ. ತಾವು ತಮ್ಮ ಆಸಕ್ತಿ ಮತ್ತು ದಾಹದಿಂದ ಕಲಿತು, ತೃಪ್ತಿ ಹೊಂದಿ, ಅದನ್ನು ತಮ್ಮಲ್ಲಿ ಮತ್ತು ಹೊರಗೆ ಸಮಾಜದಲ್ಲಿ ಪೋಷಿಸುವ ಹೊಣೆಗಾರಿಕೆಯನ್ನು ತಾವೇ ಹೊತ್ತುಕೊಳ್ಳುವಂತೆ ಮಾಡುವುದರಿಂದ ಕಲಿಕೆಯ ಅಂಶಗಳು, ಅಧ್ಯಯನದ ಸತ್ವಸಾರಗಳು ಸ್ಮತಿಪಟಲದಲ್ಲಿ ತಾಜಾ ಆಗಿಯೇ ಉಳಿದಿರುತ್ತದೆ. ಆತ್ಮತೃಪ್ತಿ ಕೊಡುವ ವಿದ್ಯೆಯೇ ನೆನಪಿನಂಗಳದ ಫಲವತ್ತತೆಯನ್ನು ಪಡೆಯುವುದು.
ನೆನಪಿಗೆ ಔಷಧ ಇದೆಯೇ?
ದೇಹದ ವಿವಿಧ ಭಾಗಗಳಿಗೆ, ಅದಕ್ಕೊದಗುವ ಸಮಸ್ಯೆಗಳಿಗೆ ವಿವಿಧ ರೀತಿಯ ಔಷಧಗಳು ಇದ್ದಂತೆ ನೆನಪನ್ನು ಹೆಚ್ಚಿಸುವಂತಹ ಔಷಧವೇನೂ ಇರುವುದಿಲ್ಲ. ಆದರೆ, ಕೆಲವು ತರಕಾರಿಗಳು, ಸೊಪ್ಪು, ಗಿಡ ಮೂಲಿಕೆಗಳು ಕಣ್ಣು, ಚರ್ಮ, ಎಲುಬುಗಳಿಗೆ, ರಕ್ತಕ್ಕೆ ಅಗತ್ಯವಿರುವಂತಹ ಪೋಷಕಾಂಶಗಳನ್ನು ಒದಗಿಸುವಂತೆ ಮೆದುಳಿಗೂ, ನರಮಂಡಲಗಳಿಗೆ ಕೆಲವು ಬ್ರಾಹ್ಮಿ, ಒಂದೆಲಗ, ಬೂದುಕುಂಬಳವೇ ಮೊದಲಾದವು ಅಗತ್ಯಾಂಶಗಳನ್ನು ಒದಗಿಸುತ್ತವೆ. ಆದರೆ ಅದರಿಂದ ನೆನಪಿನ ಶಕ್ತಿ ವೃದ್ಧಿಯಾಗುವುದು ಎಂಬುದು ಒಂದು ಮಿಥ್. ಒಬ್ಬನ ಮಾನಸಿಕ ಸ್ಥಿತಿ ದುರ್ಬಲವಾಗಿದ್ದು, ರೂಢಿಯಿಂದ ತನ್ನ ಅಧ್ಯಯನ ಅಥವಾ ಕಲಿಕೆಯ ಸಾಮರ್ಥ್ಯವನ್ನು ಬಲಪಡಿಸಿಕೊಂಡಿರದೇ ಹೋದ ಪಕ್ಷದಲ್ಲಿ ಯಾವ ಔಷಧಿಗಳೂ ಏನೂ ಕೆಲಸ ಮಾಡದು.
ಆಹಾರ ಪದ್ಧತಿಗಳು ವಿಷಯವೇ?
