ಶುದ್ಧಗೊಳಿಸುವ ಮೊದಲು...
ಮಾನ್ಯರೇ,
ಮೊನ್ನೆ ರವಿವಾರ ಕರ್ನಾಟಕದ ಮೂಲೆ ಮೂಲೆಯಿಂದ ಉಡುಪಿಗೆ ಬಂದ ದಲಿತ ದಮನಿತ ಮತ್ತು ಸಮಾನ ಮನಸ್ಕರು ಭಾಗವಹಿಸಿದ ‘ಚಲೋ ಉಡುಪಿ’ ಜಾಥಾ ಉಡುಪಿಯ ಜನರಿಗೆ ಒಂದು ಹೊಸ ಅನುಭವವಾಗಿತ್ತು. ನಗರದೆಲ್ಲೆಡೆ ನೀಲಿ ಪತಾಕೆಗಳು ಕಂಗೊಳಿಸಿ ಕೇಸರಿಮಯ ಉಡುಪಿಯನ್ನು ನೀಲಿ ವರ್ಣಕ್ಕೆ ತಿರುಗಿಸಲಾಗಿತ್ತು.
ಈಗ ದಲಿತರ ನಡಿಗೆಯಿಂದ ‘ಅಶುದ್ಧ’ವಾಗಿರುವ ಉಡುಪಿಯನ್ನು ಶುದ್ಧ ಗೊಳಿಸುತ್ತಾರಂತೆ, ಹಾಗೂ ಅದಕ್ಕೆ ‘‘ಕನಕ ನಡೆ’’ ಎಂದು ಹೆಸರಿಡುತ್ತಾರೆಂದು ಸುದ್ದಿಯಿದೆ. ಮೊಟ್ಟ ಮೊದಲು ಇವರು ಗಮನಿಸಬೇಕಾದುದೇನೆಂದರೆ ಕನಕದಾಸರ ಜಾತಿಯವರು ಅಂದರೆ ಕುರುಬರು ಹಾಗೂ ವಾಲ್ಮೀಕಿ ಜನಾಂಗದವರು ಹಲವು ಬಸ್ಸುಗಳಲ್ಲಿ ಬೆಳಗಾವಿ, ಬಾಗಲಕೋಟೆ ಮತ್ತು ಕಲಬುರಗಿ ಜಿಲ್ಲೆಗಳಿಂದ ಉಡುಪಿಗೆ ಬಂದು ‘ಚಲೋ ಉಡುಪಿ’ ಜಾಥಾದಲ್ಲಿ ಅಭಿಮಾನ ಹಾಗೂ ಸಂಭ್ರಮದಿಂದ ಪಾಲ್ಗೊಂಡಿದ್ದರು. ಹಾಗಾಗಿ ಮನುವಾದಿಗಳು ಈಗ ಆ ದಮನಿತ ಕುರುಬ ಜಾತಿಯ ಕನಕದಾಸರ ಹೆಸರನ್ನೇ ಉಡುಪಿ ಶುದ್ಧಿಯ ತಮ್ಮ ಕೃತ್ಯಕ್ಕೆ ಇಡುವ ನೈತಿಕ ಅಧಿಕಾರ ಹೊಂದಿಲ್ಲ. ಬೇಕಾದರೆ ಅವರು ತಮ್ಮ ನಿತ್ಯ-ನಾರಕಿ ಖ್ಯಾತಿಯ ಸ್ವಾಮಿಗಳ ಹೆಸರು ಉಪಯೋಗಿಸಲಿ. ಕಳೆದ ಜನವರಿಯಲ್ಲಿ ನಡೆದ ಉಡುಪಿ ಪರ್ಯಾಯದ ಸಮಯದಲ್ಲಿ ಉಡುಪಿಯ ತುಂಬೆಲ್ಲಾ ಹಾಕಿದ್ದ ಪೇಜಾವರರ ದೊಡ್ಡ ದೊಡ್ಡ ಅನಧಿಕೃತ ಫ್ಲೆಕ್ಸ್ಗಳನ್ನು ಒಂಬತ್ತು ತಿಂಗಳ ನಂತರ ಇಂದಿಗೂ ಜಿಲ್ಲಾಡಳಿತ ತೆರವುಗೊಳಿಸಿಲ್ಲ, ಹಾಗಾಗಿ ಬಣ್ಣ ಮಾಸಿ ಹರಿದ ಈ ಪರ್ಯಾಯದ ಫ್ಲೆಕ್ಸ್ಗಳು ಉಡುಪಿಯ ಅಂದ ಕೆಡಿಸಿ ಬಿಟ್ಟಿವೆ. ಮೊದಲು ಈ ಬಣ್ಣಗೆಟ್ಟ ಫ್ಲೆಕ್ಸ್ ತೆಗೆದು ಉಡುಪಿಯನ್ನು ಅಂದಗೊಳಿಸಲಿ.
ಹಿಂದೊಮ್ಮೆ ಬಿಹಾರದಲ್ಲಿ ಬಾಬು ಜಗಜೀವನ್ ರಾಮ್ರವರು ಉದ್ಘಾಟಿಸಿದ ಮೂರ್ತಿಯೊಂದನ್ನು ನಂತರ ಮನುವಾದಿಗಳು ಗಂಗಾಜಲದಿಂದ ಶುದ್ಧೀಕರಣ ಗೊಳಿಸಿದಾಗ ಆ ಮನುವಾದಿಗಳ ಮೇಲೆ ಪೊಲೀಸರು ಜಾತಿ ನಿಂದನೆ ಕೇಸ್ ಜಡಿದಿದ್ದರು. ಉಡುಪಿಯ ವಿಷಯದಲ್ಲೂ ಇದು ಪುನರಾವರ್ತನೆಯಾದೀತು. ಹಾಗಾಗದಿದ್ದರೆ ಇಂತಹವರ ವಿಷಕಾರಿ ಬುದ್ಧಿಯಿಂದಾಗಿ ನಮ್ಮ ತುಳುವಿನ ಒಡಿಪು ನಿಜವಾಗಿ ಒಡೆದು ಹೋಗಬಹುದು.