ಕೆಲವು ಬಗೆಯ ಆಹಾರ ಪದ್ಧತಿಗಳು ಕಲಿಕೆಗೆ ಮತ್ತು ಅಧ್ಯಯನಕ್ಕೆ, ಅದರಲ್ಲೂ ಗಾಢವಾದ ಸ್ಮರಣಾಶಕ್ತಿಗೆ ಪೂರಕವಾಗಿರುವುದು ಅಥವಾ ಮಾರಕವಾಗಿರುವುದು ಎಂಬಂತಹ ಮಾತುಗಳಿವೆ. ಇದು ಸಂಪೂರ್ಣ ಸುಳ್ಳು. ಮಾಂಸಾಹಾರವಾಗಲಿ, ಸಸ್ಯಾಹಾರವಾಗಲಿ ಕಲಿಕೆಗೆ, ಸ್ಮರಣೆಗೆ ಯಾವುದೇ ರೀತಿಯ ಪೂರಕ, ಮಾರಕಗಳಾಗವು. ಆದರೆ ಕಲಿಕೆಗೆ ಅಥವಾ ಅಧ್ಯಯನಕ್ಕೆ ಕೂರುವ ಮುನ್ನ ಹೊಟ್ಟೆ ಬಿರಿಯುವಂತೆ ತಿಂದಿರಬಾರದು. ಇದರಿಂದ ದೇಹಾಲಸ್ಯವಾಗುವುದು. ಹಾಗೆಯೇ ಹೊಟ್ಟೆ ಹಸಿದುಕೊಂಡೂ ಇರಬಾರದು. ಇದರಿಂದ ಹಸಿವಿನ ಕಡೆಗೆ ಗಮನ ಹೋಗುವುದು. ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದರೆ ಹಸಿ ತರಕಾರಿಗಳು ಮತ್ತು ಹಣ್ಣುಗಳ ಸೇವನೆ ದೇಹವನ್ನು ಮತ್ತು ಮನಸ್ಸನ್ನು ಭಾರಗೊಳಿಸುವುದಿಲ್ಲ. ಇವು ಬೇಗನೆ ಪಚನವಾಗುವುದರಿಂದ ಹಗುರವಾಗಿರುವ ಭಾವ ಇರುವುದು. ಇದು ಕಲಿಕೆಗೆ ಮತ್ತು ದೀರ್ಘಕಾಲ ಕುಳಿತು ಮಾಡುವಂತಹ ಅಧ್ಯಯನಕ್ಕೆ ಪೂರಕ. ಹಾಗೆಯೇ ಕಾಫಿ ಕುಡಿದರೆ, ಟೀ ಕುಡಿದರೆ ತಲೆ ಓಡುವುದು ಇತ್ಯಾದಿಗಳ ಆಲೋಚನೆಗಳು ಅವರವರ ವ್ಯಸನಗಳಲ್ಲದೇ ಬೇರೇನೂ ಇಲ್ಲ.
ಮನಸ್ಸನ್ನು ವಿಶ್ರಾಂತಗೊಳಿಸಬೇಕು, ಪ್ರೇರೇಪಿಸಬೇಕು?
ನಾವು ಸಣ್ಣವರಾಗಿದ್ದಾಗ ಹಿರಿಯರು ಆಟ ಆಡಿ ಬಂದ ಕೂಡಲೇ ಕೈ ಕಾಲು ತೊಳೆದುಕೊಂಡು ಬರುವಂತೆ ಸೂಚಿಸುತ್ತಿದ್ದರು. ನಂತರ ನೀರು ಕುಡಿದು ಕುಳಿತುಕೊಳ್ಳುವಂತೆ ಹೇಳುತ್ತಿದ್ದರು. ನಂತರ ನಿಧಾನವಾಗಿ ಪ್ರಾರ್ಥನೆಗಳನ್ನು ಮಾಡಲು ಹೇಳುತ್ತಿದ್ದರು. ಎರಡು ಸಾಲಿನ ಸರಳ ಪ್ರಾರ್ಥನೆಗಳನ್ನು ಹೇಳಿ ನಂತರ ಕಣ್ಣಿಗೊತ್ತಿಕೊಂಡು ಪುಸ್ತಕವನ್ನು ತೆರೆಯಲು ಹೇಳುತ್ತಿದ್ದರು. ಇದರಿಂದ ತಿಳಿಯುವುದೇನೆಂದರೆ, ಬೇರೆ ಕೆಲಸದಲ್ಲಿ ತೊಡಗಿದ್ದ ಮನಸ್ಸನ್ನು ಓದಿನ ಕಡೆಗೆ ಗಂಭೀರವಾಗಿ ತಿರುಗಿಸುವುದಷ್ಟೇ ಅಲ್ಲದೇ, ಮನಸ್ಸು ಕಲಿಕೆಯ ಕಡೆಗೆ ತೊಡಗುವುದಕ್ಕೆ ಸಿದ್ಧಗೊಳಿಸುತ್ತಿದ್ದ ಪರಿಯೂ ಅದಾಗಿತ್ತು. ಪ್ರಾರ್ಥನೆ ಹೇಳಿಸುತ್ತೇವೋ ಬಿಡುತ್ತೇವೋ ಆದರೆ, ಬೇರೆ ಕೆಲಸದಲ್ಲಿ ತೊಡಗಿದ್ದ ಮನಸ್ಸು ಓದಿನ ಕಡೆಗೆ ತಿರುಗಲು ಬೇಕಾದಂತೆ ಸಿದ್ಧತೆ ಮಾಡಲು ಮತ್ತು ವಿಶ್ರಾಂತಗೊಳಿಸಲು ಕೆಲವು ವಿಧಾನಗಳನ್ನು ಅನುಸರಿಸುತ್ತಿದ್ದರು. ನನ್ನ ತಾಯಿ ನನ್ನ ಓದಿಸುವ ಮುನ್ನ ಪ್ರಾರ್ಥನೆಗಳನ್ನು ಮಾಡಿಸುತ್ತಿದ್ದರು. ಅದು ಅವರ ವಿಧಾನ. ನಾನು ನಮ್ಮ ಮಕ್ಕಳಿಗೆ ಓದಿಸಲು ಕೂರಿಸುವುದೆಂದರೆ ಅವರು ಕೈ ಕಾಲು ತೊಳೆದುಕೊಂಡು ತಮ್ಮ ಜಾಗಕ್ಕೆ ಬಂದು ಕುಳಿತುಕೊಳ್ಳುವ ಸಮಯದಲ್ಲಿ, ನಾನು ಅವರ ಪುಸ್ತಕವನ್ನು ತೆಗೆದು ಓದುತ್ತಿರುತ್ತೇನೆ. ನಾನು ಅದನ್ನು ಓದುತ್ತಿರುವ ಗಾಂಭೀರ್ಯವನ್ನು ನೋಡುವ ಮಕ್ಕಳು ಅಪ್ಪಾ, ಏನು ಓದುತ್ತಿದ್ದೀಯಾ? ಎಂದು ಕೇಳುತ್ತಾರೆ. ನಾನು ಆಗಷ್ಟೇ ಓದಿರುವ ವಿಷಯವನ್ನು ಅವರಿಗೇ ಹೇಳಿ, ಅದೆಷ್ಟು ಚೆನ್ನಾಗಿದೆ ಎಂದೋ, ಅಥವಾ ಅದೆಷ್ಟು ಮುಖ್ಯವೆಂದೋ ಹೇಳುತ್ತೇನೆ. ಆಗ ಮಕ್ಕಳೂ ಕೂಡ ನನ್ನೊಡನೆ ಓದಿಗೆ ಪ್ರವೇಶಿಸಿರುತ್ತಾರೆ. ಮಾನಸಿಕವಾಗಿ ಕಲಿಕೆಗೆ ಸಿದ್ಧವಾಗಿರುತ್ತಾರೆ. ಇದೂ ಒಂದು ತಂತ್ರ. ನಾನು ಕೆಲವು ಸಲ ಮಕ್ಕಳ ಪುಸ್ತಕದಲ್ಲಿ ಓದಿದ್ದನ್ನು ಅವರೊಂದಿಗೇ ಹಂಚಿಕೊಳ್ಳದೆ ಉತ್ಸಾಹದಿಂದ ಮಕ್ಕಳ ತಾಯಿಯ ಜೊತೆಗೋ ಅಥವಾ ಇತರ ಅತಿಥಿಗಳ ಜೊತೆಗೋ ಚರ್ಚಿಸುತ್ತೇನೆ. ಇದರಿಂದ ತಮ್ಮ ಪುಸ್ತಕದಿಂದ ಅಪ್ಪ ಹೀಗೆ ಓದಿ ಮಾನ್ಯತೆ ಕೊಡುವುದನ್ನು ಕಂಡು ತಮ್ಮ ಪುಸ್ತಕ ಮತ್ತು ಅದರಲ್ಲಿರುವ ವಿಷಯದ ಕಲಿಕೆಯ ಬಗ್ಗೆ ಮತ್ತಷ್ಟು ಹೆಮ್ಮೆ ಪಡುತ್ತಾರೆ. ಯಾವ ವಸ್ತು ವಿಷಯದ ಬಗ್ಗೆ ಹೆಮ್ಮೆ, ಅಭಿಮಾನ, ಪ್ರೀತಿ ಉಂಟಾಗುವುದೋ, ಅದರ ಬಗ್ಗೆ ಅವರು ಆಪ್ತವಾಗುತ್ತಾ ಹೋಗುತ್ತಾರೆ. ಅದರ ಬಗ್ಗೆ ಅವನ ಸ್ಮರಣೆಯೂ ಕೂಡ ಗಾಢವಾಗುತ್ತಾ ಹೋಗುತ್ತದೆ. ದಿನಚರಿಯ ದಾಖಲೆ
ತಮ್ಮ ದಿನದಿಂದ ದಿನಕ್ಕೆ ನಡೆಯುವ ಸಂಗತಿಗಳನ್ನು ದಾಖಲು ಮಾಡುವ ಅಭ್ಯಾಸವೂ ನೆನಪಿನಂಗಳಕ್ಕೆ ಫಲವತ್ತತೆಯನ್ನು ನೀಡುತ್ತದೆ. ಆದರೆ ಎಲ್ಲವನ್ನೂ ದಾಖಲಿಸುವುದಕ್ಕಿಂತ ಮುಖ್ಯವೆನಿಸುವುದನ್ನಾದರೂ ದಾಖಲಿಸುವುದರಿಂದ ಇದು ಹಲವು ರೀತಿಗಳಲ್ಲಿ ವಿಷಯಗಳನ್ನು ಸ್ಮರಿಸಲು ನೆರವಾಗುತ್ತದೆ. ದಿನಚರಿಗಳಿಗೆ ನಿಜಕ್ಕೂ ದಾಖಲಾತಿಯ ವಿಷಯಗಳಲ್ಲಿ ಒಳ್ಳೆಯ ಸ್ಥಾನಮಾನವಿದೆ.
ಸ್ಮರಣೆಯು ಎಲ್ಲಿಂದ?
ಸ್ಮರಣೆ ಎನ್ನುವುದರ ಕೆಲಸ ಇರುವುದು ಎಲ್ಲೆಂದರೆ, ಈಗಾಗಲೇ ಮನೋಭೂಮಿಯಲ್ಲಿ ದಾಖಲಾಗಿರುವುದನ್ನು ತೆಗೆಯುವುದರಲ್ಲಿ. ನೆನಪಿಗೆ ಸಂಬಂಧಿಸಿದ ಎರಡು ಮುಖ್ಯ ವಿಷಯಗಳೆಂದರೆ ಒಂದು ದಾಖಲಿಸುವುದು ಮತ್ತೊಂದು ಅದನ್ನು ಹೊರತೆಗೆಯುವುದು. ಸ್ಮೃತಿಪಟಲದಲ್ಲಿ ದಾಖಲಿಸುವುದು ಎಷ್ಟು ಮುಖ್ಯವೋ, ಹೊರತೆಗೆಯುವುದೂ ಕೂಡ ಅಷ್ಟೇ ಮುಖ್ಯ. ದಾಖಲೆಯು ಗಾಢವಾಗಿ ಆಗಬೇಕಾದರೂ ಮಾನಸಿಕವಾದಂತಹ ಸಿದ್ಧತೆ ಇರಬೇಕು. ಅದಕ್ಕೆ ಪೂರಕವಾಗಿರುವಂತಹ ಚಟುವಟಿಕೆಗಳು, ವಾತಾವರಣ ಇರಬೇಕು. ಅಂತೆಯೇ ಅದನ್ನು ಹೊರದೆಗೆಯಲೂ ಒಂದು ಪೂರಕವಾದಂತಹ ಮನಸ್ಥಿತಿ ಇರಬೇಕು. ಉದ್ವೇಗಕ್ಕೆ ಒಳಗಾಗಿರುವಂತಹ ಅಥವಾ ನಿರಾಶಾಭಾವದಲ್ಲಿರುವಂತಹ, ನಕಾರಾತ್ಮಕ ಒತ್ತಡಗಳಿಗೆ ಸಿಕ್ಕಿರುವಂತಹ ಸಂದರ್ಭಗಳಲ್ಲಿಯೂ ಕೂಡ ದಾಖಲಾಗಿದ್ದರೂ ಹೊರತೆಗೆಯಲಾಗದು. ಯಾವಾಗಲೂ ಒತ್ತಡ ಇಲ್ಲದಿರುವಂತಹ ಸಮಯ ಸಂದರ್ಭವನ್ನೇ ಎದುರು ನೋಡಿಕೊಂಡಿರಲಾಗದು. ಅದಕ್ಕೇ ನಾವು ಇಚ್ಛಿಸಿದಾಗ ಸ್ಮರಣೆಗೆ ತಂದುಕೊಳ್ಳುವಂತಹ ಮನಸ್ಥಿತಿಯ ರೂಢಿಯನ್ನೂ ನಾವೇ ಮಾಡಿಕೊಳ್ಳಬೇಕು. ಮಕ್ಕಳಿಗೂ ಅದನ್ನು ಮಾಡಿಸಬೇಕು. ಯಾವಾಗಲೂ ನಮಗೆ ಪೂರಕವಾದಂತಹ, ಸಹಕಾರಿಯಾಗುವಂತಹ ವಾತಾವರಣವನ್ನೇ ಎದುರು ನೋಡಿಕೊಂಡಿರಲಾಗದು. ಎಂತಹುದೇ ಸಮಯದಲ್ಲಿ, ವಾತಾವರಣವು ಉದ್ವಿಗ್ನಗೊಂಡಿದ್ದರೂ, ನಾವು ಅನುದ್ವೇಗದಿಂದ ನಮ್ಮಲ್ಲಿ ದಾಖಲಾಗಿರುವಂತಹ ವಿಷಯಗಳನ್ನು ಹೊರತೆಗೆಯುವಂತಹ ರೂಢಿಯನ್ನು ಮಾಡಿಕೊಳ್ಳಬೇಕು. ಇದಕ್ಕೆ ಹಲವಾರು ವ್ಯಾಯಾಮಗಳಿವೆ ಮತ್ತು ಅರ್ಥೈಸಿಕೊಳ್ಳಲು ಹಲವು ಒಳನೋಟಗಳಿರುತ್ತವೆ. ಇವುಗಳನ್ನು ಮಕ್ಕಳಿಗೆ ಮುಟ್ಟಿಸುವ ಬಗೆಯನ್ನು ಮುಂದೆ ತಿಳಿಯೋಣ.
ಮನೋಭಾವ ಮತ್ತು ಪರಿಸರ
ಯಾವುದೇ ಮಗುವಿನ ಅಥವಾ ವ್ಯಕ್ತಿಯ ಮಾನಸಿಕ ಮತ್ತು ಭಾವನಾತ್ಮಕ ಬದುಕು ಪ್ರೇರಕವಾಗಿರಬೇಕು ಅಥವಾ ಸುಸ್ಥಿರವಾಗಿರಬೇಕು ಎಂದರೆ ಅದರ ಮನಸ್ಥಿತಿಯನ್ನು ಆರೋಗ್ಯವಾಗಿಡುವಂತಹ, ಸಕಾರಾತ್ಮಕ ಭಾವನೆಗಳಿಗೆ ಪೂರಕವಾಗಿರುವಂತಹ ವಾತಾವರಣ ಮತ್ತು ಪರಿಸರವನ್ನು ನಿರ್ಮಾಣ ಮಾಡಬೇಕು. ಉದಾಹರಣೆಗೆ ಮಗುವು ಕಲಿಕೆಗೆ ಕುಳಿತುಕೊಳ್ಳುವಂತಹ ಸ್ಥಳ ಶುದ್ಧವಾಗಿಡುವುದಷ್ಟೇ ಅಲ್ಲದೇ, ಪುಸ್ತಕವೇ ಮೊದಲಾದ ಕಲಿಕೆ ಸಂಬಂಧಿಸಿದ ವಸ್ತುಗಳನ್ನು ಒಪ್ಪಓರಣವಾಗಿಟ್ಟಿರಬೇಕು. ಪೆನ್ನು, ಪೆನ್ಸಿಲ್, ಶಾರ್ಪನರ್, ಎರೇಸರ್, ಮಾರ್ಕರ್, ಪಿನ್ ಇತ್ಯಾದಿಗಳನ್ನು ಅಚ್ಚುಕಟ್ಟಾಗಿ ನಿಗದಿತ ಸ್ಥಳದಲ್ಲಿ ಉತ್ತಮ ಪರಿಕರಗಳಲ್ಲಿ ಜೋಡಿಸಿಟ್ಟಿರಬೇಕು. ಅದರಂತೆಯೇ ಮಕ್ಕಳೂ ಕೂಡ ಆಟವಾಡಿ ಬೆವರು, ಕೊಳೆ ಮತ್ತು ವಾಸನೆ ಇರುವಂತಹ ಬಟ್ಟೆಗಳಲ್ಲೇ ಕುಳಿತುಕೊಳ್ಳದೇ, ಕೈ ಕಾಲುಗಳನ್ನು ತೊಳೆದುಕೊಂಡು ಸರಳವಾದ ಮತ್ತು ಶುಭ್ರವಾದ ಬಟ್ಟೆಗಳನ್ನು ತೊಟ್ಟಿರಬೇಕು. ನೆನಪಿರಲಿ, ಶುಭ್ರವಸ್ತ್ರಗಳು ಮೈ ಮೇಲೆ ಬಿದ್ದ ಕೂಡಲೇ ಒಂದು ಬಗೆಯ ತಾಜಾ ಅನುಭವ ಉಂಟಾಗುವುದು. ಬೆವರು ಮತ್ತು ಕೊಳೆಯಿಂದ ತುಂಬಿರುವ ವಸ್ತ್ರಗಳು ಅಂಟಂಟಾಗಿದ್ದು ಕಿರಿಕಿರಿ ಉಂಟುಮಾಡಬಹುದು. ದೇಹದ, ವಸ್ತ್ರದ, ಓದುವ ಸ್ಥಳದ, ಕಲಿಕೆಯ ಸಾಮಗ್ರಿಗಳ ಸ್ವಚ್ಛತೆಯನ್ನು ಕಾಪಾಡುವುದೆಂದರೆ ಕಲಿಕೆಗೆ ನೀಡುವ ಮಾನ್ಯತೆ ಎಂದೇ ಅರ್ಥ. ಮಕ್ಕಳ ಅನೈಚ್ಛಿಕ ಗಮನ ಮತ್ತು ಗಾಂಭೀರ್ಯ ಕಲಿಕೆಯ ಕಡೆಗೆ ಹೊರಳಿತೆಂದರೆ ಅವರ ನೆನಪಿನಂಗಳವನ್ನು ಉತ್ತಲಾರಂಭಿಸಿದ್ದಾರೆಂದೇ ಅರ್ಥ.